i
ನ್ಯಾ.ಸದಾಶಿವ ಆಯೋಗದ ಸತ್ಯ ಘಟನಾವಳಿಗಳು-ಪ್ರೊ.ಎಚ್.ಲಿಂಗಪ್ಪ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಶತ-ಶತಮಾನದಿಂದ ಸಮಾಜದಿಂದ ನೂಕಲ್ಪಟ್ಟ ಸ್ಪೃಶ್ಯ-ಅಸ್ಪೃಶ್ಯ ಜಾತಿಯ ಜನವರ್ಗದ ಬದುಕು ತುಂಬಾ ಅಸಹನೀಯವಾದ ದಾರುಣ ಸಾಮಾಜಿಕ ಆರ್ಥಿಕ ಕುರಿತಾದ ಕರುಳ ಕತೆಯನ್ನು ವರ್ಣಿಸಲು ಅಸದಳ. ಈ ಸಂಬಂಧವಾಗಿ ಅನುಚಾನವಾಗಿ ಕೆಲವು ಸಾಮಾಜಿಕ ಕಟ್ಟಳೆಯ ಮೂಲಕ ಊರಿನಿಂದ ದೂರವಿಟ್ಟರು ಅವರನ್ನು ಅಸ್ಪೃಶ್ಯರೆಂದು, ಕೆಲವರನ್ನು ಊರಿನಿಂದ ಸಮೀಪಯಿಟ್ಟುಕೊಂಡು ಜನರನ್ನು ಸ್ಪೃಶ್ಯರೆಂದು ವರ್ಗೀಕರಿಸಲಾಗಿದೆ. ಈ ಬಗ್ಗೆ ಮಾನವ ಶಾಸ್ತ್ರಜ್ಞರು, ಸಮಾಜಶಾಸ್ತ್ರಜ್ಞರು ಮತ್ತು ಕುಲಸಂಬಂಧಿ ಶಾಸ್ತ್ರಜ್ಞರ ಸಾಮಾನ್ಯ ಅಭಿಪ್ರಾಯಗಳು ಒಂದೇ ಆಗಿವೆ. ಈ ವರ್ಗಗಳ ಇಕ್ಕಟ್ಟು ಮತ್ತು ಬಿಕ್ಕಟ್ಟು ಸಾಮಾನ್ಯವಾಗಿ ಒಂದೇ ಆಗಿದ್ದರೂ ಗೆರೆಯ ಸ್ವರೂಪದಲ್ಲಿ ಸುಧಾರಣೆ ಮತ್ತು ಸುಧಾರಣೆಯಿಲ್ಲ ದಂತಹ ಬದುಕಿನವರು ಇವರ ಸಾವಿರಾರು ವರುಷಗಳ ಸಾಮಾಜಿಕ ಬದುಕಿನ ಕಥನ ಒಂದು ರೀತಿಯಲ್ಲಿ ದುರಂತಮಯವಾಗಿರುವುದು. ಎಪತ್ತು ವರುಷಗಳ ಸಂವಿಧಾನ ದತ್ತಕವಾದ ಮೀಸಲಾತಿಯಲ್ಲಿ ಸಮತೋಲನವಿಲ್ಲಾ ಎಂಬ ಜಿಜ್ಞಾಸೆಯ ಕಾರಣದಿಂದ ಅದನ್ನು ಸರಿಪಡಿಸಲು, ಸಮಗ್ರ ಪರಿಶಿಷ್ಟರು ಮಧ್ಯೆ ಸಾಮಾಜಿಕ ಸಮಾನತೆಯ ನ್ಯಾಯ ದಯಪಾಲಿಸಲು, ಮೀಸಲಾತಿಯಲ್ಲಿ ವಂಚನೆಯ ತಡೆಯಲು ಪ್ರಯತ್ನಶೀಲರಾಗಬೇಕಗಿದೆ. ಸತ್ಯವಾಗಿ ಹೇಳುವುದಾದರೆ ದೇಶವ್ಯಾಪ್ತಿಯಲ್ಲಿ ಬದುಕುವ ಅಸ್ಪೃಶ್ಯರು ಇನ್ನೂ ಕೂಡಾ ಸಾಮಾಜಿಕವಾಗಿ ಮುಖ್ಯವಾಹಿನಿಯಲ್ಲಿ ಬೆರೆಯದಂತಹ ನಿರ್ಬಂಧ ಮಾಡಲಾಗಿದೆ. ಅಂಬೇಡ್ಕರ್ ತಮ್ಮ ಜೀವಿತ ಅವಧಿಯಲ್ಲಿ ಚೌಡಕೆರೆ ನೀರು ಮುಟ್ಟು ಹೋರಟ, ಕಾಳರಾಮ ದೇವಾಲಯ ಪ್ರವೇಶ ಮತ್ತು ಅಸಮಾನತೆಯ ಪಾಠ ಹೇಳಿದ ಮನುಸ್ಮೃತಿಯನ್ನು ಸುಡವ ಹೋರಾಟ ಮಾಡಲಾಯಿತು. ಶತಮಾನ ಕಳೆದು ಹೋಗಿದ್ದರು ಇಂದಿಗೂ ಅಸ್ಪೃಶ್ಯರ ಪ್ರವೇಶ ಕಾಣದು. ಅಂತಹ ಪ್ರಯತ್ನಕ್ಕೆ ಕಾರಣರಾದರೆ ಅವರ ಮೇಲೆ ದೌರ್ಜನ್ಯ ಸಂಗತಿಗಳೆ ವಿಜೃಂಬಿಸುತ್ತವೆ. ಇವತ್ತಿಗೂ ಈ ವರ್ಗದ ಮೇಲೆ ನಿರಂತರವಾಗಿ ಅತ್ಯಾಚಾರ ಕೊಲೆ-ಸುಲಿಗೆ-ಮಾನಭಂಗ ನಿರಂತರವಾಗಿ ನಡೆದೇಯಿವೆ. ಒಂದೆರೆಡು ದಶಕಗಳ ಹಿಂದೆ ಬೆಂಡಿಗೇರೆ, ಕಂಬಾಲಪಲ್ಲಿ, ಸೊಕ್ಕೆ ಮತ್ತು ಬದವನಾಳಿನಲ್ಲಿ ನಡೆದ ಘಟನೆಗಳು ಮತ್ತೆ ಹೋರಾಟದ ದಾರಿಯಿಡಿದಿವೆ. ಅಸ್ಪೃಶ್ಯರ ವಿಮೋಚನೆಗೆ ದಲಿತ ಸಂಘಟನೆಗಳು ಪ್ರತಿಭಟಿಸಿವೆ. ಆದರೆ ತೀವ್ರತೆ ಸ್ವಲ್ಪ ಕಡಿಮೆಯಾಗಿವೆ. ಇನ್ನೂ ಎಷ್ಟೋ ಕಹಿ ಘಟನೆಗಳು ನಡೆದೇಯಿವೆ. ಅದರ ಮಧ್ಯೆ ಸ್ಪೃಶ್ಯ ಮತ್ತು ಅಸ್ಪೃಶ್ಯರ ಬೀದಯ ಕದನ ಯುದ್ಧ ರೂಪದಲ್ಲಿ ಪರ ಮತ್ತು ವಿರೋಧ ಅಲೆಯನ್ನು ವರ್ತಮಾನದಲ್ಲಿ ತಲ್ಲಣವಾಗಿ ಸೃಷ್ಟಿಯಾಗಿ ಕಂಡು ಬರುತ್ತವೆ. ಚರಿತ್ರೆ ಅರಿಯದವನನ್ನು ಚರಿತ್ರೆ ಎಂದು ಸೃಷ್ಟಿಸಲಾರದು ಎಂಬ ಮಾತಿನ ಒಳವರ್ಮವನ್ನು ಅಂಬೇಡ್ಕರ್ ಹೇಳಿದ್ದರು ಅದನ್ನು ಅರಿಯದೆ, ಅಜ್ಞಾನದ ರೂಪದ ಕದನಗಳು ಬೇಡವಲ್ಲವೇ?
ಸಾಮಾಜಿಕ-ಆರ್ಥಿಕ ಮತ್ತು ರಾಜಕೀಯ ಉದ್ದೇಶದಿಂದ ಮೀಸಲಾತಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಆದರೆ, ಈವರೆಗೆ ಪರಿಶಿಷ್ಟ ಸಮೂದಾಯದ ಒಂದೆರಡು ಜಾತಿಗಳಿಗಷ್ಟೇ ಈ ಮೀಸಲಾತಿಯ ಅನುಕೂಲ ದೊರೆತಿದೆ. ಆ ಜಾತಿಗಳು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಮುಂದುವರಿದಿದೆ. ಹಲವು ಜಾತಿಗಳಿಗೆ ಮೀಸಲಾತಿಯ ಅನುಕೂಲ (ದಕ್ಕಿಲಿಗ, ಮಾಚಾಳ……..) ದೊರೆತಿಲ್ಲ. ಮೀಸಲಾತಿಯ ಜಾರಿ ಸಂದರ್ಭದಲ್ಲಿ ಆ ಜಾತಿಗಳ ಸ್ಥಿತಿ ಹೇಗಿತ್ತೋ, ಅವು ಈಗಲೂ ಅದೇ ಸ್ಥಿತಿಯಲ್ಲಿ ಇವೆ. ಹೀಗಾಗಿ ಒಳಮೀಸಲಾತಿಯ ಅವಶ್ಯಕತೆ ಇದೆ. ಸಾವಿರ-ಸಾವಿರ ವರುಷಗಳಿಂದ ಶೋಷಣೆ ಎನ್ನುವುದು ಅಸ್ಪೃಶ್ಯರ ಮೇಲೆ ಹೆಚ್ಚಾಗಿದೆ ಎನ್ನುವ ಸತ್ಯವನ್ನು ಯಾರು ಮರೆಯುವಂತಿಲ್ಲಾ. ಜೊತೆಗೆ ಮೀಸಲಾತಿಯಿಂದ ವಂಚಿತರಾಗಿರುವರನ್ನು ಒಳಗೊಂಡ ಸಣ್ಣ-ಸಣ್ಣ ಜಾತಿಗಳಿಗೆ ಮೀಸಲಾತಿಯ ಸೌಲಭ್ಯವನ್ನು ತಲುಪಿಸುವುದು ನಮ್ಮೆಲ್ಲರ ಕರ್ತವ್ಯವು ಹೌದು. ಅದನ್ನು ವಿರೋಧಿಸುವುದು ಸಾಮಾಜಿಕ ನ್ಯಾಯವನ್ನು ವಿರೋಧಿಸುವುದಕ್ಕೆ ಸಮ, ಜಾತಿ ಮತ್ತು ಬಡತನ ಇವೆರೆಡು ಒಂದು ನಾಣ್ಯದ ಎರಡು ಮುಖಗಳು. ಇದರಲ್ಲಿ ಜಾತಿ ತುಂಬಾ ಕ್ರೂರ ಹಿಂಸೆಗೆ ಕಾರಣವಾದದ್ದು ಅಕ್ಷರ ನೀಡಿ ಇದನ್ನು ಸರಿಪಡಿಸಿ ಮುನ್ನಲೆಗೆ ತರುವ ಪ್ರಯತ್ನವನ್ನು ಈ ಹಿಂದೆ ಜ್ಯೋತಿಬಾಪುಲೆ ದಂಪತಿಗಳು, ನಾರಾಯಣಗುರು, ಪೆರಿಯಾರ್, ಮಹಾತ್ಮಗಾಂಧಿ, ಕುದಮಲ್ ರಂಗರಾವ್, ಸಾಹುಮಹಾರಾಜ್ ಇವರೆಲ್ಲರೂ ಜಾತಿ-ಮೂಡನಂಬಿಕೆಯ ವಿರುದ್ಧ ಜೀವನಪೂರ್ತಿ ಹೋರಾಟ ಮಾಡಿದರು, ಮುಂದೆ ಅಂಬೇಡ್ಕರ್ ಚಿಂತನೆಯು ಸಮಾಜಿಕ ಹೊಸ ಬೆಳಕು ಪ್ರಾಪ್ತವಾಯಿತು. ಅವರ ಚಿಂತನೆಯ ಅಸ್ತ್ರವೇ ಮೀಸಲಾತಿ.
ಮೀಸಲಾತಿ ಪರಿಣಾಮಕಾರಿಯಾಗದಿರಲು ಪರಿಶಿಷ್ಟರ ನಡುವಣ ತಾತ್ವಿಕ ಭಿನ್ನತೆಯೇ ಕಾರಣ ಎಂದು ಬಿಂಬಿಸುತ್ತಿರುವ ಆಳುವ ವರ್ಗವು, ಬ್ರಾಹ್ಮಣ-ಬನಿಯಾ ಮೊದಲಾದ ಜಾತಿಗಳ ಬಡವರಿಗೆ ಸದ್ದು-ಗದ್ದಲವಿಲ್ಲದೇ, ಚರ್ಚೆಗೆ ಗ್ರಾಸಕೊಡದೆ, ಯಾರು ಕೇಳದೇ? ಶೇ.೧೦ರಷ್ಟು ಮುಂದುವರಿದವರಿಗೆ ಮೀಸಲಾತಿ ನೀಡಿ ಮೌನದರಿಸಿತು. ಪರಿಶಿಷ್ಟರ ವಿಮೋಚನೆಗೆ ಸಂಚು ನೀಡುತ್ತಿರುವ ಅಳುವ ಸರ್ಕಾರಗಳ ಇರ್ಯಾದೆ ಬಗ್ಗೆ ೧೯೩೭ರಲ್ಲಿ ಮಹಾರಾಷ್ಟ್ರದ ’ಮಾತಂಗ’ ಸಮಾವೇಶದಲ್ಲಿ ಆಡಿದ ಮಾತುಗಳು ಇಂದು ಹೆಚ್ಚುಕ ಪ್ರಸ್ತುಕತವಾಗಿವೆ. ಮಹಾರ್, ಜಮ್ಮಾರ್, ಮಾಂಗ್, ಭಂಗಿ ಇತ್ಯಾದಿ ವಿವಿಧ ಅಸ್ಪೃಶ್ಯ ಜಾತಿಗಳಲ್ಲಿ ಏಕತೆ ಇಲ್ಲದಿರುವುದು ದುರದೃಷ್ಟಕರ. (ಇಂದು ಹೊಲೆ-ಮಾದಿಗ ಸಂಬಂಧಿ ಜಾತಿಗಳಲ್ಲಿ…….) ಮನುವಾದಿಗಳು ನಮ್ಮ ನಡುವಿನ ಜಾತಿ ಭೇದಗಳನ್ನು ತೊಡೆದು ಹಾಕುವುದು ಒತ್ತಟ್ಟಿಗಿರಲಿ, ಅದಕ್ಕೆ ವ್ಯತಿರಿಕ್ತವಾಗಿ ಅಸ್ಪೃಶ್ಯರೊಳಗಿನ ಭಿನ್ನತೆಗಳನ್ನು ಗಟ್ಟಿಗೊಳಿಸಲು ಶ್ರಮಿಸುತ್ತಾರೆ. ಅವರು ಮಾಂಗ್ರನ್ನು ಬೆಂಬಲಿಸಿ ಮಹಾರರ ವಿರುದ್ಧ ಎತ್ತಿ ಕಟ್ಟುತ್ತಾರೆ. (ಹೊಲೆ-ಮಾದಿಗರ ಮಧ್ಯೆ ಒಕ್ಕಲು ಇಂದು ಎಬ್ಬಿಸುತ್ತಾರೆ) ಜಮ್ಮಾರರನ್ನು ಬೆಂಬಲಿಸಿ ಮಹಾರ್ ಮತ್ತು ಮಾಂಗ್ರ ವಿರುದ್ಧ ಎತ್ತಿ ಕಟ್ಟುತ್ತಾರೆ. ನಮ್ಮ ಏಕತೆಯನ್ನು ತಡೆಯುವ ಸಲುವಾಗಿ, ಅವರ ತಾರತಮ್ಯ ಸಿದ್ಧಾಂತ ಕಳೆದ ಏಳು ದಶಕಗಳಿಂದ ಆಳಿದ ಸರ್ಕಾರಗಳು ಇದನ್ನೇ ಇಂದು ಮುಂದುವರಿಸುತ್ತಾ ಬಂದಿದ್ದಾರೆ. ನಮ್ಮೊಳಗಿನ ಜಾತಿ ಭೇದವನ್ನು ತೊಡೆದುಹಾಕಬೇಕಾದದ್ದು ಹಾಗು ಜಾತಿ ತಾರತಮ್ಯ ಸಿದ್ಧಾಂತವನ್ನು ನಮ್ಮೊಳಗೆ ನುಸಳದಂತೆ ತಡೆಗಟ್ಟಬೇಕಾಗಿರುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಇದನ್ನು ಸಾಧಿಸದ ಹೊರತಾಗಿ, ನಮ್ಮ ಮೇಲಿನ ಅನ್ಯಾಯವನ್ನು ತೊಡೆದು ಹಾಕುವುದು ಸಾಧ್ಯವಿಲ್ಲ ಎಂದು ಅಂಬೇಡ್ಕರ್ ಹೇಳಿದ್ದರು. ಅಂಬೇಡ್ಕರ್ ಈ ಮಾತುಗಳನ್ನು ದಲಿತರೂ ಈಗಲಾದರೂ ಅರಿತೆ, ಒಳಮೀಸಲಾಗತಿ ಸೇರಿದಂತೆ, ಪರಿಶಿಷ್ಟ ಜಾತಿಗಳ ಹಿತಾಸಕ್ತಿಯ ಹಲವು ವಿಚಾರಗಳಲ್ಲಿ ಹೋರಾಟ ನಡೆಯಬೇಕಿದೆ. ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಫಲ ದೊರೆಯಬೇಕು ಎಂಬ ಒತ್ತಾಸೆ ಇಂದಿನ ತುರ್ತು ಚಿಂತನೆಯ ಹೋರಾಟವಾಗ ಬೇಕಾಗಿದೆ. ಅದರ ಬಗ್ಗೆ ಚಿಂತಿಸದೆ ಕಿಲುಬು ಕಾಸಿನ ಸರ್ಕಾರಿ ಮೀಸಲಾತಿಗೆ ಪ್ರಕರಾರು ಎಬ್ಬಿಸಿಕೊಂಡು ಆಕಾಶಕ್ಕೆ ಉಗಿಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಭಾರತ ರತ್ನ ಭೀಮರಾವ್ ಅಂಬೇಡ್ಕರ್ ದೇಶದ ಸಂವಿಧಾನ ರಚಿಸುವಾಗ ದೃಷ್ಟಿಗಿಂತ ದೂರದೃಷ್ಟಿ ಇದ್ದುದರಿಂದ ಮಹಿಳೆಯರಿಗೆ ದಲಿತರಿಗೆ ಅಲ್ಪಸಂಖ್ಯಾತರಿಗೆ ಮತ್ತು ಹಿಂದುಳಿದವರಿಗೆ ಸಾಮಾಜಿಕ ಮತ್ತು ಆರ್ಥಿಕ ಮುಕ್ತಿಗೆ ಮೀಸಲಾತಿಯನ್ನು ಪ್ರಸ್ತಾಪಿಸಿದ್ದರು. ನಾಡು-ನುಡಿ-ಸಂಸ್ಕೃತಿ ಮತ್ತು ಪರಂಪರೆಯ ಸಾಮಾಜಿಕ-ರಾಜಕೀಯ ಆರ್ಥಿಕ ನೆಲೆಗಳನ್ನು ವಿಶೇಷವಾಗಿ ಪ್ರಸ್ತಾಪಿಸಿ ಆದಿಮ ಜನಾಂಗಗಳ ಸಬಲೀಕರಣಕ್ಕೆ ಮುನ್ನುಡಿ ಬರೆದು ಸಮಾಜಕ್ಕೆ ಆರ್ಪಿಸಿದ್ದಾರೆ. ಅದನ್ನು ಪಡೆದುಕೊಳ್ಳುವ ಮತ್ತು ನೀಡುವ ಮನಸ್ಸು ಪರಿಶುದ್ಧವಾಗಿರಬೇಕು. ಪಡೆಯುವರ ಕೂಡಾ ಅವರ ಹೋರಾಟದ ಜೀವನಗತಿಯನ್ನು ಸ್ಮರಣೀಯವಾಗಿ ನೆನಪಿಸಿಕೊಳ್ಳುವ ಕೋಟ್ಯಾನು ಕೋಟಿ ಜನರ ಅರಿವಿನ ಬುತ್ತಿಗಳಾದಾಗ ಮಾತ್ರ ಮೀಸಲಾತಿಗೆ ಒಂದು ಅರ್ಥ ಪ್ರಾಪ್ತಿವಾಗುತ್ತದೆ. ಈ ಪ್ರಕರಣದಲ್ಲಿ ಜಾತಿಗಳು ಕಮಟು ವಾಸನೆ ಬಾರದಿರಲಿ. ಈ ಪ್ರಶ್ನೆ ಕೇವಲ ಕರ್ನಾಟಕದ್ದೂ ಅಲ್ಲಾ, ಪಂಜಾಬ್, ಹರಿಯಾಣ, ಉತ್ತರಪ್ರದೇಶ, ಬಿಹಾರ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ವಿವಿಧ ಹಂತಗಳಲ್ಲಿ ಒಳಮೀಸಲಾತಿ ಪ್ರಶ್ನೆಜ್ವಲಂತವಾಗಿವೆ. ಈ ಸಂಬಂಧವಾಗಿ ನ್ಯಾಯಮೂರ್ತಿಗಳಾದ ಎನ್.ವೈ.ಹನುಮಂತಪ್ಪ ಮತ್ತು ನ್ಯಾ.ಮೂರ್ತಿ ಬಾಲಕೃಷ್ಣ ಅವರಿಂದ ಕಾರಣಾಂತರದಿಂದ ತೆರವಾಗಿದ್ದ ಆಯೋಗದ ಮುಖ್ಯಸ್ಥ ಸ್ಥಾನಕ್ಕೆ ನ್ಯಾ.ಎ.ಜೆ.ಸದಾಶಿವ ಅವರು ನೇಮಕಗೊಂಡರು. ಮೀಸಲಾತಿ ಕುರಿತು ವಿಸ್ತೃತ ಅಧ್ಯಯನ ನಡೆಸಿದ ಆಯೋಗ ಸರಕಾರಕ್ಕೆ ವರದಿ ಸಲ್ಲಿಸಿ ಎಂಟು ವರ್ಷಗಳು ಉರುಳಿವೆ. ಹತ್ತಾರು ಕೋಟಿ ರೂಪಾಯಿಗಳನ್ನು ಇದಕ್ಕಾಗಿ ಖರ್ಚು ಮಾಡಲಾಗಿದೆ ಅದರೆ, ಸರ್ಕಾರ ಈ ವರದಿಯನ್ನು ಬಹಿರಂಗಪಡಿಸದೆ ಏಕೆ ಬಿಚ್ಚಿಟ್ಟಿವೆ ಎಂಬುದನ್ನು ನಮ್ಮ ನಾಡನ್ನು ಆಳ್ವಿಕೆ ಮಾಡಿದ ಮುಖ್ಯ ಮಂತ್ರಿಗಳಾದ ಎಸ್.ಎಂ.ಕೃಷ್ಣ, ಧರ್ಮಸಿಂಗ್, ಬಿ.ಎಸ್.ಯಡಿಯೂರಪ್ಪ, ಸದಾನಂದಗೌಡ, ಹೆಚ್.ಡಿ.ಕುಮಾರಸ್ವಾಮಿ ಮತ್ತು ಎಸ್.ಜಿ.ಸಿದ್ದರಾಮಯ್ಯ ನಿಜವಾಗಿಯೂ ಅವರ ನಡೆಯನ್ನು ಪ್ರಶ್ನೆಸಬೇಕಲ್ಲವೇ?
ಇತ್ತೀಚೆಗೆ ಸರ್ವೋಚ್ಛ ನ್ಯಾಯಾಲಯದ ಅರುಣ್ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠ ಒಲವು ತೋರಿರುವುದು ಮಹತ್ವದ ಹೆಜ್ಜೆ ಎನಿಸಿದೆ. ೨೦೦೫ರಲ್ಲಿ ನ್ಯಾಯಮೂತಿ ಸಂತೋಷ ಹೆಗ್ಡೆ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠದ ತೀರ್ಪು ಒಳಮೀಸಲಾತಿ ಹೋರಾಟವನ್ನು ಕಟ್ಟಿಹಾಕಿತ್ತು. ಸಂವಿಧಾನದ ೩೪೧ರ ವಿಧಿ ಅನ್ವಯ ಪರಿಶಿಷ್ಟ ಜಾತಿಗಳ ಪಟ್ಟಿಯನ್ನು ಯಾವ ರೀತಿಯಲ್ಲೂ ಮಾರ್ಪಾಡು, ಪುನರ್ವಿಂಗಡನೆ ಮಾಡಲು ಸಾಧ್ಯವಿಲ್ಲ ಎಂದು ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿತ್ತು. ಪರಿಶಿಷ್ಟ ಜಾತಿಗಳು ಏಕಸ್ವರೂಪದ ಸಮೂದಾಯವಾದ್ದರಿಂದ ಅದನ್ನು ಗುಂಪಾಗಿ ವಿಭಜಿಸಲಾಗದು ಎಂದು ಹೇಳಿದ್ದ ಅಂದಿನ ನ್ಯಾಯಪೀಠ, ತೀರ್ಪಿನ ಕೊನೆಯಿಲ್ಲಾ ಎಂದು ಹೇಳಿತ್ತು. ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠ ತನ್ನ ತೀರ್ಪಿನಲ್ಲಿ ಈ ಅಂಶವನ್ನೇ ವಿಸ್ತರಿಸುವುದು ಸ್ಪಷ್ಟವಾಗುತ್ತದೆ. (ಈ ಪ್ರಕರಣವನ್ನು ಒಂಭತ್ತು ನ್ಯಾಯಮೂರ್ತಿಗಳಿಗೆ ಹೋಗಲು ಅವಕಾಶವಿದೆ, ಜೊತೆಗೆ ಈ ಬಗ್ಗೆ ಸರ್ಕಾರದ ಗಂಭೀರ ಚಿಂತನೆ ಅಗತ್ಯ) ಮೀಸಲಾತಿಯ ಕಧನ ಅಥವಾ ತಲ್ಲಣಗಳು ತುಳಿತಕ್ಕೆ ಒಳಗಾದವರಿಗೆ ಅನ್ಯಾಯವಾಗದ ರೀತಿಯಲ್ಲಿ ಶಿಕ್ಷಣ, ಉದ್ಯೋಗ ಮತ್ತು ರಾಜಕೀಯದಲ್ಲಿ ೧೦೧ ಜಾತಿಗಳ ಒಳಮೀಸಲಾತಿಯ ಸ್ಪರ್ಶ ದಕ್ಕಬಹುದೆ ಎಂಬ ನಿರೀಕ್ಷೆಯಲ್ಲಿ……. ಹಾಗೂ ರಾಜಕೀಯ ಹೇಳಿಕೆ, ಜಾತಿ ನಾಯಕರ ಪ್ರಂಡಾಟಿಕೆಯಿಂದ, ನೂರಾ ಒಂದು ಜಾತಿಗಳ ಮಧ್ಯೆ ಬುದ್ಧನ ಪಂಚಶೀಲ ವ್ಯಕ್ತಿತ್ವಕ್ಕೆ ದಕ್ಕೆ ತರುವ ಮತ್ತು ದಲಿತರ ಅವ್ವ ಅಂಬೇಡ್ಕರ್ ಚಿಂತನೆಗೆ ತಿಲಾಂಜಲಿ ತರುವ ಹೀನಕೃತ್ಯವನ್ನು ನರ್ತಿಸದೆ ಬುದ್ಧ ಪ್ರಜ್ಞೆಯಿಂದ ಪರಿಹರಿಸಿಕೊಳ್ಳುವುದು ನ್ಯಾಯಮಾರ್ಗವೆಂದು, ನ್ಯಾಯಾಂಗದ ತೀರ್ಪು ವಿರೋಧಿಸಿದರೆ ಅಂಬೇಡ್ಕರ್ ಸಂವಿಧಾನವನ್ನು ವಿರೋಧಿಸಿದಂತೆ ಎಂಬ ಅಭಿಪ್ರಾಯ ನನ್ನದು.
ಪ್ರಸಾದಿಸಿರುವ ಎಲ್ಲಾ ಅಂಶಗಳು ಹಂಸ ಕ್ಷೀರ ನ್ಯಾಯದಂತೆ ಇದ್ದಾಗಿಯೂ ಕೂಡ. ಈ ಹೊತ್ತಿನ ವರ್ತಮಾನದಲ್ಲಿ ಮೀಸಲಾತಿಯ ದಂಗೆಯ ಪರ ಮತ್ತು ವಿರೋಧದ ಸಂಘಟನೆಗಳು ಮತ್ತು ಮಠಾಧೀಶರು ಇವರ ಜೊತೆಗೆ ನಮ್ಮನ್ನಾಳುವ ರಾಜಕೀಯ ಪಕ್ಷದವರು ಕೂಡ ಕೈಚೆಲ್ಲಿ ಸಾಮಾಜಿಕ ಮತ್ತು ಮಾನಸಿಕ ಅಲ್ಲೋಲ-ಕಲ್ಲೋಲಗಳಿಗೆ ಕಾರಣವಾಗಿರುವುದೊಂತು ಸತ್ಯ.
ಸರ್ಕಾರವೇ ಮಾಡಿದಂತಹ ಸರ್ಕಾರದ ಹಣದ ಮೂಲಕ ನ್ಯಾಯಮೂರ್ತಿ ಸದಾಶಿವ ಆಯೋಗವು ವರದಿಯನ್ನು ದಶಕಕ್ಕೂ ಹೆಚ್ಚು ಕಾಲ ಸಲ್ಲಿಸಿದ್ದರೂ ಯಾವ ಪ್ರಯೋಜನ ಕಂಡುಬರುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಸ್ವಯಂ ಆಗಿ ನ್ಯಾಯಮೂರ್ತಿ ಸದಾಶಿವ ಅವರು ಮಾಧ್ಯಮದ ಮುಂದೆ ಬಿಚ್ಚುನುಡಿಗಳನ್ನು ಆಡಿದ್ದಾರೆ. ಇದರ ಬಗ್ಗೆ ಅರಿವುಳ್ಳ ಸಂಘಟಕರು ಸರಿಯಾಗಿ ಅರ್ಥೈಸಿಕೊಳ್ಳದೆ ಬೀದಿರಂಪಕ್ಕೆ ಮತ್ತು ಸಾಮಾಜಿಕ ತಲ್ಲಣಕ್ಕೆ ಕಾರಣರಾಗುತ್ತಿದ್ದಾರೆ. ನ್ಯಾಯಮೂರ್ತಿ ಸದಾಶಿವ ಅವರು ಸರ್ಕಾರಕ್ಕೆ ನೇರವಾಗಿ ಯಕ್ಷಪ್ರಶ್ನೆಯನ್ನು ಹಾಕಿದ್ದಾರೆ. ವರದಿ ಸಿದ್ದಪಡಿಸುವಾಗ ಈ ರಾಜ್ಯದ ಪ್ರತಿ ಜಿಲ್ಲೆ, ಪ್ರತಿ ತಾಲ್ಲೂಕು, ಪ್ರತಿ ಹೋಬಳಿ ಮತ್ತು ರಾಜ್ಯದ ಎಲ್ಲಾ ಹಳ್ಳಿಗಳನ್ನು ಸಂಬಂಧಿಸಿದಂತೆ ಎಲ್ಲಾ ಅಧಿಕಾರಿಗಳ ಜೊತೆಗೆ ಅಧಿಕೃತವಾದ ಎಲ್ಲಾ ಮಾಹಿತಿಗಳನ್ನು ಗಮನದಲ್ಲಿಟ್ಟುಕೊಂಡು, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ-ಗತಿಗಳನ್ನು ಗಂಭೀರವಾಗಿ ಅಧ್ಯಯನ ಮಾಡಿ ಪರಿಶಿಷ್ಟರ ಯಾವ ಸಮುದಾಯಕ್ಕೂ ಕೂಡ ತೊಂದರೆ ಆಗದಂತೆ ಒಳಮೀಸಲಾತಿಯನ್ನು ಸಲ್ಲಿಸಲು ಸರ್ಕಾರಕ್ಕೆ ಸಲ್ಲಿಸಿದ್ದೇನೆ.
ಆದರೆ ಇದುವರೆಗೂ ಯಾವ ಸರ್ಕಾರಗಳೂ ಕೂಡ ಈ ಬಗ್ಗೆ ಸರಿಯಾದ ನಿಲುವನ್ನು ತಾಳುತ್ತಿಲ್ಲ. ಇತ್ತೀಚೆಗೆ ಅಂಬೇಡ್ಕರ್ ಚಿಂತನೆಯ ಎಲ್ಲಾ ದಲಿತ ಸಂಘಟನೆಯ ನಾಯಕರುಗಳು ಒಳಮೀಸಲಾಯಿತಿಯನ್ನು ಒಪ್ಪಿದ್ದರೂ ಕೂಡ, ರಾಜಕೀಯ ದೊಂಬರಾಟ ಮತ್ತು ಆಯಾಯ ಜನಾಂಗದ ಮಠಾಧೀಶರು ರುದ್ರನರ್ತನವನ್ನು ಮಾಡುತ್ತಿದ್ದಾರೆ. ಅಂಬೇಡ್ಕರ್ ಚಿಂತನೆಯ ಈ ಜನ ವರ್ಗಗಳಿಗೆ ಕನಿಷ್ಠಮಟ್ಟದಲ್ಲಿ ಅಂಬೇಡ್ಕರ್ ಅವರ ಆಲೋಚನೆ ಗ್ರಹಿಸಿಕೊಂಡಿರೆ ಸಾರ್ಥಕವಾಗುತ್ತದೆ. ಒಳಮೀಸಲಾಯಿತಿಯಿಂದ ಯಾರನ್ನೂ ಹೊರಗೆ ಇಡುವ ಅವಕಾಶವಿಲ್ಲ, ಎಲ್ಲರಿಗೂ ಮೀಸಲಾಯಿತಿ ದಕ್ಕುತ್ತದೆ.
ಕೊನೆಯದಾಗಿ ದಿವಂಗತ ಮಾಜಿ ಮುಖ್ಯಮಂತ್ರಿಗಳಾದ ದೇವರಾಜ ಅರಸ್ರವರು ಎಲ್.ಜಿ.ಅವನೂರ್ ಮೂಲಕ ಮೀಸಲು ವ್ಯವಸ್ಥೆಯನ್ನು ತಂದದ್ದು ನಿಜ. ಆದರೆ ಎಲ್.ಜಿ.ಅವನೂರ್ರವರ ಅಂದೆಯೇ ಸ್ಪೃರ್ಷ ಮತ್ತು ಅಸ್ಪೃರ್ಷ ಜನಾಂಗಗಳನ್ನು ವಿಂಗಡಿಸಿ ಮೀಸಲಾಯಿತಿ ನೀಡಿದ್ದರೆ ಇಂದು ನಡೆಯುವ ಮೀಸಲಾಯಿತಿಯ ತಲ್ಲಣದ ಹೋರಾಟ ನಡೆಯುತ್ತಿರಲಿಲ್ಲ ಎಂಬುದು ನನ್ನ ಲೇಖನದ ಆಶಯ. ಈ ಲೇಖನವನ್ನು ಎಲ್ಲರೂ ಆರೋಗ್ಯವಾಗಿ ಸ್ವೀಕರಿಸಬೇಕೆಂದು ಕೋರುತ್ತೇನೆ.
ಲೇಖನ-ಹೆಚ್.ಲಿಂಗಪ್ಪ, ಚಿಂತಕರು.