ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಜಾಗತಿಕ ಮಾರುಕಟ್ಟೆಯಲ್ಲಿ ಇಂಧನ ವೆಚ್ಚ ನಿರಂತರವಾಗಿ ಹೆಚ್ಚುತ್ತಿರುವುದರ ಬಿಸಿ ದೇಶದ ಜನಸಾಮಾನ್ಯರಿಗೆ ತಟ್ಟಿದೆ. ದೇಶೀಯ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಪ್ರತಿ ಸಿಲಿಂಡರ್ಗೆ 29 ರೂಪಾಯಿಗಳಷ್ಟು ಹೆಚ್ಚಿಸಲಾಗಿದ್ದು, ಸಾರ್ವಜನಿಕ ವಲಯದ ತೈಲ ಕಂಪನಿಗಳು ಕಳೆದ ಮೂರು ತಿಂಗಳಲ್ಲಿ ಕೈಗೊಂಡ ಎರಡನೇ ದರ ಏರಿಕೆ ಇದಾಗಿದೆ.
ಹೊಸ ದರ ಪರಿಷ್ಕರಣೆಯ ಅನ್ವಯ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 14.2 ಕೆಜಿ ತೂಕದ ಗೃಹಬಳಕೆಯ ಸಿಲಿಂಡರ್ ಬೆಲೆ ಜೂನ್ 7ರಿಂದ ಜಾರಿಗೆ ಬರುವಂತೆ 913 ರೂ.ಗಳಿಂದ 942 ರೂ.ಗಳಿಗೆ ಏರಿಕೆಯಾಗಲಿದೆ ಎಂದು ಉದ್ಯಮದ ಮೂಲಗಳು ತಿಳಿಸಿವೆ.
ಮೂರು ತಿಂಗಳಲ್ಲಿ ಭಾರಿ ಏರಿಕೆ:
ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಯುದ್ಧದ ಪರಿಸ್ಥಿತಿಯು ಜಾಗತಿಕ ಇಂಧನ ಪೂರೈಕೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಇದರಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಮತ್ತು ಅನಿಲದ ಬೆಲೆಗಳು ಗಗನಕ್ಕೇರಿವೆ. ಇದಕ್ಕೂ ಮುನ್ನ, ಇದೇ ಕಾರಣಕ್ಕಾಗಿ ಮಾರ್ಚ್ 7ರಂದು ಪ್ರತಿ ಸಿಲಿಂಡರ್ಗೆ ಬರೋಬ್ಬರಿ 60 ರೂ.ಗಳನ್ನು ಹೆಚ್ಚಿಸಲಾಗಿತ್ತು. ಇದೀಗ ಜೂನ್ ಆರಂಭದಲ್ಲೇ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯೂ ದೆಹಲಿಯಲ್ಲಿ 42 ರೂ. ಹಾಗೂ ಕೋಲ್ಕತ್ತಾದಲ್ಲಿ 53.50 ರೂ.ಗಳಷ್ಟು ಏರಿಕೆಯಾಗಿತ್ತು.
ತೈಲ ಕಂಪನಿಗಳ ನಷ್ಟ ಸರಿದೂಗಿಸಲು ಕ್ರಮ:
ಪ್ರಸ್ತುತ ದರ ಏರಿಕೆಯ ಹೊರತಾಗಿಯೂ ತೈಲ ಮಾರುಕಟ್ಟೆ ಕಂಪನಿಗಳು ಭಾರಿ ನಷ್ಟ ಅನುಭವಿಸುತ್ತಿವೆ. ಬೆಲೆ ಪರಿಷ್ಕರಣೆಗೂ ಮುನ್ನ ಪ್ರತಿ ಸಿಲಿಂಡರ್ ಮೇಲೆ ಕಂಪನಿಗಳಿಗೆ ಸುಮಾರು 703 ರೂ.ಗಳಷ್ಟು ನಷ್ಟವಾಗುತ್ತಿತ್ತು ಎಂದು ಅಂದಾಜಿಸಲಾಗಿದೆ. ಈಗಿನ 29 ರೂ. ಏರಿಕೆಯು ಈ ನಷ್ಟವನ್ನು ಭಾಗಶಃ ಸರಿದೂಗಿಸಲಿದೆ ಎನ್ನಲಾಗಿದೆ. ಕೇವಲ ಎಲ್ಪಿಜಿ ಮಾತ್ರವಲ್ಲದೆ, ಮೇ ಮಧ್ಯಭಾಗದಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಲೀಟರ್ಗೆ ಒಟ್ಟು 7.50 ರೂ. ಹಾಗೂ ಸಿಎನ್ಜಿ ದರ ಕೆಜಿಗೆ 6 ರೂ.ಗಳಷ್ಟು ಹೆಚ್ಚಾಗಿದೆ.
"ಜಗತ್ತಿನಲ್ಲೇ ಭಾರತದಲ್ಲಿ ಕಡಿಮೆ ದರ" ಎಂದ ಕೇಂದ್ರ ಸರ್ಕಾರ:
ದರ ಏರಿಕೆಯನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಸರ್ಕಾರ, ಜಾಗತಿಕ ಬಿಕ್ಕಟ್ಟಿನ ಮಧ್ಯೆಯೂ ಭಾರತೀಯ ಕುಟುಂಬಗಳು ವಿಶ್ವದಲ್ಲೇ ಅತ್ಯಂತ ಕಡಿಮೆ ದರಕ್ಕೆ ಅಡುಗೆ ಅನಿಲವನ್ನು ಪಡೆಯುತ್ತಿವೆ ಎಂದು ಹೇಳಿದೆ. ಪಶ್ಚಿಮ ಏಷ್ಯಾದ ಸಂಘರ್ಷದಿಂದಾಗಿ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ನ ನಿಜವಾದ ಪೂರೈಕೆ ವೆಚ್ಚ 1,600 ರೂ. ದಾಟಿದ್ದರೂ, ಸಾರ್ವಜನಿಕರಿಗೆ ಹೊರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದೆ.
"ನಮ್ಮ ದೇಶೀಯ ಎಲ್ಪಿಜಿ ದರವು ನೆರೆರಾಷ್ಟ್ರಗಳಾದ ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ ಮಾತ್ರವಲ್ಲದೆ, ಅಮೆರಿಕ, ಆಸ್ಪ್ರೇಲಿಯಾ ಮತ್ತು ಕೆನಡಾದಂತಹ ಮುಂದುವರಿದ ದೇಶಗಳಿಗಿಂತಲೂ ಗಮನಾರ್ಹವಾಗಿ ಕಡಿಮೆಯಿದೆ. ಬಿಕ್ಕಟ್ಟಿನ ಈ ಸಂದರ್ಭದಲ್ಲೂ ಹಾರ್ಮುಜ್ ಜಲಸಂಧಿಯ ಮೂಲಕ ಭಾರತಕ್ಕೆ ನಿರಂತರ ಇಂಧನ ಪೂರೈಕೆಯಾಗುತ್ತಿದ್ದು, ದೇಶದಲ್ಲಿ ಯಾವುದೇ ಕೊರತೆಯಿಲ್ಲ" ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಸರಬರಾಜು ನಿಯಂತ್ರಣಕ್ಕೆ ತಂತ್ರಜ್ಞಾನದ ಬಳಕೆ:
ದೇಶದಲ್ಲಿ ಎಲ್ಪಿಜಿ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಪೆಟ್ರೋಲ್ಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಇತ್ತೀಚೆಗೆ ತಿಳಿಸಿದ್ದರು.
ವಾಣಿಜ್ಯ ಮತ್ತು ಕೈಗಾರಿಕಾ ವಲಯದಲ್ಲಿ ಬಳಕೆ ಕಡಿಮೆಯಾಗಿರುವುದು, ಸುಧಾರಿತ ಬುಕಿಂಗ್ ವಿಧಾನ ಹಾಗೂ ಡಿಎಸಿ ವಿತರಣಾ ದೃಢೀಕರಣ ಕೋಡ್) ವ್ಯವಸ್ಥೆಯಿಂದಾಗಿ ಇತ್ತೀಚೆಗೆ ಅಡುಗೆ ಅನಿಲದ ಅನಗತ್ಯ ಬಳಕೆಗೆ ಬ್ರೇಕ್ ಬಿದ್ದಿದೆ. ಇದರೊಂದಿಗೆ ಗ್ರಾಹಕರಿಗೆ ಅನುಕೂಲವಾಗುವಂತೆ ಸಿಲಿಂಡರ್ ಬುಕಿಂಗ್ ಅವಧಿಯ ದಿನಗಳನ್ನು 45 ದಿನಗಳಿಗೆ ವಿಸ್ತರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.



