ಚಂದ್ರವಳ್ಳಿ ನ್ಯೂಸ್, ಮೈಸೂರು:
ಮನದಲ್ಲಿ ಸಾಮರಸ್ಯವಿರಲಿ
ಮಾತಿನಲ್ಲಿ ಸೌಜನ್ಯವಿರಲಿ
ಬದುಕಿನಲ್ಲಿ ಶಾಂತಿಯಿರಲಿ
ಸಮಾಜದಲ್ಲಿ ನೆಮ್ಮದಿಯಿರಲಿ.
“ಪರಸ್ಪರ ಗೌರವ ಉಳಿದಲ್ಲಿ ಸಾಮರಸ್ಯ ಬೆಳೆಯುತ್ತದೆ, ಸಾಮರಸ್ಯ ಬೆಳೆದಲ್ಲಿ ಶಾಂತಿಯ ಬದುಕು ಅರಳುತ್ತದೆ.”
ಸಮಾಜದಲ್ಲಿ ಒಳ್ಳೆಯದಾಗಲಿ ಎನ್ನುವ ಭಾವನೆ ಜನರಲ್ಲಿ ಅರಿವು ಇದೆ ಇವತ್ತಿನ ಹಬ್ಬಗಳು ಬಂದಾಗ ಊರು ಕಳೆಗಟ್ಟು ತ್ತದೆ. ಮನೆಗಳ ಮುಂದೆ ಅಂಗಳಗಳು ಸ್ವಚ್ಛಗೊಳ್ಳುತ್ತವೆ. ಬಾಗಿಲಿಗೆ ತೋರಣ ಕಟ್ಟಲಾಗುತ್ತದೆ. ಹೊಸ ಬಟ್ಟೆ, ಸಿಹಿತಿಂಡಿ, ಬಂಧುಗಳ ಭೇಟಿ, ಶುಭಾಶಯಗಳ ವಿನಿಮಯ ಹೀಗೆ ಎಲ್ಲೆಡೆ ಸಂಭ್ರಮದ ವಾತಾವರಣ ಮೂಡುತ್ತದೆ. ಹಬ್ಬವೆಂದರೆ ಕೇವಲ ಆಚರಣೆಯ ದಿನವಲ್ಲ. ಅದು ಮನಸ್ಸುಗಳನ್ನು ಹತ್ತಿರ ತರುವ, ಸಂಬಂಧಗಳನ್ನು ಗಟ್ಟಿಗೊಳಿಸುವ, ನೆಮ್ಮದಿಯನ್ನು ಹಂಚಿ ಕೊಳ್ಳುವ ಒಂದು ಸಾಮಾಜಿಕ ಅವಕಾಶವೂ ಹೌದು. ಆದರೆ ಇಂತಹ ಸಂತೋಷದ ಸಂದರ್ಭಗಳಲ್ಲಿಯೇ ಕೆಲವೊಮ್ಮೆ ಹಳೆಯ ಘಟನೆಗಳನ್ನು ಕೆದಕಿ, ಮನಸ್ಸುಗಳಲ್ಲಿ ಕಹಿ ಮೂಡಿಸಿ, ಸಮಾಜದಲ್ಲಿ ಅಶಾಂತಿಗೆ ಕಾರಣವಾಗುವ ಪ್ರಯತ್ನಗಳು ನಡೆಯುವುದು ವಿಷಾದಕರ ಸಂಗತಿ.
ಕಳೆದ ಘಟನೆಗಳನ್ನು ನೆನಪಿಸಿಕೊಳ್ಳುವುದರಲ್ಲಿ ತಪ್ಪಿಲ್ಲ. ಇತಿಹಾಸದಿಂದ ಪಾಠ ಕಲಿಯುವುದು ಅಗತ್ಯ. ಆದರೆ ನೋವುಂಟುಮಾಡಿದ ಘಟನೆಗಳನ್ನು ಮತ್ತೆ ಮತ್ತೆ ಕೆದಕಿ, ಅದರ ಮೂಲಕ ದ್ವೇಷ, ಅನುಮಾನ ಅಥವಾ ವೈಮನಸ್ಸನ್ನು ಬೆಳೆಸುವುದು ಸಮಾಜಕ್ಕೆ ಯಾವುದೇ ಒಳಿತನ್ನು ತರುವುದಿಲ್ಲ. ನಡೆದದ್ದನ್ನು ಅರಿತುಕೊಳ್ಳುವುದು ಜ್ಞಾನ. ಅದರಿಂದ ಪಾಠ ಕಲಿದು ಮುಂದೆ ಸಾಗುವುದು ವಿವೇಕ. ಆದರೆ ನಡೆದದ್ದನ್ನೇ ನೆಪ ಮಾಡಿಕೊಂಡು ಇಂದಿನ ನೆಮ್ಮದಿಯನ್ನು ಹಾಳುಮಾಡುವುದು ವಿವೇಕದ ದಾರಿ ಅಲ್ಲ.
ಸಮಾಜವೆಂದರೆ ಕೇವಲ ಮನೆಗಳ ಸಮೂಹವಲ್ಲ. ಪರಸ್ಪರ ಅವಲಂಬನೆಯಿಂದ ಬದುಕುವ ಅನೇಕ ಮನಸ್ಸುಗಳ ದೊಡ್ಡ ಕುಟುಂಬ. ಒಬ್ಬರ ಸಂತೋಷ ಮತ್ತೊಬ್ಬರ ನೆಮ್ಮದಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಸಾಮಾಜಿಕ ಹೊಣೆಗಾರಿಕೆ. ನಮ್ಮ ಮಾತು, ನಡೆ, ವರ್ತನೆ ಮತ್ತು ಸಾರ್ವಜನಿಕ ಬದುಕಿನ ಪ್ರತಿಯೊಂದು ಹೆಜ್ಜೆಯೂ ಸಮಾಜದ ವಾತಾವರಣದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಹಬ್ಬದ ಸಂದರ್ಭದಲ್ಲಿ ನಮ್ಮ ಸಂಭ್ರಮ ನಮ್ಮೊಳಗೇ ಉಳಿಯದೆ, ಸುತ್ತಲಿನವರಿಗೂ ಸಂತೋಷ ನೀಡುವಂತಿರಬೇಕು.
ಸಾಮರಸ್ಯ ಎಂದರೆ ಎಲ್ಲರೂ ಒಂದೇ ರೀತಿಯಲ್ಲಿ ಯೋಚಿಸಬೇಕು ಎಂಬುದಲ್ಲ. ಅಭಿಪ್ರಾಯಗಳಲ್ಲಿ ಭಿನ್ನತೆ ಇರಬಹುದು. ಬದುಕಿನ ವಿಧಾನಗಳಲ್ಲಿ ವ್ಯತ್ಯಾಸ ಇರಬಹುದು. ಇಷ್ಟ, ಅನಿಷ್ಟ, ನಂಬಿಕೆ ಮತ್ತು ಆಚರಣೆಗಳಲ್ಲಿ ಬೇರೆಬೇರೆ ದೃಷ್ಟಿಕೋನಗಳಿರಬಹುದು. ಆದರೆ ಭಿನ್ನತೆಯ ನಡುವೆಯೂ ಪರಸ್ಪರ ಗೌರವದಿಂದ ಬದುಕುವ ಗುಣವೇ ನಿಜವಾದ ನಾಗರಿಕತೆ. ಭಿನ್ನಾಭಿಪ್ರಾಯವನ್ನು ವೈಮನಸ್ಸಾಗಿ ಪರಿವರ್ತಿಸದೆ, ಸಂವಾದದ ಮೂಲಕ ಪರಿಹಾರ ಕಂಡುಕೊಳ್ಳುವ ಮನಸ್ಸು ಸಮಾಜವನ್ನು ಬಲಪಡಿಸುತ್ತದೆ.
ಹಬ್ಬದ ಹೆಸರಿನಲ್ಲಿ ಅತಿಯಾದ ಪ್ರದರ್ಶನ, ಶಬ್ದ, ಸಾರ್ವಜನಿಕರಿಗೆ ತೊಂದರೆ, ಅನಗತ್ಯ ವಾಗ್ವಾದ ಅಥವಾ ಪರಸ್ಪರ ಕೆರಳಿಸುವ ಮಾತುಗಳು ಸಂಭ್ರಮದ ಅರ್ಥವನ್ನೇ ಕಳೆದುಕೊಳ್ಳುತ್ತವೆ. ಹಬ್ಬದ ನಿಜವಾದ ಸೌಂದರ್ಯ ಮತ್ತೊಬ್ಬರ ಬದುಕಿಗೂ ಜಾಗ ನೀಡುವುದರಲ್ಲಿ ಇದೆ. ನಮ್ಮ ಸಂತೋಷದ ಹಕ್ಕಿನಷ್ಟೇ ಇನ್ನೊಬ್ಬರ ಶಾಂತಿಯ ಹಕ್ಕಿಗೂ ಬೆಲೆ ಇದೆ ಎಂಬ ಅರಿವು ಪ್ರತಿಯೊಬ್ಬರಲ್ಲೂ ಮೂಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಶಿಸ್ತು, ಸ್ವಚ್ಛತೆ, ಸಂಯಮ ಮತ್ತು ಹೊಣೆಗಾರಿಕೆ ಕಾಪಾಡಿದಾಗ ಮಾತ್ರ ಹಬ್ಬದ ಸಂಭ್ರಮ ಸಮಾಜದ ಸೌಂದರ್ಯವಾಗುತ್ತದೆ.
ಇಂದು ಸಮಾಜಕ್ಕೆ ದೊಡ್ಡದಾಗಿ ಬೇಕಾಗಿರುವುದು ಪರಸ್ಪರರನ್ನು ಕೆಳಗೆಳೆಯುವ ಧ್ವನಿಗಳಲ್ಲ, ಪರಸ್ಪರರನ್ನು ಎತ್ತಿಹಿಡಿಯುವ ಮನಸ್ಸುಗಳು. ಸಣ್ಣ ಮಾತು ದೊಡ್ಡ ಜಗಳಕ್ಕೆ ಕಾರಣವಾಗಬಹುದು. ಅದೇ ಸಂದರ್ಭದಲ್ಲಿ ಸಣ್ಣದೊಂದು ಮೌನ, ಸೌಜನ್ಯ ಅಥವಾ ಕ್ಷಮೆಯ ಮಾತು ದೊಡ್ಡ ಸಮಸ್ಯೆಯನ್ನು ತಡೆಯಬಹುದು. ಆದ್ದರಿಂದ ಮಾತಿನ ಸ್ವಾತಂತ್ರ್ಯಕ್ಕೆ ವಿವೇಕದ ಕಡಿವಾಣವೂ ಬೇಕು. ಸಾಮಾಜಿಕ ಮಾಧ್ಯಮಗಳಲ್ಲಿ ಹರಡುವ ಯಾವುದೇ ಮಾತನ್ನು ತಕ್ಷಣ ನಂಬಿ ಹಂಚಿಕೊಳ್ಳದೆ, ಅದರ ಸತ್ಯಾಸತ್ಯತೆಯನ್ನು ಅರಿಯುವ ಜವಾಬ್ದಾರಿಯೂ ನಮ್ಮದೇ.
ಸ್ವಾತಂತ್ರ್ಯ ಎಂದರೆ ನಮಗೆ ಇಷ್ಟ ಬಂದಂತೆ ವರ್ತಿಸುವ ಹಕ್ಕು ಮಾತ್ರವಲ್ಲ. ನಮ್ಮ ಸ್ವಾತಂತ್ರ್ಯದಿಂದ ಇನ್ನೊಬ್ಬರ ಸ್ವಾತಂತ್ರ್ಯಕ್ಕೆ ಧಕ್ಕೆ ಬರದಂತೆ ನಡೆದುಕೊಳ್ಳುವ ಜವಾಬ್ದಾರಿಯೂ ಹೌದು. ಸಮಾನತೆ ಎಂದರೆ ಎಲ್ಲರನ್ನೂ ಒಂದೇ ಅಳತೆಯಲ್ಲಿ ನೋಡುವುದು ಮಾತ್ರವಲ್ಲ. ಪ್ರತಿಯೊಬ್ಬರಿಗೂ ಗೌರವದಿಂದ ಬದುಕುವ ಅವಕಾಶವಿದೆ ಎಂಬುದನ್ನು ಒಪ್ಪಿಕೊಳ್ಳುವುದು. ಸಹಬಾಳ್ವೆ ಎಂದರೆ ಒಟ್ಟಿಗೆ ವಾಸಿಸುವುದಷ್ಟೇ ಅಲ್ಲ. ಒಬ್ಬರ ನೋವಿಗೆ ಮತ್ತೊಬ್ಬರು ಸ್ಪಂದಿಸುವ ಮನಸ್ಸು ಬೆಳೆಸಿಕೊಳ್ಳುವುದು.
ಸಂತ ಕಬೀರರ ಚಿಂತನೆಯ ಸಾರದಲ್ಲಿ ಮಾನವೀಯತೆಯೇ ಮಿಗಿಲೆಂಬ ಸಂದೇಶ ಕಾಣುತ್ತದೆ. ಬಸವಣ್ಣನವರ ಕಾಯಕ ಮತ್ತು ದಾಸೋಹದ ಚಿಂತನೆಯಲ್ಲೂ ಸಮಾಜದ ಒಳಿತಿಗೆ ವ್ಯಕ್ತಿಯ ಹೊಣೆಗಾರಿಕೆ ಒತ್ತಿ ಹೇಳಲ್ಪಟ್ಟಿದೆ. ಮಹಾತ್ಮ ಗಾಂಧೀಜಿಯವರ ಅಹಿಂಸೆಯ ಮಾರ್ಗವೂ ಇದೇ ಸತ್ಯವನ್ನು ನೆನಪಿಸುತ್ತದೆ. ಶಾಂತಿ ದುರ್ಬಲತೆಯ ಸಂಕೇತವಲ್ಲ. ಅದು ತನ್ನ ಕೋಪವನ್ನು ಗೆಲ್ಲಬಲ್ಲ ಮನಸ್ಸಿನ ಶಕ್ತಿ. ಕ್ಷಮೆ ಸೋಲಲ್ಲ. ಅದು ಸಂಬಂಧವನ್ನು ಉಳಿಸಿಕೊಳ್ಳಬಲ್ಲ ಹೃದಯದ ದೊಡ್ಡತನ.
ಹಬ್ಬಗಳು ನಮ್ಮ ಮನಸ್ಸನ್ನು ಶುದ್ಧಗೊಳಿಸುವ ಸಂದರ್ಭಗಳಾಗಬೇಕು. ಮನೆ ಸ್ವಚ್ಛಗೊಳಿಸುವಂತೆ ಮನಸ್ಸಿನಲ್ಲಿರುವ ದ್ವೇಷ, ಅಸೂಯೆ, ಕೋಪ ಮತ್ತು ಹಳೆಯ ಕಹಿಗಳನ್ನೂ ಸ್ವಚ್ಛಗೊಳಿಸುವ ಸಂಕಲ್ಪ ಮೂಡಬೇಕು. ಬೆಳಕನ್ನು ಹಚ್ಚುವ ಕೈಗಳು ಮತ್ತೊಬ್ಬರ ಬದುಕಿನಲ್ಲಿ ಕತ್ತಲನ್ನು ಸೃಷ್ಟಿಸಬಾರದು. ಶುಭಾಶಯ ಹೇಳುವ ತುಟಿಗಳು ಇನ್ನೊಬ್ಬರ ಮನಸ್ಸಿಗೆ ನೋವು ಕೊಡುವ ಮಾತು ಆಡಬಾರದು. ದೇವರ ಮುಂದೆ ಕೈಮುಗಿಯುವ ಮನಸ್ಸು ಸಮಾಜದ ಮುಂದೆ ಹೊಣೆಗಾರಿಕೆಯನ್ನು ಮರೆಯಬಾರದು.
ಸಮಾಜದಲ್ಲಿ ಅಶಾಂತಿ ಮೂಡಿಸುವುದು ಸುಲಭ. ಒಂದು ವದಂತಿ, ಒಂದು ಪ್ರಚೋದನಕಾರಿ ಮಾತು, ಒಂದು ತಪ್ಪು ಸಂದೇಶ ಸಾಕಾಗಬಹುದು. ಆದರೆ ಶಾಂತಿಯನ್ನು ನಿರ್ಮಿಸು ವುದು ನಿರಂತರ ಪ್ರಯತ್ನ. ಅದಕ್ಕಾಗಿ ಪ್ರತಿಯೊಬ್ಬ ರೂ ತಮ್ಮದೇ ಮಟ್ಟದಲ್ಲಿ ಹೊಣೆ ಹೊತ್ತುಕೊಳ್ಳಬೇಕು. ಮನೆಯ ಹಿರಿಯರು ಮಕ್ಕಳಿಗೆ ಪರಸ್ಪರ ಗೌರವದ ಪಾಠ ಹೇಳಬೇಕು. ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಸಹಬಾಳ್ವೆಯ ಮನೋಭಾವ ಬೆಳೆಸಬೇಕು. ಸಾರ್ವಜನಿಕ ಪ್ರತಿನಿಧಿಗಳು ಮತ್ತು ಸಾಮಾಜಿಕ ಮುಖಂಡರು ಜನರನ್ನು ವಿಭಜಿಸುವ ಮಾತಿಗಿಂತ ಒಗ್ಗೂಡಿಸುವ ಮಾತಿಗೆ ಆದ್ಯತೆ ನೀಡಬೇಕು. ಆಡಳಿತವೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಕಾಪಾಡಿ, ಯಾರಿಗೂ ಭಯವಿಲ್ಲದೆ ಬದುಕುವ ವಾತಾವರಣ ನಿರ್ಮಿಸಬೇಕು.
ನಾವು ಯಾವ ಹಬ್ಬವನ್ನು ಆಚರಿಸುತ್ತೇವೆ ಎಂಬುದಕ್ಕಿಂತ ಅದನ್ನು ಹೇಗೆ ಆಚರಿಸುತ್ತೇವೆ ಎಂಬುದೇ ಮುಖ್ಯ. ನಮ್ಮ ಸಂಭ್ರಮದಿಂದ ಮತ್ತೊಬ್ಬರ ಕಣ್ಣಲ್ಲಿ ಸಂತೋಷ ಮೂಡಿದರೆ ಅದು ಹಬ್ಬದ ಗೆಲುವು. ನಮ್ಮ ಆಚರಣೆಯಿಂದ ಮತ್ತೊಬ್ಬರ ಮನಸ್ಸಿನಲ್ಲಿ ಭಯ ಹುಟ್ಟಿದರೆ ಅಲ್ಲಿ ನಾವು ಆತ್ಮಪರಿಶೀಲನೆ ಮಾಡಿಕೊಳ್ಳಬೇಕು. ಹಬ್ಬವು ಸೇತುವೆಯಾಗಬೇಕು, ಗೋಡೆಯಾಗಬಾರದು. ಅದು ಹೃದಯಗಳನ್ನು ಹತ್ತಿರ ತರಬೇಕು, ದೂರ ಮಾಡಬಾರದು.
ಕಾಶಿಗೌ ಸಾಹಿತಿಯವರ ಚಿಂತನೆಯ ಸಾರದಂತೆ, ಮನುಷ್ಯನ ಅಂತರಂಗದಲ್ಲಿ ಒಳ್ಳೆಯತನ ಬೆಳಗಿದಾಗಲೇ ಹೊರಗಿನ ಬದುಕಿಗೂ ಅದರ ಬೆಳಕು ಹರಡುತ್ತದೆ. ಸಮಾಜದ ಶಾಂತಿ ಕೇವಲ ಸರ್ಕಾರದ ಜವಾಬ್ದಾರಿ ಅಲ್ಲ. ಅದು ಪ್ರತಿಯೊಬ್ಬ ನಾಗರಿಕನ ಮನಸ್ಸಿನಲ್ಲಿರುವ ಕಳಕಳಿಯಿಂದ ಆರಂಭವಾಗು ತ್ತದೆ. ನಾವು ಬದಲಾಗದೆ ಸಮಾಜ ಬದಲಾಗಬೇಕು ಎಂದು ನಿರೀಕ್ಷಿಸುವುದು ಅರ್ಥಹೀನ. ನಮ್ಮ ಮಾತಿನಲ್ಲಿ ಸಂಯಮ, ನಡೆನುಡಿಯಲ್ಲಿ ಸೌಜನ್ಯ, ಮನಸ್ಸಿನಲ್ಲಿ ಸಮತೆ ಮತ್ತು ಸಮಾಜದ ಬಗ್ಗೆ ಕಳಕಳಿ ಇದ್ದರೆ ಸಾಮರಸ್ಯದ ವಾತಾವರಣ ತಾನಾಗಿಯೇ ಗಟ್ಟಿಯಾಗುತ್ತದೆ.
ಹಬ್ಬಗಳು ಬರುತ್ತಲೇ ಇರುತ್ತವೆ. ಸಂಭ್ರಮವೂ ಮುಂದುವರಿಯುತ್ತದೆ. ಆದರೆ ಪ್ರತಿಯೊಂದು ಹಬ್ಬದ ನಂತರ ಸಮಾಜದಲ್ಲಿ ಇನ್ನಷ್ಟು ಸ್ನೇಹ, ನೆಮ್ಮದಿ, ವಿಶ್ವಾಸ ಮತ್ತು ಸಹಕಾರ ಉಳಿಯುತ್ತಿದೆಯೇ ಎಂಬ ಪ್ರಶ್ನೆಯನ್ನು ನಾವು ನಮ್ಮೊಳಗೆ ಕೇಳಿಕೊಳ್ಳಬೇಕು. ಹಳೆಯ ಕಹಿಗಳನ್ನು ಹೊತ್ತುಕೊಂಡು ಹೊಸ ದಿನವನ್ನು ಆರಂಭಿಸುವ ಬದಲು, ಹಳೆಯ ಅನುಭವಗಳಿಂದ ಪಾಠ ಕಲಿತು ಹೊಸ ಸಂಬಂಧಗಳನ್ನು ಕಟ್ಟುವ ಮನಸ್ಸು ಬೆಳೆಸಿಕೊಳ್ಳಬೇಕು.
ಸಾಮರಸ್ಯದ ಬದುಕೇ ಪವಿತ್ರ ಮಾನವ ಧರ್ಮ. ಶಾಂತಿ ಇರುವಲ್ಲಿ ನೆಮ್ಮದಿ ಇರುತ್ತದೆ. ನೆಮ್ಮದಿ ಇರುವಲ್ಲಿ ಅಭಿವೃದ್ಧಿಗೆ ದಾರಿ ತೆರೆದುಕೊಳ್ಳುತ್ತದೆ. ಪರಸ್ಪರ ಗೌರವ ಇರುವಲ್ಲಿ ಮಾನವೀಯತೆ ಉಳಿಯುತ್ತದೆ. ಆದ್ದರಿಂದ ಹಬ್ಬದ ಈ ಶುಭ ಸಂದರ್ಭದಲ್ಲಿ ನಮ್ಮ ಸಂಕಲ್ಪ ಒಂದೇ ಆಗಿರಲಿ. ನಮ್ಮ ಸಂಭ್ರಮ ಯಾರಿಗೂ ನೋವಾಗದಿರಲಿ, ನಮ್ಮ ಮಾತು ಯಾರನ್ನೂ ಕೆರಳಿಸದಿರಲಿ, ನಮ್ಮ ನಡೆ ಸಮಾಜದಲ್ಲಿ ಅಶಾಂತಿಗೆ ಕಾರಣವಾಗದಿರಲಿ. ಎಲ್ಲರಿಗೂ ಸಮಾನ ಗೌರವ, ಸ್ವಾತಂತ್ರ್ಯ, ನೆಮ್ಮದಿ ಮತ್ತು ಸುರಕ್ಷಿತ ಬದುಕು ದೊರೆಯುವ ಸಮಾಜ ನಿರ್ಮಾಣಕ್ಕೆ ನಮ್ಮ ಪಾಲಿನ ಹೊಣೆಗಾರಿಕೆಯನ್ನು ನಾವೆಲ್ಲರೂ ಪ್ರಾಮಾಣಿಕವಾಗಿ ನಿಭಾಯಿಸೋಣ.
ಬರಹ: ಕಾಶಿಗೌ, ಮೈಸೂರು.




