i
ಹಿರಿಯೂರು ಕ್ಷೇತ್ರದ ಟಿಕೆಟ್ ಮೇಲೆ ದೇವೇಗೌಡರ ಹಿರಿಯ ಪುತ್ರ ಬಾಲಕೃಷ್ಣಗೌಡರಿಗೆ ಕಣ್ಣು, ತಬ್ಬಿಬ್ಬಾದ ಯಶೋಧರ?!!…
ವರದಿ-ಎಚ್.ಸಿ.ಗಿರೀಶ್, ಹರಿಯಬ್ಬೆ
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ವಿಧಾನಸಭಾ ಕ್ಷೇತ್ರ ಎಂದರೆ ಒಂದು ರೀತಿ ಮಾರಾಟ ಸರಕಾಗಿದೆ. ಈ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇವೆಂದು ಹೇಳಿಕೊಂಡು ಬರುವವರ ಸಂಖ್ಯೆ ದಿನೇ ದಿನೇ ಜಾಸ್ತಿ ಆಗುತ್ತಿದೆ. ಹಿರಿಯೂರು ಕ್ಷೇತ್ರದಲ್ಲಿ ಸ್ಥಳೀಯರೇ ಒಂದು ರೀತಿ ಅಪರಿಚಿತ ವ್ಯಕ್ತಿಗಳಾಗುತ್ತಿದ್ದಾರೆ.
ಇದು ಹಿರಿಯೂರು ಕ್ಷೇತ್ರದ ಜನತೆಯ ವರ್ತನೆಯೋ ಅಥವಾ ಈ ಕ್ಷೇತ್ರಕ್ಕೆ ಅಂಟಿರುವ ಶಾಪವೋ ತಿಳಿಯುತ್ತಿಲ್ಲ. ಆದರೆ ಇಡೀ ರಾಜ್ಯದಲ್ಲಿ ಒಂದು ಮಾತು ಇದೆ, ದುಡ್ಡು ಇದ್ದರೆ ಹಿರಿಯೂರು ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲ್ಲಬಹುದು ಎಂದು. ಇದಕ್ಕೆ ಸರಿಯಾಗಿ ಸಾವಿರ ಜನ ಅಭ್ಯರ್ಥಿಗಳು ಹೊಸದಾಗಿ ಬಂದರೂ ಇಲ್ಲಿ ಎಲ್ಲರಿಗೂ ಕಾರ್ಯಕರ್ತರು ಸಿಗಲಿದ್ದಾರೆ. ಆದರೆ ನಮ್ಮ ತನ ಬಿಟ್ಟು ಜೋತು ಬೀಳುವಂತ ಕಾರ್ಯಕರ್ತರ ಪಡೆಗೇನು ಕಮ್ಮಿ ಇಲ್ಲ.
ಅದೇನೇ ಇರಲಿ, ಹೊಸ ವಿಷಯ ಎಂದರೆ ಈಗ ಹಿರಿಯೂರು ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿ ತುಂಬಾ ಹಣ ಇರುವಂತ ವ್ಯಕ್ತಿಯೊಬ್ಬರು ಬರುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ಏಕೆಂದರೆ ದೇವೇಗೌಡರ ಹಿರಿಯ ಪುತ್ರ, ನಿವೃತ್ತ ಕೆಎಎಸ್ ಅಧಿಕಾರಿ ಬಾಲಕೃಷ್ಣ ಗೌಡರಿಗೆ ತುಂಬಾ ಆಪ್ತರಾಗಿರುವ, ಸಾಕಷ್ಟು ಹಣ ಇರುವಂತ ವ್ಯಕ್ತಿಯೊಬ್ಬರು ಹಿರಿಯೂರು ಟಿಕೆಟ್ ಕೊಡಿಸುವಂತೆ ದುಂಬಾಲು ಬಿದ್ದಿದ್ದಾರೆ ಎನ್ನಲಾಗಿದೆ. ಹಿರಿಯೂರು ವಿಧಾನಸಭಾ ಟಿಕೆಟ್ ಯಾರಿಗೆ ಸಿಗಲಿದೆ ಎನ್ನುವುದು ಇಡೀ ಕ್ಷೇತ್ರದಲ್ಲಿ ಅತ್ಯಂತ ಕುತೂಹಲ ಕೆರಳಿಸಿರುವ ಸನ್ನಿವೇಶದಲ್ಲಿ ಈ ಸುದ್ದಿ ಬಂದಿರುವುದು ಅನೇಕ ಆಕಾಂಕ್ಷಿಗಳಲ್ಲಿ ಎದೆ ಬಡಿತ ಹೆಚ್ಚು ಮಾಡಿದೆ.
ಈಗಾಗಲೇ ಹಿರಿಯೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳಾಗಿ ಪಿಲಾಜನಹಳ್ಳಿ ಎಂ.ಜಯಣ್ಣ, ಚಿತ್ರದುರ್ಗ ಜಿಲ್ಲಾ ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ಕೆ.ಜಿ.ಮೂಡಲಗಿರಿಯಪ್ಪ, ನಿವೃತ್ತ ಮುಖ್ಯ ಇಂಜಿನಿಯರ್ ಎಂ.ರವೀಂದ್ರಪ್ಪ ಹಾಗೂ ಶ್ರಾವಣಗೆರೆ ಶಿವಪ್ರಸಾದ್ ಗೌಡ ಕ್ಷೇತ್ರದಲ್ಲಿ ಓಡಾಟ ಮಾಡುತ್ತಿದ್ದಾರೆ. ಇವರಲ್ಲಿ ಒಬ್ಬರನ್ನ ಅಭ್ಯರ್ಥಿಯಾಗಿ ಘೋಷಣೆ ಮಾಡುವ ಸಾಧ್ಯತೆ ಇತ್ತು. ಆದರೆ ಬಾಲಕೃಷ್ಣಗೌಡರ ಕೋರಿಕೆಯಿಂದಾದ ಹೊಸ ಬೆಳವಣಿಗೆಯಿಂದಾಗಿ ಯಾರು ಅಭ್ಯರ್ಥಿಯಾಗಲಿದ್ದಾರೆ ಎನ್ನುವುದು ನಿಗೂಢವಾಗಿದೆ.
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ಯಶೋಧರ ಅವರಿಗೆ ಬಾಲಕೃಷ್ಣಗೌಡರು ಒಂದು ವಾರದ ಹಿಂದೆಯಷ್ಟೇ ದಿಢೀರ್ ಮೊಬೈಲ್ ಕಾಲ್ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ನಂತರ ಪಕ್ಷದ ಸಂಘಟನೆ, ಯಾರ್ಯಾರು ಆಕಾಂಕ್ಷಿಗಳು ಹೀಗೆ ಎಲ್ಲವನ್ನ ವಿಚಾರಿಸಿದ್ದಾರೆ. ಮುಂದುವರೆದು ಮಾತನಾಡಿದ ಗೌಡರು, ಒಂದಕ್ಕೆ ಎರಡು ಖರ್ಚು ಮಾಡುವಂತ ಅಭ್ಯರ್ಥಿಯನ್ನ ಕಳುಹಿಸಬೇಕು ಎಂದುಕೊಂಡಿತ್ತೇನೆ, ನಿಮಗೆ ಒಪ್ಪಿಗೆ ಇದೆಯಾ ಎಂದು ಯಶೋಧರ ಅವರಿಗೆ ಪ್ರಶ್ನೆ ಮಾಡಿದ್ದಾರೆ.
ಈ ಕೋರಿಕೆ ಕೇಳಿ ದಂಗಾದ ಯಶೋಧರ ಪ್ರತಿಕ್ರಿಯೆ ನೀಡಿ, ನೀವು ಹೇಳುವಷ್ಟು ಹಣ ಖರ್ಚು ಮಾಡುವ ಅಭ್ಯರ್ಥಿಗಳು ಸ್ಥಳೀಯವಾಗಿಯೇ ಇದ್ದಾರೆ. ಟಿಕೆಟ್ ಯಾರೇ ತಂದರೂ ನಿಷ್ಠೆಯಿಂದ ಕೆಲಸ ಮಾಡುತ್ತೇವೆ. ಎಲ್ಲ ವಿಷಯ ಅಪ್ಪಾಜಿ ದೇವೇಗೌಡರು ಮತ್ತು ಕುಮಾರಣ್ಣನವರಿಗೆ ತಿಳಿದಿದೆ. ನೀವು ಅವರಲ್ಲೇ ಕೇಳಿ ನೋಡಿ, ನೀವು ಯಾರನ್ನ ಕಳಿಹಿಸದರೂ ಅಥವಾ ವರಿಷ್ಠರು ಯಾರಿಗೇ ಟಿಕೆಟ್ ನೀಡಿದರು ಪಕ್ಷದ ಮುಖಂಡರು, ಕಾರ್ಯಕರ್ತರು ನಿಷ್ಠೆಯಿಂದ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು ಎನ್ನಲಾಗಿದೆ.
ಟಿಕೆಟ್ ಆಕಾಂಕ್ಷಿಗಳು ಬಹಳಷ್ಟು ಮಂದಿ ಇದ್ದಾರೆ. ಆದರೆ ಗೆಲ್ಲುವ ಸಾಮರ್ಥ್ಯ, ಜನಾನುರಾಗಿ, ಮಾಸ್ ಲೀಡರ್ ಅಂತವರಿಗೆ ಟಿಕೆಟ್ ನೀಡಿದರೆ ಮಾತ್ರ ಹಿರಿಯೂರು ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲಲಿದೆ. ವರಿಷ್ಠರು ಯಾರಿಗೆ ಟಿಕೆಟ್ ನೀಡಿದರೂ ಬೇರು ಮಟ್ಟದಲ್ಲಿ ಪಕ್ಷ ಸಂಘಟಿಸಿ ಗೆಲ್ಲಿಸಿಕೊಂಡು ಬಂದೇ ಬರುತ್ತೇವೆ ಎಂದು ಹೇಳಿದರು ಎನ್ನಲಾಗಿದೆ.
ಕ್ಷೇತ್ರದ ನಾಲ್ಕು ಜನಟಿಕೆಟ್ ಆಕಾಂಕ್ಷಿಗಳಲ್ಲಿ ಯಾರು ಅಭ್ಯರ್ಥಿ ಆಗಬೇಕೆಂದು ಒಮ್ಮತ ಮೂಡಿಲ್ಲ. ಹೀಗಾಗಿ ನಾಲ್ವರ ಜಗಳ ಐದನೆಯವನಿಗೆ ಲಾಭ ಎನ್ನುವಂತೆ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ಸುಳ್ಳಲ್ಲ. ಕಳೆದ 15 ವರ್ಷಗಳಿಂದ ಕ್ಷೇತ್ರದಲ್ಲಿ ಜೆಡಿಎಸ್ ಸೋತು ಸುಣ್ಣವಾಗಿದೆ. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮಾತ್ರ ಒಂದಿಷ್ಟು ಮಂದಿ ಟಿಕೆಟ್ ಆಕಾಂಕ್ಷಿಗಳಾಗಿ ಮಿಂಚುತ್ತಾರೆ, ಗುಡುಗುತ್ತಾರೆ. ಆದರೆ ಟಿಕೆಟ್ ಕೈತಪ್ಪಿ ಹೋದರೆ ಅಥವಾ ಚುನಾವಣೆಯಲ್ಲಿ ಸೋತರೇ ಈ ಕ್ಷೇತ್ರದ ಜೆಡಿಎಸ್ ನಾಯಕರು ಮತ್ತೇ ಶಬ್ದ ಮಾಡುವುದು ಮುಂದಿನ ಚುನಾವಣೆಯಲ್ಲಿ ಎನ್ನುವಂತಾಗಿದೆ. ಇದರಿಂದಾಗಿ ಸಾಮಾನ್ಯ ಜೆಡಿಎಸ್ ಕಾರ್ಯಕರ್ತರು, ಮುಖಂಡರು ಅಧಿಕಾರವಿಲ್ಲದೆ ಸೋತು ಸುಣ್ಣವಾಗಿದ್ದಾರೆ. ಸ್ಥಳೀಯರು ಒಂದು ಕಡೆ ಕೂತು ಟಿಕೆಟ್ ಬೇರೆಯವರ ಪಾಲಾಗದಂತೆ ಎಚ್ಚರವಹಿಸಬೇಕಾಗಿದೆ.