ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಗುರು ಪೂರ್ಣಿಮೆಯ ಅಂಗವಾಗಿ ದೊಡ್ಡಬಳ್ಳಾಪುರ ತಾಲೂಕಿನ ವಿವಿಧ ಸಾಯಿ ಬಾಬಾ ಹಾಗೂ ಶ್ರೀ ರಾಘವೇಂದ್ರ ಸ್ವಾಮಿ ದೇವಾಲಯಗಳಲ್ಲಿ ಬುಧವಾರ ಭಕ್ತಿಭಾವದಿಂದ ವಿಶೇಷ ಪೂಜೆ, ಅಭಿಷೇಕ, ಅಲಂಕಾರ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.
ಬೆಳಗ್ಗೆಯಿಂದಲೇ ದೇವಾಲಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ದೇವರ ದರ್ಶನ ಪಡೆದು ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು. ರಂಗಪ್ಪ ಸರ್ಕಲ್ ಬಳಿಯ ಸಾಯಿಬಾಬಾ ದೇವಾಲಯ, ರಘುನಾಥಪುರದ ಸಾಯಿಬಾಬಾ ದೇವಾಲಯ, ಬಾಶೆಟ್ಟಿಹಳ್ಳಿ, ನಗರದ ಬ್ರಾಹ್ಮಣರ ಬೀದಿಯ ರಾಘವೇಂದ್ರ ಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು. ದೇವಾಲಯಗಳಲ್ಲಿ ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ, ಗುರು ಪಾದಪೂಜೆ, ವೇದಮಂತ್ರಗಳ ಪಠಣ, ಭಜನೆ ಹಾಗೂ ಮಂಗಳಾರತಿ ನಡೆಸಲಾಯಿತು. ಗುರುಗಳ ಆಶೀರ್ವಾದದಿಂದ ಜ್ಞಾನ, ಆರೋಗ್ಯ ಹಾಗೂ ಸಮೃದ್ಧಿ ಲಭಿಸಲಿ ಎಂದು ಭಕ್ತರು ಪ್ರಾರ್ಥಿಸಿದರು.
ಸಾಯಿ ಬಾಬಾ ದೇವಾಲಯಗಳಲ್ಲಿ ಸಾಯಿ ಭಜನೆ, ಸಾಯಿ ಚರಿತ್ರೆ ಪಾರಾಯಣ ಹಾಗೂ ಮಹಾಮಂಗಳಾರತಿ ನಡೆಯಿತು. ಶ್ರೀ ರಾಘವೇಂದ್ರ ಸ್ವಾಮಿ ದೇವಾಲಯಗಳಲ್ಲಿ ರಾಯರ ಮೂಲರಾಮ ದೇವರ ವಿಶೇಷ ಪೂಜೆ, ರಾಘವೇಂದ್ರ ಸ್ತೋತ್ರ ಪಾರಾಯಣ, ತೀರ್ಥಪ್ರಸಾದ ಮತ್ತು ಅನ್ನಸಂತರ್ಪಣೆ ಆಯೋಜಿಸಲಾಗಿತ್ತು.
ದೇವಾಲಯಗಳ ಆಡಳಿತ ಮಂಡಳಿ ಹಾಗೂ ಸೇವಾ ಸಮಿತಿಗಳ ವತಿಯಿಂದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ದಿನವಿಡೀ ಭಕ್ತರ ದಂಡು ಹರಿದು ಬಂದ ಹಿನ್ನೆಲೆ ದೇವಾಲಯಗಳಲ್ಲಿ ಭಕ್ತಿಮಯ ವಾತಾವರಣ ನಿರ್ಮಾಣವಾಗಿತ್ತು. ಕೆಲ ವಿದ್ಯಾಸಂಸ್ಥೆಗಳಲ್ಲೂ ಗುರು ಪೂರ್ಣಮಿಯನ್ನು ಸಂಭ್ರಮದಿಂದ ಆಚರಿಸಿದರು.
ವಿಶೇಷ ಆರಾಧನೆ:
ದೊಡ್ಡಬಳ್ಳಾಪುರದ ಹಾಡೋನಹಳ್ಳಿ ಬಳಿಯ ಘಾಟಿ ಸುಬ್ರಹ್ಮಣ್ಯ ದೇವಾಲಯ ರಸ್ತೆಯಲ್ಲಿನ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಗುರು ಪೂರ್ಣಿಮಾ ಅಂಗವಾಗಿ ವಿಶೇಷವಾದ ಪೂಜಾ ಕಾರ್ಯವನ್ನು ಕೈಗೊಳ್ಳಲಾಯಿತು. ಮುಂಜಾನೆಯಿಂದಲೇ ವಿಶೇಷ ಪೂಜಾ ಕಾರ್ಯವನ್ನು ನಡೆಸಲಾಯಿತು.
ದೇವಾಲಯದ ಮುಖ್ಯಸ್ಥರಾದ ಶೋಭನ್ ಬಾಬು ಅವರ ನೇತ್ರತ್ವದಲ್ಲಿ ವಿಶೇಷ ಅಲಂಕಾರ, ಪೂಜೆ, ಪ್ರಸಾದ ವಿನಿಯೋಗ ನಡೆಯಿತು. ಘಾಟಿ ಸುಬ್ರಹ್ಮಣ್ಯ ದೇವಾಲಯಕ್ಕೆ ಹೋಗುವ ಅನೇಕ ಭಕ್ತರು ಇಲ್ಲಿಗೆ ಬಂದು ಪೂಜೆ ಸಲ್ಲಿಸಿ ಹೋದರು. ನೂರಾರು ಸಂಖ್ಯೆಯಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿ, ಸಾಯಿ ಬಾಬಾ ದರ್ಶನ ಪಡೆದುಕೊಂಡು ಧನ್ಯತಾ ಭಾವ ಮೆರೆದರು.



