i
ಎಸ್ಸಿ ಎಸ್ಟಿ ಒಗ್ಗೂಡಿಸಲು ಜ.8 ರಂದು ಐಕ್ಯತಾ ಸಮಾವೇಶ-ಆಂಜನೇಯ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕಾಂಗ್ರೆಸ್ ಪಕ್ಷದ ವತಿಯಿಂದ 2023ರ ಜನವರಿ 8 ರಂದು ಚಿತ್ರದುರ್ಗದಲ್ಲಿ ಎಸ್ಸಿ/ಎಸ್ಟಿ ಸಮುದಾಯಗಳನ್ನು ಕೇಂದ್ರೀಕರಿಸುವ ಐಕ್ಯತಾ ಸಮಾವೇಶ ಆಯೋಜಿಸಲಾಗಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.
ಇಲ್ಲಿನ ಸರ್ಕಾರಿ ವಿಜ್ಞಾನ ಕಾಲೇಜ್ ಮೈದಾನದಲ್ಲಿ ಜ.8ರಂದು ನಡೆಯಲಿರುವ ಸಮಾವೇಶದ ಅಂಗವಾಗಿ ವೇದಿಕೆ ನಿರ್ಮಾಣದ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಎಸ್ಸಿ/ಎಸ್ಟಿ ಸೇರಿದಂತೆ ಇತರೆ ಒಬಿಸಿ ಸಮುದಾಯಗಳ ಮೀಸಲಾತಿ ವಿರೋಧಿ ಬಿಜೆಪಿ. ಈಗ ಮೀಸಲಾತಿ ಹೆಸರಿನಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಆಡಳಿತಾರೂಢ ಬಿಜೆಪಿ ಎಸ್ಸಿ, ಎಸ್ಟಿ ಸಮುದಾಯಗಳನ್ನು ಸೆಳೆಯಲು ಮೀಸಲಾತಿ ಹೆಚ್ಚಳ ಡ್ರಾಮಾ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
ಬಿಜೆಪಿ ನೀಡುತ್ತಿರುವ ಆಸೆ, ಆಮಿಷಗಳಿಂದಾಗಿ ಶೋಷಿತ ಸಮುದಾಯಗಳು ಕಾಂಗ್ರೆಸ್ ಪಕ್ಷದಿಂದ ದೂರ ಆಗುತ್ತಿವೆ. ಇದನ್ನ ತಡೆದು ಶೋಷಿತರಿಗೆ ಬಿಜೆಪಿ ಮಾಡುತ್ತಿರುವ ದ್ರೋಹ ಕುರಿತು ಮನವರಿಕೆ ಮಾಡಿ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಎಸ್ಸಿ, ಎಸ್ಟಿ ವರ್ಗಗಳು ವಾಪಸ್ ಆಗುವಂತೆ ಮಾಡುವುದಕ್ಕಾಗಿ ಐಕ್ಯತಾ ಸಮಾವೇಶ ಮಾಡಲಾಗುತ್ತದೆ ಎಂದು ಅವರು ಹೇಳಿದರು.
ಭಾರತ್ ಜೋಡೋ ಯಾತ್ರೆಯಿಂದ ವಿಶ್ವದ ಗಮನ ಸೆಳೆದಿರುವ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅಥವಾ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಇವರಲ್ಲಿ ಒಬ್ಬರು ಎಸ್ಸಿ ಎಸ್ಟಿ ಐಕ್ಯತಾ ಸಮಾವೇಶದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿದ್ದಾಗ ಎಸ್ಸಿ, ಎಸ್ಟಿ ಸೇರಿದಂತೆ ಅನೇಕ ಶೋಷಿತ ತಳ ಸಮುದಾಯಗಳಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದೆ ಎಂಬುದರ ಕುರಿತು ಜಾಗೃತಿ ಮೂಡಿಸಲು ಮತ್ತು ಪಕ್ಷವು ಅವರೊಂದಿಗೆ ಇದೆ ಎಂದು ಅವರಿಗೆ ಭರವಸೆ ನೀಡುವುದು ಈ ಸಮಾವೇಶದ ಉದ್ದೇಶವಾಗಿದೆ ಎಂದು ಆಂಜನೇಯ ತಿಳಿಸಿದರು.
ಬಿಜೆಪಿಯ ಗಿಮಿಕ್ಗಳಿಗೆ ಎಸ್ಸಿ, ಎಸ್ಟಿ ಇತರೆ ಹಿಂದುಳಿದ ಸಮುದಾಯದ ಜನರು ದಾರಿ ತಪ್ಪಬಾರದು. ಎಸ್ಸಿಗಳ ಕೋಟಾವನ್ನು ಶೇಕಡಾ ೧೫ ರಿಂದ ೧೭ ಕ್ಕೆ ಮತ್ತು ಎಸ್ಟಿಗಳ ಕೋಟಾವನ್ನು ಶೇ3 ರಿಂದ 7 ಕ್ಕೆ ಹೆಚ್ಚಿಸಿದೆ ಎಂದು ಬಿಜೆಪಿ ಹೇಳಿಕೊಳ್ಳುತ್ತಿದೆ. ಆದರೆ ಕಾಂಗ್ರೆಸ್-ಜೆಡಿಎಸ್ ಆಡಳಿತದಲ್ಲಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ಸ್ಥಾಪಿಸಿದ್ದು ನಾವು. ಇದೀಗ ಮೀಸಲಾತಿ ಹೆಚ್ಚಿಸಿ ಲಾಭ ಪಡೆದುಕೊಳ್ಳಲು ಮುಂದಾಗಿರುವ ಬಿಜೆಪಿ, ಮೀಸಲಾತಿ ಹೆಚ್ಚಳವನ್ನು ಸಂವಿಧಾನದ 9ನೇ ಶೆಡ್ಯೂಲ್ನಲ್ಲಿ ಪರಿಚಯಿಸುವ ಮೂಲಕ ಅದಕ್ಕೆ ಕಾನೂನು ಚೌಕಟ್ಟನ್ನು ನೀಡಲಿ ಎಂದು ಮಾಜಿ ಸಚಿವ ಆಂಜನೇಯ ಅವರು ಸವಾಲು ಹಾಕಿದರು.
ಬೊಮ್ಮಾಯಿ ಸರ್ಕಾರ ಎಸ್ಸಿ/ಎಸ್ಟಿಗಳ ಜನಸಂಖ್ಯೆಗೆ ಅನುಗುಣವಾಗಿ ಅನುದಾನವನ್ನು ನೀಡಿಲ್ಲ, ಆದರೆ ಸಿದ್ದರಾಮಯ್ಯ ಸರ್ಕಾರ ಹೆಚ್ಚು ಹಂಚಿಕೆ ಮಾಡಿದೆ. ನಂತರ, ಅಧಿಕಾರಿಗಳು ಮಂಜೂರು ಮಾಡಿದ ಹಣವನ್ನು ಖರ್ಚು ಮಾಡಲು ವಿಫಲವಾದರೆ ಅವರನ್ನು ಶಿಕ್ಷಿಸಲು ಕಾನೂನನ್ನು ತರಲಾಯಿತು. ಗುತ್ತಿಗೆಗಳಲ್ಲಿ ಮೀಸಲಾತಿ ನೀಡಲಾಯಿತು. ಆದರೆ ಬಿಜೆಪಿ ಸರ್ಕಾರವು ಈ ಎಲ್ಲಾ ಪ್ರಯತ್ನಗಳಿಗೆ ನಿರಾಶೆ ಮಾಡಿದೆ ಎಂದು ಅವರು ದೂರಿಸಿದರು.
ಶೇ ೫೨ರಷ್ಟು ಎಸ್ಸಿ/ಎಸ್ಟಿ ಜನಸಂಖ್ಯೆ ಇರುವುದರಿಂದ ಚಿತ್ರದುರ್ಗದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಐದರಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ 101 ಉಪಜಾತಿಗಳನ್ನು ಎಸ್ಸಿ, 52 ಎಸ್ಟಿಗಳಲ್ಲಿ ವಿಭಜಿಸುತ್ತಿದೆ. ಎಲ್ಲರನ್ನೂ ಒಂದೇ ವೇದಿಕೆಯಡಿ ಒಗ್ಗೂಡಿಸುವ ಉದ್ದೇಶವನ್ನು ಈ ಸಮಾವೇಶ ಹೊಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಸ್.ಕೆ.ಬಸವರಾಜನ್, ವಿಧಾನ ಪರಿಷತ್ ಮಾಜಿ ಶಾಸಕ ರಘುಆಚಾರ್, ಇತರೆ ಹಿಂದುಳಿದ ವರ್ಗದ ವಿಭಾಗದ ಜಿಲ್ಲಾಧ್ಯಕ್ಷ ಎನ್ ಡಿ ಕುಮಾರ್ ರವರು ಪರಿಶಿಷ್ಟ ಪಂಗಡದ ವಿಭಾಗದ ಅಧ್ಯಕ್ಷ ಅಂಜಿನಪ್ಪ, ಜಿಪಂ ಮಾಜಿ ಅಧ್ಯಕ್ಷ ರವಿಕುಮಾರ್, ಮಾಜಿ ಸದಸ್ಯ ನರಸಿಂಹಮೂರ್ತಿ, ಜಿಲ್ಲಾಧ್ಯಕ್ಷ ತಾಜ್ ಪೀರ್, ನಾಗರಾಜ್, ಸಂಪತ್ ಕುಮಾರ್, ಮೈಲಾರಪ್ಪ, ರಾಜಪ್ಪ, ಯಶವಂತ್, ಪ್ರಕಾಶ್, ವೆಂಕಟೇಶ್, ಎಸ್ಸಿ, ಎಸ್ಟಿ ಘಟಕಗಳ ಪದಾಧಿಕಾರಿಗಳು ಸೇರಿದಂತೆ ಮತ್ತಿತರ ಮುಖಂಡರು ಹಾಜರಿದ್ದರು.