i
ನಕಲಿ ಅಂಕಪಟ್ಟಿ ಸಲ್ಲಿಸಿ ಸರ್ಕಾರಿ ಉದ್ಯೋಗ ಪಡೆಯಲೆತ್ನಿಸಿದ ಇಬ್ಬರು ಅಭ್ಯರ್ಥಿಗಳು ಶಾಶ್ವತವಾಗಿ ಡಿಬಾರ್…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಲೋಕಸೇವಾ ಆಯೋಗವು 2016ನೇ ಸಾಲಿನಲ್ಲಿ ಅಧಿಸೂಚಿಸಿದ ವಿವಿಧ ಇಲಾಖೆಗಳಲ್ಲಿನ ಬೆರಳಚ್ಚುಗಾರರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ದಿನಾಂಕ 03-12-2019ರಂದು ಪ್ರಕಟಿಸಿದ ಅಂತಿಮ ಆಯ್ಕೆಪಟ್ಟಿ ಅಧಿಸೂಚನೆಯಲ್ಲಿ ಕರ್ನಾಟಕ ಲೋಕ ಸೇವಾ ಆಯೋಗಕ್ಕೆ ಆಯ್ಕೆಯಾದ ಅಭ್ಯರ್ಥಿಗಳ ಪೈಕಿ ದಿವ್ಯಜ್ಯೋತಿ ಎಸ್.ಎಂ. ಮತ್ತು ಆರ್.ಪಿ.ಪವನ್, ಇವರುಗಳು ನಕಲಿ ಅಂಕಪಟ್ಟಿಗಳ ಆಧಾರದ ಮೇಲೆ ಸರ್ಕಾರಿ ಉದ್ಯೋಗವನ್ನು ಪಡೆಯಲು ಯತ್ನಿಸಿರುವುದಕ್ಕಾಗಿ ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿಗಳಿಂದ ಶಾಶ್ವತವಾಗಿ ಡಿಬಾರ್ ಮಾಡುವ ದಂಡನೆಯನ್ನು ವಿಧಿಸಿ ಸೆಪ್ಟೆಂಬರ್ 19ರಂದು ಆದೇಶ ಹೊರಡಿಸಿದೆ.
ಈ ಇಬ್ಬರು ಅಭ್ಯರ್ಥಿಗಳ ವಾಣಿಜ್ಯ ಪರೀಕ್ಷೆಯ ಅಂಕಪಟ್ಟಿಗಳ ನೈಜತೆಯ ಪರಿಶೀಲನೆಗಾಗಿ ಅವುಗಳನ್ನು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಗೆ ರವಾನಿಸಲಾಗಿದ್ದು, ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯಿಂದ ಈ ಪ್ರಮಾಣಪತ್ರಗಳಲ್ಲಿನ ಮಾಹಿತಿಯು ಮಂಡಳಿಯ ದಾಖಲೆಗಳೊಂದಿಗೆ ತಾಳೆ ಹೊಂದುತ್ತಿಲ್ಲವೆಂದು ಹಾಗೂ ಈ ಪ್ರಮಾಣ ಪತ್ರಗಳನ್ನು ಮಂಡಳಿಯಿಂದ ನೀಡಿರುವುದಿಲ್ಲವೆಂದು ಮತ್ತು ಸದರಿ ಪ್ರಮಾಣಪತ್ರಗಳನ್ನು ವಿತರಿಸಿರುವ ವಾಣಿಜ್ಯ ಸಂಸ್ಥೆಯ ಮಂಡಳಿಯಲ್ಲಿ ನೋಂದಣಿಯಾಗಿರುವುದಿಲ್ಲವೆಂದು ತಿಳಿಸಿರುತ್ತಾರೆ.
ಈ ಪ್ರಮಾಣಪತ್ರಗಳನ್ನು ರದ್ದುಪಡಿಸಿ ಮಂಡಳಿಯ ವಶಕ್ಕೆ ಪಡೆದಿರುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ಇವರುಗಳು ನಕಲಿ ಪ್ರಮಾಣಪತ್ರಗಳನ್ನು ಹಾಜರುಪಡಿಸಿ ಸರ್ಕಾರಿ ಉದ್ಯೋಗವನ್ನು ಪಡೆಯಲು ಯತ್ನಿಸಿರುವುದು ಮೇಲ್ನೋಟಕ್ಕೆ ಸಾಬೀತಾಗಿರುತ್ತದೆ.
ಈ ಹಿನ್ನೆಲೆಯಲ್ಲಿ ಇವರುಗಳ ವಿರುದ್ಧ ನಿಯಮಾನುಸಾರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿರುವುದಲ್ಲದೇ ಇವರ ವಿರುದ್ಧ ಆಯೋಗದಲ್ಲಿ ವಿಚಾರಣೆಯನ್ನು ನಡೆಸಲಾಗಿರುತ್ತದೆ. ಈ ಪ್ರಕರಣದ ವಿಚಾರಣೆಯನ್ನು ನಡೆಸಿದ ವಿಚಾರಣಾಧಿಕಾರಿಯವರು ಇಬ್ಬರು ಆರೋಪಿತ ಅಭ್ಯರ್ಥಿಗಳ ವಿರುದ್ಧ ಮಾಡಲಾದ ಆರೋಪವು ಸಾಬೀತಾಗಿರುತ್ತದೆ ಎಂದು ವರದಿ ನೀಡಿರುತ್ತಾರೆ ಎಂದು, ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಸುರಳ್ಕರ್ ವಿಕಾಸ್ ಕಿಶೋರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.