![](https://www.chandravallinews.com/wp-content/uploads/2024/05/WhatsApp-Image-2024-05-14-at-8.15.34-PM.jpeg)
i
ಖಾಸಗಿ ಪಿಯು ಕಾಲೇಜುಗಳ ಡೋನೆಷನ್ ಹಾವಳಿ ತಪ್ಪಿಸಲು ಆಗ್ರಹ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶೈಕ್ಷಣಿಕ ವರ್ಷ ಆರಂಭವಾಗುತ್ತಲೇ ಡೋನೆಷನ್ ಹಾವಳಿ ಶುರುವಾಗಿದ್ದು, ವಿದ್ಯಾರ್ಥಿಗಳು ಪದವಿ ಪೂರ್ವ ಶಿಕ್ಷಣ ಪಡೆಯಲು ಲಕ್ಷಾಂತರ ರೂ. ಡೋನೆಷನ್ ಪಾವತಿಸುವಂತಾಗಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಕೂಡಲೇ ಗಮನ ವಹಿಸಿ ಡೋನೆಷನ್ ಹಾವಳಿ ತಪ್ಪಿಸಲು ಕಠಿಣ ಆದೇಶ ಹೊರಡಿಸಬೇಕು. ಸರ್ಕಾರ ನಿಗದಿಪಡಿಸುವ ಕಡಿಮೆ ಶುಲ್ಕವನ್ನೇ ಪಡೆದುಕೊಳ್ಳುವಂತೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಬೇಕು ಎಂದು ಎನ್ ಎಸ್ ಯು ಐ ಆಗ್ರಹಿಸಿದೆ.
ಮಂಗಳವಾರ ಇಲ್ಲಿನ ಪಿಯು ಡಿಡಿಪಿಐ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಂಘಟನೆಯ ಕಾರ್ಯಕರ್ತರು, ಖಾಸಗಿ ಪಿಯು ಕಾಲೇಜುಗಳಿಗೆ ಸರ್ಕಾರ ಅನೇಕ ರೀತಿಯಲ್ಲಿ ಸೌಲಭ್ಯ ಒದಗಿಸುತ್ತದೆ. ಶುಲ್ಕದಲ್ಲಿ ವಿನಾಯಿತಿ ನೀಡಿದರೆ ಸಾವಿರಾರು ವಿದ್ಯಾರ್ಥಿಗಳಿಗೆ ಹಾಗೂ ಬಡವರಿಗೆ ಅನುಕೂಲವಾಗುತ್ತದೆ. ಸರ್ಕಾರ ನಿಗದಿಪಡಿಸುವ ಶುಲ್ಕ ಪಡೆಯುವಂತೆ ಸೂಚಿಸಬೇಕು. ಖಾಸಗಿ ಪಿಯು ಕಾಲೇಜುಗಳಿಂದ ಪಾಲಕರಿಗೆ ಆಗುವ ಕಿರುಕುಳ ತಪ್ಪಿಸಬೇಕು. ರಾಜ್ಯದಲ್ಲಿ ಡೋನೆಷನ್ಗೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದರು.
ಇನ್ನೊಂದೆಡೆ ಎಸ್ಎಸ್ಎಲ್ಸಿ ಫಲಿತಾಂಶ ಬಂದು ವಾರವೂ ಆಗಿಲ್ಲ. ಈಗಾಗಲೇ ಎಲ್ಲ ಖಾಸಗಿ ಕಾಲೇಜುಗಳು ಪ್ರವೇಶಾತಿ ಮುಗಿದಿವೆ ಎನ್ನುತ್ತಿದ್ದಾರೆ. ಇದರಿಂದ ಸಾವಿರಾರು ವಿದ್ಯಾರ್ಥಿಗಳು ಪಿಯು ಶಿಕ್ಷಣ ಪ್ರವೇಶಾತಿಯಿಂದ ವಂಚಿತರಾಗಲಿದ್ದಾರೆ. ಆದ್ದರಿಂದ ಖಾಸಗಿ ಪಿಯು ಕಾಲೇಜುಗಳು ರೋಸ್ಟರ್ ಪದ್ಧತಿ ಅನುಸರಿಸಿ ಪ್ರವೇಶ ಪ್ರಕ್ರಿಯೆ ಆರಂಭಿಸಲು ಆದೇಶಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲ್ಲಿ ಎನ್ ಎಸ್ ಯುಐ ಜಿಲ್ಲಾಧ್ಯಕ್ಷ ವಿಜಯಕುಮಾರ್, ಕಾರ್ಯಾಧ್ಯಕ್ಷ ರವಿಕುಮಾರ್, ಗ್ರಾಮಾಂತರ ಅಧ್ಯಕ್ಷ ಹರ್ಷಿತ್, ನಗರಾಧ್ಯಕ್ಷ ಚರಣ್ ಮೊದಲಾದವರಿದ್ದರು.