i
ಹಿರಿಯೂರು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸರ್ವೆ ಕಾರ್ಯ ಪೂರ್ಣ, ಯಾವ ಅಭ್ಯರ್ಥಿ ಮುಂದೆ ಗೊತ್ತಾ…?
ವರದಿ-ಎಚ್.ಸಿ.ಗಿರೀಶ್, ಹರಿಯಬ್ಬೆ
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ವಿಧಾನಸಭಾ ಕ್ಷೇತ್ರದ ಜಿದ್ದಾಜಿದ್ದಿನ ರಾಜಕೀಯದಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ, ಯಾರು ಸ್ಪರ್ಧಿಸಿದರೆ ಗೆಲ್ಲಲಿದ್ದಾರೆ, ಯಾವ ಪಕ್ಷ, ಯಾವ ಅಭ್ಯರ್ಥಿಗೆ ಜನಬೆಂಬಲವಿದೆ ಎನ್ನುವ ಕುತೂಹಲಕ್ಕೆ ಸದ್ಯದ ಮಟ್ಟಿಗೆ ತೆರೆ ಬಿದ್ದಿದೆ.
ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳಾದ ಪಿಲಾಜನಹಳ್ಳಿ ಜಯಣ್ಣ, ಕುಂದಲಗುರ ಕೆ.ಜಿ.ಮೂಡಲಗಿರಿಯಪ್ಪ, ನಿವೃತ್ತ ಮುಖ್ಯ ಇಂಜಿನಿಯರ್ ಎಂ.ರವೀಂದ್ರಪ್ಪ ಮತ್ತು ಶ್ರಾವಣಗೆರೆ ಶಿವಪ್ರಸಾದ್ ಗೌಡ ಅವರು ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ತನಗೆ ಟಿಕೆಟ್ ನೀಡುವಂತೆ ಜೆಡಿಎಸ್ ವರಿಷ್ಠರ ಮೇಲೆ ಒತ್ತಡ ಹೇರಿದ್ದರಿಂದಾಗಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಹಿರಿಯೂರು ಕ್ಷೇತ್ರದಲ್ಲಿ ವೈಯಕ್ತಿಕ ಸರ್ವೆ ಕಾರ್ಯ ಮಾಡಿಸಿ ತೀರ್ಮಾನ ಮಾಡುವುದಾಗಿ ಭರವಸೆ ನೀಡಿದ್ದರು.
ಅದರಂತೆ ಕುಮಾರಸ್ವಾಮಿ ಅವರು ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯವಾಗಿ ಯಾವ ಅಭ್ಯರ್ಥಿಗೆ ಜನಬೆಂಬಲವಿದೆ, ಯಾರಿಗೆ ಟಿಕೆಟ್ ನೀಡಿದರೆ ಗೆಲ್ಲಲಿದ್ದಾರೆ, ಜನ ಸಾಮಾನ್ಯರೊಂದಿಗೆ ಯಾರು ಹೆಚ್ಚು ಬೆರೆತು ಪ್ರಭಾವಿ ಅಭ್ಯರ್ಥಿಯಾಗಲಿದ್ದಾರೆ ಎನ್ನುವುದು ಸೇರಿದಂತೆ ಕ್ಷೇತ್ರದಲ್ಲಿನ ಇತರೆ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಶಕ್ತಿ ಸಾಮರ್ಥ್ಯ ಕುರಿತು ತನ್ನದೆ ಆದ ಖಾಸಗಿ ಕಂಪನಿ ಮತ್ತು ಖಾಸಗಿ ವ್ಯಕ್ತಿಗಳಿಂದ ಕುಮಾರಸ್ವಾಮಿ ಸರ್ವೆ ಕಾರ್ಯ ಮಾಡಿಸಿದ್ದು ಸರ್ವೆ ಕಾರ್ಯ ಈಗ ಬಹಿರಂಗವಾಗಿದೆ.
ಕುಮಾರಸ್ವಾಮಿ ಅವರು ಮಾಡಿಸಿರುವಂತ ಸರ್ವೆ ವರದಿಯಲ್ಲಿ ಮೊದಲಸ್ಥಾನದಲ್ಲಿ ಪಿಲಾಜನಹಳ್ಳಿ ಜಯಣ್ಣ, 2ನೇ ಸ್ಥಾನದಲ್ಲಿ ಕುಂದಲಗುರ ಮೂಡಲಗಿರಿಯಪ್ಪ, 3ನೇ ಸ್ಥಾನದಲ್ಲಿ ರವೀಂದ್ರಪ್ಪ ಮತ್ತು 4ನೇ ಸ್ಥಾನದಲ್ಲಿ ಶ್ರಾವಣಗೆರೆ ಶಿವಪ್ರಸಾದ್ ಗೌಡ ಅವರಿದ್ದಾರೆಂಬ ಸರ್ವೆಯ ಗೌಪ್ಯ ವರದಿಯನ್ನು ಕುಮಾರಸ್ವಾಮಿ ಅವರಿಗೆ ನೀಡಲಾಗಿದೆ.
ಖಾಸಗಿ ಅವರು ನೀಡಿರುವಂತ ಸರ್ವ ವರದಿಯಲ್ಲಿ ಬಹುಮುಖ್ಯವಾಗಿ ಐಮಂಗಲ ಹೋಬಳಿ ಐಮಂಗಲ, ಬುರುಜನರೊಪ್ಪ, ತಾಳವಟ್ಟಿ, ಕಣಜನಹಳ್ಳಿ, ದಿಂಡಾವರ, ಯಲ್ಲದಕೆರೆ ಸೇರಿದಂತೆ ಮತ್ತಿತರ ಹಳ್ಳಿಗಳು ಮತ್ತು ಜವನಗೊಂಡನಹಳ್ಳಿಯ ಕೆಲವು ಪ್ರಮುಖ ಹಳ್ಳಿಗಳಲ್ಲಿ ಸರ್ವೆ ಕಾರ್ಯ ಮಾಡಲಾಗಿದೆ. ಖಾಸಗಿ ಕಂಪನಿಯವರು ನೀಡಿರುವಂತ ವರದಿಯಲ್ಲಿ ಕ್ಷೇತ್ರದಲ್ಲಿ ಕುಂಚಿಟಿಗ ಅಲಿಯಾಸ್ ಒಕ್ಕಲಿಗ ಸಮುದಾಯ ಕಡಿಮೆ ಇರುವಂತ ಹಳ್ಳಿಗಳಲ್ಲಿ ಹೆಚ್ಚಿನ ಸರ್ವೆ ಕಾರ್ಯ ಮಾಡಲಾಗಿದೆ. ಸರ್ವೆ ಮಾಡಿರುವಂತ ಬಹುತೇಕ ಹಳ್ಳಿಗಳಲ್ಲಿ ಕುಂಚಿಟಿಗ ಸಮುದಾಯ ಕಡಿಮೆ ಇದ್ದು ಕೆಲ ಹಳ್ಳಿಗಳಲ್ಲಿ ಕುಂಚಿಟಿಗ ಸಮುದಾಯವೇ ಇಲ್ಲ. ಇಂತಹ ಎಲ್ಲ ಕಡೆಯಲ್ಲಿ ಜೆಡಿಎಸ್ 3ನೇ ಸ್ಥಾನದಲ್ಲಿದೆ ಎನ್ನುವ ವರದಿ ಬಂದಿದೆ.
ಇದರ ಜೊತೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಆ ಪಕ್ಷದ ಟಿಕೆಟ್ ಆಕಾಂಕ್ಷಿ ಡಿ.ಸುಧಾಕರ್ ಸರ್ವೆ ಮಾಡಿರುವಂತ ಎಲ್ಲ ಹಳ್ಳಿಗಳಲ್ಲಿ 1ನೇ ಸ್ಥಾನದಲ್ಲಿದ್ದರೆ, ಬಿಜೆಪಿ ಪಕ್ಷದ ಹಾಲಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಅವರು 2ನೇ ಸ್ಥಾನದಲ್ಲಿದ್ದಾರೆಂದು ಸರ್ವೆ ವರದಿ ನೀಡಲಾಗಿದೆ.
ಇನ್ನೂ ಕುಂಚಿಟಿಗರು ಹೆಚ್ಚಿನ ಸಂಖ್ಯೆಯಲ್ಲಿರುವಂತ ಹಳ್ಳಿಗಳಲ್ಲೂ ಕಾಂಗ್ರೆಸ್-ಬಿಜೆಪಿ ಮತ್ತು ಜೆಡಿಎಸ್ ಸಮಬಲ ಕಾಯ್ದುಕೊಂಡಿದೆ.
ಸರ್ವೆ ವರದಿಯಲ್ಲಿ ಮತ್ತೊಂದು ಅಂಶವನ್ನು ಗಂಭೀರವಾಗಿ ಹೇಳಲಾಗಿದ್ದು ಜೆಡಿಎಸ್ ಸಂಘಟನೆಯಲ್ಲಿ ಹಿಂದೆ ಬಿದ್ದಿದೆ. ಅಭ್ಯರ್ಥಿಗಳು ಯಾರು ಎನ್ನುವುದರ ಮೇಲೆ ಸಮಬಲದ ಹೋರಾಟ ನಡೆಯುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ ಎನ್ನುವದನ್ನು ಸರ್ವೆ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆಯಂತೆ.
ಕಾಂಗ್ರೆಸ್-ಬಿಜೆಪಿ ಪಕ್ಷಗಳ ಎದುರಾಳಿಗಳು ಆರ್ಥಿಕವಾಗಿ ಅತ್ಯಂತ ಬಲಿಷ್ಠವಾಗಿದ್ದು ಅವರ ಪೈಪೋಟಿ ನೀಡುವಂತ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸಬೇಕಾಗುತ್ತದೆ. ಜೊತೆಯಲ್ಲಿ ಸಂಘಟನೆ ಕ್ಷೀಣವಾಗಿದ್ದು ಬಲ ಪಡಿಸಬೇಕು ಎನ್ನುವ ಅಂಶಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ನಾಲ್ಕು ಜನ ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳ ಸಮ್ಮುಖದಲ್ಲೇ ಕುಮಾರಸ್ವಾಮಿ ಅವರು ಸರ್ವೆ ವರಿಯನ್ನು ಬಹಿರಂಗ ಪಡಿಸಿದ್ದು ಈ ವರದಿ ಕುರಿತು ಟಿಕೆಟ್ ಆಕಾಂಕ್ಷಿಗಳು ತಾವು ಹೇಳಿರುವಂತೆ ಹಳ್ಳಿಗಳಲ್ಲಿ ಗೊಲ್ಲರು, ವಾಲ್ಮೀಕಿ ಸಮುದಾಯ ಸೇರಿದಂತೆ ಮತ್ತಿತರ ಜಾತಿಗಳಿವೆ. ಆ ಹಳ್ಳಿಗಳಲ್ಲಿ ಒಕ್ಕಲಿಗ ಜಾತಿಯವರು ಅಷ್ಟಾಗಿ ಇಲ್ಲ. ಅಲ್ಲದೆ ಅಭ್ಯರ್ಥಿ ಯಾರೆಂದು ಜೆಡಿಎಸ್ ನಲ್ಲಿ ಇನ್ನೂ ತೀರ್ಮಾನ ಆಗಿಲ್ಲ, ಅಭ್ಯರ್ಥಿ ಯಾರೆಂದು ಘೋಷಣೆ ಮಾಡಿ ಸರ್ವೆ ಕಾರ್ಯ ಮಾಡಿಸಿದ್ದರೆ ಖಂಡಿತಾ ಸಮಬಲದ ಹೋರಾಟ ಎಂದು ಸರ್ವೆ ವರದಿ ಬರುತ್ತಿತ್ತು ಎನ್ನುವ ಮಾಹಿತಿಯನ್ನು ಟಿಕೆಟ್ ಆಕಾಂಕ್ಷಿಗಳು ಕುಮಾರಸ್ವಾಮಿ ಬಳಿ ಹೇಳಿದರು ಎನ್ನಲಾಗಿದೆ.
ಕುಮಾರಸ್ವಾಮಿ ಅವರು ಸರ್ವೆ ವರದಿಯ ಮಾಹಿತಿ ಬಹಿರಂಗ ಪಡಿಸುತ್ತಿದ್ದಂತೆ ಟಿಕೆಟ್ ಆಕಾಂಕ್ಷಿ ರವೀಂದ್ರಪ್ಪ ಮಾತನಾಡಿ ನೀವು ನನಗೆ ಟಿಕೆಟ್ ನೀಡಿದರೆ ಸ್ಪರ್ಧಿಸುವೆ. ಇಲ್ಲ ಯಾರಿಗೆ ಟಿಕೆಟ್ ನೀಡಿದರೂ ಪ್ರಮಾಣಿಕವಾಗಿ ಆ ಅಭ್ಯರ್ಥಿ ಪರ ಕೆಲಸ ಮಾಡುವೆ ಎಂದು ಕುಮಾರಸ್ವಾಮಿ ಅವರಿಗೆ ಭರವಸೆ ನೀಡಿದರು ಎನ್ನಲಾಗಿದೆ.
ಪಿಲಾಜನಹಳ್ಳಿ ಜಯಣ್ಣ ಮಾತನಾಡಿ, ನನಗೀಗ 63 ವರ್ಷ ಮುಂದೆ ಸ್ಪರ್ಧಿಸಲು ಸಾಧ್ಯವಿಲ್ಲ, ನಾನು ಎಲ್ಲರಂತೆ ಚುನಾವಣೆಯಲ್ಲಿ ಹಣ ಖರ್ಚು ಮಾಡುವೆ, ನನಗೇ ಟಿಕೆಟ್ ಕೊಡುವಂತೆ ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಿದರು ಎಂದು ಬಲ್ಲ ಮೂಲಗಳು ತಿಳಿಸಿವೆ.
ಇನ್ನೂ ಚಿತ್ರದುರ್ಗ ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ, ಕುಂದಲಗುರ ಕೆ.ಜಿ.ಮೂಡಲಗಿರಿಯಪ್ಪ ಮಾತನಾಡಿ ಜೆಡಿಎಸ್ ವರಿಷ್ಠರು ಸೇರಿದಂತೆ ಕ್ಷೇತ್ರದ ಇತರೆ ಟಿಕೆಟ್ ಆಕಾಂಕ್ಷಿಗಳು ಮತ್ತು ಜೆಡಿಎಸ್ ಮುಖಂಡರು ಒಪ್ಪಿ ನನಗೆ ಟಿಕೆಟ್ ನೀಡಿದರೆ ಖಂಡಿತ ಗೆದ್ದು ಬರುವೆ ಎನ್ನುವ ಭರವಸೆ ನೀಡಿದರು.
ಶ್ರಾವಣಗೆರೆ ಶಿವಪ್ರಸಾದ್ ಗೌಡ ಮಾತನಾಡಿ, ನನಗೆ ಹಣ ಬರುವುದಿದೆ. ಆ ಬಂದರೆ ಮಾತ್ರ ಸ್ಪರ್ಧಿಸುವೆ. ಇಲ್ಲವಾದರೆ ಯಾವುದೇ ಅಭ್ಯರ್ಥಿಗೆ ಟಿಕೆಟ್ ನೀಡಿದರೂ ನಿಷ್ಠೆಯಿಂದ ಕೆಲಸ ಮಾಡುವುದಾಗಿ ತಿಳಿಸಿದರು ಎನ್ನುವ ಮಾಹಿತಿ ಲಭ್ಯವಾಗಿದೆ.
ಈ ನಾಲ್ಕು ಜನ ಟಿಕೆಟ್ ಆಕಾಂಕ್ಷಿಗಳ ಅಭಿಪ್ರಾಯ ಕೇಳಿಸಿಕೊಂಡ ಕುಮಾರಸ್ವಾಮಿ ಅವರು ಮುಂದಿನ 15 ದಿನಗಳೊಳಗೆ ನಾನೇ ಯಾರು ಅಭ್ಯರ್ಥಿ ಆಗಬೇಕೆಂದು ಹೇಳುತ್ತೇನೆ. ಉಳಿದವರು ಪಕ್ಷ ತೀರ್ಮಾನ ಮಾಡುವ ಅಭ್ಯರ್ಥಿಯ ಬೆನ್ನಿಗೆ ನಿಂತು ಕೆಲಸ ಮಾಡಬೇಕು. ಜೆಡಿಎಸ್ ಅಭ್ಯರ್ಥಿಯನ್ನ ಗೆಲ್ಲಿಸಿಕೊಂಡು ಬರಬೇಕು ಎಂದು ತಾಕೀತು ಮಾಡಿದರೆಂದು ಜೆಡಿಎಸ್ ಮೂಲಗಳು ತಿಳಿಸಿವೆ.
ಸರ್ವೆ ವರದಿ ಮುಖ್ಯಾಂಶಗಳು-
ಪಕ್ಷವಾರು ಮುನ್ನಡೆ
ಕಾಂಗ್ರೆಸ್ ಸುಧಾಕರ್ ಮೊದಲ ಸ್ಥಾನ
ಬಿಜೆಪಿ ಪೂರ್ಣಿಮಾ 2ನೇ ಸ್ಥಾನ
ಜೆಡಿಎಸ್ 3ನೇ ಸ್ಥಾನ (ಅಭ್ಯರ್ಥಿ ಇಲ್ಲ)
ಟಿಕೆಟ್ ಆಕಾಂಕ್ಷಿಗಳು-
ಪಿಲಾಜನಹಳ್ಳಿ ಜಯಣ್ಣ 1ನೇ ಸ್ಥಾನ
ಕುಂದಲಗುರ ಮೂಡಲಗಿರಿಯಪ್ಪ 2ನೇ ಸ್ಥಾನ
ರವೀಂದ್ರಪ್ಪ 3ನೇ ಸ್ಥಾನ
ಶಿವಪ್ರಸಾದ್ ಗೌಡ 4ನೇ ಸ್ಥಾನ…