ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಕ್ಕಳ ದುರ್ಬಳಕೆ ಹಾಗೂ ದೌರ್ಜನ್ಯ ಎಸಗಿದ ಆರೋಪದಡಿ ಪೋಕ್ಸೋ ಕಾಯ್ದೆಯಡಿ ಗಂಭೀರ ಪ್ರಕರಣ ಎದುರಿಸುತ್ತಿರುವ ದಾವಣಗೆರೆ ಹರಿಹರದ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಅವರಿಗೆ ದೂರು ದಾಖಲಾಗುವ ಮುನ್ನವೇ ನಿರೀಕ್ಷಣಾ ಜಾಮೀನು ನೀಡಿರುವ ದಾವಣಗೆರೆ ಜಿಲ್ಲಾ ನ್ಯಾಯಾಲಯದ ಕ್ರಮಕ್ಕೆ ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಜಿಲ್ಲಾ ನ್ಯಾಯಾಲಯ ನೀಡಿದ್ದ ನಿರೀಕ್ಷಣಾ ಜಾಮೀನನ್ನು ಪ್ರಶ್ನಿಸಿ ಸಂತ್ರಸ್ತ ಬಾಲಕನ ತಾಯಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ, ಕೆಳ ನ್ಯಾಯಾಲಯದ ನಡೆಗೆ ಕಳವಳ ವ್ಯಕ್ತಪಡಿಸಿದೆ.
"ಜಾಮೀನು ನೀಡಿದ ರೀತಿ ಆಘಾತಕಾರಿ" – ಹೈಕೋರ್ಟ್ ತೀಕ್ಷ್ಣ ಅಭಿಪ್ರಾಯ
ವಿಚಾರಣೆ ವೇಳೆ ದಾವಣಗೆರೆ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಗಮನಿಸಿದ ನ್ಯಾಯಮೂರ್ತಿಗಳು, ಈ ಕೆಳಗಿನಂತೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
"ಸ್ವಾಮೀಜಿ ವಿರುದ್ಧ ಗಂಭೀರ ಸೆಕ್ಷನ್ಗಳುಳ್ಳ ಪೋಕ್ಸೋ ಪ್ರಕರಣ ದಾಖಲಾಗಿದೆ. ಹೀಗಿದ್ದರೂ, ಅಧಿಕೃತವಾಗಿ ದೂರು ದಾಖಲಾಗುವ ಮುನ್ನವೇ ನಿರೀಕ್ಷಣಾ ಜಾಮೀನು ನೀಡಿರುವುದು ಅತ್ಯಂತ ಆಘಾತಕಾರಿಯಾಗಿದೆ. ಮೇಲ್ನೋಟಕ್ಕೆ ಈ ರೀತಿ ಜಾಮೀನು ನೀಡಿದ ವಿಧಾನ ಸರಿಯಲ್ಲ."
ಈ ಹಿನ್ನೆಲೆಯಲ್ಲಿ ಹೈಕೋರ್ಟ್, ಆರೋಪಿ ವಚನಾನಂದ ಸ್ವಾಮೀಜಿಗೆ ತುರ್ತು ನೋಟಿಸ್ ಜಾರಿ ಮಾಡಿದ್ದು, ಮುಂದಿನ ಮಹತ್ವದ ವಿಚಾರಣೆಯನ್ನು ಜೂನ್ 23ಕ್ಕೆ ನಿಗದಿಪಡಿಸಿದೆ. ಹೈಕೋರ್ಟ್ನ ಈ ನಿಲುವಿನಿಂದಾಗಿ ಸ್ವಾಮೀಜಿಯ ಜಾಮೀನು ರದ್ದಾಗುತ್ತಾ ಅಥವಾ ಕೋರ್ಟ್ ಯಾವ ತೀರ್ಪು ನೀಡಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.
ಮಠದ ಮಕ್ಕಳಿಂದಲೇ ಕೇಳಿ ಬಂದಿತ್ತು ಗಂಭೀರ ದೂರು!:
ಹರಿಹರದ ಹನಗವಾಡಿ ಬಳಿಯ ಪಂಚಮಸಾಲಿ ಮಠದಲ್ಲಿದ್ದ ಮಕ್ಕಳಿಗೆ ವಚನಾನಂದ ಸ್ವಾಮೀಜಿ ಅವರು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ ಹಾಗೂ ದೈಹಿಕ-ಮಾನಸಿಕ ಹಿಂಸೆ ನೀಡುತ್ತಾರೆ ಎಂದು ಸ್ವತಃ ಮಕ್ಕಳೇ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಗಳು ಮಠಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದರು.
ಬಳಿಕ ಮಠದ ಬಾಲಕನೋರ್ವನ ತಾಯಿ ನೀಡಿದ ದೂರಿನ ಮೇರೆಗೆ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ವಾಮೀಜಿಯ ವಿಚಾರಣೆ ನಡೆಸಿ, ವೈದ್ಯಕೀಯ ತಪಾಸಣೆಯನ್ನೂ ಪೂರ್ಣಗೊಳಿಸಿದ್ದಾರೆ.
ಬಂಧನ ಭೀತಿಯಲ್ಲಿ ಜಾಮೀನು ಪಡೆದಿದ್ದ ಶ್ರೀಗಳು:
ತಮ್ಮ ವಿರುದ್ಧ ಕಾನೂನು ಸಂಕೋಲೆ ಬಿಗಿಯಾಗುತ್ತಿದ್ದಂತೆ ಮತ್ತು ಬಂಧನದ ಭೀತಿ ಎದುರಾಗುತ್ತಿದ್ದಂತೆ, ವಚನಾನಂದ ಸ್ವಾಮೀಜಿ ಅವರು ಏಪ್ರಿಲ್ 21ರಂದು ದಾವಣಗೆರೆ ಜಿಲ್ಲಾ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಜಿಲ್ಲಾ ನ್ಯಾಯಾಲಯವು ಕೆಲವು ಕಠಿಣ ಷರತ್ತುಗಳನ್ನು ವಿಧಿಸಿ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಆದರೆ, ಈ ಪ್ರಕ್ರಿಯೆ ನಡೆದ ವಿಧಾನ ಈಗ ಹೈಕೋರ್ಟ್ನಲ್ಲಿ ಪ್ರಶ್ನೆಗೊಳಗಾಗಿದೆ.
ಪಂಚಮಸಾಲಿ ಪೀಠದಿಂದ ಈಗಾಗಲೇ ಉಚ್ಛಾಟನೆ!:
ಮತ್ತೊಂದೆಡೆ, ವಿವಾದಗಳು ಸುತ್ತುವರಿಯುತ್ತಿದ್ದಂತೆ ಏಪ್ರಿಲ್ ಆರಂಭದಲ್ಲೇ ಹರಿಹರದ ಪಂಚಮಸಾಲಿ ಪೀಠದ ಟ್ರಸ್ಟಿಗಳು ಸ್ವಾಮೀಜಿ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರು. ಮಠದ ಒಟ್ಟು 15 ಟ್ರಸ್ಟಿಗಳ ಪೈಕಿ 13 ಟ್ರಸ್ಟಿಗಳು ಸಭೆ ನಡೆಸಿ, ಸರ್ವಾನುಮತದಿಂದ ವಚನಾನಂದ ಸ್ವಾಮೀಜಿಯವರನ್ನು ಪೀಠದಿಂದ ಉಚ್ಛಾಟನೆ (ಪದಚ್ಯುತ) ಮಾಡಿದ್ದರು.
ಉಚ್ಛಾಟನೆಗೆ ಕಾರಣ: 2018ರಲ್ಲಿ ಜಗದ್ಗುರುಗಳಾಗಿದ್ದ ವಚನಾನಂದ ಶ್ರೀಗಳಿಗೆ ಎರಡು ಪೀಠಗಳ ನಿರ್ವಹಣೆಗೆ ಸಂಬಂಧಿಸಿದಂತೆ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ಟ್ರಸ್ಟಿಗಳು ಹಲವು ಬಾರಿ ಸೂಚಿಸಿದ್ದರು. ಆದರೆ, ಸ್ವಾಮೀಜಿ ಈ ನಿಯಮ ಪಾಲಿಸದ ಕಾರಣ ಹಾಗೂ ಮಕ್ಕಳ ಮೇಲಿನ ದೌರ್ಜನ್ಯದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮಠದ ಆಡಳಿತ ಮಂಡಳಿ ಅವರನ್ನು ಉಚ್ಛಾಟಿಸಿತ್ತು. ಪ್ರಸ್ತುತ ಈ ಪ್ರಕರಣದ ತನಿಖಾಧಿಕಾರಿಯನ್ನೂ ವರ್ಗಾವಣೆ ಮಾಡಲಾಗಿದ್ದು, ಹೈಕೋರ್ಟ್ನ ಮುಂದಿನ ನಡೆ ಇಡೀ ರಾಜ್ಯದ ಗಮನ ಸೆಳೆದಿದೆ.



