ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ರಾಜಕಾರಣದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಡಿ.ಕೆ. ಶಿವಕುಮಾರ್ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು.
ನಗರದ ಲೋಕಭವನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನೂತನ ಸಿಎಂಗೆ ದೇವರ ಹೆಸರಿನಲ್ಲಿ ಪ್ರಮಾಣವಚನ ಬೋಧಿಸಿದರು.
ನಿಗದಿತ ಸಮಯಕ್ಕೆ ಸರಿಯಾಗಿ ಆರಂಭವಾದ ಸಮಾರಂಭ:
ರಾಜಭವನದ ಶಿಷ್ಟಾಚಾರದಂತೆ ನಿಖರ ಸಮಯಕ್ಕೆ ಕಾರ್ಯಕ್ರಮಗಳು ಜರುಗಿದವು. ಸಂಜೆ 4:05 ಕ್ಕೆ ಡಿ.ಕೆ. ಶಿವಕುಮಾರ್ ಅವರ ಪ್ರಮಾಣವಚನಕ್ಕೆ ಮುಹೂರ್ತ ನಿಗದಿಯಾಗಿತ್ತು. ಆದರೆ ಹತ್ತು ನಿಮಿಷ ತಡವಾಗಿ ಕಾರ್ಯಕ್ರಮ ಆರಂಭವಾಗಿತು. ಇದಕ್ಕೂ ಮುನ್ನ, ಮಧ್ಯಾಹ್ನ 3:59 ಕ್ಕೆ ರಾಜ್ಯಪಾಲ ತಾವರ್ಚಂದ್ ಗೆಹ್ಲೋಟ್ ಅವರು ವೇದಿಕೆಗೆ ಆಗಮಿಸಿದರು.
ವೇದಿಕೆಯಲ್ಲಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ, ರಣದೀಪ್ ಸಿಂಗ್ ಸುರ್ಜೇವಾಲ ಮತ್ತು ಕೆ.ಸಿ. ವೇಣುಗೋಪಾಲ್ ಸೇರಿದಂತೆ ಹಲವು ಗಣ್ಯರನ್ನು ರಾಜ್ಯಪಾಲರು ಆತ್ಮೀಯವಾಗಿ ಸ್ವಾಗತಿಸಿದರು. ವಂದೇ ಮಾತರಂ ಗೀತೆಯ ಪೂರ್ಣ ಪಠಣದೊಂದಿಗೆ ಆರಂಭವಾದ ಸಮಾರಂಭವು, ರಾಷ್ಟ್ರಗೀತೆ ಹಾಗೂ ಕರ್ನಾಟಕದ ನಾಡಗೀತೆ 'ಜಯ ಭಾರತ ಜನನಿಯ ತನುಜಾತೆ'ಯ ಗಾಯನದೊಂದಿಗೆ ಸಾಂಗೋಪಾಂಗವಾಗಿ ನೆರವೇರಿತು.
ಗಣ್ಯರ ದಂಡು: ನಾರಾಯಣ ಮೂರ್ತಿ, ಅನಿಲ್ ಕುಂಬ್ಳೆ ಭಾಗಿ:
ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಉದ್ಯಮ, ಕ್ರೀಡೆ ಹಾಗೂ ಚಿತ್ರರಂಗದ ಪ್ರಮುಖ ಗಣ್ಯರು ಲೋಕಭವನಕ್ಕೆ ಆಗಮಿಸಿದ್ದರು. ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಹಾಗೂ ಅವರ ಪತ್ನಿ, ರಾಜ್ಯಸಭಾ ಸಂಸದೆ ಸುಧಾ ಮೂರ್ತಿ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ, ಸ್ಯಾಂಡಲ್ವುಡ್ ನಟರಾದ ಹ್ಯಾಟ್ರಿಕ್ ಹೀರೊ ಶಿವರಾಜ್ಕುಮಾರ್ ಮತ್ತು ಜಯಮಾಲಾ ಅವರು ಉಪಸ್ಥಿತರಿದ್ದು ನೂತನ ಸಿಎಂಗೆ ಶುಭ ಕೋರಿದರು. ಇವರೊಂದಿಗೆ ವಿವಿಧ ವಿದೇಶಿ ದೂತಾವಾಸಗಳ ಮುಖ್ಯಸ್ಥರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ನಾಯಕರನ್ನು ಬರಮಾಡಿಕೊಂಡಿದ್ದ ಡಿಕೆಶಿ-ಸಿದ್ದರಾಮಯ್ಯ:
ಇದಕ್ಕೂ ಮುನ್ನ, ದೆಹಲಿಯಿಂದ ಆಗಮಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರನ್ನು ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೆಚ್ಎಎಲ್ ವಿಮಾನ ನಿಲ್ದಾಣದಲ್ಲಿ ಪ್ರೀತಿಯಿಂದ ಬರಮಾಡಿಕೊಂಡರು. ಅಲ್ಲಿಂದ ನಾಯಕರೆಲ್ಲರೂ ಒಟ್ಟಾಗಿಯೇ ಲೋಕಭವನದತ್ತ ಪ್ರಯಾಣ ಬೆಳೆಸಿದರು.
ವಿಶೇಷ ಸೂಚನೆ: ಸದ್ಯ ರಾಜ್ಯದಲ್ಲಿ ಹೊಸ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಡಿ.ಕೆ. ಶಿವಕುಮಾರ್ ಅವರ ಮುಂದಿನ ಹೆಜ್ಜೆಗಳ ಕಡೆಗೆ ಇಡೀ ರಾಜ್ಯದ ಜನತೆ ಕುತೂಹಲದಿಂದ ಕಾಯುತ್ತಿದ್ದಾರೆ.



