ಹೆಚ್. ತನುಶ್ರೀ, ಚಿತ್ರದುರ್ಗ.
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕನಕಪುರದ ದೊಡ್ಡಾಲಹಳ್ಳಿ ಎಂಬ ಸಣ್ಣ ಹಳ್ಳಿಯಿಂದ ಆರಂಭವಾದ ಒಬ್ಬ ಸಾಮಾನ್ಯ ರೈತನ ಮಗನ ಪಯಣ, ಇಂದು ಕರ್ನಾಟಕದ ಅತ್ಯುನ್ನತ ರಾಜಕೀಯ ಗದ್ದುಗೆಯವರೆಗೆ ಬಂದು ತಲುಪಿದೆ. ನಾಲ್ಕು ದಶಕಗಳ ಸುದೀರ್ಘ ರಾಜಕೀಯ ಇತಿಹಾಸ ಹೊಂದಿರುವ ಡಿ.ಕೆ. ಶಿವಕುಮಾರ್ ಅವರ ಜೀವನ ಕೇವಲ ಅಧಿಕಾರದ ಹಾದಿಯಲ್ಲ, ಅದು ಅಪ್ರತಿಮ ಹೋರಾಟ, ಸವಾಲುಗಳು ಮತ್ತು ಬದ್ಧತೆಯ ಸಾಹಸಗಾಥೆ.
ಪ್ರಮುಖ ಮೈಲಿಗಲ್ಲುಗಳ ವಿವರ ಇಲ್ಲಿದೆ:
ದಿಸೆಯಿಂದಲೇ ಆರಂಭವಾದ ಕಿಚ್ಚು (೧೯೮೦ರ ದಶಕ)
ಡಿ.ಕೆ. ಶಿವಕುಮಾರ್ ಅವರಲ್ಲಿನ ನಾಯಕತ್ವದ ಗುಣಗಳು ಮೊಳಕೆಯೊಡೆದಿದ್ದು ಅವರ ಕಾಲೇಜು ದಿನಗಳಲ್ಲಿ. ಕಾಂಗ್ರೆಸ್ನ ವಿದ್ಯಾರ್ಥಿ ಸಂಘಟನೆಯಾದ NSUI ಮೂಲಕ ರಾಜಕೀಯ ಪ್ರವೇಶಿಸಿದ ಅವರು, ತಳಮಟ್ಟದ ಹೋರಾಟಗಳ ಮೂಲಕ ಯುವ ನಾಯಕನಾಗಿ ಗುರುತಿಸಿಕೊಂಡರು.
ದೇವೇಗೌಡರ ಎದುರೇ ಅಖಾಡಕ್ಕೆ; ರಾಜಕೀಯ ದೈತ್ಯನಿಗೆ ಸವಾಲು(೧೯೮೫):
ಕೇವಲ 23 ವರ್ಷದ ಯುವಕನಾಗಿದ್ದಾಗ ಡಿ.ಕೆ. ಶಿವಕುಮಾರ್ ಅವರು ತಾವಿದ್ದ ಸಾತನೂರು ಕ್ಷೇತ್ರದಿಂದ ಅಂದಿನ ರಾಜಕೀಯ ದೈತ್ಯ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ವಿರುದ್ಧವೇ ಬಂಡಾಯ ಎದ್ದು ಚುನಾವಣಾ ಅಖಾಡಕ್ಕಿಳಿದರು. ಆ ಚುನಾವಣೆಯಲ್ಲಿ ಅವರು ಸೋತರೂ, ರಾಜಕೀಯ ವಲಯದಲ್ಲಿ ತಾವೊಬ್ಬ "ಧೀಮಂತ ಹೋರಾಟಗಾರ" ಎಂಬುದನ್ನು ಸಾಬೀತುಪಡಿಸಿದರು ಮತ್ತು ಹೈಕಮಾಂಡ್ ಗಮನ ಸೆಳೆದರು.
ಮೊದಲ ಗೆಲುವು ಮತ್ತು ಯುವ ಸಚಿವ (೧೯೮೯ - ೧೯೯೨):
ಸಾತನೂರು ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸಿದರು. ಅಲ್ಲಿಂದ ಇಂದಿನವರೆಗೆ ಅವರು ಸತತವಾಗಿ 8 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ತಮ್ಮ ಜೀವನದಲ್ಲಿ ಒಂದೇ ಒಂದು ಚುನಾವಣೆಯಲ್ಲೂ ಸೋತಿಲ್ಲ ಎಂಬುದು ಇವರ ಹೆಗ್ಗಳಿಕೆ.
೧೯೯೧: ಕೇವಲ ೩೦ ವರ್ಷ ವಯಸ್ಸಾಗಿದ್ದಾಗಲೇ ಎಸ್. ಬಂಗಾರಪ್ಪ ಅವರ ಸಂಪುಟದಲ್ಲಿ ಜೈಲು ಮತ್ತು ಗೃಹರಕ್ಷಕ ದಳದ ಸಚಿವರಾಗಿ ಅತ್ಯಂತ ಕಿರಿಯ ವಯಸ್ಸಿಗೆ ಮಂತ್ರಿಯಾದರು.
ಜೈಂಟ್ ಕಿಲ್ಲರ್ ಪಟ್ಟ: ೧೯೯೯
ಸಾಹಸಕ್ಕೆ ಹೆಸರಾಗಿದ್ದ ಡಿಕೆಶಿ ಅವರು ಸಾತನೂರು ಕ್ಷೇತ್ರದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಸೋಲಿಸಿ ರಾಜಕೀಯದಲ್ಲಿ 'ಜೈಂಟ್ ಕಿಲ್ಲರ್' ಆಗಿ ಹೊರಹೊಮ್ಮಿದರು. ಎಸ್.ಎಂ. ಕೃಷ್ಣ ಅವರ ಆಡಳಿತಾವಧಿಯಲ್ಲಿ ನಗರಾಭಿವೃದ್ಧಿ ಸಚಿವರಾಗಿ ಮೆಗಾ ಸಿಟಿ ಯೋಜನೆಗಳಿಗೆ ಚಾಲನೆ ನೀಡಿದರು.
ದೇವೇಗೌಡರ ಕುಟುಂಬಕ್ಕೆ ಮತ್ತೊಂದು ಆಘಾತ ೨೦೦೪:
ಕನಕಪುರ ಲೋಕಸಭಾ ಚುನಾವಣೆಯಲ್ಲಿ ಪತ್ರಕರ್ತೆ ತೇಜಸ್ವಿನಿ ಗೌಡ ಅವರನ್ನು ಕಣಕ್ಕಿಳಿಸಿ, ಹೆಚ್.ಡಿ. ದೇವೇಗೌಡರ ವಿರುದ್ಧ ಕಾಂಗ್ರೆಸ್ ಗೆಲ್ಲುವಂತೆ ಮಾಡುವಲ್ಲಿ ಪ್ರಮುಖ ತಂತ್ರಗಾರಿಕೆ ರೂಪಿಸಿದರು.
ಪಕ್ಷದ 'ಟ್ರಬಲ್ ಶೂಟರ್' ಉಗಮ: ೨೦೧೭
ಗುಜರಾತ್ ಕಾಂಗ್ರೆಸ್ನ 42 ಶಾಸಕರನ್ನು ಬಿಜೆಪಿಯ ಆಪರೇಷನ್ ಕಮಲದಿಂದ ರಕ್ಷಿಸಲು ಬೆಂಗಳೂರಿನ ರೆಸಾರ್ಟ್ನಲ್ಲಿ ಆಶ್ರಯ ನೀಡಿ, ಅಹಮದ್ ಪಟೇಲ್ ಅವರ ರಾಜ್ಯಸಭಾ ಗೆಲುವನ್ನು ಖಾತ್ರಿಪಡಿಸಿದರು. ಇಲ್ಲಿಂದ ಅವರು ರಾಷ್ಟ್ರೀಯ ಮಟ್ಟದ ಬಿಕ್ಕಟ್ಟು ನಿರ್ವಹಣೆಯ ಮಾಸ್ಟರ್ ಆದುದ್ದಲ್ಲದೆ ಕಾಂಗ್ರೆಸ್ ರಕ್ಷಕರಾಗಿ ಡಿ.ಕೆ ಶಿವಕುಮಾರ್ ಹೊರಹೊಮ್ಮಿದರು.
ತಿಹಾರ್ ಜೈಲು ವಾಸ ಮತ್ತು ಭವ್ಯ ಪುನರಾಗಮನ ೨೦೧೯:
ಐಟಿ ಮತ್ತು ಇಡಿ ತನಿಖೆಗಳ ಹಿನ್ನೆಲೆಯಲ್ಲಿ 50 ದಿನಗಳ ಕಾಲ ದೆಹಲಿಯ ತಿಹಾರ್ ಜೈಲಿನಲ್ಲಿ ಇರಬೇಕಾಗಿ ಬಂತು. ಜೈಲಿನಿಂದ ವಾಪಸ್ ಬಂದಾಗ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಜನಸಾಗರವೇ ಹರಿದು ಬಂದು, ಇವರನ್ನು ಪ್ರಾದೇಶಿಕ ನಾಯಕನನ್ನಾಗಿ ಸ್ವೀಕರಿಸಿತು.
ಕೆಪಿಸಿಸಿ ಅಧ್ಯಕ್ಷ ಪಟ್ಟ ಮತ್ತು ಐತಿಹಾಸಿಕ ಜಯ ೨೦೨೦ – ೨೦೨೩: ೨೦೨೦ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು, ಕೊರೋನಾ ಹಾಗೂ ಕಠಿಣ ಸಂದರ್ಭಗಳಲ್ಲೂ ಪಕ್ಷವನ್ನು ಮುನ್ನಡೆಸಿದರು. ೨೦೨೩ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ಜೊತೆಗೂಡಿ ೧೩೫ ಸೀಟುಗಳ ಭರ್ಜರಿ ಬಹುಮತದೊಂದಿಗೆ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದರು.
ಅಧಿಕಾರ ಹಂಚಿಕೆಯ ಸೂತ್ರ ಮತ್ತು ಸುದೀರ್ಘ ಕಾಯುವಿಕೆ:
೨೦೨೩ರ ಭರ್ಜರಿ ಗೆಲುವಿನ ನಂತರ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪ್ರಬಲ ಪೈಪೋಟಿ ನಡೆದಿತ್ತು. ಆದರೆ ಪಕ್ಷದ ಹಿತದೃಷ್ಟಿಯಿಂದ ಹೈಕಮಾಂಡ್ ಆದೇಶಕ್ಕೆ ತಲೆಬಾಗಿ, ಉಪಮುಖ್ಯಮಂತ್ರಿಯಾಗಿ (ಜೊತೆಗೆ ಬೆಂಗಳೂರು ನಗರಾಭಿವೃದ್ಧಿ ಮತ್ತು ಜಲಸಂಪನ್ಮೂಲ ಸಚಿವರಾಗಿ) ಜವಾಬ್ದಾರಿ ವಹಿಸಿಕೊಂಡರು. ಅಂದಿನಿಂದ ಆಡಳಿತದಲ್ಲಿ ತಮ್ಮದೇ ಆದ ದಕ್ಷ ಮುದ್ರೆ ಒತ್ತುತ್ತಾ ಬಂದರು.
ರಾಜಕೀಯದ ಏರಿಳಿತಗಳು, ವೈಯಕ್ತಿಕ ಸವಾಲುಗಳು ಹಾಗೂ ಕಾನೂನು ಹೋರಾಟಗಳ ನಡುವೆಯೂ ಕಗ್ಗಲ್ಲಿನಂತೆ ನಿಂತ ಕಾರಣಕ್ಕಾಗಿಯೇ ಇವರನ್ನು ಅಭಿಮಾನಿಗಳು ‘ಕನಕಪುರ ಬಂಡೆ’ ಎಂದು ಕರೆಯುತ್ತಾರೆ. ನಿರಂತರ ಪರಿಶ್ರಮ ಮತ್ತು ಪಕ್ಷನಿಷ್ಠೆಯೇ ಇವರನ್ನು ಇಂದಿನ ಉನ್ನತ ಸ್ಥಾನಕ್ಕೆ ತಂದು ನಿಲ್ಲಿಸಿದೆ.



