ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ನಾಗರಿಕರ ಕುಂದುಕೊರತೆಗಳ ನಿವಾರಣೆ ಹಾಗೂ ಆಡಳಿತದಲ್ಲಿ ಹೆಚ್ಚಿನ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ‘ಪ್ರಜಾಸೇವೆ’ ಹೆಸರಿನ ಹೊಸ ಸಚಿವಾಲಯವನ್ನು ಸ್ಥಾಪಿಸಲು ಅನುಮೋದನೆ ನೀಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅವರು, ನಾಗರಿಕ ಕೇಂದ್ರಿತ ಆಡಳಿತವನ್ನು ಬಲಪಡಿಸಲು ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಈ ಸಚಿವಾಲಯ ಸಹಕಾರಿಯಾಗಲಿದೆ ಎಂದಿದ್ದಾರೆ.
ಹೊಸ ಸಚಿವಾಲಯದ ಮುಖ್ಯ ಉದ್ದೇಶಗಳು:
ಸಮಗ್ರ ಕುಂದುಕೊರತೆ ನಿರ್ವಹಣೆ: ಸಾರ್ವಜನಿಕರ ದೂರುಗಳನ್ನು ಒಂದೇ ಸೂರಿನಡಿ ನಿರ್ವಹಿಸುವುದು.
ಸಮಯಮಿತಿ ಪರಿಹಾರ: ಸಾರ್ವಜನಿಕರ ಸಮಸ್ಯೆಗಳಿಗೆ ನಿರ್ದಿಷ್ಟ ಕಾಲಮಿತಿಯೊಳಗೆ ಸೂಕ್ತ ಪರಿಹಾರ ಒದಗಿಸುವುದು.
ಸರಳೀಕರಣ: ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಸುಲಭಗೊಳಿಸಿ ಸಾರ್ವಜನಿಕರಿಗೆ ಅನಗತ್ಯ ಅಲೆದಾಟ ತಪ್ಪಿಸುವುದು.
ಜನರ ಪ್ರತಿಕ್ರಿಯೆ: ಸರ್ಕಾರದ ಸೇವೆಗಳ ಕುರಿತು ಸಾರ್ವಜನಿಕರ ಅಭಿಪ್ರಾಯ ಪಡೆದು, ಆಡಳಿತದಲ್ಲಿ ಸುಧಾರಣೆ ತರುವುದು.
ಇ-ಆಡಳಿತ ಇಲಾಖೆಯಿಂದ ತಾಂತ್ರಿಕ ಬೆಂಬಲ:
ಈ ಮಹತ್ವಾಕಾಂಕ್ಷಿ ಯೋಜನೆಗೆ ಇ-ಆಡಳಿತ ಇಲಾಖೆಯು ಸಂಪೂರ್ಣ ತಾಂತ್ರಿಕ ನೆರವು ನೀಡಲಿದೆ. ಇದಕ್ಕಾಗಿ ಪ್ರಮುಖವಾಗಿ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
"ತಂತ್ರಜ್ಞಾನದ ಸಮರ್ಪಕ ಬಳಕೆ ಮತ್ತು ಜವಾಬ್ದಾರಿಯುತ ಸಂಸ್ಥೆಗಳ ಮೂಲಕ ಜನಕೇಂದ್ರಿತ ಆಡಳಿತವನ್ನು ಬಲಪಡಿಸುವುದು ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ."
ಪ್ರಿಯಾಂಕ್ ಖರ್ಗೆ, ಸಚಿವರು
iPGRS 2.0 ಅಭಿವೃದ್ಧಿ: ಸಾರ್ವಜನಿಕ ಕುಂದುಕೊರತೆ ನಿವಾರಣೆಗಾಗಿ ಸುಧಾರಿತ ಇಂಟಿಗ್ರೇಟೆಡ್ ಪಬ್ಲಿಕ್ ಗ್ರೀವೆನ್ಸ್ ರಿಡ್ರೆಸಲ್ ಸಿಸ್ಟಮ್ (iPGRS 2.0) ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗುವುದು.
ಡಿಜಿಟಲ್ ವ್ಯವಸ್ಥೆ: ಎಲ್ಲಾ ಇಲಾಖೆಗಳಲ್ಲಿ ಈ ಸೇವೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಲು ಅಗತ್ಯವಿರುವ ಡಿಜಿಟಲ್ ಮೂಲಸೌಕರ್ಯಗಳನ್ನು ಒದಗಿಸಲಾಗುವುದು.
ಈ ಹೊಸ ಸಚಿವಾಲಯದ ಸ್ಥಾಪನೆಯಿಂದಾಗಿ ರಾಜ್ಯದ ಪ್ರತಿಯೊಬ್ಬ ನಾಗರಿಕನ ಧ್ವನಿಗೂ ಸರ್ಕಾರದಲ್ಲಿ ಶೀಘ್ರ ಮತ್ತು ಸೂಕ್ತ ಸ್ಪಂದನೆ ಸಿಗುವ ನಿರೀಕ್ಷೆಯಿದೆ.



