i
ಅನ್ನ ದಾಸೋಹದ ಮೂಲಕ ಜೂನಿಯರ್ NTR ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳು…
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತೆಲುಗು ಚಿತ್ರರಂಗದ ಖ್ಯಾತ ನಟ, ದಿವಂಗತ ನಟ ಎನ್.ಟಿ.ರಾಮಾರಾವ್ ಅವರ ಮೊಮ್ಮಗ ಜೂನಿಯರ್ NTR ಅವರ 41ನೇ ವರ್ಷದ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಅನ್ನದಾಸೋಹದ ಮೂಲಕ ಆಚರಿಸಿದರು.
ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ಎನ್ಟಿಆರ್ ಫ್ಯಾನ್ಸ್ ಅಸೋಸಿಯೇಷನ್ ಅಧ್ಯಕ್ಷ ಚಂದು ಮಾತನಾಡಿ ಇಲ್ಲಿನ ದರ್ಗಾ ಜೋಗಹಳ್ಳಿಯ ನಿರಂತರ ಅನ್ನದಾಸೋಹ ಸಮಿತಿ ಸಹಯೋಗದೊಂದಿಗೆ ಜೂನಿಯರ್ NTR ಅವರ 41ನೇ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದೇವೆ. ಕಳೆದ 10 ವರ್ಷಗಳಿಂದ ನಾನಾ ರೀತಿಯ ಸಮಾಜಮುಖಿ ಚಟುವಟಿಕೆ ನಡೆಸುತ್ತಿದ್ದೇವೆ ಎಂದರು.
ಕೋವಿಡ್ ಸಂದರ್ಭದಲ್ಲಿ ಕಡುಬಡವರಿಗೆ ಆಹಾರಕಿಟ್ ವಿತರಣೆ, ಹಸಿದವರಿಗೆ ಆಹಾರ ವಿತರಣೆ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಜೂನಿಯರ್ NTR ಹುಟ್ಟುಹಬ್ಬ ಆಚರಿಸಿದ್ದೆವು. ಈ ಬಾರಿ 41ನೇ ಹುಟ್ಟುಹಬ್ಬದ ಆಚರಣೆಯನ್ನು ಅನ್ನದಾಸೋಹ ಸಮಿತಿಯೊಂದಿಗೆ ನೂರಾರು ಬಡ ಕುಟುಂಬಗಳಿಗೆ ಆಹಾರ ವಿತರಣೆ ಮಾಡುವ ಮೂಲಕ ಆಚರಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ತಮ್ಮ ನೆಚ್ಚಿನ ನಟನ ಭಾವಚಿತ್ರದ ಮುಂಭಾಗ ಕೇಕ್ ಕತ್ತರಿಸಿ ನೆರೆದಿದ್ದ ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು.
ಜೂನಿಯರ್ NTR ಅಭಿಮಾನಿ ರಾಜೇಶ್ ಮಾತನಾಡಿ, ಆತ್ಮೀಯ ಗೆಳೆಯರಾದ ಚಂದುರವರ ನೇತೃತ್ವದಲ್ಲಿ ಸತತ 8-10 ವರ್ಷಗಳಿಂದ ನಟ ಜೂನಿಯರ್ ಎನ್ಟಿಆರ್ ಅವರ ಹುಟ್ಟುಹಬ್ಬವನ್ನು ವಿಶೇಷವಾಗಿ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಆಚರಣೆ ಮಾಡುತ್ತಿದ್ದು ಮುಂದೆ ಈ ಸಂಭ್ರಮಾಚರಣೆ ಮತ್ತಷ್ಟು ಬೆಳೆಯಲಿ. ಮತ್ತಷ್ಟು ಕುಟುಂಬಗಳಿಗೆ ಸಹಾಯವಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಆಯೋಜಕ ಅನ್ನದಾಸೋಹಿ ಮಲ್ಲೇಶ್ ಮಾತನಾಡಿ ತಮ್ಮ ಸ್ಟಾರ್ ನಟನ ಹುಟ್ಟು ಹಬ್ಬದ ಆಚರಣೆಯನ್ನು ಹೀಗೂ ಮಾಡಬಹುದೆಂದು ದೊಡ್ಡಬಳ್ಳಾಪುರ ಜೂನಿಯರ್. ಎನ್ಟಿಆರ್ ಅಭಿಮಾನಿಗಳು ತೋರಿಸಿಕೊಟ್ಟಿದ್ದಾರೆ.1515ನೇ ದಿನದ ಅನ್ನದಾಸೋಹಕ್ಕೆ ದಾನಿಗಳಾಗಿ ತಮ್ಮ ಸಹಾಯಹಸ್ತ ನೀಡಿರುವ ಚಂದು ಎನ್ಟಿಆರ್ ಅವರಿಗೆ ಶುಭವಾಗಲಿ. ಪಟಾಕಿ ಸಿಡಿಸಿ ಹಾಲಿನ ಅಭಿಷೇಕ ಮಾಡಿಸುವ ಮೂಲಕ ಸಾಕಷ್ಟು ಹಣ ದುಂದು ವೆಚ್ಚ ಮಾಡುವ ಅಭಿಮಾನಿಗಳಿಗೆ ಇದೊಂದು ಮಾದರಿಯಾಗಿದೆ. ತಮ್ಮ ನೆಚ್ಚಿನ ಸ್ಟಾರ್ ನಟನ ಹುಟ್ಟು ಹಬ್ಬದ ಸಂಭ್ರಮಾಚರಣೆಯನ್ನು ಹಸಿದವರಿಗೆ ಆಹಾರ ವಿತರಣೆ ಮಾಡುವ ಮೂಲಕ ಆಚರಣೆ ಮಾಡುತ್ತಿರುವುದು ಸಂತಸ ತಂದಿದೆ. ತಮ್ಮ ಯಾವುದೇ ವಿಶೇಷ ದಿನಗಳನ್ನು ಅನ್ನದಾಸೋಹ ಸಮಿತಿಯೊಂದಿಗೆ ಬಡವರಿಗೆ ಆಹಾರ ವಿತರಣೆ ಮಾಡುವ ಮೂಲಕ ಆಚರಿಸುವಂತೆ ಮನವಿ ಮಾಡಿದರು.
ಎನ್ಟಿಆರ್ ಫ್ಯಾನ್ಸ್ ಅಸೋಸಿಯೇಷನ್ ನ ಪದಾಧಿಕಾರಿಗಳಾದ ಎ.ಸಿ.ವೆಂಕಟೇಶ್, ಶೇಖರ್, ವಿಷ್ಣು, ಯಶು, ಪ್ರವೀಣ್, ವೆಂಕಟೇಶ್, ಕೃಷ್ಣ, ವೆಂಕಿಎನ್.ಟಿ.ಆರ್., ಗೋಪಿ, ಅರುಣ, ಪಾರ್ಥ, ಮೋಹನ, ಭಾಸ್ಕರ್, ಗಂಗಣ್ಣ ಹಾಗೂ ಎನ್ ಟಿ ಆರ್ ಅಭಿಮಾನಿಗಳು ಉಪಸ್ಥಿತರಿದ್ದರು.