ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಿರಿಯೂರು ವಿಧಾನಸಭಾ ಕ್ಷೇತ್ರದ ಶಾಸಕ ಡಿ. ಸುಧಾಕರ್ ಅವರ ನಿಧನ ಕೇವಲ ಒಂದು ಕುಟುಂಬಕ್ಕೋ, ಒಂದು ಪಕ್ಷಕ್ಕೋ ಉಂಟಾದ ನಷ್ಟ ಮಾತ್ರವಲ್ಲ… ಅದು ಸಂಪೂರ್ಣ ಕ್ಷೇತ್ರದ ರಾಜಕೀಯ ಲೆಕ್ಕಾಚಾರವನ್ನೇ ಅಸ್ತವ್ಯಸ್ತಗೊಳಿಸಿದ ಘಟನೆಯಾಗಿದೆ.
ರಾಜಕೀಯವಾಗಿ ಈಗ ಹಿರಿಯೂರು ಕ್ಷೇತ್ರ ಒಂದು ತೀವ್ರ ಕುತೂಹಲ, ಗೊಂದಲ ಮತ್ತು ಅತಿದೊಡ್ಡ ನಿರೀಕ್ಷೆಗಳ ಕೇಂದ್ರಬಿಂದುವಾಗಿದೆ.
ಸಂವಿಧಾನದ ಪ್ರಕಾರ ಖಾಲಿಯಾದ ವಿಧಾನಸಭಾ ಸ್ಥಾನಕ್ಕೆ ಆರು ತಿಂಗಳೊಳಗೆ ಮಧ್ಯಾಂತರ ಚುನಾವಣೆ ನಡೆಯಲೇಬೇಕು. ಆದರೆ ಇಲ್ಲಿ ರಾಜಕೀಯದ ಅಸಲಿ ಗೊಂದಲ ಆರಂಭವಾಗೋದು ಬೇರೆ ಕಾರಣದಿಂದ…
ಇನ್ನೂ ಕೇವಲ ಎರಡು ವರ್ಷ ಮಾತ್ರ ಅಧಿಕಾರಾವಧಿ ಉಳಿದಿರುವ ಸಂದರ್ಭದಲ್ಲಿ ಯಾರು ಈ ಚುನಾವಣೆಯ ಹೊಣೆ ಹೊರುತ್ತಾರೆ?
ಯಾರು ರಾಜಕೀಯ ಭವಿಷ್ಯವನ್ನು ಪಣಕ್ಕಿಡುತ್ತಾರೆ?
ಯಾರು ಗೆದ್ದು ಎರಡು ವರ್ಷಗಳಲ್ಲಿ ಜನಮನ ಗೆಲ್ಲಬಲ್ಲರು?
ಅನ್ನೋ ಪ್ರಶ್ನೆಗಳು ಪ್ರತಿಯೊಂದು ಪಕ್ಷದ ಒಳಗಡೆಯೂ ಸದ್ದು ಮಾಡತೊಡಗಿವೆ.
ಈಗಾಗಲೇ 2028ರ ಚುನಾವಣೆಯನ್ನು ಗುರಿಯಾಗಿಸಿಕೊಂಡು ಎನ್ಡಿಎ ಮೈತ್ರಿಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪರವಾಗಿ ಒಂದು ಡಜನ್ ಗಿಂತ ಹೆಚ್ಚು ಆಕಾಂಕ್ಷಿಗಳು ಕ್ಷೇತ್ರದಾದ್ಯಂತ ಪ್ರಚಾರದ ಭರಾಟೆಯಲ್ಲಿ ತೊಡಗಿದ್ದರು.
ಜನ ಸಂಪರ್ಕ, ಜಾತಿ ಸಮೀಕರಣ, ಸಂಘಟನೆ ಬಲ, ಸಾಮಾಜಿಕ ಜಾಲತಾಣಗಳ ಪ್ರಚಾರ ಎಲ್ಲವೂ ನಿಧಾನವಾಗಿ 2028ರ ರಾಜಕೀಯ ರಣತಂತ್ರದ ಭಾಗವಾಗಿತ್ತು.
ಆದರೆ ಡಿ. ಸುಧಾಕರ್ ಅವರ ಅಕಾಲಿಕ ನಿಧನ ಆ ಸಂಪೂರ್ಣ ರಾಜಕೀಯ ಚದುರಂಗದ ಪಟ್ಟವನ್ನೇ ಒಂದೇ ಕ್ಷಣದಲ್ಲಿ ಬದಲಿಸಿಬಿಟ್ಟಿದೆ.
ಇದೀಗ ಬಹುತೇಕ ಆಕಾಂಕ್ಷಿಗಳ ಮನಸ್ಥಿತಿ ವಿಚಿತ್ರ ದ್ವಂದ್ವದಲ್ಲಿದೆ.
“ಇವಾಗಲೇ ಚುನಾವಣೆಗೆ ಇಳಿಯಬೇಕಾ?”, “ಅಥವಾ 2028ರ ತನಕ ಕಾಯಬೇಕಾ?”, “ಈ ಚುನಾವಣೆ ಗೆದ್ದರೂ ರಾಜಕೀಯ ಲಾಭ ಎಷ್ಟು?” “ಸೋತರೆ ಭವಿಷ್ಯವೇ ಕುಸಿಯುತ್ತದೆಯಾ?” ಎಂಬ ಲೆಕ್ಕಾಚಾರಗಳು ಒಳಹೊರಗೆ ನಡೆಯುತ್ತಿವೆ.
ಇನ್ನೊಂದೆಡೆ ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ಇನ್ನೂ ಸೂಕ್ಷ್ಮವಾಗಿದೆ.
ಡಿ. ಸುಧಾಕರ್ ಅವರ ವೈಯಕ್ತಿಕ ಪ್ರಭಾವ, ಜನಸಂಪರ್ಕ ಮತ್ತು ರಾಜಕೀಯ ಹಿಡಿತವೇ ಕಾಂಗ್ರೆಸ್ಗೆ ಹಿರಿಯೂರಿನಲ್ಲಿ ದೊಡ್ಡ ಬಲವಾಗಿತ್ತು.
ಈಗ ಅವರ ಅನುಪಸ್ಥಿತಿಯಲ್ಲಿ ಕಾಂಗ್ರೆಸ್ ಯಾರನ್ನು ಕಣಕ್ಕಿಳಿಸುತ್ತದೆ ಅನ್ನೋದು ನಿಗೂಢ ಪ್ರಶ್ನೆಯಾಗಿದೆ. ಸಹಾನುಭೂತಿ ಅಲೆ ಮೇಲೆ ಕುಟುಂಬ ರಾಜಕಾರಣ ಮುಂದುವರಿಯುತ್ತದೆಯಾ?. ಅಥವಾ ಹೊಸ ಮುಖಕ್ಕೆ ಅವಕಾಶ ಕೊಡಲಾಗುತ್ತದೆಯಾ?, ಸ್ಥಳೀಯ ನಾಯಕರ ನಡುವೆ ಒಳಸ್ಪರ್ಧೆ ಶುರುವಾಗುತ್ತದೆಯಾ? ಎಂಬ ಪ್ರಶ್ನೆಗಳು ಕಾಂಗ್ರೆಸ್ ಒಳಗಡೆಯೇ ರಾಜಕೀಯ ತಾಪಮಾನ ಹೆಚ್ಚಿಸುತ್ತಿವೆ.
ಎನ್ಡಿಎ ಪಾಳಯದಲ್ಲೂ ಚಿತ್ರ ಸ್ಪಷ್ಟವಾಗಿಲ್ಲ. ಬಿಜೆಪಿ- ಜೆಡಿಎಸ್ ಅಭ್ಯರ್ಥಿಯಾ? ಅಥವಾ ಒಗ್ಗಟ್ಟಿನ ಸಮೀಕರಣದ ಹೊಸ ಮುಖವಾ? ಎಂಬ ಗೊಂದಲ ಅಲ್ಲಿಯೂ ಸ್ಪಷ್ಟವಾಗಿ ಕಾಣುತ್ತಿದೆ.
ಈ ಎಲ್ಲ ಗೊಂದಲಗಳ ಮಧ್ಯೆ ಈಗ ಹಿರಿಯೂರಿನಲ್ಲಿ ಹೆಚ್ಚು ಚರ್ಚೆಯಾಗುತ್ತಿರುವ ಮತ್ತೊಂದು ವಿಚಾರ— “ಮೂರನೇ ಶಕ್ತಿ”.
ಜನರ ಅಸಮಾಧಾನ, ಪಕ್ಷಗಳ ಒಳಕಚ್ಚಾಟ, ಟಿಕೆಟ್ ಗೊಂದಲ, ಸ್ಥಳೀಯ ಅಸಮತೋಲನ — ಇವೆಲ್ಲ ಒಂದಾಗಿದ್ರೆ ಸ್ವತಂತ್ರ ಅಭ್ಯರ್ಥಿ ಅಥವಾ ಹೊಸ ರಾಜಕೀಯ ಶಕ್ತಿ ಅಚ್ಚರಿ ಫಲಿತಾಂಶ ತರುವ ಸಾಧ್ಯತೆಯನ್ನು ಸಂಪೂರ್ಣ ತಳ್ಳಿಹಾಕಲು ಆಗುವುದಿಲ್ಲ.
ಯಾಕಂದ್ರೆ ಮಧ್ಯಾಂತರ ಚುನಾವಣೆ ಸಾಮಾನ್ಯ ಚುನಾವಣೆಯಂತಿರಲ್ಲ…
ಇಲ್ಲಿ ಜನರ ಮತದಲ್ಲಿ ಕೋಪವೂ ಇರುತ್ತೆ, ಸಹಾನುಭೂತಿಯೂ ಇರುತ್ತೆ, ಸ್ಥಳೀಯ ಅಸಮಾಧಾನವೂ ಇರುತ್ತೆ, ರಾಜಕೀಯ ಸಂದೇಶವೂ ಇರುತ್ತೆ.
ಈ ಚುನಾವಣೆ ಕೇವಲ ಶಾಸಕನ ಆಯ್ಕೆ ಮಾತ್ರವಾಗಿರುವುದಿಲ್ಲ…
ಇದು 2028ರ ರಾಜಕೀಯ ದಿಕ್ಕನ್ನು ನಿರ್ಧರಿಸುವ “ಸೆಮಿಫೈನಲ್” ಆಗುವ ಸಾಧ್ಯತೆ ಹೆಚ್ಚಾಗಿದೆ.
ಒಂದು ಗೆಲುವು ಮುಂದಿನ ಸಾರ್ವತ್ರಿಕ ಚುನಾವಣೆಯ ವಾತಾವರಣವನ್ನೇ ಬದಲಿಸಬಹುದು.
ಒಂದು ಸೋಲು ಹಲವು ರಾಜಕೀಯ ಮುಖಗಳ ಭವಿಷ್ಯವನ್ನೇ ಕತ್ತಲೆಗೆ ತಳ್ಳಬಹುದು.
ಒಟ್ಟಾರೆ ನೋಡಿದರೆ ಹಿರಿಯೂರು ವಿಧಾನಸಭಾ ಕ್ಷೇತ್ರ ಈಗ ಶಾಂತವಾಗಿ ಕಾಣಿಸಿಕೊಂಡರೂ ಒಳಗಡೆಯಿಂದ ರಾಜಕೀಯ ಅಗ್ನಿಪರ್ವತದಂತೆ ಕುದಿಯುತ್ತಿದೆ.
ಯಾವ ಪಕ್ಷದಿಂದ ಯಾರು ಅಭ್ಯರ್ಥಿಯಾಗುತ್ತಾರೆ?, ಯಾವ ಜಾತಿ ಸಮೀಕರಣ ಕೆಲಸ ಮಾಡುತ್ತದೆ?, ಸಹಾನುಭೂತಿ ಅಲೆ ಯಾರ ಕಡೆ ಹರಿಯುತ್ತದೆ?, ಮೂರನೇ ಶಕ್ತಿ ಹುಟ್ಟಿಕೊಳ್ಳುತ್ತದೆಯಾ? ಈ ಎಲ್ಲಾ ಗೊಂದಲಮಯ ಪ್ರಶ್ನೆಗಳಿಗೆ ಉತ್ತರ ಕೊಡುವ ಶಕ್ತಿ ಈಗ ಕಾಲಕ್ಕಷ್ಟೇ ಇದೆ…
ಆದರೆ ಒಂದು ವಿಷಯ ಮಾತ್ರ ನೂರಕ್ಕೆ ನೂರು ಸತ್ಯ:
ಹಿರಿಯೂರು ಮಧ್ಯಾಂತರ ಚುನಾವಣೆ ರಾಜ್ಯ ರಾಜಕೀಯದ ಗಮನ ಸೆಳೆಯುವ ಅತಿದೊಡ್ಡ ರಣರಂಗವಾಗಲು ಸಜ್ಜಾಗಿದೆ.
ಲೇಖನ:ಶ್ರೀನಿವಾಸ್ ಕೆ ಟಿ, ಬೆಂಗಳೂರು.


