i
ಸಂಪುಟದಿಂದ ಡಿಕೆಶಿ ವಜಾಗೊಳಿಸಿ ನ್ಯಾಯಾಂಗ ಅಥವಾ ಸಿಬಿಐ ತನಿಖೆಗೆ ವಹಿಸಿ-ಜೆಡಿಎಸ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಅಶ್ಲೀಲ ವೀಡಿಯೋಗಳನ್ನ ಸಾರ್ವಜನಿಕವಾಗಿ ಹಂಚಿಕೆ ಮಾಡುವ ಮೂಲಕ ಹೆಣ್ಣು ಮಕ್ಕಳ ಮಾನ ಹರಾಜು ಹಾಕುತ್ತಿರುವ ಉಪ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ದ ಜಿಲ್ಲಾ ಜಾತ್ಯಾತೀತ ಜನತಾದಳದಿಂದ ಒನಕೆ ಓಬವ್ವ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ನಂತರ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಇದಕ್ಕೂ ಮೊದಲು ಜೆಡಿಎಸ್ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಒನಕೆ ಓಬವ್ವ ವೃತ್ತದಲ್ಲಿ ಜಮಾಯಿಸಿ ಮಾನವ ಸರಪಳಿ ನಿರ್ಮಿಸಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಧಿಕ್ಕಾರಗಳನ್ನು ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು.
ಡಿ.ಕೆ.ಶಿವಕುಮಾರ್ ಅವರ ಕುಟುಂಬದ ಮಹಿಳೆಯರಾಗಿದ್ದರೆ ಈ ರೀತಿ ಪೆನ್ ಡ್ರೈವ್ ಗಳನ್ನ ಹಾದಿ ಬೀದಿಯಲ್ಲಿ ಹಂಚಿಕೆ ಮಾಡುತ್ತಿದ್ರಾ, ನಾವ್ಯಾರು ಪ್ರಜ್ವಲ್ ಮಾಡಿರುವ ಕೃತ್ಯವನ್ನ ಸಮರ್ಥಿಸಿಕೊಳ್ಳುತ್ತಿಲ್ಲ, ಪ್ರಜ್ವಲ್ ರೇವಣ್ಣ ತಪ್ಪು ಮಾಡಿದ್ದರೆ ಕಾನೂನಿನ ಅಡಿಯಲ್ಲಿ ಘನಘೋರ ಶಿಕ್ಷೆಯಾಗಲಿ, ಆದರೆ ಹೆಣ್ಣು ಮಕ್ಕಳ ಮಾನ ಮರ್ಯಾಯದೆ ಹಾದಿ ಬೀದಿಯಲ್ಲಿ ಹರಾಜ್ ಆಗಿರುವುದಕ್ಕೆ ಮೂಲ ಕಾರಣ ಡಿ.ಕೆ.ಶಿವಕುಮಾರ್ ಆಗಿದ್ದು ಈ ಕೂಡಲೇ ಅವರನ್ನ ಸಂಪುಟದಿಂದ ವಜಾಗೊಳಿಸಬೇಕು. ಅಲ್ಲದೆ ಕಾಂಗ್ರೆಸ್ ನೇತೃತ್ವದ ಸರ್ಕಾರ ನೈತಿಕ ಹೊಣೆ ಹೊತ್ತು ತೊಲಗಬೇಕು. ಹಾಲಿ ತನಿಖೆ ಮಾಡುತ್ತಿರುವ ಎಸ್ಐಟಿ ಸಂಸ್ಥೆ ಆಡಳಿತ ರೂಢ ಸರ್ಕಾರದ ಕೈಗೊಂಬೆಯಂತೆ ಕೆಲಸ ಮಾಡುತ್ತಿರುವುದರಿಂದ ಕೂಡಲೇ ಇಡೀ ಪ್ರಕರಣವನ್ನ ಹಾಲಿ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ಆಗಬೇಕು, ಇಲ್ಲ ಸಿಬಿಐ ತನಿಖೆಗೆ ವಹಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಹಿಂದೆ ರಮೇಶ್ ಜಾರಕಿಹೊಳಿ ಅವರನ್ನೂ ಇದೇ ಡಿಕೆ ಶಿವಕುಮಾರ್ ಷಡ್ಯಂತ್ರ ಮಾಡಿದ್ದರು. ತನಗೆ ಆಗದವರನ್ನ ಇಂತಹ ಪ್ರಕರಣಗಳಲ್ಲಿ ಸಿಲುಕಿಸಿ ರಾಜಕೀಯ ದ್ವೇಷ ತೀರಿಸಿಕೊಳ್ಳುವ ಮನಸ್ಥಿತಿ ಅತ್ಯಂತ ಹೇಯ ಕೃತ್ಯವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಮಧ್ಯ ಪ್ರವೇಶ ಮಾಡಿ ನ್ಯಾಯ ಸಮ್ಮತ ತನಿಖೆ ಮಾಡಿಸಬೇಕು, ಇಂತಹ ಸಮಾಜ ದ್ರೋಹಿ, ಮಹಿಳೆಯರ ಮಾನ ಹರಾಜ್ ಹಾಕಿದ ಶಿವಕುಮಾರ್ ಅವರನ್ನ ಹೀಗೆ ಬಿಟ್ಟರೆ ಮುಂದೆ ದೊಡ್ಡ ಆಪತ್ತು ಬರಲಿದೆ ಎಂದು ಎಚ್ಚರಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಪಿಲಾಜನಹಳ್ಳಿ ಎಂ.ಜಯಣ್ಣ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ, ಅಶ್ಲೀಲ ವಿಡಿಯೋವುಳ್ಳ ಪೆನ್ ಡ್ರೈವ್ ಹಗರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ಮಾಡಿ ಆರೋಪಿ ಎನ್ನಲಾಗುತ್ತಿರುವ ಪ್ರಜ್ವಲ್ ರೇವಣ್ಣನಿಗೆ ಶಿಕ್ಷೆ ನೀಡಲಿ, ಜೆಡಿಎಸ್ ಪಕ್ಷ ಸಂಪೂರ್ಣ ಸಹಕಾರ ನೀಡಲಿದೆ. ಜೊತೆಯಲ್ಲಿ ದೇಶದಲ್ಲಿ ಕಾನೂನಿದೆ. ಅದನ್ನು ಬಿಟ್ಟು ಸಂತ್ರಸ್ಥ ಮಹಿಳೆಯರ ಮಾನ ಹರಾಜು ಹಾಕುತ್ತಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ನನ್ನು ಸಚಿವ ಸಂಪುಟದಿಂದ ಕೈಬಿಟ್ಟು ತಕ್ಕ ಶಿಕ್ಷೆ ವಿಧಿಸಬೇಕು. ನಾಲ್ಕು ಗೋಡೆಗಳ ನಡುವೆ ನಡೆದಿರುವ ಕೃತ್ಯವನ್ನು ಇಡಿ ದೇಶವೇ ನೋಡುವಂತೆ ಮಾಡಿರುವುದು ಅತ್ಯಂತ ನೀಚ ಕೃತ್ಯ. ಹಾಗಾಗಿ ಡಿ.ಕೆ.ಶಿವಕುಮಾರ್ ವಿರುದ್ದ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಡಿ.ಯಶೋಧರ ಮಾತನಾಡಿ ಜೆಡಿಎಸ್ ಪಕ್ಷದ ಕೋರ್ ಕಮಿಟಿ ಈಗಾಗಲೆ ಪ್ರಜ್ವಲ್ ರೇವಣ್ಣನನ್ನು ಪಕ್ಷದಿಂದ ಉಚ್ಚಾಟಿಸಿದೆ. ಹೆಣ್ಣು ಮಕ್ಕಳ ಮಾನ ಸಂರಕ್ಷಣೆ ಮಾಡಬೇಕಾಗಿರುವ ಕಾಂಗ್ರೆಸ್ ಸರ್ಕಾರವೇ ಬೀದಿ ಪಾಲು ಮಾಡಿದೆ. ಈ ನೆಲದ ಕಾನೂನನ್ನು ಜೆಡಿಎಸ್ ಗೌರವಿಸುತ್ತದೆ. ಕಾಂಗ್ರೆಸ್ ಕೃಪಾ ಪೋಷಿತ ನಾಟಕ ಮಂಡಳಿ ಸಿಡಿ ಬಿಡುಗಡೆಗೊಳಿಸಿರುವ ಕಳಂಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇವರುಗಳಿಗೆ ಮೆತ್ತಿಕೊಂಡಿದೆ. ರಾಜಕೀಯ ಲಾಭಕ್ಕಾಗಿ ಮತ್ತೊಬ್ಬರ ಮಾನ ಹರಣವಾಗಬಾರದು. ಮತ ಪಡೆಯುವ ಭ್ರಮೆಯಲ್ಲಿ ಕಾಂಗ್ರೆಸ್ ತೇಲುತ್ತಿರುವುದು ಮೂರ್ಖತನ ಎಂದು ಲೇವಡಿ ಮಾಡಿದರು.
ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಎಸ್.ಐ.ಟಿ ಪಾರದರ್ಶವಾಗಿ ತನಿಖೆ ನಡೆಸುತ್ತಿಲ್ಲದಿರುವುದರಿಂದ ನ್ಯಾಯಾಂಗ ಅಥವಾ ಸಿ.ಬಿ.ಐ ತನಿಖೆಗೆ ವಹಿಸಬೇಕು. ರಾಜ್ಯದಲ್ಲಿ ಜನ ವಿರೋಧಿ ಸರ್ಕಾರವಿರುವುದು ನಮ್ಮ ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್ ಪ್ರತಿಭಟನೆ ಉದ್ದೇಶಿಸಿ ಮಾತನಾಡಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಳಿ ಇನ್ನು ಯಾರ್ಯಾರ ಅಶ್ಲೀಲ ಸಿಡಿಗಳಿದೆಯೋ ಗೊತ್ತಿಲ್ಲ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸಿಡಿ ಬಿಡುಗಡೆಗೊಳಿಸಿ ಹೆಣ್ಣು ಮಕ್ಕಳ ಮಾನ ಬೀದಿಗೆಳೆದಿರುವುದು ಕೀಳುತನ ತೋರಿಸುತ್ತದೆ. ಪ್ರಜ್ವಲ್ ರೇವಣ್ಣನನ್ನು ನಾವುಗಳ್ಯಾರು ಸಮರ್ಥಿಸಿಕೊಳ್ಳುವುದಿಲ್ಲ. ಉಪ್ಪು ತಿಂದವರು, ತಪ್ಪು ಮಾಡಿದವರು ನೀರು ಕುಡಿಯಲೇಬೇಕು ಎಂದು ಈಗಾಗಲೇ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಹಾಗಾಗಿ ಡಿ.ಕೆ.ಶಿವಕುಮಾರ್ನನ್ನು ಸಚಿವ ಸಂಪುಟದಿಂದ ಕೈಬಿಡಬೇಕು. ತನಿಖೆಯನ್ನು ಎಸ್.ಐ.ಟಿ.ಗೆ ವಹಿಸಿರುವುದರಿಂದ ಸಂತ್ರಸ್ಥರಿಗೆ ನ್ಯಾಯ ಸಿಗುವುದು ಅನುಮಾನ. ಅದಕ್ಕಾಗಿ ಸಿ.ಬಿ.ಐ.ಗೆ ವಹಿಸುವಂತೆ ಆಗ್ರಹಿಸಿದರು.
ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಜಿ.ಬಿ.ಶೇಖರ್, ರಾಜ್ಯ ಕಾರ್ಯದರ್ಶಿ ಮಠದಟ್ಟಿ ವೀರಣ್ಣ, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಡಿ.ಗೋಪಾಲಸ್ವಾಮಿ ನಾಯಕ, ಎಂ.ರವೀಂದ್ರಪ್ಪ, ತಾಲ್ಲೂಕು ಅಧ್ಯಕ್ಷರುಗಳಾದ ಸಣ್ಣತಿಮ್ಮಣ್ಣ, ಹನುಮಂತರಾಯಪ್ಪ, ಜೆಡಿಎಸ್ ಮುಖಂಡರುಗಳಾದ ಗುರುಸಿದ್ದಪ್ಪ, ಶಂಕರ್ಮೂರ್ತಿ, ಮಂಜುನಾಥ್, ಎಪಿ ಚಂದ್ರು, ಸಕ್ಕರ ಗಿರಿ, ವಕೀಲ ಹನುಮಂತರಾಯ, ಚಿದಾನಂದ, ಹೆಚ್.ನಾಗರಾಜ್, ಜಲ್ದಪ್ಪ, ಚಿಲ್ಲಹಳ್ಳಿ ಶಿವಣ್ಣ, ಶ್ರಾವಣಗೆರೆ ಶಿವಪ್ರಸಾದ್ ಗೌಡ, ನಗರಸಭೆ ಸದಸ್ಯ ದೀಪು, ಮಾಜಿ ಸದಸ್ಯರುಗಳಾದ ವಿಜಯಕುಮಾರ್, ತಿಪ್ಪೇಸ್ವಾಮಿ, ಅಲ್ಪಸಂಖ್ಯಾತ ಘಟಕದ ಅಬ್ಬು ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕು ಅಧ್ಯಕ್ಷರುಗಳು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.