ಚಂದ್ರವಳ್ಳಿ ನ್ಯೂಸ್, ಚಾಮರಾಜನಗರ:
ಸೈಕಲ್ ಮಾನವನ ಶ್ರೇಷ್ಠ ಆವಿಷ್ಕಾರವಾಗಿದ್ದು,ಪ್ರಕೃತಿಯ ಸಕಾರಾತ್ಮಕತೆಯ ಜೊತೆಗೆ ಆರೋಗ್ಯ ವೃದ್ಧಿ,ಸಹಿಷ್ಣುತೆ, ಗೌರವ, ಶಾಂತಿ, ಪರಸ್ಪರ ತಿಳುವಳಿಕೆ, ಶುದ್ಧ ಹಾಗೂ ಸರಳ ಸಾರಿಗೆಯ ಸಾಧನವಾಗಿದೆ. ತಮ್ಮ ಜೀವನದಲ್ಲಿ ಸದಾಕಾಲ ಸೈಕಲ್ ಸವಾರರಾಗಿದ್ದು ಕಾಯಕ ನಿಷ್ಠೆಯ ಹರದನಹಳ್ಳಿ ಗಜೇಂದ್ರ ಅವರು ಮಾದರಿ ಎಂದು ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಜೈ ಹಿಂದ್ ಪ್ರತಿಷ್ಠಾನ ಮತ್ತು ಋಗ್ವೇದಿ ಯೂತ್ ಕ್ಲಬ್ ಜೈ ಹಿಂದ್ ಕಟ್ಟೆಯಲ್ಲಿಹಮ್ಮಿಕೊಂಡಿದ್ದ ವಿಶ್ವ ಸೈಕಲ್ ದಿನ ಹಾಗೂ ಕಾಯಕನಿಷ್ಠ ಗಜೇಂದ್ರ ರವರ ಅಭಿನಂದನಾ ಸಮಾರಂಭ ದಲ್ಲಿ ಮಾತನಾಡಿದರು.
ಹರದನಹಳ್ಳಿ ಗಜೇಂದ್ರ ರವರು ಸುಮಾರು ಆರು ದಶಕಗಳಿಂದ ನಿರಂತರವಾಗಿ ಸೈಕಲ್ ಬಳಕೆದಾರರಾಗಿ ತಮ್ಮ ವೃತ್ತಿ ಗೌರವವನ್ನು ಸೈಕಲ್ ಮೂಲಕವೇ ಹೆಚ್ಚಿಸಿಕೊಳ್ಳುವ ಮೂಲಕ ಹರದನಹಳ್ಳಿ,ಚಾಮರಾಜನಗರ, ಮೈಸೂರು , ಮಂಡ್ಯ,ಮಳವಳ್ಳಿ ಬೆಂಗಳೂರು ಯಾವುದೇ ಸ್ಥಳಕ್ಕೆ ಹೋದರು ಸೈಕಲ್ ನಲ್ಲಿಯೇ ತಮ್ಮ ವ್ಯಾಪಾರವನ್ನು ಮಾಡುವ ಮೂಲಕ ಸೈಕಲ್ ಸವಾರಿಗಳಿಗೆ ಅರ್ಥಪೂರ್ಣವಾದ ಮಾದರಿ ವ್ಯಕ್ತಿಯಾಗಿದ್ದಾರೆ.
ಅವರನ್ನು ವಿಶ್ವ ಸೈಕಲ್ ದಿನದಂದು ಗೌರವಿಸುವುದು ನಮ್ಮೆಲ್ಲರಿಗೂ ಹೆಮ್ಮೆಯಾಗಿದೆ. ಗಜೇಂದ್ರ ರವರು ಮನೆಗೆ ಬೇಕಾದ ಅಗತ್ಯ ಸಾಂಬಾರ ಪುಡಿಯನ್ನು ಹಾಗೂ ಇತರ ವಸ್ತುಗಳನ್ನು ನೇರವಾಗಿ ಗ್ರಾಹಕರಿಗೆ ಅತ್ಯಂತ ಪ್ರೀತಿ, ವಿಶ್ವಾಸ, ಗೌರವ, ನಂಬಿಕೆ ಯಿಂದ ನೀಡುವ ಮೂಲಕ ನೂರಾರು ಜನರಿಗೆ ಪ್ರೀತಿ ಪಾತ್ರರಾಗಿದ್ದಾರೆ.
ವೃತ್ತಿಯನ್ನು ಪ್ರೀತಿಸಿ 18ನೇ ವರ್ಷದಿಂದಲೂ ನಿರಂತರವಾಗಿ ಸೈಕಲ್ ನಲ್ಲಿಯೇ ಎಲ್ಲಾ ಕಡೆ ಪ್ರಯಾಣಿಸಿ ಐದು ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳಿಗೆ ಹಿರಿಯರಿಗೆ,ಮಹಿಳೆಯರಿಗೆ ಸೈಕಲ್ ಅತ್ಯುತ್ತಮವಾದ ಸಾಧನವಾಗಿದೆ. ಸೈಕಲ್ ಸವಾರಿಯಿಂದ ಆರೋಗ್ಯ ಹೆಚ್ಚುತ್ತದೆ.ಸಾಮಾಜಿಕ ಉನ್ನತಿಯ ಸಂಕೇತವಾಗಿಯೂ ಕೂಡ ಸೈಕಲ್ ಪಾತ್ರವನ್ನು ವಹಿಸುತ್ತದೆ.
ಸೈಕಲ್ ಯಾವುದೇ ಖರ್ಚಿಲ್ಲದ ಅತ್ಯುತ್ತಮ ಸಾಧನ. ಅದರ ಬಳಕೆಗೆ ನಾವು ಸಮಯ ನೀಡಬೇಕು ಎಂದು ತಿಳಿಸಿ ಗಜೇಂದ್ರ ರವರ ಸೇವೆ ಮತ್ತಷ್ಟು ಹೆಚ್ಚಲಿ ಎಂದು ತಿಳಿಸಿ ಗೌರವ ಪೂರಕವಾಗಿ ಋಗ್ವೇದಿ ಸನ್ಮಾನಿಸಿ ಅಭಿನಂದಿಸಿದರು
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಹರದನಹಳ್ಳಿ ಗಜೇಂದ್ರ ರವರು ನನ್ನ ಜೀವನದಲ್ಲಿ ಅರ್ಧ ಲೀಟರ್ ಪೆಟ್ರೋಲ್ ಅನ್ನು ಬಳಸಿಲ್ಲ.ಕಳೆದ ನನ್ನ ಜೀವನದ 12ನೇ ವಯಸ್ಸಿನಿಂದಲೂ ನಿರಂತರವಾಗಿ ಸೈಕಲ್ ನಲ್ಲಿಯೇ ಅಧ್ಯಯನ ಹಾಗೂ ವ್ಯಾಪಾರವನ್ನು ಮಾಡುತ್ತಿದ್ದೇನೆ.
ಇಂದಿಗೂ 25 ರಿಂದ 30 ಕಿಲೋಮೀಟರ್ ದೂರ ಸೈಕಲ್ ಪ್ರಯಾಣ ನಡೆಯುತ್ತಿದೆ. ಎಂದಿಗೂ ಆಯಾಸವಾಗಿಲ್ಲ.ಸದಾ ಕಾಲ ಸಂತೋಷದಿಂದ ಪ್ರೀತಿಯಿಂದ ಕಾರ್ಯನಿರ್ವಹಿಸುತ್ತ ಗ್ರಾಹಕರಿಗೆ ನನ್ನ ಕೈಲಾದ ಸೇವೆಯನ್ನು ಸಲ್ಲಿಸುತ್ತಿದ್ದೇನೆ ಇಂದು ಋಗ್ವೇದಿ ಕ್ಲಬ್ ನನ್ನನ್ನು ಗೌರವಿಸುತ್ತಿರುವುದು ನನಗೆ ಬಹಳ ಸಂತೋಷವನ್ನು ತಂದಿದೆ. ನನ್ನ ಜೀವನಕ್ಕೆ ಮತ್ತಷ್ಟು ಸ್ಪೂರ್ತಿಯನ್ನು ಹಾಗೂ ಸೈಕಲ್ ಸವಾರನಾಗಿ ಕಾರ್ಯನಿರ್ವಹಿಸಲು ಶಕ್ತಿ, ಚೈತನ್ಯವನ್ನು ಇಂದಿನ ಗೌರವ ನೀಡಿದೆ ಎಂದು ತಿಳಿಸಿದರು.
ಸಮಾಜ ಸೇವಕ ಎಲ್ ಸುರೇಶ್ ಮಾತನಾಡಿ ಗಜೇಂದ್ರ ರವರು ಬಾಲ್ಯದಿಂದಲೂ ಸೈಕಲ್ ಬಳಸುತ್ತಿದ್ದಾರೆ ಎಲ್ಲಾ ಕಡೆ ಯಾವುದೇ ಊರಿಗೆ ಹೋದರು ಸೈಕಲ್ನಲ್ಲೇ ಅಲ್ಲಲ್ಲೇ ವ್ಯಾಪಾರವನ್ನು ಮಾಡುವ ಮೂಲಕ ಒಂದು ಪ್ರೀತಿಗೆ ಪಾತ್ರರಾಗಿದ್ದಾರೆ. ತಮ್ಮ ಸರಳ ಜೀವನದಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿರುವುದು ಕಾಣಬಹುದು ಎಂದರು.
ಕಾರ್ಯಕ್ರಮದಲ್ಲಿ ಚಂದಕವಾಡಿ ರವಿ, ಪ್ರಕಾಶ್,ಆನಂದ್ ಭೋಜರಾಜ್,ಝಾನ್ಸಿ. ಮಕ್ಕಳ ಪರಿಷತ್ತಿನ ಶ್ರಾವ್ಯ ಎಸ್ ಋಗ್ವೇದಿ, ಸಾನಿಕ, ಕುಸುಮ ಮತ್ತಿತರು ಇದ್ದರು.



