ಚಂದ್ರವಳ್ಳಿ ನ್ಯೂಸ್, ಕಲಬುರಗಿ:
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬೇಜವಾಬ್ದಾರಿತನ ಹಾಗೂ ರಾಜ್ಯ ಸರ್ಕಾರದ ಆಡಳಿತ ವೈಫಲ್ಯವನ್ನು ಬಿಚ್ಚಿಡುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಹೆಡ್ಲೈಟ್ಗಳು ಕೆಟ್ಟುಹೋಗಿದ್ದ ಬಸ್ಒಂದರಲ್ಲಿ, ಚಾಲಕನಿಗೆ ರಸ್ತೆ ಕಾಣಲೆಂದು ಕಂಡಕ್ಟರ್ ತನ್ನ ಮೊಬೈಲ್ ಫೋನ್ ಟಾರ್ಚ್ ಹಿಡಿದು ದಾರಿ ತೋರಿಸಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಜೀವ ಕೈಯಲ್ಲಿಡಿದು ಪ್ರಯಾಣಿಸಿದ ಪ್ರಯಾಣಿಕರು:
ಕಲಬುರಗಿ ನಗರದಿಂದ ಸುಮಾರು 90 ಕಿಲೋಮೀಟರ್ ದೂರದಲ್ಲಿರುವ ಚಿಂಚೋಳಿಗೆ ಹೊರಟಿದ್ದ ಈ ಬಸ್ನಲ್ಲಿ ಘಟನೆ ನಡೆದಿದೆ. ಇದು ಈ ಮಾರ್ಗದ ದಿನದ ಕೊನೆಯ ಬಸ್ ಸೇವೆಯಾಗಿದ್ದರಿಂದ ಪ್ರಯಾಣಿಕರಿಗೆ ಬೇರೆ ದಾರಿಯಿರಲಿಲ್ಲ. ಕತ್ತಲೆಯ ರಸ್ತೆಯಲ್ಲಿ ಹೆಡ್ಲೈಟ್ ಇಲ್ಲದ ಬಸ್ಸನ್ನು ಚಾಲಕ ಚಲಾಯಿಸುತ್ತಿದ್ದರೆ, ನಿರ್ವಾಹಕ ಕಿಟಕಿಯ ಪಕ್ಕ ನಿಂತು ಮೊಬೈಲ್ ಟಾರ್ಚ್ ಆನ್ ಮಾಡಿ ದಾರಿ ತೋರಿಸುತ್ತಿರುವುದು ವೈರಲ್ ವಿಡಿಯೋದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ.
ಪ್ರಯಾಣದ ಮಧ್ಯದಲ್ಲಿ ಲೈಟ್ ಕೈಕೊಟ್ಟಿತೇ ಅಥವಾ ಮೊದಲೇ ಕೆಟ್ಟಿತ್ತೇ ಎಂಬುದು ಅಧಿಕೃತವಾಗಿ ತಿಳಿದುಬಂದಿಲ್ಲವಾದರೂ, ಕೇವಲ ಮೊಬೈಲ್ ಬೆಳಕಿನಲ್ಲೇ ಬಸ್ಸನ್ನು ಸುರಕ್ಷಿತವಾಗಿ ಗಮ್ಯಸ್ಥಾನ ತಲುಪಿಸಿದ ಚಾಲಕ ಮತ್ತು ನಿರ್ವಾಹಕನ ಸಮಯಪ್ರಜ್ಞೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯದ ಆರೋಪ:
ಮತ್ತೊಂದು ಮೂಲಗಳ ಪ್ರಕಾರ, ಈ ಬಸ್ನ ಹೆಡ್ಲೈಟ್ ಕೆಟ್ಟು ಹಲವು ದಿನಗಳೇ ಉರುಳಿವೆ. ಡಿಪೋ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರತಿದಿನ ರಾತ್ರಿ ಈ ಬಸ್ನ ಕಂಡಕ್ಟರ್ ಮೊಬೈಲ್ ಟಾರ್ಚ್ ಮೂಲಕವೇ ಚಾಲಕನಿಗೆ ದಾರಿ ತೋರಿಸುತ್ತಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಇದು ನಿಜವೇ ಆಗಿದ್ದಲ್ಲಿ, ಪ್ರಯಾಣಿಕರ ಪ್ರಾಣದ ಜೊತೆ ಸಾರಿಗೆ ಇಲಾಖೆ ಭೀಕರ ಚೆಲ್ಲಾಟವಾಡುತ್ತಿರುವುದು ಸ್ಪಷ್ಟವಾಗುತ್ತದೆ.
"ಇದು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಆಡಳಿತದ ದುಸ್ಥಿತಿ": ಜೆಡಿಎಸ್ ತೀವ್ರ ವಾಗ್ದಾಳಿ
ಈ ಗಂಭೀರ ಲೋಪದ ವಿರುದ್ಧ ಎಕ್ಸ್ (ಟ್ವಿಟರ್) ಖಾತೆಯಲ್ಲಿ ತೀವ್ರವಾಗಿ ಕಿಡಿಕಾರಿರುವ ಪ್ರತಿಪಕ್ಷ ಜೆಡಿಎಸ್, ಇದನ್ನು ಸರ್ಕಾರದ ಆಡಳಿತ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ ಎಂದು ಕರೆದಿದೆ.
ಮಲತಾಯಿ ಧೋರಣೆ: "ಕಲ್ಯಾಣ ಕರ್ನಾಟಕ ಭಾಗದ ಬಗ್ಗೆ ರಾಜ್ಯ ಕಾಂಗ್ರೆಸ್ಸರ್ಕಾರಕ್ಕೆ ಇಷ್ಟೊಂದು ಮಲತಾಯಿ ಧೋರಣೆ ಏಕೆ? ಕೆಕೆಆರ್ಡಿಬಿ ಅನುದಾನದಲ್ಲಿ ಖರೀದಿಸಿದ ಹೊಸ ಬಸ್ಸುಗಳನ್ನು ಬೇರೆಡೆಗೆ ನೀಡಿ, ಗುಜರಿಗೆ ಸೇರಬೇಕಾದ ಬಸ್ಸುಗಳನ್ನು ಚಿಂಚೋಳಿ ಭಾಗಕ್ಕೆ ಬಿಡಲಾಗಿದೆ" ಎಂದು ಜೆಡಿಎಸ್ ಆಕ್ರೋಶ ಹೊರಹಾಕಿದೆ.
ಸಚಿವರ ವಿರುದ್ಧ ಅಸಮಾಧಾನ: "ಸಾರಿಗೆ ಸಚಿವರು ಕೇವಲ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆಯೇ ಹೊರತು ಜನಸಾಮಾನ್ಯರ ಸುರಕ್ಷತೆಯ ಬಗ್ಗೆ ಕಿಂಚಿತ್ತೂ ಕಾಳಜಿ ತೋರುತ್ತಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು, ಈ ಭಾಗಕ್ಕೆ ಸುಸ್ಥಿತಿಯಲ್ಲಿರುವ ಬಸ್ಸುಗಳನ್ನು ಒದಗಿಸಬೇಕು" ಎಂದು ಜೆಡಿಎಸ್ ಆಗ್ರಹಿಸಿದೆ.
ಯಾವುದೇ ದೊಡ್ಡ ಅನಾಹುತ ಸಂಭವಿಸುವ ಮುನ್ನ ಸಾರಿಗೆ ಇಲಾಖೆ ಎಚ್ಚೆತ್ತುಕೊಂಡು, ನಿತ್ಯ ಸಂಚರಿಸುವ ಎಲ್ಲಾ ಬಸ್ಸುಗಳ ಫಿಟ್ನೆಸ್ ತಪಾಸಣೆ ನಡೆಸಿ ಹೆಡ್ಲೈಟ್ಗಳನ್ನು ಸರಿಪಡಿಸಲಿ ಎಂಬುದೇ ಸಾರ್ವಜನಿಕರ ಒತ್ತಾಯವಾಗಿದೆ.



