i
ಯಾವುದೇ ಸಮುದಾಯ ನನ್ನ ಕೆಲಸ ನೋಡಿ ನನಗೆ ಮತ ನೀಡಲಿ: ಬಸವರಾಜ ಬೊಮ್ಮಾಯಿ…
ಚಂದ್ರವಳ್ಳಿ ನ್ಯೂಸ್, ಹಾವೇರಿ:
ಯಾವುದೇ ಸಮುದಾಯದ ಜನರು ನಾನು ಮಾಡಿರುವ ಕೆಲಸ ನೋಡಿ ನನಗೆ ಮತ ಹಾಕಲಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.ಅವರು ಹಾವೇರಿ ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳು ಸಿಎಂ ಸಿದ್ದರಾಮಯ್ಯ ಕುರುಬ ಸಮುದಾಯ ಬಸವರಾಜ ಬೊಮ್ಮಾಯಿಗೆ ಮತ ಹಾಕಬೇಡಿ ಎಂದು ನೀಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕ್ಷೇತ್ರದಲ್ಲಿ ಬಹಳ ದೊಡ್ಡ ದನಿಯಲ್ಲಿ ಜನ ಬೆಂಬಲ ಕೊಡುತ್ತಿದ್ದಾರೆ. ಎಲ್ಲಾ ಕಡೆ ಒಳ್ಳೆಯ ಬೆಂಬಲ ಸಿಗುತ್ತಿದೆ. ಮತದಾನದ ದಿನದವರೆಗೂ ಕಾದುನೋಡೋಣ ಎನ್ನುವ ಜನ ಕೂಡ ಬೆಂಬಲ ಕೊಡುತ್ತಿದ್ದಾರೆ.ದೊಡ್ಡ ಅಂತರದಲ್ಲಿ ಗೆಲ್ಲುವ ವಿಶ್ವಾಸ ಇದೆ. ಯಾವುದೇ ಸಮುದಾಯ ಯಾವುದೇ ಒಂದು ಪಕ್ಷದ ಪರವಾಗಿ ಇರುವುದಿಲ್ಲ, ಅದು ಸಿದ್ದರಾಮಯ್ಯ ಅವರಿಗೂ ಗೊತ್ತಿದೆ. ಇದರ ಅರ್ಥ ಏನು? ಅವರ ಅಭ್ಯರ್ಥಿಗೆ ಅವರ ಸಮಾಜ ಮತ ಹಾಕುತ್ತಿಲ್ಲ ಅಂತ ಅರ್ಥ. ಯಾರೂ ಬಿಜೆಪಿಗೆ ಓಟ್ ಹಾಕಬಾರದು ಅಂತ ಹೇಳುತ್ತಾರೆ ಅಂದರೆ ಈಗಾಗಲೇಅವರು ಬಿಜೆಪಿಗೆ ಮತ ಹಾಕುತ್ತಿದ್ದಾರೆ ಅಂತ ಅರ್ಥ ಅಲ್ಲವಾ? ಎಂದು ಪ್ರಶ್ನಿಸಿದರು.ಬೊಮ್ಮಾಯಿ ಸಿಎಂ ಇದ್ದಾಗ ಮೋದಿ ತಾಳಕ್ಕೆ ಡ್ಯಾನ್ಸ್ ಮಾಡಿದರು ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಅವರು, ನರೇಂದ್ರ ಮೋದಿಯವರ ಸರ್ಕಾರದಲ್ಲಿ ಒಂದು ವ್ಯವಸ್ಥೆ ಇದೆ. ತನ್ನಿಂದ ತಾನೇ ಯೋಜನೆಗಳು ಅನುಷ್ಠಾನ ಆಗುತ್ತವೆ. ಕಾಂಗ್ರೆಸ್ ನ ಮನಮೋಹನ್ ಸಿಂಗ್ ಸರ್ಕಾರದಲ್ಲಿದ್ದಂತೆ ಸಲಾಮ್ ಹೊಡೆದು, ಗೋಗರೆದು ದುಡ್ಡು ತರುವ ಅಗತ್ಯವಿಲ್ಲ. ಸ್ಮಾರ್ಟ್ ಸಿಟಿಗೆ ಅನುದಾನ ಬಂದಿದೆ, ಯಾರಾದರೂ ಹೋಗಿ ಅರ್ಜಿ ಕೊಟ್ಟಿದ್ದರಾ ? 3000 ಕಿ.ಮಿ. ರಾಷ್ಟ್ರೀಯ ಹೆದ್ದಾರಿಗಳಾಗಿದೆ. ಕೇಂದ್ರದಲ್ಲಿ ಕೆಲಸ ಮಾಡುವ ಹೊಸ ಸಂಸ್ಕೃತಿ ಇದೆ. ವ್ಯಕ್ತಿಗತ ಅಭಿವೃದ್ಧಿಗಿಂತ ವ್ಯವಸ್ಥೆ ಮೇಲೆ ಅಭಿವೃದ್ಧಿ ನರೇಂದ್ರ ಮೋದಿ ತಂದಿದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳಲು ಕಾಂಗ್ರೆಸ್ ಗೆ ಹತ್ತು ವರ್ಷ ಬೇಕು ಎಂದರು.ನಾನು ಕುರಿಗಾರರಿಗೆ 260 ಕೋಟಿ ಕೊಟ್ಟು ಕುರಿಗಾರರಿಗೆ ವಿಶೇಷ ಯೋಜನೆ ತಂದಿದ್ದೇವೆ. ಅವರ ಸಂಘಗಳ ಮೂಲಕ ಹಣ ಕೊಟ್ಟು ಖರೀದಿ ಮಾಡಲು ಮಾರುಕಟ್ಟೆ ಜೋಡಿಸಲು ಯೋಜನೆ ತಂದಿದ್ದೆವು. ಆದರೆ, ಇವರ ಸರ್ಕಾರ ಬಂದ ಮೇಲೆ ಆ ಯೋಜನೆ ನಿಲ್ಲಿಸಿದಾರೆ. ಪ್ರಾಮಾಣಿಕವಾಗಿ ಯಾವುದೇ ಸಮಾಜ ಇರಲಿ ಆ ಸಮಾಜಗಳಿಗೆ ಏನೇನು ಮಾಡಿದ್ದೇನೆ ಅಂತ ನೋಡಿಕೊಂಡೇ ಜನ ತೀರ್ಮಾನ ಮಾಡಲಿ. ಈ ವಿಷಯದಲ್ಲಿ ನಾನು ಮುಕ್ತವಾಗಿದ್ದೇನೆ ಎಂದರು.ನಮ್ಮ ಕಾಲದಲ್ಲಿ ಕನಕದಾಸರ ಬಾಡ ಗ್ರಾಮದ ಅಭಿವೃದ್ಧಿ ಆಗಿದೆ. ಯಡಿಯೂರಪ್ಪ ಅವರ ಕಾಲದಲ್ಲಿ ಕಾಗಿನೆಲೆ ಅಭಿವೃದ್ಧಿ ಆಗಿದೆ. ಸಂಗೊಳ್ಳಿಯಲ್ಲಿ ಸೈನಿಕ ಶಾಲೆ ಮಾಡಿದ್ದೇವೆ. ನಾನು ಓಟಿಗಾಗಿ ಕೆಲಸ ಮಾಡಿಲ್ಲ. ಈಗ ಆಯಾ ಸಮಾಜಗಳಿಗೆ ಮನವರಿಕೆ ಆಗಿದೆ ಯಾರು ನಮ್ಮವರು ಯಾರು ನಮ್ ಪರವಾಗಿ ಕೆಲಸ ಮಾಡಿದ್ದಾರೆ ಅಂತ ಮನವರಿಕೆ ಆಗಿದೆ. ಯಾರು ಕಷ್ಟಕ್ಕೆ ಬರ್ತಾರೆ? ಯಾರು ಅಭಿವೃದ್ಧಿ ಪರವಾಗಿ ಕೆಲಸ ಮಾಡುತ್ರಾರೆ ಅನ್ನೋದನ್ನ ಎಲ್ಲಾ ಸಮಾಜದವರೂ ಹೇಳುತ್ತಾರೆ. ಹಾಲು ಮತ ಸಮುದಾಯದವರೂ ಹೇಳುತ್ತಾರೆ ಎಂದರು.