i
ಮಂಗಳೂರು:
ಮಂಗಳೂರಿನಲ್ಲಿ ಸಿಸಿಬಿ ಅಧಿಕಾರಿಗಳು ಶನಿವಾರ ಖ್ಯಾತ ಆ್ಯಂಕರ್ ಹಾಗೂ ನಟಿ ಅನುಶ್ರೀ ಅವರನ್ನು ಸ್ಯಾಂಡಲ್ ವುಡ್ ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ ಅಗತ್ಯ ಮಾಹಿತಿ ಪಡೆದರು.
ನಿರೂಪಕಿ ಅನುಶ್ರೀಯನ್ನು ಸತತ ಮೂರು ಗಂಟೆಗಳ ಕಾಲ ಡಿಸಿಪಿ ವಿನಯ್ ಗಾಂವ್ಕರ್ ನೇತೃತ್ವದ ಸಿಸಿಬಿ ತಂಡ ವಿಚಾರಣೆ ನಡೆಸಿದೆ. ವಿಚಾರಣೆ ನಂತರ ಸಿಸಿಬಿ ಕಚೇರಿಯಿಂದ ಹೊರಬಂದ ಬಳಿಕ ಸುದ್ದಿಗಾರರೊಡನೆ ಮಾತನಾಡಿದ ಅನುಶ್ರೀ, “ಬಂಧಿತ ಆರೋಪಿಗಳಾದ ಕಿಶೋರ್ ಶೆಟ್ಟಿ ಹಾಗೂ ತರುಣ್ ರಾಜ್ ಪರಿಚಯವಿದ್ದ ಹಿನ್ನೆಲೆಯಲ್ಲಿ ನನ್ನನ್ನು ವಿಚಾರಣೆ ಮಾಡಿದ್ದರೆ ಎಂದು ತಿಳಿಸಿದರು.
ನನ್ನನ್ನು ಮತ್ತೆ ವಿಚಾರಣೆಗೆ ಕರೆದಿಲ್ಲ. ಈ ಸಂದರ್ಭದಲ್ಲಿ ಪೊಲೀಸರು ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದು ಆದರೆ ಮತ್ತೆ ಕರೆದರೆ ಹಾಜರಾಗುತ್ತೇನೆ. ಡ್ರಗ್ ಮಾಫಿಯಾ ರಾಜ್ಯಕ್ಕೆ ಅಂಟಿರುವ ಭೂತ. ಆ ಭೂತವನ್ನು ಹೋಗಲಾಡಿಸಲು ಪೊಲೀಸರು ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ನಾವು ಸಹಕಾರ ನೀಡಬೇಕು ಎಂದರು.
ಡ್ರಗ್ಸ್ ಪಾರ್ಟಿ ವಿಚಾರವಾಗಿ ಉತ್ತರಿಸಿದ ಅವರು, ಪಾರ್ಟಿಯಲ್ಲಿ ಭಾಗಿಯಾಗಿರುವ ವಿಚಾರಕ್ಕೆ ಸಂಬಂಧಿಸಿ ನನ್ನನ್ನು ವಿಚಾರಣೆಗೆ ಕರೆದಿಲ್ಲ. ಅವರು ನನ್ನ ಡ್ಯಾನ್ಸ್ ಕೊರಿಯೋಗ್ರಾಫರ್ ಆದ ಕಾರಣ ವಿಚಾರಣೆಗೆ ಕರೆದಿದ್ದರು. ಕಿಶೋರ್ ಅಮನ್ ಶೆಟ್ಟಿ ಹಾಗೂ ತರುಣ್ ಇವರಿಬ್ಬರು ಕೂಡಾ 12 ವರ್ಷಗಳ ಹಿಂದೆ ಒಂದು ಕಾರ್ಯಕ್ರಮದಲ್ಲಿ ನನ್ನ ಡ್ಯಾನ್ಸ್ ಕೊರಿಯೋಗ್ರಾಫರ್ ಆಗಿದ್ದರು ಎಂದು ಹೇಳಿದರು.