i
ಸಂಸದ ಬಿ.ವೈ.ರಾಘವೇಂದ್ರ ಅವರ ಪೆನ್ಡ್ರೈವ್ ರಿಲೀಸ್! ಬಂಧನಕ್ಕೆ ಗಡುವು ನೀಡಿದ ಈಶ್ವರಪ್ಪ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ : ರಾಷ್ಟ್ರಮಟ್ಟದಲ್ಲೂ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದೆನ್ನಲಾದ ಅಶ್ಲೀಲ ಚಿತ್ರಗಳ ಪೆನ್ಡ್ರೈವ್ ಸದ್ದು ಮಾಡುತ್ತಿರುವಾಗಲೇ ಶಿವಮೊಗ್ಗದಲ್ಲಿ ಮಾಜಿ ಉಪಮುಖ್ಯಮಂತ್ರಿ ಲೋಕಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ ಅವರು ಸುದ್ದಿಗೋಷ್ಟಿಯಲ್ಲಿ ಪತ್ರಕರ್ತರ ಕೈಗೆ ಪೆನ್ಡ್ರೈವ್ ವೊಂದನ್ನು ಕೊಟ್ಟು, ಸಂಸದ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಅವರನ್ನು ಬಂಧಿಸಲು ಪೊಲೀಸರಿಗೆ ಗಡುವು ನೀಡಿದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕೆ.ಎಸ್ ಈಶ್ವರಪ್ಪ ಅವರು ಮತದಾನದ ಹಿಂದಿನ ದಿನ ತಾವು ಕಣದಿಂದ ಹಿಂದೆ ಸರಿದಿರುವುದಾಗಿ ಪತ್ರಿಕಾ ಹೇಳಿಕೆಯೊಂದರ ಕಟಿಂಗ್ಸ್ ಹರಿದಾಡಿದ್ದು, ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಅವರಿಗೆ ಹೆಚ್ಚಿನ ಮತ ಕೊಟ್ಟು ಗೆಲ್ಲಿಸಬೇಕೆಂಬ ಈಶ್ವರಪ್ಪ ಅವರ ಹಳೆಯ ಭಾಷಣದ ತುಣುಕೊಂದು ಸೋಷಿಯಲ್ ಮೀಡಿಯಾಗಳಲ್ಲಿ ವ್ಯಾಪಕವಾಗಿ ಟ್ರೋಲ್ ಆಗಿತ್ತು. ಇದರ ಹಿಂದೆ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ಕೈವಾಡವಿದೆ ಎಂದು ಈಶ್ವರಪ್ಪ ಪತ್ರಿಕಾಗೋಷ್ಟಿಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ಇಂತಹ ನಕಲಿ ಸುದ್ದಿಯನ್ನು ಹರಡಿಸಿದ ಬಿ.ವೈ ರಾಘವೇಂದ್ರ ವಿರುದ್ದ ಪೊಲೀಸ್ ದೂರನ್ನು ನೀಡಿರುವ ಕೆ.ಎಸ್ ಈಶ್ವರಪ್ಪ ಅವರು ಪತ್ರಿಕಾ ಗೋಷ್ಟಿ ನಡೆಸಿ ಪೆನ್ಡ್ರೈವ್ಗಳನ್ನು ಪತ್ರಕರ್ತರಿಗೆ ಹಂಚಿದರು. ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಅವರ ಪರ ತಾವು ಮಾಡಿದ್ದ ಭಾಷಣವನ್ನು ಈಗ ಬಳಸಿಕೊಂಡು ತಮ್ಮ ವಿರುದ್ದ ಷಡ್ಯಂತ್ರ ನಡೆಸಲಾಗಿದೆ. ತಮ್ಮ ಸ್ಪರ್ಧೆಯಿಂದ ಸೋಲಿನ ಭೀತಿಗೊಳಗಾಗಿರುವ ಬಿ.ವೈ ರಾಘವೇಂದ್ರ ನೀಚ ರಾಜಕಾರಣ ಮಾಡಿದ್ದಾರೆ ಎಂದು ಗುಡುಗಿದರು. ಪೊಲೀಸರು 15ನೇ ತಾರೀಖಿನೊಳಗೆ ಬಿ.ವೈ ರಾಘವೇಂದ್ರ ಅವರನ್ನು ಬಂಧಿಸಬೇಕು ಇಲ್ಲದೆ ಹೋದರೆ ಹೋರಾಟ ಮಾಡುತ್ತೇನೆ ಎಂದು ಗಡುವು ನೀಡಿದರು.