i
ಕಾಂಗ್ರೆಸ್ ಪಕ್ಷಕ್ಕೆ ಹಿಂದುಳಿದ ವರ್ಗಗಳಿಂದ ಶಕ್ತಿ ಬಂದಿದೆ-ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕಾಂಗ್ರೆಸ್ ಪಕ್ಷದ ವತಿಯಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಹಿಂದುಳಿದ ವರ್ಗಗಳ ಸಮಾವೇಶ ಆಯೋಜಿಸುವ ಮೂಲಕ ಪಕ್ಷದ ಸಂಘಟನೆ ಮಾಡಲಾಗುವುದೆಂದು ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ತಿಳಿಸಿದರು.
ಚಿತ್ರದುರ್ಗ ನಗರದ ಕಾಂಗ್ರೆಸ್ ಕಛೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಹಿಂದುಳಿದ ವರ್ಗಗಳಿಂದ ಶಕ್ತಿ ಬಂದಿದೆ. ಚಿಕ್ಕ ಚಿಕ್ಕ ಸಮಾಜ ಗುರುತಿಸಿ ಮುಖ್ಯವಾಹಿನಿಗೆ ತರುವ ಕಾರ್ಯ ಮಾಡಬೇಕಿದೆ. ಯಾವ ಸಮಾಜವೂ ನಿರ್ಲಕ್ಷ್ಯಕ್ಕೆ ಒಳಗಾಗಬಾರದೆಂದು ನಮ್ಮ ಉದ್ದೇಶವಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯವಾರು ಪ್ರವಾಸ ಮಾಡುವುದರ ಮೂಲಕ ಜಿಲ್ಲಾ ಓಬಿಸಿ ಘಟಕವನ್ನು ಜಾಗೃತಿ ಮಾಡಲಾಗುವುದು ಎಂಧರು.
ರಾಹುಲ್ ಗಾಂಧಿಯವರು ಭಾರತ್ ಜೋಡೋ ಯಾತ್ರೆ ಫಲಪ್ರದವಾಗಿದೆ. ಅವರ ಮೇಲೆ ಇಲ್ಲ ಸಲ್ಲದ ಅವಹೇಳನಕಾರಿ ಮಾತುಗಳನ್ನಾಡುವವರಿಗೆ ಈ ಯಾತ್ರೆ ಉತ್ತರ ನೀಡಿದೆ, ಜನ ಜಾತ್ರೆ ಕಂಡು ಬೇರೆಯವರು ಕಂಗಾಲಾಗಿದ್ದಾರೆ. ಉತ್ತಮ ಬೆಂಬಲ ಈ ಯಾತ್ರೆಗೆ ವ್ಯಕ್ತವಾಗಿದೆ. ದೇಶದ ಬಗ್ಗೆ ಕಾಳಜಿ ಇಟ್ಟುಕೊಂಡು ರಾಹುಲ್ ಈ ಯಾತ್ರೆ ಕೈಗೊಂಡಿದ್ದಾರೆ. ಇದರಿಂದ ಪಕ್ಷಕ್ಕೆ ಶಕ್ತಿ ಬಂದಿದೆ. ಮಂದಿನ ದಿನದಲ್ಲಿ ಪಕ್ಷ ಅಧಿಕಾರಕ್ಕೆ ಬರಲಿದೆ. ರಾಹುಲ್ ರವರು ಮಾನವೀಯತೆಯ ನಡಿಗೆ ಇದಾಗಿದೆ ಎಂದು ಮಧು ಬಂಗಾರಪ್ಪ ತಿಳಿಸಿದರು.
ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರ ನಡೆಸಿದ ಸಂದರ್ಭದಲ್ಲಿ ಜಾತಿ, ಧರ್ಮ ನೋಡಿ ಯಾವುದೇ ಯೋಜನೆ ಜಾರಿ ಮಾಡಿಲ್ಲ, ಬಡವರನ್ನು ನೋಡಿ ದೇವರಾಜು ಅರಸುರಿಂದ ಹಿಡಿದು ಸಿದ್ದರಾಮಯ್ಯ ನವರೆಗೂ ಬಡವರಿಗಾಗಿಯೇ ವಿವಿಧ ರೀತಿಯ ಯೋಜನೆ ರೂಪಿಸಲಾಗಿದೆ. ಇಂದಿನ ಸರ್ಕಾರ 40 ಪಸೆಂರ್ಟ್ ಕಮಿಷನ್ ಸರ್ಕಾರವಾಗಿದೆ. ಹಲವಾರು ಹಗರಣಗಳನ್ನು ಮಾಡಿದೆ, ಮುಖ್ಯಮಂತ್ರಿಗಳಾದವರು ಆಡಬಾರದ ಮಾತನ್ನು ಆಡಿದ್ದಾರೆ. ಜನತೆಗೆ ಸಹಾಯ ಮಾಡದ ಸರ್ಕಾರ ಜನತೆ, ಜಾತಿ, ಧರ್ಮದ ಮಧ್ಯೆ ದ್ವೇಷ ಬಿತ್ತುವ ಕಾರ್ಯ ಮಾಡುತ್ತಿದೆ. ಇಂತಹ ಪಕ್ಷವನ್ನು ಮುಂದಿನ ಚುನಾವಣೆಯಲ್ಲಿ ಕಿತ್ತು ಹಾಕಬೇಕಿದೆ. ಇದರ ಬಗ್ಗೆ ಮತದಾರರು ಜಾಗೃತರಾಗಬೇಕಿದೆ ಎಂದು ಹೇಳಿದರು.
ರಾಜ್ಯದಲ್ಲಿ ಜನವರಿ ಒಳಗಾಗಿ ಜಿಲ್ಲಾ ಮಟ್ಟದ ಓಬಿಸಿ ಸಮಾವೇಶ ಪೂರ್ಣಗೊಳಿಸಿ ನಂತರ ರಾಜ್ಯ ಮಟ್ಟದ ಸಮಾವೇಶವನ್ನು ಬೆಂಗಳೂರನ್ನು ಹೊರೆತುಪಡಿಸಿ ಬೇರೆ ಕಡೆಯಲ್ಲಿ ಮಾಡಲಾಗುವುದು. ಬಿಜೆಪಿಯವರಿಗೆ ಓಬಿಸಿ ಸಮಾವೇಶ ಮಾಡಲು ಯೋಗ್ಯತೆ ಇಲ್ಲ ಅ ಪಕ್ಷದಿಂದ ಈ ವರ್ಗಕ್ಕೆ ಯಾವುದೇ ರೀತಿಯ ಕೂಡುಗೆ ಇಲ್ಲ, ಚುನಾವಣೆ ಸಮಯದಲ್ಲಿ ಮಾತ್ರವೇ ಅವರು ನೆನಪಾಗುತ್ತಾರೆ, ಬಂಗಾರಪ್ಪರವರ ಅಭಿಮಾನಿಗಳು ಬೇರೆ ಪಕ್ಷದಲ್ಲಿ ಇದ್ದಾರೆ ಅವರು ಕಾಂಗ್ರೆಸ್ ಪಕ್ಷಕ್ಕೆ ಬನ್ನಿ ಎಂಬ ಮನವಿ ಮಾಡುತ್ತೇನೆ ಎಂದು ಮಧು ಬಂಗಾರಪ್ಪ ತಿಳಿಸಿದರು.
ನ.೦6ಕ್ಕೆ ಕರ್ನಾಟಕಕ್ಕೆ ಖರ್ಗೆ; ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ನ.೦6ಕ್ಕೆ ಕರ್ನಾಟಕಕ್ಕೆ ಆಗಮಿಸಲಿದ್ದಾರೆ ಅಂದು ಅವರನ್ನು ಭವ್ಯವಾದ ಸ್ವಾಗತದೊಂದಿಗೆ ಬರ ಮಾಡಿಕೊಳ್ಳಲಾಗುವುದು. ಖರ್ಗೆ ಅಧ್ಯಕ್ಷರಾಗಿರುವುದಿಂದ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬಂದಿದೆ, ಇದರಿಂದ ಕರ್ನಾಟಕ ರಾಜ್ಯಕ್ಕೂ ಶಕ್ತಿ ಬಂದಿದೆ ಎಂದರು.
ಗೋಷ್ಟಿಯಲ್ಲಿ ಶಾಸಕ ಟಿ.ರಘುಮೂರ್ತಿ, ಜಿಲ್ಲಾಧ್ಯಕ್ಷ ತಾಜ್ಪೀರ್, ಕಾರ್ಯಾಧ್ಯಕ್ಷ ಹಾಲೇಶ್, ವಿಧಾನ ಪರಿಷತ್ ಮಾಜಿ ಸದಸ್ಯೆ ಜಯಮ್ಮ ಬಾಲರಾಜ್, ಮಹಿಳಾ ಘಟಕದ ಅಧ್ಯಕ್ಷೆ ಗೀತಾ ನಂದಿನಿಗೌಡ, ಓಬಿಸಿ ಜಿಲ್ಲಾಧ್ಯಕ್ಷ ಎನ್.ಡಿ.ಕುಮಾರ್, ಮುಖಂಡರಾದ ಕುಮಾರಗೌಡ, ನಾಗವೇಣಿ, ಮೈಲಾರಪ್ಪ, ಬಾಲಕೃಷ್ಣ ಯಾದವ್, ಪ್ರಕಾಶ್ ಮೂರ್ತಿ ಸೇರಿದಂತೆ ಇತರರು ಇದ್ದರು.