i
ಗಣಿ ಬಾಧಿತ ಪ್ರದೇಶಗಳ ಕಾಮಗಾರಿ ಲೋಪವಾಗದಂತೆ ಅನುಷ್ಠಾಗೊಳಿಸಿ- ಜಿಲ್ಲಾಧಿಕಾರಿ ಟಿ.ವೆಂಕಟೇಶ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲೆಯ ಗಣಿ ಬಾಧಿತ ಪ್ರದೇಶಗಳ ಸಮಗ್ರ ಪರಿಸರ ಅಭಿವೃದ್ಧಿ ಯೋಜನೆ (ಸಿ.ಇ.ಪಿ.ಎಂ.ಐ.ಝಡ್)ಯಡಿ ಅನುಮೋದನೆಗೆ ಬಾಕಿ ಇರುವ ಕಾಮಗಾರಿಗಳ ವಿಸ್ತøತ ಯೋಜನಾ ವರದಿ ಶೀಘ್ರವೇ ಸಿದ್ಧಪಡಿಸಿ ಕರ್ನಾಟಕ ಗಣಿ ಪರಿಸರ ಪುನಃಶ್ಚೇತನ ನಿಗಮಕ್ಕೆ (ಕೆ.ಎಂ.ಇ.ಆರ್.ಸಿ) ಸಲ್ಲಿಸಬೇಕು. ಸುಪ್ರಿಂ ಕೋರ್ಟ್ನಿಂದ ಸ್ಥಾಪಿತವಾಗಿರುವ ಸೆಂಟ್ರಲ್ ಎಂಪವರ್ ಕಮಿಟಿ (ಸಿಇಸಿ) ಈ ಎಲ್ಲಾ ಕಾಮಗಾರಿಗಳ ಮೇಲ್ವಿಚಾರಣೆ ನಡೆಸಲಿದೆ. ಎಚ್ಚರಿಕೆಯಿಂದ ಯಾವುದೇ ರೀತಿಯ ಲೋಪವಾಗದಂತೆ ಕಾಮಗಾರಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಕುರಿತು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾಮಗಾರಿಗಳಿಗೆ ಸಂಬಂಧಪಟ್ಟ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಕಾಮಗಾರಿ ಆರಂಭಕ್ಕೂ ಮುನ್ನ ಕಾಮಗಾರಿ ಸ್ಥಳದ ಫೋಟೋ ಮತ್ತು ವಿಡಿಯೋಗ್ರಫಿ ಮಾಡಿ ಇಟ್ಟುಕೊಳ್ಳಬೇಕು. ಪೂರ್ಣಗೊಂಡ ನಂತರವೂ ಫೋಟೋ ಮತ್ತು ವಿಡಿಯೋಗ್ರಫಿಯ ದಾಖಲೆಗಳು ಇಟ್ಟುಕೊಳ್ಳಬೇಕು. ಎಚ್ಚರಿಕೆಯಿಂದ ಕಾಮಗಾರಿ ನಿರ್ವಹಿಸುವುದರೊಂದಿಗೆ, ಕೆ.ಎಂ.ಇ.ಆರ್.ಸಿ ಗೆ ಸೂಕ್ತ ದಾಲೆಗಳನ್ನು ಸಲ್ಲಿಸಬೇಕು. ಕಾಮಗಾರಿ ವೇಳೆ ಯಾವುದೇ ರೀತಿಯ ಸಂದೇಹಗಳು ಕಂಡುಬಂದರೆ, ಕೆ.ಎಂ.ಇ.ಆರ್.ಸಿಯಿಂದ ಸೂಕ್ತ ನಿರ್ದೇಶನ ಪಡೆದು ಕಾಮಗಾರಿ ಆರಂಭಿಸಬೇಕು. ಕ್ರಮಬದ್ಧವಾಗಿ ಕಾರ್ಯನಿರ್ವಹಿಸಿದರೆ ಯಾವುದೇ ಸಮಸ್ಯೆಗಳು ತಲೆದೊರುವುದಿಲ್ಲ. ಯಾವುದೇ ಕಾರಣಕ್ಕೂ ಯೋಜನೆಗಳನ್ನು ಹಗುರವಾಗಿ ಕಾಣಬೇಡಿ. ಯೋಜನೆ ಬದಲಾವಣೆಗೆ ಜನಪ್ರತಿನಿಧಿಗಳಿಂದ ಒತ್ತಡ ಕೇಳಿ ಬಂದರೆ, ಜನಪ್ರತಿನಿಧಿಗಳಿಗೆ ತಿಳಿ ಹೇಳಿ, ಇಲ್ಲವಾದರೆ ಅವರ ಅಹಹಾಲುಗಳನ್ನು ಕೆ.ಎಂ.ಇ.ಆರ್.ಸಿಗೆ ಸಲ್ಲಿಸಿ. ನಿಮ್ಮ ಹಂತದಲ್ಲಿ ಯಾವುದೇ ಕಾರಣಕ್ಕೂ ಯೋಜನೆಗಳಲ್ಲಿ ಬದಲಾವಣೆ ಮಾಡಬೇಡಿ. ಇದು ಗಂಭೀರ ಲೋಪ ಎಂದು ಪರಿಗಣಿಸಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಕಾಮಗಾರಿಗಳ ಮೇಲ್ವಿಚಾರಣೆಗೆ ಪ್ರತ್ಯೇಕ ವಿಭಾಗ: ವಾರಕೊಮ್ಮೆ ಪರಿಶೀಲನೆ-ಜಿಲ್ಲೆಯ ಡಿ.ಎಂ.ಎಫ್ ಹಾಗೂ ಕೆ.ಎಂ.ಇ.ಆರ್.ಸಿ ಕಾಮಗಾರಿಗಳ ಮೇಲ್ವಿಚಾರಣೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರತ್ಯೇಕ ವಿಭಾಗ ತೆರೆಯಲಾಗುವುದು. ಪ್ರತಿ ವಾರಕೊಮ್ಮೆ ಇಲಾಖಾವಾರು ಪ್ರಗತಿ ಪರಿಶೀಲನೆ ನಡೆಸಲಾಗುವುದು. ಯಾವುದೇ ಕಾರಣಕ್ಕೂ ಕಾಮಗಾರಿಗಳ ಅತಿಕ್ರಮಣವಾಗಬಾರದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ, ಸಣ್ಣ ನೀರಾವರಿ, ತೋಟಗಾರಿಕೆ, ಕೌಶಲ್ಯಾಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಿಕ್ಷಣ, ಅರಣ್ಯ, ತೋಟಗಾರಿಕೆ, ರೇಷ್ಮೆ ಸೇರಿದಂತೆ ವಿವಿಧ ಇಲಾಖೆಗಳ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್, ಮುಖ್ಯ ಯೋಜನಾಧಿಕಾರಿ ಸತೀಶ್ರೆಡ್ಡಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಜಣ್ಣ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಮಲ್ಲಿಕಾರ್ಜುನ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಓ.ಪರಮೇಶ್ವರಪ್ಪ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.