ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ತೂಬಗೆರೆ ಗ್ರಾಮದಲ್ಲಿ ಸುಮಾರು 600 ವರ್ಷಗಳ ಇತಿಹಾಸ ಹೊಂದಿರುವ ಪಾರಂಪರಿಕ ಜನಪದ ಆಚರಣೆಯಾದ ‘ಭೂತ ನೆರಿಗೆ’ ಹಬ್ಬವು ಭಾನುವಾರ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.
ಪ್ರತಿವರ್ಷದಂತೆ ಈ ವರ್ಷವೂ ಆಷಾಢ ಮಾಸದ ಏಕಾದಶಿಯ ಮರುದಿನವಾದ ದ್ವಾದಶಿಯಂದು ಭೂತ ನೆರಿಗೆ ಹಬ್ಬವನ್ನು ಸಂಪ್ರದಾಯ ಬದ್ಧವಾಗಿ ಆಚರಣೆ ಮಾಡುತ್ತಾ ಬರಲಾಗುತ್ತಿದೆ.
ಈ ಹಬ್ಬದಲ್ಲಿ ಕರಿಯಣ್ಣ ಹಾಗೂ ಕೆಂಚಣ್ಣರ ವೇಷಧಾರಿಗಳ ಮೇಲೆ ಭೂತವನ್ನು ಆಹ್ವಾನಿಸಿ ಆವೇಶಗೊಳ್ಳುವ ಆಚರಣೆ ನಡೆಯುತ್ತದೆ.
ಈ ಸಂದರ್ಭದಲ್ಲಿ ವೇಷಧಾರಿಗಳ ಹಸಿವು ತಣಿಸುವ ಸಂಪ್ರದಾಯವಿದೆ. ಅಲ್ಲದೆ, ಕರಿಯಣ್ಣ-ಕೆಂಚಣ್ಣರ ವೇಷಧಾರಿಗಳು ಮನೆಗಳಿಗೆ ಬಂದರೆ ಮನೆಯಲ್ಲಿರುವ ದುಷ್ಟಶಕ್ತಿಗಳು ಹಾಗೂ ಪಿಶಾಚಿಗಳು ದೂರವಾಗುತ್ತವೆ ಎಂಬುದು ಜನರ ನಂಬಿಕೆಯಾಗಿದೆ.
ಮುಖ್ಯವಾಗಿ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಮತ್ತು ಕಲ್ಲುಕೋಟೆ ಗ್ರಾಮಗಳಲ್ಲಿ, ಆಷಾಢ ಮಾಸದಲ್ಲಿ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಒಂದು ವಿಶಿಷ್ಟ ಜಾನಪದ ಹಾಗೂ ಧಾರ್ಮಿಕ ಆಚರಣೆಯಾಗಿದೆ.
ವಿಷ್ಣುವಿನ ದ್ವಾರಪಾಲಕರಾದ ಜಯ-ವಿಜಯರು ಶಾಪಕ್ಕೆ ಗುರಿಯಾಗಿ ಕಲಿಯುಗದಲ್ಲಿ ಕರಿಯಣ್ಣ ಮತ್ತು ಕೆಂಚಣ್ಣರ ರೂಪದಲ್ಲಿ ಭೂಲೋಕಕ್ಕೆ ಬರುತ್ತಾರೆ ಎಂಬ ಪೌರಾಣಿಕ ಹಿನ್ನೆಲೆ ಇದೆ.
ಸುಮಾರು 600 ವರ್ಷಗಳ ಇತಿಹಾಸ ಹೊಂದಿರುವ ಈ ಭೂತ ನೆರಿಗೆ ಹಬ್ಬವು ಇಂದಿಗೂ ತೂಬಗೆರೆ ಹಾಗೂ ಕಲ್ಲುಕೋಟೆ ಗ್ರಾಮಗಳಲ್ಲಿ ಸಂಪ್ರದಾಯಬದ್ಧವಾಗಿ ನಡೆದುಕೊಂಡು ಬರುತ್ತಿದೆ. ಹಬ್ಬದ ಸಂದರ್ಭದಲ್ಲಿ ಕರಿಯಣ್ಣ ಹಾಗೂ ಕೆಂಚಣ್ಣರ ವೇಷಧಾರಿಗಳು ಒಂದು ಕೈಯಲ್ಲಿ ಭೂತದ ಮುಖದ ಆಕಾರದ ವರ್ತುಲಾಕಾರದ ನೆರಿಗೆಯನ್ನು ಹಾಗೂ ಮತ್ತೊಂದು ಕೈಯಲ್ಲಿ ಕತ್ತಿಯನ್ನು ಹಿಡಿದಿರುತ್ತಾರೆ.
ಈ ವೇಳೆ ಲಕ್ಷ್ಮೀನರಸಿಂಹಸ್ವಾಮಿಯ ಭಕ್ತರು ವಿಷ್ಣುವಿನ ನಾಮಸ್ಮರಣೆ ಹಾಗೂ ಗುಣಗಾನ ಮಾಡುತ್ತಾ ಕರಿಯಣ್ಣ-ಕೆಂಚಣ್ಣರನ್ನು ಕೆಣಕುತ್ತಾರೆ. ವಿಷ್ಣುವಿನ ನಾಮಸ್ಮರಣೆಯನ್ನು ಸಹಿಸಲಾಗದೆ ಆವೇಶಗೊಂಡ ಕರಿಯಣ್ಣ ಹಾಗೂ ಕೆಂಚಣ್ಣ ಭಕ್ತರ ಕಡೆಗೆ ನುಗ್ಗುತ್ತಾರೆ. ಅವರನ್ನು ಶಾಂತಗೊಳಿಸುವ ಸಲುವಾಗಿ ಬಾಳೆಹಣ್ಣು ಹಾಗೂ ಹಲಸಿನ ಹಣ್ಣಿನಿಂದ ತಯಾರಿಸಿದ ರಸಾಯನವನ್ನು ಬಾಯಿಗೆ ತಿನ್ನಿಸಲಾಗುತ್ತದೆ. ಆವೇಶದಲ್ಲಿರುವ ಭೂತಗಳು ಆ ಸಂದರ್ಭದಲ್ಲಿ ಏನು ಕೊಟ್ಟರೂ ಸ್ವೀಕರಿಸುತ್ತವೆ ಎಂಬುದು ಜಾನಪದ ನಂಬಿಕೆಯಾಗಿದೆ.
ಕೆಲವು ಗ್ರಾಮಗಳಲ್ಲಿ ನಡೆಯುವ ಇದೇ ಆಚರಣೆಯಲ್ಲಿ ಕರಿಯಣ್ಣ ಹಾಗೂ ಕೆಂಚಣ್ಣರ ಬಾಯಿಗೆ ಕುರಿ ಮತ್ತು ಕೋಳಿಗಳನ್ನು ಬಲಿಯಾಗಿ ನೀಡುವ ಸಂಪ್ರದಾಯವೂ ಇದೆ. ಅವುಗಳ ರಕ್ತವನ್ನು ಹೀರುವುದರ ಮೂಲಕ ಕರಿಯಣ್ಣ-ಕೆಂಚಣ್ಣ ಶಾಂತರಾಗುತ್ತಾರೆ ಎಂಬುದು ಈ ಭಾಗದ ಭಕ್ತರ ನಂಬಿಕೆಯಾಗಿದೆ.



