ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇತ್ತೀಚಿಗೆ ಮುಕ್ತಾಯಗೊಂಡ ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡಮತದಾನದ (ಕ್ರಾಸ್ ವೋಟಿಂಗ್) ಆಘಾತದಿಂದ ಕಂಗೆಟ್ಟಿರುವ ರಾಜ್ಯ ಬಿಜೆಪಿ ನಾಯಕರು, ಇದೀಗ 'ವಿಶ್ವಾಸದ್ರೋಹಿ'ಗಳ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ. ಈ ಇಡೀ ಬೆಳವಣಿಗೆಯ ಕುರಿತು ಪಕ್ಷದ ಹೈಕಮಾಂಡ್ಗೆ ಸಂಪೂರ್ಣ ವರದಿ ಸಲ್ಲಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಂಗಳವಾರ ದೆಹಲಿಗೆ ತೆರಳುತ್ತಿದ್ದಾರೆ. ದೆಹಲಿಯಲ್ಲಿ ಅವರು ಪಕ್ಷದ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಆರ್. ಅಶೋಕ್, ಅಡ್ಡಮತದಾನದ ಸತ್ಯಾಸತ್ಯತೆ ತಿಳಿಯಲು ಧರ್ಮಸ್ಥಳದಲ್ಲಿ 'ಆಣೆ-ಪ್ರಮಾಣ' ಮಾಡಿಸುವ ವಿಜಯೇಂದ್ರ ಅವರ ಪ್ರಸ್ತಾಪಕ್ಕೆ ಪಕ್ಷದ ಹಿರಿಯ ನಾಯಕರಿಂದಲೇ ಅಪಸ್ವರ ಕೇಳಿಬಂದಿರುವ ಹಿನ್ನೆಲೆಯಲ್ಲಿ ಆ ನಿರ್ಧಾರದಿಂದ ಹಿಂದೆ ಸರಿಯುವ ಮುನ್ಸೂಚನೆ ನೀಡಿದ್ದಾರೆ.
ಇಂದು ದೆಹಲಿಯಲ್ಲಿ ಹೈಕಮಾಂಡ್ ಭೇಟಿ:
"ನಾಲ್ಕು ದಿನಗಳ ಹಿಂದೆಯೇ ನಾವು ರಾಷ್ಟ್ರೀಯ ನಾಯಕರ ಅಪಾಯಿಂಟ್ಮೆಂಟ್ ಕೋರಿದ್ದೆವು. ಮಂಗಳವಾರ ಮಧ್ಯಾಹ್ನ ನಮಗೆ ಸಮಯ ಸಿಕ್ಕಿದೆ. ಹೈಕಮಾಂಡ್ ನಮಗೆ ಸ್ವತಃ ಕರೆದಿಲ್ಲ, ನಾವೇ ಘಟನೆಯ ವಿವರ ನೀಡಲು ಹೋಗುತ್ತಿದ್ದೇವೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಇಬ್ಬರೂ ಅಭ್ಯರ್ಥಿಗಳು ಗೆದ್ದಿದ್ದರೂ, ನಮ್ಮದೇ ಕೆಲವು ಶಾಸಕರು ಪಕ್ಷಕ್ಕೆ ದ್ರೋಹ ಎಸಗಿರುವುದು ಸ್ಪಷ್ಟವಾಗಿದೆ. ಈ ಬಗ್ಗೆ ತನಿಖೆ ನಡೆಸಲು ರಚಿಸಲಾಗಿದ್ದ ಸಮಿತಿಯು ಇಂದು ಅಥವಾ ನಾಳೆಯೊಳಗೆ ವರದಿ ನೀಡಲಿದ್ದು, ಅದನ್ನು ಕೇಂದ್ರ ನಾಯಕರಿಗೆ ಹಸ್ತಾಂತರಿಸಲಿದ್ದೇವೆ" ಎಂದು ಅಶೋಕ್ ವಿವರಿಸಿದರು.
ಏಳು ಸ್ಥಾನಗಳಿಗೆ ನಡೆದ ಈ ಚುನಾವಣೆಯಲ್ಲಿ ಕಾಂಗ್ರೆಸ್ 5 ಸ್ಥಾನ ಗೆದ್ದರೆ, ಬಿಜೆಪಿ 2 ಸ್ಥಾನ ಪಡೆದಿದೆ. ಜೆಡಿಎಸ್ ತನ್ನ ಏಕೈಕ ಸ್ಥಾನದಲ್ಲಿ ಮುಖಭಂಗ ಅನುಭವಿಸಿದೆ. ಫಲಿತಾಂಶದ ಪ್ರಕಾರ, ಮೈತ್ರಿಕೂಟದ ನಿರೀಕ್ಷಿತ 140 ಮತಗಳಿಗಿಂತ ಕಾಂಗ್ರೆಸ್ಗೆ 11 ಮತಗಳು (ಒಟ್ಟು 151) ಹೆಚ್ಚಿಗೆ ಬಂದಿದ್ದು, ಬಿಜೆಪಿ-ಜೆಡಿಎಸ್ ಶಾಸಕರು ದೊಡ್ಡ ಮಟ್ಟದಲ್ಲಿ ಕ್ರಾಸ್ ವೋಟಿಂಗ್ ಮಾಡಿರುವುದು ಸಾಬೀತಾಗಿದೆ.
'ಆಣೆ-ಪ್ರಮಾಣ'ದ ಹಠ ಕೈಬಿಟ್ಟ ಬಿಜೆಪಿ?
ಅಡ್ಡಮತದಾನ ಮಾಡಿದವರನ್ನು ಪತ್ತೆಹಚ್ಚಲು ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಶಾಸಕರ ಸಭೆ ನಡೆಸಿ ಆಣೆ-ಪ್ರಮಾಣ ಮಾಡಿಸುವ ಬಿ.ವೈ. ವಿಜಯೇಂದ್ರ ಅವರ ಯೋಜನೆಗೆ ಸ್ವಪಕ್ಷದಲ್ಲೇ ತೀವ್ರ ವಿರೋಧ ವ್ಯಕ್ತವಾಗಿದೆ.
ಹಿರಿಯ ನಾಯಕರ ಸಲಹೆಗೆ ಮನ್ನಣೆ
"ಮಾಜಿ ಸಿಎಂ ಡಿ.ವಿ. ಸದಾನಂದಗೌಡ, ಹಿರಿಯ ನಾಯಕರಾದ ಸುರೇಶ್ ಕುಮಾರ್, ಪ್ರಲ್ಹಾದ್ ಜೋಶಿ ಸೇರಿದಂತೆ ಹಲವರು ನನಗೆ ಕರೆ ಮಾಡಿ ಮಾತನಾಡಿದ್ದಾರೆ. ರಾಜಕೀಯ ಉದ್ದೇಶಗಳಿಗಾಗಿ ಧರ್ಮಸ್ಥಳದಂತಹ ಪವಿತ್ರ ಕ್ಷೇತ್ರವನ್ನು ಬಳಸಿಕೊಳ್ಳುವುದು ಬೇಡ ಎಂದು ಸಲಹೆ ನೀಡಿದ್ದಾರೆ. ಅವರ ಮಾರ್ಗದರ್ಶನದಂತೆ ನಾವು ಮುಂದಿನ ಹೆಜ್ಜೆ ಇಡಲಿದ್ದೇವೆ" ಎಂದು ಅಶೋಕ್ ತಿಳಿಸುವ ಮೂಲಕ ಆಣೆ-ಪ್ರಮಾಣದ ಹಠದಿಂದ ಬಿಜೆಪಿ ಹಿಂದೆ ಸರಿಯುತ್ತಿರುವುದನ್ನು ಖಚಿತಪಡಿಸಿದರು.
"ಇದು ಕ್ಷೇತ್ರದ ಅಭಿವೃದ್ಧಿಯಲ್ಲ, ವೈಯಕ್ತಿಕ ಅಭಿವೃದ್ಧಿ!"
ಕ್ರಾಸ್ ವೋಟಿಂಗ್ ಮಾಡಿದ ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿದ ಅಶೋಕ್, "ಕೆಲವರು ಕ್ಷೇತ್ರದ ಅಭಿವೃದ್ಧಿಗಾಗಿ ಮತ ಹಾಕಿದ್ದೇವೆ ಎನ್ನುತ್ತಾರೆ. ಆದರೆ ಇಲ್ಲಿ ನಡೆದಿರುವುದು ಕ್ಷೇತ್ರದ ಅಭಿವೃದ್ಧಿಯಲ್ಲ, ಶಾಸಕರ 'ವೈಯಕ್ತಿಕ ಅಭಿವೃದ್ಧಿ' (ಕುದುರೆ ವ್ಯಾಪಾರ). ಇದರಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಶಿಸ್ತು ಕ್ರಮ ಗ್ಯಾರಂಟಿ" ಎಂದರು.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಅವರು, "ಈ ಹಿಂದೆ ನಾವು 15-16 ಶಾಸಕರಿಂದ ರಾಜೀನಾಮೆ ಕೊಡಿಸಿ ಅಧಿಕಾರಕ್ಕೆ ತಂದಾಗ 'ಆಪರೇಷನ್ ಕಮಲ' ಎಂದಿದ್ದ ನೀವು, ಈಗ ಮಾಡುತ್ತಿರುವುದಕ್ಕೆ 'ಆಪರೇಷನ್ ಹಸ್ತ' ಎನ್ನಬೇಕಲ್ಲವೇ? ಆಡಳಿತ ಪಕ್ಷದ ಈ ಕುದುರೆ ವ್ಯಾಪಾರದ ಪರಿಣಾಮ ಭೀಕರವಾಗಿರಲಿದೆ. ಕಾಂಗ್ರೆಸ್ನ ಪ್ರಮುಖ ನಾಯಕರೇ ಶೀಘ್ರದಲ್ಲೇ ಬಿಜೆಪಿಗೆ ಸೇರುವ ದಿನಗಳು ದೂರವಿಲ್ಲ" ಎಂದು ಎಚ್ಚರಿಕೆ ನೀಡಿದರು.



