ಚಂದ್ರವಳ್ಳಿ ನ್ಯೂಸ್, ನವದೆಹಲಿ:
ದೈನಂದಿನ ಅಗತ್ಯ ವಸ್ತುಗಳ ಅತಿಯಾದ ಬೆಲೆ ಏರಿಕೆಯನ್ನು ಖಂಡಿಸಿ, ಕೇಂದ್ರದ ಆಡಳಿತಾರೂಢ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಬುಧವಾರ ತೀವ್ರ ವಾಗ್ದಾಳಿ ನಡೆಸಿದೆ. ಬಿಜೆಪಿ ನೀಡಿದ್ದ 'ಅಚ್ಛೇ ದಿನ'ದ ಭರವಸೆ ಹುಸಿಯಾಗಿದ್ದು, ನಿರಂತರ ಬೆಲೆ ಏರಿಕೆಯು ಜನಸಾಮಾನ್ಯರ ಹಾಗೂ ಮಧ್ಯಮ ವರ್ಗದ ಕುಟುಂಬ ಬಜೆಟ್ಅನ್ನು ಸಂಪೂರ್ಣವಾಗಿ ಹಾಳುಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಕುರಿತು ಧ್ವನಿ ಎತ್ತಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, "ಸರ್ಕಾರವು ಅರ್ಥಹೀನ ಮಾತುಗಳು ಹಾಗೂ ಜನರ ಗಮನ ಬೇರೆಡೆ ಸೆಳೆಯುವ ತಂತ್ರಗಳ ಮೂಲಕ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿದೆ. ಆದರೆ, ಬೆಲೆ ಏರಿಕೆ ಕುರಿತು ಕಾಂಗ್ರೆಸ್ ಮತ್ತು ದೇಶದ ಜನತೆ ಸರ್ಕಾರವನ್ನು ಪ್ರಶ್ನಿಸುವುದನ್ನು ನಿಲ್ಲಿಸುವುದಿಲ್ಲ," ಎಂದು ಎಚ್ಚರಿಸಿದ್ದಾರೆ.
ಈರುಳ್ಳಿ: ಕಳೆದ ಒಂದು ವರ್ಷದಲ್ಲಿ ಈರುಳ್ಳಿ ಬೆಲೆ ಶೇ.59ರಷ್ಟು ಏರಿಕೆಯಾಗಿದ್ದು, ಹಲವು ನಗರಗಳಲ್ಲಿ ಕೆ.ಜಿ.ಗೆ ರೂ.50–60ಕ್ಕೆ ಮಾರಾಟವಾಗುತ್ತಿದೆ.
ಸಕ್ಕರೆ: ಸಕ್ಕರೆ ಬೆಲೆ ಕೆ.ಜಿ.ಗೆ ರೂ.60–70ರಷ್ಟಿದ್ದು, ಕೆಲವು ಕಡೆಗಳಲ್ಲಿ ರೂ.72ರ ಗಡಿ ದಾಟಿದೆ.
ಸಾಸಿವೆ ಎಣ್ಣೆ: ಅಡುಗೆಗೆ ಬಳಸುವ ಸಾಸಿವೆ ಎಣ್ಣೆ ಲೀಟರ್ಗೆ ರೂ.200ಕ್ಕಿಂತ ಹೆಚ್ಚಾಗಿದೆ.
ಹಣದುಬ್ಬರ ದರ: ಪ್ರಸ್ತುತ ಆಹಾರ ಹಣದುಬ್ಬರ ಶೇ.5.52 ಹಾಗೂ ಸಗಟು ಹಣದುಬ್ಬರ ಶೇ.9.78ರಷ್ಟಿದೆ.
ಬರಲಿರುವ ಹಬ್ಬದ ಋತುವಿನಲ್ಲಿ ಈ ರೀತಿ ಬೆಲೆಗಳು ಗಗನಕ್ಕೇರಿರುವುದು ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ದೈನಂದಿನ ಜೀವನವನ್ನು ದುಸ್ತರಗೊಳಿಸಿದೆ. ಬಿಜೆಪಿ ಅಧಿಕಾರಕ್ಕೆ ಬಂದು 12 ವರ್ಷಗಳಾಗಿದ್ದರೂ 'ಅಚ್ಛೇ ದಿನ'ದ ವಾಸ್ತವ ರೂಪ ಎಂದರೆ ಬೇಳೆಕಾಳು, ತರಕಾರಿ, ಎಣ್ಣೆ ಮತ್ತು ಸಕ್ಕರೆಯ ಬೆಲೆಗಳು ಜನಸಾಮಾನ್ಯರ ಜೇಬಿಗೆ ಕನ್ನ ಹಾಕ್ತಿರುವುದು ಮಾತ್ರ ಎಂದು ಖರ್ಗೆ ವ್ಯಂಗ್ಯವಾಡಿದ್ದಾರೆ.
ಅಗತ್ಯ ವಸ್ತುಗಳ ಬೆಲೆ ನಿಯಂತ್ರಣದಲ್ಲಿ ಮೋದಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದಿರುವ ಕಾಂಗ್ರೆಸ್, ಈ ಬೆಲೆ ಏರಿಕೆಯ ಬಿಸಿ ಮತ್ತು ಸರ್ಕಾರದ ವೈಫಲ್ಯವನ್ನು ದೇಶದ ಮತದಾರರು ಎಂದಿಗೂ ಮರೆಯುವುದಿಲ್ಲ ಎಂದು ಎಚ್ಚರಿಸಿದೆ.



