![](https://www.chandravallinews.com/wp-content/uploads/2024/05/WhatsApp-Image-2024-05-18-at-3.19.03-PM-1024x629.jpeg)
i
ದೇಶ ರಕ್ಷಣೆಗೆ ಬಂಗಾರದ ಕಿರೀಟ, ಸಹಸ್ರಾರು ರೂ. ಕಾಣಿಕೆ ನೀಡಿದ ಜಯವಿಭವ ಸ್ವಾಮಿಗಳು…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: A golden crown for the defense of the country, thousands of Rs. Jayavibhava Swami who donated…
ಚೀನಾದವರು ನಮ್ಮ ದೇಶದ ಮೇಲೆ ಆಕ್ರಮಣ ಮಾಡಿದ ಸಂದರ್ಭದಲ್ಲಿ ದೇಶ ರಕ್ಷಣೆಯ ಕಾರ್ಯಕ್ಕೆ ಬಂಗಾರದ ಕಿರೀಟ, ದಪ್ಪನೆಯ ಉಂಗುರಗಳು, ಸಹಸ್ರಾರು ರೂ.ಗಳ ಕಾಣಿಕೆ ಅರ್ಪಿಸುವ ಮೂಲಕ ದೇಶಾಭಿಮಾನ ಮೆರೆದು ಲಿಂಗೈಕ್ಯ ಶ್ರೀ ಜಯವಿಭವ ಸ್ವಾಮಿಗಳು ಮಾದರಿಯಾಗಿದ್ದಾರೆ ಎಂದು ಹಿರಿಯ ವಿದ್ವಾಂಸರಾದ ಡಾ. ಬಿ. ರಾಜಶೇಖರಪ್ಪ ನೆನಪಿಸಿಕೊಂಡರು.
ಅವರು ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ನಡೆದ ಲಿಂ. ಶ್ರೀ ಜಯವಿಭವ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಸ್ಮರಣೋತ್ಸವದಲ್ಲಿ ಭಾಗವಹಿಸಿ ವಿಶೇಷ ಉಪನ್ಯಾಸ ನೀಡುತ್ತ, ಜಯದೇವ ಸ್ವಾಮಿಗಳವರ ಉತ್ತರಾಧಿಕಾರಿಗಳಾಗಿ ಬಂದವರು ಶ್ರೀ ಜಯವಿಭವ ಸ್ವಾಮಿಗಳು. ಇವರ ಮೂಲ ಹೆಸರು ಶಿವಲಿಂಗ ಮಹಾದೇವರು. ಇವರು ಕಾಶಿಗೆ ಉನ್ನತ ಅಭ್ಯಾಸಕ್ಕೆ ತೆರಳಿ ವೇದೋಪನಿಷತ್ತು, ಆಗಮಗಳನ್ನು ಕಲಿತರು. ಚಿತ್ರದುರ್ಗಕ್ಕೆ ಬಂದ ನಂತರ ಜಯದೇವ ಸ್ವಾಮಿಗಳು ಅವರನ್ನು ಜಯವಿಭವ ಸ್ವಾಮಿಗಳು ಎಂದು ನಾಮಕರಣ ಮಾಡುತ್ತಾರೆ. ಹಿರಿಯ ಜಗದ್ಗುರುಗಳಿಗೆ ಇವರ ಮೇಲೆ ವಿಶೇಷ ಆಸಕ್ತಿ ಇತ್ತು. ೧೯೪೯ರಲ್ಲಿ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿ, ೧೯೫೬ರಲ್ಲಿ ಜಯದೇವ ಜಗದ್ಗುರುಗಳು ಲಿಂಗೈಕ್ಯರಾದ ನಂತರ ಅಧಿಕಾರ ವಹಿಸಿಕೊಳ್ಳುತ್ತಾರೆ ಎಂದರು.
ಜಯವಿಭವ ಶ್ರೀಗಳು ವೇದ, ವೇದಾಂತ, ಸಕಲ ಶಾಸ್ತ್ರ ಅಭ್ಯಾಸ ಮಾಡಿದವರು. ಸಂಯಮಶೀಲರು, ಮಿತಭಾಷಿಗಳಾಗಿದ್ದರು. ಬೂಟಾಟಿಕೆ ಇರಲಿಲ್ಲ. ಷಟ್ಸ್ಥಲ ಸಿದ್ಧಾಂತವನ್ನು ಚೆನ್ನಾಗಿ ತಿಳಿದುಕೊಂಡಿದ್ದರು. ೬ ಭಾಷೆಗಳು ತಿಳಿದಿದ್ದವು. ಕನ್ನಡ, ಸಂಸ್ಕೃತ, ಹಿಂದಿ, ಮರಾಠಿ, ಇಂಗ್ಲಿಷ್ ಮೊದಲಾಗಿ ಭಾಷಾ ಪಾಂಡಿತ್ಯ ಇತ್ತು. ಜಯದೇವ ಗುರುಗಳನ್ನು ಹೃನ್ಮಂದಿರದಲ್ಲಿ ಸ್ಮರಿಸುತ್ತಿದ್ದರು. ಶ್ರೀಗಳು ಸಸ್ಯಪ್ರೇಮಿಗಳು. ಹೂದೋಟವನ್ನು ಮಾಡಿದ್ದರು. ಅವರು ಮಠದ ಪಕ್ಕ ಕಲ್ಪವೃಕ್ಷ ವನವನ್ನು ಮಾಡಿದರು. ಧರ್ಮ, ಸಮಾಜವನ್ನು ಹೇಗೆ ಕೊಂಡೊಯ್ಯಬೇಕೆಂದು ಚಿಂತಿಸುತ್ತಿದ್ದರು. ಶ್ರೀಮಠದ ಆವರಣದಲ್ಲಿ ಅವರು ಲಿಂಗೈಕ್ಯರಾಗುತ್ತಾರೆ. ೧೯೬೪ರಲ್ಲಿ ಬೆಂಗಳೂರಿನಲ್ಲಿ ಅನಾರೋಗ್ಯದಿಂದಾಗಿ, ಶ್ರೀಮಠದ ಮುಂದಿನ ಜಗದ್ಗುರುಗಳನ್ನಾಗಿ ಮಲ್ಲಿಕಾರ್ಜುನ ಶ್ರೀಗಳ ಹೆಸರನ್ನು ಬರೆದಿಡುತ್ತಾರೆ. ಜಯವಿಭವ ಸ್ವಾಮಿಗಳು ೧೮ನೆಯ ಜಗದ್ಗುರುಗಳು. ಅಲ್ಪಕಾಲ ಶ್ರೀಮಠದ ಆಡಳಿತ ನೋಡಿಕೊಂಡರೂ ನೆನಪಿನಲ್ಲಿಟ್ಟುಕೊಳ್ಳುವ ಕೆಲಸಗಳನ್ನು ಶ್ರೀಗಳು ಮಾಡಿದರು. ಕೃಷಿಪ್ರೇಮ ಅವರಲ್ಲಿ ಹೆಚ್ಚಾಗಿತ್ತು. ಶ್ರೀಮಠದಲ್ಲಿ ಶಾಂತವೀರ ಮುರಿಗಿ ಸ್ವಾಮಿಗಳಿಂದ ಇಲ್ಲಿಯವರೆಗೆ ಅನೇಕ ಜಗದ್ಗುರುಗಳು ಸಾಹಿತ್ಯ ಕೃತಿಗಳನ್ನು ಬರೆದು ಹೆಸರಾಗಿದ್ದಾರೆ ಎಂದು ನುಡಿದರು.
ಶ್ರೀಮಠ ಮತ್ತು ಎಸ್.ಜೆ.ಎಂ. ವಿದ್ಯಾಪೀಠ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮಿಗಳು ಮಾತನಾಡಿ, ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ. ಕಳಸದ ಮಾತನಾಡಿ ಜಯವಿಭವ ಶ್ರೀಗಳ ತೋಟ ಮತ್ತು ಅಲ್ಲಿನ ಗಂಗಾಭವನ ಬಾವಿಯನ್ನು ವೀಕ್ಷಿಸಿದ್ದು, ತೋಟದ ಅಭಿವೃದ್ಧಿಗೆ ಹೆಚ್ಚಿನ ಆಸಕ್ತಿ ವಹಿಸಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸೂಚಿಸಿದ್ದಾರೆ. ಕೆಲಸಗಳನ್ನು ಮಾತನಾಡದೆಯೇ ಮಾಡಬೇಕು. ಜಯದೇವ ಶ್ರೀಗಳು ಮತ್ತು ಜಯವಿಭವ ಸ್ವಾಮಿಗಳನ್ನು ನೆನೆದು ದಾವಣಗೆರೆ ವಿರಕ್ತಮಠದ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಜಗದ್ಗುರುಗಳು ಕಣ್ಣೀರು ಹಾಕುತ್ತಾರೆ. ಜಯವಿಭವ ಶ್ರೀಗಳು ಹಾಗೂ ಮಲ್ಲಿಕಾರ್ಜುನ ಜಗದ್ಗುರುಗಳ ಆಶೀರ್ವಚನಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡಬೇಕು. ಜಯವಿಭವ ಸ್ವಾಮಿಗಳು ತಮ್ಮ ಕಾಲಾವಧಿಯಲ್ಲಿ ಚಿತ್ರದುರ್ಗ ನಗರದಲ್ಲಿ ಜಯದೇವ ಮುರುಘರಾಜೇಂದ್ರ ಕ್ರೀಡಾಂಗಣ ನಿರ್ಮಿಸಿದರು. ಜಿಲ್ಲಾ ಸರ್ಕಾರಿ ಆಸ್ಪತೆಯಲ್ಲಿ ಮಕ್ಕಳ ವಾರ್ಡ್ ಕಟ್ಟಿಸುತ್ತಾರೆ. ಅಕ್ಕಮಹಾದೇವಿ ಸಮಾಜಕ್ಕೆ ಜಾಗ ನೀಡಿ ಕಟ್ಟಡ ನಿರ್ಮಿಸಲು ಧನಸಹಾಯ ಒದಗಿಸುತ್ತಾರೆ. ಹೊಳಲ್ಕೆರೆ ರಸ್ತೆಯ ವೀರಶೈವ ಸಮಾಜದ ವಾಣಿಜ್ಯ ಸಂಕೀರ್ಣವನ್ನು ಶ್ರೀಗಳು ಲೋಕಾರ್ಪಣೆಗೊಳಿಸುತ್ತಾರೆ. ಇಂತಹ ಹಲವಾರು ಸಮಾಜೋಪಯೋಗಿ ಕಾರ್ಯಗಳನ್ನು ಶ್ರೀಗಳು ಮಾಡಿದ್ದಾರೆಂದು ಸ್ಮರಿಸಿದರು.
ಸಮ್ಮುಖ ವಹಿಸಿದ್ದ ಡಾ. ಬಸವಪ್ರಭು ಸ್ವಾಮಿಗಳು ಮಾತನಾಡಿ, ದೀರ್ಘಕಾಲದ ಜೀವನಕ್ಕಿಂತ ದಿವ್ಯವಾದ ಜೀವನಕ್ಕೆ ಸಾಕ್ಷಿಯಾಗಬೇಕು. ಈ ನಿಟ್ಟಿನಲ್ಲಿ ಜಯವಿಭವ ಶ್ರೀಗಳೇ ಉತ್ತಮ ಉದಾಹರಣೆ. ದೇಶಕ್ಕಾಗಿ ಶ್ರೀಮಠದ ಸಂಪತ್ತನ್ನು ನೀಡಿದವರು ಶ್ರೀಗಳು ತುಂಬಾ ಸಾತ್ವಿಕರಿದ್ದರು. ಅವರಂತೆ ನಾವೆಲ್ಲ ಸಾತ್ವಿಕ ಜೀವನ ನಡೆಸಬೇಕಿದೆ ಎಂದು ಹೇಳಿದರು.
ಗೋನೂರು ನಿರಾಶ್ರಿತರ ಕೇಂದ್ರದಲ್ಲಿ ಸ್ಮರಣೆ-
ಗೋನೂರು ನಿರಾಶ್ರಿತರ ಕೇಂದ್ರದಲ್ಲಿನ ನಿರಾಶ್ರಿತರಿಗೆ ಡಾ. ಬಸವಕುಮಾರ ಸ್ವಾಮಿಗಳು, ಡಾ. ಬಸವಪ್ರಭು ಸ್ವಾಮಿಗಳು ಜಯವಿಭವ ಶ್ರೀಗಳ ಸ್ಮರಣೆಯ ನಿಮಿತ್ತ ಹಾಲು-ಹಣ್ಣು ಮತ್ತು ಸಿಹಿಯನ್ನು ವಿತರಿಸಲಾಯಿತು.
ಇದಕ್ಕು ಮುನ್ನ ಶ್ರೀಗಳ ಸ್ಮರಣೆ ಅಂಗವಾಗಿ ಮುಂಜಾನೆ ಕರ್ತೃಗದ್ದುಗೆಯಲ್ಲಿ ವಚನಾಭಿಷೇಕ ನಡೆಯಿತು. ನಂತರ ಶ್ರೀ ಜಗದ್ಗುರು ಜಯವಿಭವ ಮಹಾಸ್ವಾಮಿಗಳ ಕಲ್ಪವೃಕ್ಷ ವನದ ಮಹಾದ್ವಾರವನ್ನು ಜಯದೇವ ವಿದ್ಯಾರ್ಥಿನಿಲಯದ ಮಾಜಿ ವ್ಯವಸ್ಥಾಪಕರು ಹಾಗು ಶ್ರೀಮಠದ ಏಜೆಂಟರಾಗಿ ಸೇವೆ ಸಲ್ಲಿಸಿದ ಎಸ್.ಮಲ್ಲಯ್ಯ ಉದ್ಘಾಟಿಸಿದರು.
ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮಿಗಳು, ಶ್ರೀ ತಿಪ್ಪೇರುದ್ರ ಸ್ವಾಮಿಗಳು, ಶರಣೆ ಅಕ್ಕನಾಗಮ್ಮ ತಾಯಿ, ಸುರೇಶ್ಬಾಬು, ಕೆಇಬಿ ಷಣ್ಮುಖಪ್ಪ, ಎಸ್. ಮಲ್ಲಯ್ಯ, ಎಸ್.ಪರಮೇಶ್, ಗುತ್ತಿನಾಡು ಪ್ರಕಾಶ್, ಕೆ.ಎಂ. ವೀರೇಶ್, ಎಸ್.ಜೆ.ಎಂ. ವಿದ್ಯಾಪೀಠದ ಶಾಲಾಕಾಲೇಜುಗಳ ಮುಖ್ಯಸ್ಥರುಗಳು, ಭಕ್ತಾದಿಗಳು ಭಾಗವಹಿಸಿದ್ದರು.
ಜಮುರಾ ಕಲಾವಿದರು ಪ್ರಾರ್ಥಿಸಿದರು. ಮಹಂತೇಶ ನಿಟುವಳ್ಳಿ ಸ್ವಾಗತಿಸಿದರು. ನಂದೀಶ ನಿರೂಪಿಸಿದರು.