i
ನನ್ನಿವಾಳ ಮತ್ತು ರಾಮಜೋಗಿಹಳ್ಳಿ ಬಳಿ ಅವೈಜ್ಞಾನಿಕ, ಕಳಪೆ ಚೆಕ್ ಡ್ಯಾಂ ನಿರ್ಮಾಣ:ಗ್ರಾಮಸ್ಥರ ಆರೋಪ…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಚಿತ್ರದುರ್ಗ ಜಿಲ್ಲೆಯ ಬರ ಪೀಡಿತ ಚಳ್ಳಕೆರೆ ವಿಧಾನಸಭಾ ವ್ಯಾಪ್ತಿಯ ನನ್ನಿವಾಳ ಮತ್ತು ರಾಮಜೋಗಿಹಳ್ಳಿ ಮಧ್ಯ ಭಾಗದಲ್ಲಿ ಜನ್ನೇನಹಳ್ಳಿ ಕಡೆಯಿಂದ ಬರುವ ನೀರು ಸಂಗ್ರಹಿಸಲು ಸುಮಾರು 75 ಲಕ್ಷ ವೆಚ್ಚದಲ್ಲಿ ಇತ್ತೀಚಿಗಷ್ಟೇ ಕೆಆರ್ಐಡಿಎಲ್ ನಿರ್ಮಿಸಿದ ಚೆಕ್ ಡ್ಯಾಂ ಕಳಪೆ ಮತ್ತು ಅವೈಜ್ಞಾನಿಕ ಕಾಮಗಾರಿಯಾದೆ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಗ್ರಾಮದ ರಿ.ಸರ್ವೆ ನಂ. ೪೦೯ರಲ್ಲಿ ಕಳೆದ ೨೦೧೪-೧೫ನೇ ಸಾಲಿನಲ್ಲಿ ಸುಮಾರು ೨೫ ಲಕ್ಷ ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಿಸಿದ್ದು ಈಗ ಪುನಃ ಇದಕ್ಕೆ ಹೊಂದಿಕೊಂಡಂತೆ ಇರುವ ಜಾಗದಲ್ಲೇ ಚೆಕ್ ಡ್ಯಾಂ ನಿರ್ಮಿಸಿ ಹಳೆ ಮತ್ತು ಹೊಸ ಎರಡನ್ನೂ ಸೇರಿಸಲಾಗಿದೆ. ವಿಶೇಷವೆಂದರೆ ನೀರು ಸಂಗ್ರಹವಾಗಬೇಕಾದ ಜಾಗವಲ್ಲದ ಸ್ಥಳದಲ್ಲಿ ಈ ಚೆಕ್ ಡ್ಯಾಂ ನಿರ್ಮಿಸಿದ್ದು ಇದರಲ್ಲಿ ನೀರು ಎಲ್ಲಿಂದ ಸಂಗ್ರಹವಾಗಬೇಕು ಎಂಬುವುದೇ ಗ್ರಾಮಸ್ಥರಿಗೆ ದೊಡ್ಡ ಪ್ರಶ್ನೆಯಾಗಿದೆ.
ಗ್ರಾಮದ ಮುಖಂಡರಾದ ಮಾರುತಿ, ದೇವರಾಜರೆಡ್ಡಿ, ತಿಮ್ಮಾರೆಡ್ಡಿ, ಬೋರಯ್ಯ, ವೈ.ಬಾಬು, ಪ್ರಸನ್ನಕುಮಾರ್ ಮುಂತಾದವರು ಕಳಪೆ ಚೆಕ್ ಡ್ಯಾಂ ನಿರ್ಮಾಣದ ಬಗ್ಗೆ ಅಸಮದಾನ ವ್ಯಕ್ತಪಡಿಸಿ ಈ ಬಗ್ಗೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಅವೈಜ್ಞಾನಿಕ ಚೆಕ್ ಡ್ಯಾಂ ನಿರ್ಮಾಣಕ್ಕೆ ಕಾರಣಕರ್ತರಾದ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ವಿಶೇಷವಾಗಿ ಸುತ್ತಮುತ್ತಲಿನ ಜಮೀನು ತೋಟದ ಮಾಲೀಕರು ಯಾರನ್ನೂ ಭೇಟಿ ಮಾಡದೆ ಗ್ರಾಮಸ್ಥರಿಂದ ಸಲಹೆ ಪಡೆಯದೆ ದಿಢೀರನೇ ಕಾಮಗಾರಿ ಆರಂಭಿಸಿ ಕೆಲವೇ ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಿಸಿದ್ದಾರೆ. ಅಲ್ಲೇ ಇದ್ದ ಮಣ್ಣನ್ನು ಸ್ವಚ್ಚಗೊಳಿಸಿ ಚೆಕ್ ಡ್ಯಾಂ ನಿರ್ಮಿಸಿದ್ದಾರೆ. ಚೆಕ್ ಡ್ಯಾಂ ಪ್ರದೇಶಕ್ಕೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೇ ಇರುವ ಜಾಗದಲ್ಲಿ ಅಧಿಕಾರಿಗಳು ಚೆಕ್ ಡ್ಯಾಂ ನಿರ್ಮಿಸಿದ್ದಾರೆ. ದೊಡ್ಡ ಮಳೆಗೆ ಚೆಕ್ ಡ್ಯಾಂ ಕಿತ್ತು ಹೋಗುವ ಆತಂಕವಿದೆ.
ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಕಳಪೆ ಕಾಮಗಾರಿ ವೀಕ್ಷಿಸಿ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. ಈ ಬಗ್ಗೆ ಲೋಕಾಯುಕ್ತರಿಗೂ ಲಿಖಿತ ದೂರು ನೀಡಲು ಗ್ರಾಮಸ್ಥರು ಸಿದ್ದತೆ ನಡೆಸಿದ್ದಾರೆ.