ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ ಎಂದೇ ಖ್ಯಾತಿಯಾಗಿದ್ದರೂ ಮೂಲಸೌಕರ್ಯಗಳ ವಿಚಾರದಲ್ಲಿ ಜನರ ನಿರೀಕ್ಷೆಗಳನ್ನು ತಲುಪದ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಈಗ ಹೊಸ ಚಾಲನೆ ಸಿಗಬೇಕಿದೆ. ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ನೂತನ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ಕೃಷ್ಣ ಬೈರೇಗೌಡ ಅವರನ್ನು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಭೇಟಿ ಮಾಡಿ, ನಗರದ ಸುಧಾರಣೆಗೆ ಸಂಬಂಧಿಸಿದಂತೆ 15 ಪ್ರಮುಖ ಅಂಶಗಳ ಬೇಡಿಕೆ ಪತ್ರವನ್ನು ಸಲ್ಲಿಸಿದ್ದಾರೆ.
ರಾಜ್ಯ ಸರ್ಕಾರದ ಮೂವತ್ತಕ್ಕೂ ಹೆಚ್ಚು ಹಳೆಯ ಯೋಜನೆಗಳು ಬಾಕಿ ಉಳಿದಿದ್ದು, ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮೊದಲು ಇವುಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದು ಸಂಸದರು ಮನವಿ ಮಾಡಿದ್ದಾರೆ. ಅಲ್ಲದೆ, ನಗರದ ಜನರ ಜೀವನ ಮಟ್ಟ ಸುಧಾರಿಸುವ ಯೋಜನೆಗಳಿಗೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಶೇ 100 ರಷ್ಟು ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ.
ರಸ್ತೆ ಗುಂಡಿ ನಿರ್ವಹಣೆಯಲ್ಲಿ ಭ್ರಷ್ಟಾಚಾರದ ಆರೋಪ: ಶ್ವೇತಪತ್ರಕ್ಕೆ ಬಿಗಿಪಟ್ಟು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಾವಿರಾರು ಕೋಟಿ ರೂಪಾಯಿಗಳನ್ನು ರಸ್ತೆ ಗುಂಡಿ ಮುಚ್ಚಲು ವ್ಯಯಿಸಿದೆ ಎಂದು ಹೇಳಿಕೊಳ್ಳುತ್ತಿದ್ದರೂ, ನಗರದ ರಸ್ತೆಗಳ ಸ್ಥಿತಿ ಸುಧಾರಿಸಿಲ್ಲ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಮಾಹಿತಿ ಪ್ರಕಾರ ಗುಂಡಿಗಳಿಗೆ ಬಿದ್ದು ಸಾಯುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ತೇಜಸ್ವಿ ಸೂರ್ಯ ಕಳವಳ ವ್ಯಕ್ತಪಡಿಸಿದ್ದಾರೆ.
ರಸ್ತೆ ಗುಂಡಿಗಳ ಹೆಸರಲ್ಲಿ ನಡೆದಿರುವ ಹಣದ ವೆಚ್ಚದ ಗೊಂದಲದ ಅಂಕಿ-ಅಂಶಗಳು ಹೀಗಿವೆ.
ಡಿಸೆಂಬರ್ 2023: ಬಿಬಿಎಂಪಿಯಲ್ಲಿ ಗುಂಡಿ ಮುಚ್ಚಲು ₹7 ಕೋಟಿ ವ್ಯಯಿಸಲಾಯಿತು. ಆದರೆ ಡಿಸೆಂಬರ್ 2024ರ ವೇಳೆಗೆ ಶೇ 63ರಷ್ಟು ಗುಂಡಿಗಳು ಹೆಚ್ಚಾದವು ಎಂದು ವಿಧಾನ ಪರಿಷತ್ನಲ್ಲೇ ಹೇಳಲಾಗಿತ್ತು.
ಆಗಸ್ಟ್ 2025: ಬಿಬಿಎಂಪಿ ಮತ್ತೆ 12 ಕೋಟಿ ವೆಚ್ಚ ಮಾಡಿತು.
ಸೆಪ್ಟೆಂಬರ್ 2025: ರಸ್ತೆ ಗುಂಡಿ ಮುಚ್ಚಲು 750 ಕೋಟಿ ಹಾಗೂ ನಂತರ 1100 ಕೋಟಿ ಅನುದಾನ ಘೋಷಿಸಲಾಯಿತು.
ಜಿಬಿಎ ರಚನೆ ಹಾಗೂ ನೂತನ ಸಚಿವರ ಅವಧಿ: ಜಿಬಿಎ ರಚನೆ ಬಳಿಕ ₹2200 ಕೋಟಿ, ವೈಟ್ ಟಾಪಿಂಗ್ಗೆ ಪ್ರತ್ಯೇಕ ಹಣ ಹಾಗೂ ಹೊಸ ನಗರಾಭಿವೃದ್ಧಿ ಸಚಿವರಿಂದ 2000 ಕೋಟಿ ಘೋಷಣೆಯಾಗಿದೆ.
ಸಂಸದರ ಪ್ರಶ್ನೆ: "ಐದೂವರೆ ಸಾವಿರ ಕೋಟಿಗೂ ಹೆಚ್ಚು ಹಣ ವ್ಯಯಿಸಿ ರಸ್ತೆ ಮಾಡಿದ ಮೇಲೂ ಒಂದೇ ವರ್ಷದಲ್ಲಿ ಇಷ್ಟೊಂದು ಸಾವಿರಾರು ಕೋಟಿ ರೂಪಾಯಿಗಳನ್ನು ರಸ್ತೆ ಗುಂಡಿ ಮುಚ್ಚಲು ಘೋಷಿಸಲಾಗಿದೆ. ಹಾಗಾದರೆ ಈ ತೆರಿಗೆದಾರರ ಹಣ ಎಲ್ಲಿ ಹೋಗುತ್ತಿದೆ? ರಸ್ತೆ ಗುಂಡಿ ದುರಸ್ತಿಗೆ ಕಳೆದ ಮೂರು ವರ್ಷಗಳಲ್ಲಿ ಎಷ್ಟು ಹಣ ವ್ಯಯಿಸಲಾಗಿದೆ ಎಂಬುದರ ಬಗ್ಗೆ 30 ದಿನಗಳ ಒಳಗಾಗಿ ಸರ್ಕಾರ ಶ್ವೇತಪತ್ರ ಬಿಡುಗಡೆ ಮಾಡಬೇಕು."
ಏಜೆನ್ಸಿಗಳ ನಡುವೆ ಸಮನ್ವಯತೆ ಹಾಗೂ 'ಲೈವ್ ಡ್ಯಾಶ್ಬೋರ್ಡ್':
ಬೆಂಗಳೂರಿನಲ್ಲಿ BMRCL, BDA, BMLTA, KRIDL ಸೇರಿದಂತೆ 12ಕ್ಕೂ ಹೆಚ್ಚು ಮೂಲಸೌಕರ್ಯ ಏಜೆನ್ಸಿಗಳಿದ್ದರೂ ಇವುಗಳ ನಡುವೆ ಪರಸ್ಪರ ಸಮನ್ವಯತೆಯ ಕೊರತೆಯಿದೆ.
BMLTA ನೋಡಲ್ ಏಜೆನ್ಸಿ: ಸಮನ್ವಯ ಸಾಧಿಸಲು ಬಿಎಂಎಲ್ಟಿಎಗೆ ತಕ್ಷಣವೇ ಅಧ್ಯಕ್ಷರನ್ನು ನೇಮಕ ಮಾಡಿ, ಅದನ್ನು ನೋಡಲ್ ಏಜೆನ್ಸಿಯನ್ನಾಗಿ ಮಾಡಬೇಕು.
ಲೈವ್ ಡ್ಯಾಶ್ಬೋರ್ಡ್: ಬಿಡಿಎ, ಬಿಎಂಆರ್ಸಿಎಲ್ನಲ್ಲಿ ಯಾವ ಕೆಲಸ ನಡೆಯುತ್ತಿದೆ ಎಂಬುದರ ಸಂಪೂರ್ಣ ಮಾಹಿತಿ ನೀಡುವ 'ಲೈವ್ ಡ್ಯಾಶ್ಬೋರ್ಡ್' ಅನ್ನು 2 ತಿಂಗಳೊಳಗೆ ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು. ಇದರಿಂದ ನಾಗರಿಕರಿಗೆ ತಮ್ಮ ತೆರಿಗೆ ಹಣ ಎಲ್ಲಿ ಬಳಕೆಯಾಗುತ್ತಿದೆ ಎಂಬುದು ತಿಳಿಯುತ್ತದೆ.
ಮೆಟ್ರೋ ಕಾಮಗಾರಿ ವಿಳಂಬ ಹಾಗೂ ಅವಧಿ ಬದಲಾವಣೆಗೆ ಬೇಡಿಕೆ:
ಕಳೆದ ನಾಲ್ಕೂವರೆ ವರ್ಷಗಳಿಂದ ಯಾವುದೇ ಹೊಸ ಮೆಟ್ರೋ ಕಾಮಗಾರಿ ಆರಂಭವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಸೂರ್ಯ, ಮೆಟ್ರೋ ವ್ಯವಸ್ಥೆಯಲ್ಲಿ ಕೆಲವು ಪ್ರಮುಖ ಬದಲಾವಣೆಗಳಿಗೆ ಒತ್ತಾಯಿಸಿದ್ದಾರೆ.
ಟೆಂಡರ್ ವಿಳಂಬ: ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರುವ ಮೆಟ್ರೋ ಮೂರನೇ ಹಂತದ 'ಆರೆಂಜ್ ಮಾರ್ಗ'ಕ್ಕೆ ಎರಡು ವರ್ಷ ಕಳೆದರೂ ರಾಜ್ಯ ಸರ್ಕಾರ ಟೆಂಡರ್ ಕರೆದಿಲ್ಲ, ಇದರಿಂದ ಯೋಜನಾ ವೆಚ್ಚ ಹೆಚ್ಚುತ್ತಿದೆ.
ಪ್ಲಾಟ್ಫಾರ್ಮ್ ಉದ್ದ ಕಡಿತಕ್ಕೆ ವಿರೋಧ: ವೆಚ್ಚ ಕಡಿಮೆ ಮಾಡುವ ನೆಪದಲ್ಲಿ ಭೂಗತ ಮೆಟ್ರೋ ನಿಲ್ದಾಣಗಳ ಪ್ಲಾಟ್ಫಾರ್ಮ್ ಉದ್ದವನ್ನು ಕಡಿಮೆ ಮಾಡಲಾಗುತ್ತಿದೆ. ಇದರಿಂದ ಭವಿಷ್ಯದಲ್ಲಿ 8 ಬೋಗಿಗಳ ಬದಲು ಕೇವಲ 6 ಬೋಗಿಗಳ ಮೆಟ್ರೋ ರೈಲುಗಳನ್ನಷ್ಟೇ ನಿಲ್ಲಿಸಬಹುದಾಗಿದ್ದು, ಇದು ದೂರದೃಷ್ಟಿಯಿಲ್ಲದ ನಿರ್ಧಾರವಾಗಿದೆ.
ಬೆಳಗ್ಗೆ 5ಕ್ಕೆ ಸಂಚಾರ ಆರಂಭ: ಹೊರಗಿನಿಂದ ಬಂದು ನಗರದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಅನುಕೂಲವಾಗುವಂತೆ ಪ್ರತಿದಿನ ಬೆಳಗ್ಗೆ 5 ಗಂಟೆಗೆ ಮೆಟ್ರೋ ಸಂಚಾರ ಆರಂಭಿಸಬೇಕು.
ಕೇಂದ್ರದ ಅನುದಾನ ಬಳಕೆಯಲ್ಲಿ ರಾಜ್ಯದ ಉದಾಸೀನತೆ:
ಕೇಂದ್ರ ಸರ್ಕಾರ ಬಜೆಟ್ನಲ್ಲಿ ಘೋಷಿಸಿರುವ ಅರ್ಬನ್ ಚಾಲೆಂಜ್ ಫಂಡ್ ಅಡಿಯಲ್ಲಿ 1 ಲಕ್ಷ ಕೋಟಿ ಮೀಸಲಿಡಲಾಗಿದೆ. ಆದರೆ ಕರ್ನಾಟಕ ಸರ್ಕಾರದಿಂದ ಈ ಯೋಜನೆಗೆ ಹಣ ಪಡೆಯಲು ಇದುವರೆಗೆ ಯಾವುದೇ ಸರಿಯಾದ ಪ್ರಸ್ತಾವನೆ ಸಲ್ಲಿಕೆಯಾಗಿಲ್ಲ ಎಂದು ಸೂರ್ಯ ಬಹಿರಂಗಪಡಿಸಿದ್ದಾರೆ.
ಅಲ್ಲದೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ ನಗರದ ಬಾಡಿಗೆದಾರರಿಗೆ ನೆರವಾಗಲು ಜಾರಿಗೆ ತಂದ ಯೋಜನೆಯಡಿ, ಹೊಸ ಸರ್ಕಾರ ಬಂದ ಮೇಲೆ ಒಂದೇ ಒಂದು ಮನೆಯನ್ನೂ ಕಟ್ಟಿಲ್ಲ ಮತ್ತು ಅರ್ಜಿಗಳನ್ನೂ ಆಹ್ವಾನಿಸಿಲ್ಲ ಎಂದು ಅವರು ದೂರಿದ್ದಾರೆ. ಇದರೊಂದಿಗೆ ನಗರದ ಕುಡಿಯುವ ನೀರಿನ ಸಮಸ್ಯೆ, ಕೆರೆಗಳ ಸಂರಕ್ಷಣೆ, ಅಂತರ್ಜಲ ವೃದ್ಧಿ ಹಾಗೂ ಜಿಬಿಎ ಪಾಲಿಕೆಗಳಲ್ಲಿ ಖಾಲಿ ಇರುವ ಎಂಜಿನಿಯರ್ ಹಾಗೂ ಸಿಬ್ಬಂದಿಗಳ ನೇಮಕಾತಿಯನ್ನು ಶೀಘ್ರವಾಗಿ ಮಾಡಬೇಕೆಂದು ಸಂಸದ ತೇಜಸ್ವಿ ಸೂರ್ಯ ಸಚಿವರಿಗೆ ಆಗ್ರಹಿಸಿದ್ದಾರೆ.



