ಗಿಲಿಕೇನಹಳ್ಳಿ ಮಧು
ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ಹೊಳಲ್ಕೆರೆ ಕ್ಷೇತ್ರದ ಚಿತ್ರಹಳ್ಳಿ ಗೇಟ್ನಿಂದ ಹೆಚ್.ಡಿ. ಪುರ ಮಾರ್ಗವಾಗಿ ಹೊಸದುರ್ಗ ಹಾಗೂ ಹಿರಿಯೂರು-ಐಮಂಗಲ ಕಡೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ದುಸ್ಥಿತಿ ಇಂದು ವಾಹನ ಸವಾರರ ಪಾಲಿಗೆ ನರಕದ ದಾರಿಯಾಗಿದೆ. ರಸ್ತೆಯಲ್ಲಿ ಗುಂಡಿಗಳಿವೆಯೋ ಅಥವಾ ಗುಂಡಿಗಳಲ್ಲೇ ರಸ್ತೆಯನ್ನು ಹುಡುಕಬೇಕೋ ಎಂಬಷ್ಟು ಶೋಚನೀಯ ವಾತಾವರಣ ನಿರ್ಮಾಣವಾಗಿದೆ. ಆಳುದ್ದದ ಹಳ್ಳ-ಕೊಳ್ಳಗಳಿಂದ ಆವೃತವಾಗಿರುವ ಈ ಮಾರ್ಗದಲ್ಲಿ ಪ್ರಯಾಣಿಸುವುದು ಎಂದರೆ ಸಾಕ್ಷಾತ್ ಯಮನ ದರ್ಶನ ಪಡೆದಂತೆ.
ಯಮಯಾತನೆಯ ಮಾರ್ಗಗಳು:
ವಿಶೇಷವಾಗಿ ಈ ಕೆಳಗಿನ ಪ್ರಮುಖ ಗ್ರಾಮಗಳು ಮತ್ತು ಸಂಪರ್ಕ ರಸ್ತೆ ಸಂಪೂರ್ಣವಾಗಿ ಹಾಳಾಗಿ ಅಸ್ತವ್ಯಸ್ತಗೊಂಡಿವೆ. ವಾಹನ ಸವಾರರು, ಎತ್ತಿನ ಗಾಡಿಗಳು ಓಡಾಡುವೇ ಕಷ್ಟಸಾಧ್ಯವಾಗಿದೆ.
ಚಿತ್ರಹಳ್ಳಿ ಗೇಟ್ ಮತ್ತು ನಗರಘಟ್ಟ: ಭಾರಿ ವಾಹನಗಳ ಸಂಚಾರದಿಂದ ರಸ್ತೆಯ ಆಕಾರವೇ ಬದಲಾಗಿದೆ. ಮತಿಘಟ್ಟ ಹಾಗೂ ನೆಲ್ಲಿಕಟ್ಟೆ: ನಿತ್ಯ ಸಂಚರಿಸುವ ಶಾಲಾ ಮಕ್ಕಳು ಮತ್ತು ಸಾರ್ವಜನಿಕರು ಬಿದ್ದೆದ್ದು ಸಾಗಬೇಕಾದ ಅನಿವಾರ್ಯತೆ ಸೃಷ್ಠಿಯಾಗಿದೆ.
ನಂದನ ಹೊಸೂರು ಹಾಗೂ ಹೆಚ್.ಡಿ. ಪುರ: ಸಣ್ಣಪುಟ್ಟ ಅಪಘಾತಗಳು ನಿರಂತರವಾಗಿ ಸಂಭವಿಸುತ್ತಿದ್ದು, ದ್ವಿಚಕ್ರ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುತ್ತಿದ್ದಾರೆ.
ಸಾವಿರಾರು ಕೋಟಿ ಅನುದಾನವಿದ್ದರೂ ಶೂನ್ಯ ಪ್ರಗತಿ:
ಗಣಿ ಬಾಧಿತ ಪ್ರದೇಶಾಭಿವೃದ್ಧಿ ಯೋಜನೆಯಡಿ 1500 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಬೃಹತ್ ಅನುದಾನ ಲಭ್ಯವಿದ್ದರೂ, ಗ್ರಾಮೀಣ ಹಾಗೂ ಪ್ರಮುಖ ಸಂಪರ್ಕ ರಸ್ತೆಗಳ ಸ್ಥಿತಿ ಮಾತ್ರ ಅಯೋಮಯವಾಗಿದೆ. ಇಷ್ಟೊಂದು ಭಾರಿ ಮೊತ್ತದ ಹಣ ಯಾರಿಗಾಗಿ ಮತ್ತು ಎಲ್ಲಿ ವೆಚ್ಚವಾಗುತ್ತಿದೆ ಎಂಬುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
‘ರಸ್ತೆ ರಾಜ’ನಿಗೆ ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಉತ್ತರವೇ? :
ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಎಂ. ಚಂದ್ರಪ್ಪ ಅವರು ಕ್ಷೇತ್ರದಲ್ಲಿ ಮಾಡಿಸಿರುವ ರಸ್ತೆ ಅಭಿವೃದ್ಧಿ ಕೆಲಸಗಳಿಗಾಗಿ ‘ರಸ್ತೆ ರಾಜ’ ಎಂದೇ ಹೆಸರು ಪಡೆದವರು.
ಆದರೆ, ಕ್ಷೇತ್ರದ ಈ ಪ್ರಮುಖ ಮಾರ್ಗಗಳ ಈ ದುಸ್ಥಿತಿಯನ್ನು ಕಂಡಾಗ, ಆ ಬಿರುದು ಕೇವಲ ಹೆಸರಿಗಷ್ಟೇ ಸೀಮಿತವೇ ಎಂಬ ಪ್ರಶ್ನೆ ಮೂಡುತ್ತದೆ. ಕಣ್ಣೆದುರೇ ರಸ್ತೆಗಳು ಶೋಚನೀಯ ಸ್ಥಿತಿಯಲ್ಲಿದ್ದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿರುವುದು ದುರಂತ.
ಕೆಸರು ನೀರು-
ಈ ಮುಖ್ಯ ರಸ್ತೆಯು ತೀವ್ರವಾಗಿ ಹಾಳಾಗಿದ್ದು, ಸಾರ್ವಜನಿಕರ ಸಂಚಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ರಸ್ತೆಯುದ್ದಕ್ಕೂ ಬೃಹತ್ ಗಾತ್ರದ ಗುಂಡಿಗಳು ಬಿದ್ದಿದ್ದು, ಅವುಗಳಲ್ಲಿ ಕೆಸರು ನೀರು ತುಂಬಿರುವುದರಿಂದ ಸಣ್ಣ ಸರೋವರದಂತೆ ಕಂಗೊಳಿಸುತ್ತಿದೆ.
ಸವಾರರಿಗೆ ಆಪತ್ತು: ಕಾರು, ಆಟೋ ಹಾಗೂ ದ್ವಿಚಕ್ರ ವಾಹನಗಳು ಈ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡಬೇಕಾಗಿದೆ. ರಸ್ತೆ ಗುಂಡಿಗಳ ಆಳ ತಿಳಿಯದೆ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಳ್ಳುವ ಅಪಾಯ ಹೆಚ್ಚಾಗಿದೆ.
ಸಂಚಾರ ದಟ್ಟಣೆ ಹಾಗೂ ವಿಳಂಬ: ಪ್ರಮುಖ ಬಸ್ಸುಗಳು ಹಾಗೂ ಇತರ ವಾಹನಗಳು ಗುಂಡಿಗಳನ್ನು ತಪ್ಪಿಸಿ ತೆವಳುತ್ತಾ ಸಾಗಬೇಕಾಗಿರುವುದರಿಂದ ನಿರಂತರವಾಗಿ ಹತ್ತು ನಿಯಮದ ಪ್ರಯಾಣಕ್ಕೆ ಗಂಟೆಗೂ ಅಧಿಕ ಸಮಯ ಆಗುತ್ತಿದೆ ಅಲ್ಲದೆ ಇಂಧನ ಹೆಚ್ಚು ಖರ್ಚಾಗುತ್ತಿದೆ.

ಆರೋಗ್ಯ ಮತ್ತು ನೈರ್ಮಲ್ಯದ ಕೊರತೆ: ಚಿತ್ರಹಳ್ಳಿ ಗೇಟ್ ರಸ್ತೆಯ ಪಕ್ಕದಲ್ಲಿಯೇ ಬೇಕರಿ, ಚಹಾ ಅಂಗಡಿ ಹಾಗೂ ಆಹಾರ ಮಳಿಗೆಗಳಿದ್ದು, ವಾಹನಗಳು ಚಲಿಸುವಾಗ ಚಿಮ್ಮುವ ಕೆಸರು ನೀರು ಮತ್ತು ಧೂಳು ಈ ಅಂಗಡಿಗಳ ಮೇಲೆ ಬೀಳುತ್ತಿದೆ. ಇದು ಸಾರ್ವಜನಿಕ ಆರೋಗ್ಯದ ಮೇಲೆಯೂ ಕೆಟ್ಟ ಪರಿಣಾಮ ಬೀರುತ್ತದೆ.
ಪಾದಚಾರಿಗಳಿಗೆ ತೊಂದರೆ: ಕಾಲ್ನಡಿಗೆಯಲ್ಲಿ ಸಾಗುವ ಸಾರ್ವಜನಿಕರಿಗೆ ಮತ್ತು ಶಾಲಾ ಮಕ್ಕಳಿಗೆ ಸುರಕ್ಷಿತವಾಗಿ ನಡೆಯಲು ಜಾಗವೇ ಇಲ್ಲದಂತಾಗಿದೆ.
ಸ್ಥಳೀಯಾಡಳಿತ ಹಾಗೂ ಸಂಬಂಧಪಟ್ಟ ಜನಪ್ರತಿನಿಧಿಗಳು ತಕ್ಷಣವೇ ಎಚ್ಚೆತ್ತುಕೊಂಡು, ಮಳೆನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಮಾಡಿ, ಈ ರಸ್ತೆಯನ್ನು ವೈಜ್ಞಾನಿಕವಾಗಿ ಮರುನಿರ್ಮಾಣ ಮಾಡಬೇಕಿದೆ. ಪ್ರಾಣಹಾನಿ ಅಥವಾ ದೊಡ್ಡ ಮಟ್ಟದ ಅಪಘಾತ ಸಂಭವಿಸುವ ಮುನ್ನವೇ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಸ್ಥಳೀಯರ ಆಗ್ರಹ: ತಕ್ಷಣವೇ ಈ ಭಾಗದ ರಸ್ತೆಗಳಿಗೆ ಮುಕ್ತಿ ನೀಡಿ, ಗಣಿ ಅನುದಾನವನ್ನು ಸಮರ್ಪಕವಾಗಿ ಬಳಸಿ ಗುಣಮಟ್ಟದ ರಸ್ತೆ ನಿರ್ಮಾಣ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದು ಅನಿವಾರ್ಯ.
ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು, ಸಾರ್ವಜನಿಕರ ಜೀವದ ಜೊತೆ ಆಟವಾಡುವುದನ್ನು ನಿಲ್ಲಿಸಿ ರಸ್ತೆ ದುರಸ್ತಿಗೆ ಕ್ರಮಕೈಗೊಳ್ಳಬೇಕಿದೆ.



