ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ತಂತ್ರಜ್ಞಾನ, ನಾವೀನ್ಯತೆ ಹಾಗೂ ಹೂಡಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ, ‘ಬೆಂಗಳೂರು ಟೆಕ್ ಸಮ್ಮಿಟ್ 2026’ರ ಪೂರ್ವಭಾವಿಯಾಗಿ ಆಯೋಜಿಸಲಾಗಿದ್ದ ವಾರ್ಷಿಕ ಸಿಇಒ ಉಪಹಾರ ಕೂಟದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪಾಲ್ಗೊಂಡು ಜಾಗತಿಕ ಉದ್ಯಮ ದಿಗ್ಗಜರನ್ನು ಉದ್ದೇಶಿಸಿ ಮಾತನಾಡಿದರು. ಕರ್ನಾಟಕದ ಮಾನವ ಸಂಪನ್ಮೂಲ ಹಾಗೂ ಪ್ರಗತಿಯ ಮೇಲೆ ನಿರಂತರ ನಂಬಿಕೆ ಇಟ್ಟು ಹೂಡಿಕೆ ಮಾಡುತ್ತಿರುವ ಜಾಗತಿಕ ಉದ್ಯಮಿಗಳಿಗೆ ಅವರು ಈ ವೇಳೆ ಧನ್ಯವಾದ ಅರ್ಪಿಸಿದರು.
ಇದೇ ಸಂದರ್ಭದಲ್ಲಿ ಬೆಂಗಳೂರಿನ ಎನ್ಜಿಇಎಫ್ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ 'ಮ್ಯೂಸಿಯಂ ಆಫ್ ಇನ್ನೋವೇಶನ್, ಸ್ಟಾರ್ಟ್ಅಪ್ಸ್ & ಟೆಕ್ನಾಲಜಿ' ಹಾಗೂ 'ಇನ್ನೋವರ್ಸ್ ಫೌಂಡೇಶನ್' ಅನ್ನು ಮುಖ್ಯಮಂತ್ರಿಗಳು ಉದ್ಘಾಟಿಸಿದರು.
'ಎಐ & ಬಿಯಾಂಡ್' ಥೀಮ್ ಅನಾವರಣ:
ಮುಂಬರುವ ‘ಬೆಂಗಳೂರು ಟೆಕ್ ಸಮ್ಮಿಟ್ 2026’ರ ಅಧಿಕೃತ ಥೀಮ್ "AI & Beyond" (ಕೃತಕ ಬುದ್ಧಿಮತ್ತೆ ಮತ್ತು ಅದರಾಚೆಗೆ) ಎಂಬುದನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದರು. ಡೀಪ್ಟೆಕ್, ಕೃತಕ ಬುದ್ಧಿಮತ್ತೆ (AI), ಕ್ವಾಂಟಮ್ ತಂತ್ರಜ್ಞಾನ, ಉದ್ಯಮಶೀಲತೆ ಹಾಗೂ ಉದ್ಯಮ-ಶೈಕ್ಷಣಿಕ ಕ್ಷೇತ್ರಗಳ ಬಲವಾದ ಸಹಭಾಗಿತ್ವದ ಮೂಲಕ ಕರ್ನಾಟಕವನ್ನು ಜಾಗತಿಕ ತಂತ್ರಜ್ಞಾನ ನಾಯಕನಾಗಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಸರ್ಕಾರದ ದೂರದೃಷ್ಟಿಯನ್ನು ಅವರು ಹಂಚಿಕೊಂಡರು.
ಸಂಶೋಧನೆ, ಕೌಶಲ್ಯ ಅಭಿವೃದ್ಧಿ, ಸ್ಟಾರ್ಟ್ಅಪ್ ಹಾಗೂ ಉದಯೋನ್ಮುಖ ತಂತ್ರಜ್ಞಾನ ವಲಯಗಳಲ್ಲಿ ಕರ್ನಾಟಕದೊಂದಿಗೆ ಕೈಜೋಡಿಸುವಂತೆ ಜಾಗತಿಕ ಸಂಸ್ಥೆಗಳಿಗೆ ಆಹ್ವಾನ ನೀಡಿದ ಅವರು, ತಂತ್ರಜ್ಞಾನ ಆಧಾರಿತ ಬೆಳವಣಿಗೆಯನ್ನು ಕೇವಲ ಬೆಂಗಳೂರಿಗೆ ಸೀಮಿತಗೊಳಿಸದೆ ರಾಜ್ಯದ ಇತರ ಭಾಗಗಳಿಗೂ ವಿಸ್ತರಿಸಲು ಸರ್ಕಾರ ಬದ್ಧವಾಗಿದೆ ಎಂದು ಪುನರುಚ್ಚರಿಸಿದರು. ಮುಂಬರುವ ಪೀಳಿಗೆಯ ತಂತ್ರಜ್ಞಾನಗಳನ್ನು ಕರ್ನಾಟಕದಲ್ಲೇ ವಿನ್ಯಾಸಗೊಳಿಸಿ, ಜಗತ್ತಿಗೆ ತಲುಪಿಸಲು ಉದ್ಯಮಿಗಳು, ಸಂಶೋಧಕರು ಹಾಗೂ ನಾವೀನ್ಯಕಾರರು ಒಟ್ಟಾಗಿ ಶ್ರಮಿಸಬೇಕೆಂದು ಕರೆ ನೀಡಿದರು.



