i
ಶಾಸಕ ಡಿ.ಸುಧಾಕರ್ ಅವರ ರಾಜಕೀಯ ಜೀವನ ಮತ್ತು ನಡೆದು ಬಂದ ದಾರಿ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಚಿತ್ರದುರ್ಗ ಜಿಲ್ಲೆ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರವಹಿಸಿರುವ ನಾಯಕರಲ್ಲಿ ಶಾಸಕ ಡಿ.ಸುಧಾಕರ್ ಕೂಡ ಒಬ್ಬರು. ಈ ಬಾರಿಯ ಚುನಾವಣೆಯಲ್ಲಿ ಹಿರಿಯೂರು ಕಾಂಗ್ರೆಸ್ ಅಭ್ಯರ್ಥಿ ಡಿ.ಸುಧಾಕರ್ ರಾಜಕೀಯ ಅತ್ಯಂತ ಸವಾಲಿನದಾಗಿತ್ತು. ಚಳ್ಳಕೆರೆಯಲ್ಲಿ 1961 ಮಾರ್ಚ್ 28ರಂದು ಜನಿಸಿದ ಡಿ.ಸುಧಾಕರ್ ಇದುವರೆಗೆ ನಾಲ್ಕು ವಿಧಾನಸಭಾ ಚುನಾವಣೆಯನ್ನು ಎದುರುರಿಸಿದ್ದು, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಐದನೇ ಬಾರಿ ಕಣಕ್ಕಿಳಿಯಲಿದ್ದರು. ಮಾಜಿ ಸಚಿವ ಡಿ ಸುಧಾಕರ್ ಅವರು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಒಂದು ಬಾರಿ ಸಮಾಜ ಕಲ್ಯಾಣ ಸಚಿವರಾಗಿ ಸೇವೆ ಸಲ್ಲಿಸಿದ್ದರು.
2004ರಲ್ಲಿ ಚಳ್ಳಕೆರೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣಾ ಕಣಕ್ಕಿಳಿದ ಡಿ ಸುಧಾಕರ್ ಅವರ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಜಿ. ಬಸವರಾಜ್ ಮಂಡಿ ಮಠ ಅವರನ್ನು 27,351 ಮತಗಳ ಅಂತರದಲ್ಲಿ ಸೋಲಿಸುವ ಮೂಲಕ ವಿಧಾನಸೌಧ ಪ್ರವೇಶಿಸಿದರು.
2008ರಲ್ಲಿ ಚಳ್ಳಕೆರೆ ಮೀಸಲು ಕ್ಷೇತ್ರವಾದ್ದರಿಂದ ಹಿರಿಯೂರು ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಭರ್ಜರಿ ಜಯಗಳಿಸಿ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದರು. ನಂತರ ನಡೆದ 2013 ರ ಚುನಾವಣೆಯಲ್ಲಿ ಪ್ರಬಲ ಜೆಡಿಎಸ್ ಅಭ್ಯರ್ಥಿ ಎ. ಕೃಷ್ಣಪ್ಪನ ವಿರುದ್ಧ 1,205 ಮತಗಳ ಅಂತದಲ್ಲಿ ಕೂದಲೆಳೆ ಅಂತರದಲ್ಲಿ ಪ್ರಯಾಸದ ಗೆಲುವು ಪಡೆದರು. ಹಿರಿಯೂರು ಕ್ಷೇತ್ರದಲ್ಲೇ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಡಿ.ಸುಧಾಕರ್ಗೆ ಬಿಜೆಪಿ ಅಭ್ಯರ್ಥಿ ಕೆ.ಪೂರ್ಣಿಮಾ ಅವರು ಸೋಲಿನ ರುಚಿ ತೋರಿಸಿದರು.
2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪೂರ್ಣಿಮಾ ಶ್ರೀನಿವಾಸ್ ವಿರುದ್ಧ 12,875 ಮತಗಳ ಅಂತದಲ್ಲಿ ಸೋಲು ಕಂಡರು.ಶಿಕ್ಷಣ ಪ್ರೇಮಿ, ಬಡವರ ಬಂಧು, ದೀನ ದಲಿತರ ಆಶಾಕಿರಣ, ಅಭಿವೃದ್ಧಿ ಹರಿಕಾರ, ಹೀಗೆ ವಿವಿಧ ಹೆಸರುಗಳಿಂದ ಕರೆಸಿಕೊಳ್ಳುವ ಶಾಸಕ ಡಿ. ಸುಧಾಕರ್ ಕಳೆದ ತಮ್ಮ ಅಧಿಕಾರ ಅವಧಿಯಲ್ಲಿ ತಾಲೂಕಿನ ಸಮಗ್ರ ಅಭಿವೃದ್ಧಿಯ ಆದ್ಯತೆಗೆ ಒತ್ತು ನೀಡಿದ್ದು ವಿಶೇಷವಾಗಿ ಮೂಲಭೂತ ಸೌಕರ್ಯಕ್ಕೆ ಹೆಚ್ಚು ಆದ್ಯತೆ ಕೊಟ್ಟಿದ್ದಾರೆ ಎನ್ನುವುದು ಸ್ಥಳೀಯ ಅಭಿಪ್ರಾಯವಾಗಿದೆ.
ಡಿ ಸುಧಾಕರ್ ಅವರ ಪ್ರಮುಖ ಸಾಧನೆ ಎಂದರೆ 2016 ಬರಗಾಲದಲ್ಲಿ ತಮ್ಮ ಸ್ವಂತ ಹಣದಲ್ಲಿ ರಾಜ್ಯದಲ್ಲೇ ಪ್ರಥಮ ಬಾರಿಗೆ ಹಿರಿಯೂರಿನ ಉಡುವಳ್ಳಿ ಮತ್ತು ಮೇಟಿಕುರ್ಕೆ ಕೆರೆಯಲ್ಲಿ ಸುಮಾರು 450 ಎಕರೆ ಪ್ರದೇಶದಲ್ಲಿ ಮೇವು ಬೆಳೆದು ಪ್ರತಿಯೊಬ್ಬ ರೈತನ ಕುಟುಂಬದ ಜಾನುವಾರುಗಳಿಗೆ ಮೇವು ವಿತರಿಸಿ ಮಾದರಿ ಶಾಸಕ ಎಂಬ ಬಿರುದು ಪಡೆದಿದ್ದರು. ಇನ್ನು ಈ ಬಾರಿಯ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಹಿರಿಯೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಸಚಿವ ಡಿ. ಸುಧಾಕರ್ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದರು. ಹಿರಿಯೂರು ನಗರದ 31 ವಾರ್ಡ್ಗಳು ಸೇರಿದಂತೆ ತಾಲೂಕಿನ ನೂರಾರು ಹಳ್ಳಿಗಳಲ್ಲಿ ಸಂಚರಿಸಿ ಪ್ರತಿ ಮನೆ ಮನೆಗೂ ತೆರಳಿ ಮತಯಾಚನೆ ಮಾಡಿ ಗಮನ ಸೆಳೆದಿದ್ದರು. ಉಳಿದಂತೆ ಗ್ರಾಮೀಣ ಪ್ರದೇಶಗಳ ಹಳ್ಳಿಗಳಿಗೂ ಭೇಟಿ ನೀಡಿ ಕಾಂಗ್ರೆಸ್ ಪಕ್ಷ ಬೆಂಬಲಿಸುವಂತೆ ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ. ಒಟ್ಟಾರೆ ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಸಾಕಷ್ಟು ಶ್ರಮಿಸಿದ್ದರು. 2018ರಲ್ಲಿ ಸೋಲು ಕಂಡ ನಂತರ ಪ್ರತಿ ದಿನ ಕ್ಷೇತ್ರದ ಜನರ ಕಷ್ಟ, ಸುಃಖ, ಇತರೆ ಸಮಸ್ಯೆಗಳಿಗೆ ಸ್ಪಂದಿಸಿ ನಿರಂತರವಾಗಿ ಜನ ಸಂಪರ್ಕದಲ್ಲಿದ್ದದರ ಫಲವೇ ಇಂದು ಹೆಚ್ಚಿನ ಮತಗಳ ಅಂತರದಲ್ಲಿ ಹಿರಿಯೂರು ಕ್ಷೇತ್ರದಲ್ಲಿ ಡಿ.ಸುಧಾಕರ್ ಆಯ್ಕೆಯಾಗಿದ್ದಾರೆ. ಅಲ್ಲದೆ ಇವರ ಗೆಲುವಿನಲ್ಲಿ ಇವರ ಪತ್ನಿ ಹರ್ಷಿಣಿ ಸುಧಾಕರ್ ಶ್ರಮ ಕಡೆಗಣಿಸುತ್ತಿಲ್ಲ ಮತ್ತು ಕಾರ್ಯಕರ್ತರು, ಮುಖಂಡರ ಒಗ್ಗಟ್ಟಿನ ಪರಿಶ್ರಮ ಸುಧಾಕರ್ ಅವರನ್ನು ದಡ ಸೇರಿಸಿದೆ.