ಚಂದ್ರವಳ್ಳಿ ನ್ಯೂಸ್, ಮೈಸೂರು:
"ಈಗ ನಾನು ಮುಖ್ಯಮಂತ್ರಿಯಲ್ಲ, ಮಾಜಿ ಮುಖ್ಯಮಂತ್ರಿ. ರಾಹುಲ್ ಗಾಂಧಿ ಅವರು ಹೇಳಿದ ಮೇಲೆ ಮರು ಮಾತನಾಡದೇ ಗೌರವದಿಂದ ರಾಜೀನಾಮೆ ಕೊಟ್ಟು ಹೊರಬಂದಿದ್ದೇನೆ. ಈಗ ಮಾಜಿ ಸಿಎಂ ಆಗಿಯೇ ನಿಮ್ಮ ಮುಂದೆ ನಿಂತಿದ್ದೇನೆ..."- ಹೀಗೆಂದು ಅಭಿಮಾನಿಯೊಬ್ಬರ ಘೋಷಣೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೇದಿಕೆಯಲ್ಲೇ ಅತ್ಯಂತ ಮಾರ್ಮಿಕವಾಗಿ ಪ್ರತಿಕ್ರಿಯಿಸಿದ ಪ್ರಸಂಗ ಜರುಗಿದೆ.
ನಂಜನಗೂಡು ತಾಲೂಕಿನ ದೇವನೂರು ಗ್ರಾಮದ ಶ್ರೀ ಗುರುಮಲ್ಲೇಶ್ವರ ಮಹಾ ಸಂಸ್ಥಾನ ದಾಸೋಹ ಮಠದಲ್ಲಿ ನಡೆದ ಶ್ರೀ ಗುರು ಮಲ್ಲೇಶ್ವರರ 127ನೇ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಸಿದ್ದರಾಮಯ್ಯ ಭಾಷಣಕ್ಕೆ ನಿಲ್ಲುತ್ತಿದ್ದಂತೆ ಅಭಿಮಾನಿಯೊಬ್ಬ "ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಯವಾಗಲಿ" ಎಂದು ಕೂಗಿದಾಗ, ಸಿದ್ದರಾಮಯ್ಯ ತಾವು ಸದ್ಯ ಅಧಿಕಾರದಲ್ಲಿ ಇಲ್ಲದಿರುವುದನ್ನು ಸ್ಪಷ್ಟಪಡಿಸಿದರು.
ಬಸವಣ್ಣನವರ ಸಮ ಸಮಾಜದ ಕನಸು ಇನ್ನೂ ನನಸಾಗಿಲ್ಲ!
ಕಾರ್ಯಕ್ರಮದಲ್ಲಿ ಶ್ರೀ ಗುರುಮಲ್ಲೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಜ್ಯೋತಿ ಬೆಳಗಿಸಿ ಮಾತನಾಡಿದ ಸಿದ್ದರಾಮಯ್ಯ, ಶರಣರ ತತ್ವಗಳು ಹಾಗೂ ಇಂದಿನ ಸಾಮಾಜಿಕ ವ್ಯವಸ್ಥೆಯ ಬಗ್ಗೆ ಕಳಕಳಿ ವ್ಯಕ್ತಪಡಿಸಿದರು.
ಬಸವಣ್ಣನವರ ಅನುಯಾಯಿ: "ನಾನು ಬಸವಣ್ಣನವರ ಪರಮ ಅನುಯಾಯಿ. ಇದೇ ಕಾರಣಕ್ಕೆ ಮೊದಲ ಬಾರಿ ಮುಖ್ಯಮಂತ್ರಿಯಾದಾಗ ಬಸವ ಜಯಂತಿಯಂದೇ ಪ್ರಮಾಣವಚನ ಸ್ವೀಕರಿಸಿದ್ದೆ. ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ್ದೆ" ಎಂದರು.
ಅಸಮಾನತೆ ಇನ್ನೂ ಜೀವಂತ: 12ನೇ ಶತಮಾನದಿಂದ ಇಂದಿನವರೆಗೆ ಸಮಾಜ ಸಾಕಷ್ಟು ಬದಲಾಗಿದೆ. ಆದರೆ, ಜಾತಿ ಮತ್ತು ಅಂತಸ್ತಿನ ತಾರತಮ್ಯ ಮುಕ್ತವಾದ ಸಮ ಸಮಾಜದ ಶರಣರ ಕನಸು ಇನ್ನೂ ನನಸಾಗಿಲ್ಲ. ನಾವೆಲ್ಲರೂ ಪರಸ್ಪರರನ್ನು ಮನುಷ್ಯರನ್ನಾಗಿ ನೋಡುವ ಗುಣ ಬೆಳೆಸಿಕೊಳ್ಳಬೇಕು ಎಂದರು.
ಅಂಬೇಡ್ಕರ್ ಸಂವಿಧಾನದಿಂದಲೇ ನಾನು ಸಿಎಂ ಆಗಿದ್ದೆ
ಹಳೆಯ ವರ್ಣಾಶ್ರಮ ವ್ಯವಸ್ಥೆಯು ಬಹುಜನರನ್ನು ಅಕ್ಷರ ಸಂಸ್ಕೃತಿಯಿಂದ ವಂಚಿಸಿತ್ತು ಎಂದು ಬೇಸರ ವ್ಯಕ್ತಪಡಿಸಿದ ಸಿದ್ದರಾಮಯ್ಯ, "ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನದಿಂದಾಗಿ ಇಂದು ಎಲ್ಲರಿಗೂ ಸಮಾನ ಅವಕಾಶ ಸಿಕ್ಕಿದೆ. ಆ ಸಂವಿಧಾನದ ಶಕ್ತಿಯಿಂದಲೇ ನನ್ನಂಥವನು ಮುಖ್ಯಮಂತ್ರಿಯಾಗಲು ಸಾಧ್ಯವಾಯಿತು" ಎಂದು ಸ್ಮರಿಸಿದರು. ಶರಣರ ಪ್ರೇರಣೆಯಿಂದಲೇ ತಾವು ಈ ಹಿಂದೆ 'ಮೌಢ್ಯ ನಿಷೇಧ ಕಾಯ್ದೆ' ತಂದಿದ್ದಾಗಿ ಹಾಗೂ ಜನಪದರ ಹಸಿವು ನೀಗಿಸಲು 'ಗ್ಯಾರಂಟಿ ಯೋಜನೆ'ಗಳನ್ನು ರೂಪಿಸಿದ್ದಾಗಿ ಅವರು ತಿಳಿಸಿದರು.
ವಿದ್ಯಾವಂತರ ಮೌಢ್ಯಕ್ಕೆ ವಿಷಾದ: "ಶಿಕ್ಷಣವಿಲ್ಲದೆ ಪ್ರಗತಿ ಸಾಧ್ಯವಿಲ್ಲ ನಿಜ. ಆದರೆ, ಇಂದು ಉತ್ತಮ ಶಿಕ್ಷಣ ಪಡೆದು, ದೊಡ್ಡ ಅಧಿಕಾರ ಹಿಡಿದಿರುವ ವಿದ್ಯಾವಂತ ಸಮಾಜವೇ ಮೌಢ್ಯಾಚರಣೆಗಳಲ್ಲಿ ಮುಳುಗಿರುವುದು ಅತ್ಯಂತ ದುರಂತದ ಸಂಗತಿ" ಎಂದು ಸಿದ್ದರಾಮಯ್ಯ ಕಳಕಳಿ ವ್ಯಕ್ತಪಡಿಸಿದರು.
ದೇವನೂರು ಮಠದ ನೂತನ ಬಸವ ಮಹಾದ್ವಾರ ಉದ್ಘಾಟನೆ
ಇದಕ್ಕೂ ಮುನ್ನ ಮಠದಲ್ಲಿ ನೂತನವಾಗಿ ನಿರ್ಮಿಸಲಾಗಿರುವ 'ಬಸವ ಮಹಾದ್ವಾರ' ಮತ್ತು 'ಕಲ್ಯಾಣಿ'ಯನ್ನು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳು ಹಾಗೂ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಜಂಟಿಯಾಗಿ ಉದ್ಘಾಟಿಸಿದರು. ಕಂತೆ ಭಿಕ್ಷೆ ಬೇಡಿ, ಹಸಿದವರ ಹೊಟ್ಟೆ ತುಂಬಿಸಿದ ದೇವನೂರು ಶ್ರೀ ಗುರುಮಲ್ಲೇಶ್ವರರ ದಾಸೋಹ ಸೇವೆ ಅವಿಸ್ಮರಣೀಯ ಎಂದು ಗಣ್ಯರು ಸ್ಮರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ವಹಿಸಿದ್ದರು. ಸೋಮಹಳ್ಳಿ ಮಠದ ಶ್ರೀ ಸಿದ್ದಮಲ್ಲ ಸ್ವಾಮಿಗಳು ಆಶೀರ್ವಚನ ನೀಡಿದರು. ವೇದಿಕೆಯಲ್ಲಿ ಶಾಸಕರಾದ ದರ್ಶನ್ ಧ್ರುವನಾರಾಯಣ್, ಗಣೇಶ್ ಪ್ರಸಾದ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.



