i
ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆ…
ಚಂದ್ರವಳ್ಳಿ ನ್ಯೂಸ್, ತುಮಕೂರು/ಕೊರಟಗೆರೆ:
ಕೊರಟಗೆರೆ ವಿಧಾನಸಭಾ ಕ್ಷೇತ್ರವು ಜಾತ್ಯಾತೀತ ಜನತಾದಳ ಪಕ್ಷದ ಭದ್ರಕೋಟೆಯಾಗಿದ್ದು ಇಂತಹ ಭದ್ರಕೋಟೆಗೆ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರು ಲಗ್ಗೆ ಇಟ್ಟಿದ್ದಾರೆ.
ತುಮಕೂರು ಜಿಲ್ಲೆಯ ಕೊರಟಗೆರೆ ವಿಧಾನಸಭಾ ವ್ಯಾಪ್ತಿಯ ತೋವಿನಕೆರೆ ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಮಾಜಿ ಶಾಸಕ ಸುಧಾಕರ್ ನೇತೃತ್ವದಲ್ಲಿ ಜೆಡಿಎಸ್ ಸೇರ್ಪಡೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಪಿ.ಆರ್.ಸುಧಾಕರ ಲಾಲ್ ಅಧ್ಯಕ್ಷರು-ಉಪಾಧ್ಯಕ್ಷರ ಜೆಡಿಎಸ್ ಸೇರ್ಪಡೆಯಿಂದ ನಮ್ಮ ಪಕ್ಷಕ್ಕೆ ಇನ್ನಷ್ಟು ಶಕ್ತಿ ಬರಲಿದೆ ಎಂದರು.
ಕೊರಟಗೆರೆ ಪಟ್ಟಣದ ಬೈಪಾಸ್ ರಸ್ತೆಯ ನವೀನ್ ಕಂಪರ್ಟ್ ಸಭಾಂಗಣದಲ್ಲಿ ಜಾತ್ಯಾತೀತ ಜನತಾದಳ ಪಕ್ಷದಿಂದ ಏರ್ಪಡಿಸಲಾಗಿದ್ದ ತೋವಿನಕೆರೆ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರು ಮತ್ತು ವಿಎಸ್ಎಸ್ಎನ್ ಅಧ್ಯಕ್ಷರ ಸೇರ್ಪಡೆ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
2023ರ ಚುನಾವಣೆಯಲ್ಲಿ ಮಾಜಿ ಸಿಎಂ ಕುಮಾರಣ್ಣ ನೇತೃತ್ವದ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು ಅವರು ಮುಖ್ಯಮಂತ್ರಿ ಆಗಲಿದ್ದಾರೆ. ಕರ್ನಾಟಕದಲ್ಲಿ ಮತ್ತೇ ಕುಮಾರಣ್ಣ ಮುಖ್ಯಮಂತ್ರಿ ಮಾಡೋದೇ ಜನತೆಯ ಬಹುದೊಡ್ಡ ಕನಸಾಗಿದೆ. ಕೊರಟಗೆರೆ ಕ್ಷೇತ್ರದ ಸಾವಿರಾರು ಜನ ಕಾರ್ಯಕರ್ತರು ಕಾಂಗ್ರೇಸ್ ಮತ್ತು ಬಿಜೆಪಿ ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಆಗಮಿಸುತ್ತಿದ್ದಾರೆ. 2023ರಲ್ಲಿ ಕೊರಟಗೆರೆ ಕ್ಷೇತ್ರ ಜೆಡಿಎಸ್ ಭದ್ರಕೋಟೆ ಎಂಬುದು ಮತ್ತೊಮ್ಮೆ ಸಾಬಿತು ಆಗಲಿದೆ ಎಂದು ಅವರು ತಿಳಿಸಿದರು.
ಕೊರಟಗೆರೆ ಜೆಡಿಎಸ್ ಪಕ್ಷದ ಕಾರ್ಯಧ್ಯಕ್ಷ ನರಸಿಂಹರಾಜು ಮಾತನಾಡಿ 2023ರ ವಿಧಾನಸಭಾ ಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರದಿಂದ ಸರಳ ಸಜ್ಜನಿಕೆಯ ಸುಧಾಕರಲಾಲ್ ಶಾಸಕರಾಗಿ ಆಯ್ಕೆ ಆಗುವುದು ನೂರಷ್ಟು ಖಚಿತ. ಕೊರಟಗೆರೆ ಕ್ಷೇತ್ರದ ಪ್ರತಿ ಹಳ್ಳಿಯಲ್ಲಿ ಸುಧಾಕರಲಾಲ್ ಮಾಡಿದ ಅಭಿವೃದ್ದಿ ಕೆಲಸಗಳು ಇನ್ನೂ ಮಾತನಾಡುತ್ತಿವೆ, ಹಾಗಾಗಿ ಜನರ ಆರ್ಶಿವಾದ ದೊರೆಯುವುದು ಗ್ಯಾರಂಟಿ ಎಂದು ತಿಳಿಸಿದರು.
ತೋವಿನಕೆರೆ ಗ್ರಾಪಂ ಅಧ್ಯಕ್ಷ ನಾಗರಾಜು ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಉಸಿರುಗಟ್ಟುವ ವಾತವರಣ ಇತ್ತು. ಈಗ ಸ್ವಇಚ್ಚೆಯಿಂದ ಜೆಡಿಎಸ್ ಪಕ್ಷಕ್ಕೆ ಮರಳಿ ಗೂಡು ಸೇರಿದ್ದೇನೆ. ನಾನೊಬ್ಬ ನಿಷ್ಠಾವಂತ ಜೆಡಿಎಸ್ ಕಾರ್ಯಕರ್ತ. ಕಳೆದ 20 ವರ್ಷದಿಂದ ನಾನು ಸತತವಾಗಿ ಜೆಡಿಎಸ್ ಪಕ್ಷಕ್ಕಾಗಿ ದುಡಿದಿದ್ದೇನೆ. ಕೊರಟಗೆರೆ ಕ್ಷೇತ್ರದಿಂದ 2023ಕ್ಕೆ ಸುಧಾಕರಲಾಲ್ ಶಾಸಕರಾಗಿ ಆಯ್ಕೆ ಆಗೋದು ನೂರಷ್ಟು ಖಚಿತವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತೋವಿನಕೆರೆ ಗ್ರಾಪಂ ಅಧ್ಯಕ್ಷ ನಾಗರಾಜು, ಉಪಾಧ್ಯಕ್ಷ ಹನುಮಂತರಾಯಪ್ಪ, ವಿಎಸ್ಎಸ್ಎನ್ ಅಧ್ಯಕ್ಷ ನಾರಾಯಣ್, ಮುಖಂಡರಾದ ಕುಮಾರಣ್ಣ, ಮಂಜುನಾಥ, ಪ್ರಸನ್ನಕುಮಾರ್, ರಾಮಾಂಜನೇಯ ಸೇರಿದಂತೆ ಹತ್ತಾರು ಕಾಂಗ್ರೇಸ್ ಕಾರ್ಯಕರ್ತರು ಮತ್ತು ಮುಖಂಡರು ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಕೊರಟಗೆರೆಯ ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ಸಮ್ಮುಖದಲ್ಲಿ ಸೇರ್ಪಡೆಯಾದರು.