i
ಎಂಆರ್ಪಿ ಬೆಲೆಗಿಂತ ಹೆಚ್ಚಿನ ದರಕ್ಕೆ ಮದ್ಯ ಮಾರಾಟ ಸಚಿವರು ಶಾಸಕರು ಕಿಡಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲೆಯಲ್ಲಿ ಮಾರಾಟ ದರಕ್ಕಿಂತ ಹೆಚ್ಚಿನ ಬೆಲೆಗೆ ಮದ್ಯ ಮಾರುತ್ತಿದ್ದು, ಮದ್ಯ ಪ್ರಿಯರಿಗೆ ನುಂಗಲಾರದ ತುತ್ತಾಗಿದೆ. ಬೆಳಿಗ್ಗೆ 6 ಗಂಟೆಗೆ ಮದ್ಯ ಸಿಗುತ್ತದೆ, ಮದ್ಯದಂಗಡಿಗಳಿಗೆ ಒಂದು ಸಮಯವಿಲ್ಲ, ಕಾಫಿ, ಟೀ ಗಿಂತ ಮೊದಲು ಮದ್ಯ ಮಾರಾಟ ಆಗುತ್ತದೆ. ಬಹುತೇಕ ಕಿರಾಣಿ ಅಂಗಡಿಗಳಲ್ಲೂ, ಹೋಟೆಲ್ ಡಾಬಾಗಳಲ್ಲೂ ಮದ್ಯ ಮಾರಾಟ ಆಗುತ್ತಿದ್ದು ಇದರ ಬಗ್ಗೆ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಸೇರಿದಂತೆ ಹಲವು ಶಾಸಕರು ಹರಿಹಾಯ್ದ ಪ್ರಸಂಗ ಕೆಡಿಪಿ ಸಭೆಯಲ್ಲಿ ಜರುಗಿತು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಪಂಚಾಯಿತಿ ಎರಡನೇ ಕೆ.ಡಿ.ಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮದ್ಯದ ಅಂಗಡಿಗಳು ಹಾಗೂ ಬಾರ್ಗಳಿಂದ ಗ್ರಾಹಕರು ದುಬಾರಿ ಬೆಲೆ ತೆತ್ತು ಮದ್ಯ ಕುಡಿಯುವ ಸ್ಥಿತಿ ನಿರ್ಮಾಣವಾಗಿದೆ. ಹೆಚ್ಚಿನ ದರಕ್ಕೆ ಮದ್ಯ ಜಿಲ್ಲೆಯ ತಾಲೂಕುಗಳ ನಗರ, ಹೋಬಳಿಗಳು, ಕುಗ್ರಾಮಗಳಲ್ಲೂ ಮದ್ಯದ ಅಂಗಡಿಗಳು ಇಲ್ಲದಿದ್ದರೂ ರಾಜಾರೋಷವಾಗಿ ಮದ್ಯ ಮಾರಾಟ ಆಗುತ್ತಿದೆ. ಮದ್ಯದಂಗಡಿಗಳಿಗೆ ಹೆಚ್ಚಿನ ಟಾರ್ಗೆಟ್ ನೀಡುವುದನ್ನು ನಿಲ್ಲಸಬೇಕು ಎಂದು ಶಾಸಕರಾದ ರಘುಮೂರ್ತಿ, ಗೂಳಿಹಟ್ಟಿ ಶೇಖರ್, ತಿಪ್ಪಾರೆಡ್ಡಿ, ಚಂದ್ರಪ್ಪ ತಾಕೀತು ಮಾಡಿದರು.
ಪ್ರತಿ ಬಾರ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಎಂಆರ್ ಪಿ ದರಕ್ಕೆ ಅಂದರೆ ಬಾಟಲಿಗಳ ಮೇಲೆ ದರ ನಮೂದಾಗಿರುವ ದರಕ್ಕೆ ಮಾರಾಟ ಮಾಡಬೇಕು ಅಲ್ಲದೆ ದರಪಟ್ಟಿ ಹಾಕಬೇಕು. ಆದರೆ ಜಿಲ್ಲೆಯಲ್ಲಿ ಬ್ರಾಂಡ್ಗೆ ತಕ್ಕಂತೆ 40-100 ರೂ.ಗಳಿಗಿಂತಲೂ ಹೆಚ್ಚಿಗೆ ಹಣ ಪಡೆಯಲಾಗುತ್ತಿದ್ದು, ಮದ್ಯದ ಅಂಗಡಿಗಳ ಮೇಲೆ ಕ್ರಮಕೈಗೊಳ್ಳುವಂತೆ ಅಬಕಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಕ್ರಮ ಮದ್ಯ ಮಾರಾಟ ಆಗುತ್ತಿದೆ ಎಂದು ಮಹಿಳೆಯರೇ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಶಾಸಕ ರಘುಮೂರ್ತಿ ಆಕ್ಷೇಪ ವ್ಯಕ್ತಪಡಿಸಿದರು.
ಅಂಗಡಿಗಳಲ್ಲಿ ಸರ್ಕಾರ ವಿಧಿಸಿದ ಬೆಲೆಗಿಂತ ಹೆಚ್ಚಿನ ಬೆಲೆಗೆ ಮದ್ಯ ಮಾರಲಾಗುತ್ತಿದ್ದು, ಕ್ರಮಕ್ಕೆ ಅಬಕಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಮದ್ಯದ ಅಂಗಡಿ, ಬಾರ್ಗಳ ಮಾಲೀಕರೇ ಊರೂರಿಗೆ ಅಕ್ರಮವಾಗಿ ಮದ್ಯ ಪೂರೈಕೆ ಮಾಡುತ್ತಿದ್ದಾರೆಂದು ಗೂಳಿಹಟ್ಟಿ ಶೇಖರ್ ಆಕ್ರೋಶ ವ್ಯಕ್ತ ಪಡಿಸಿದರು. ಅಬಕಾರಿ ಅಧಿಕಾರಿಗಳು ಸೂಕ್ತ ಕ್ರಮ ವಹಿಸದೇ ಇರುವುದರಿಂದ ಹೆಚ್ಚಿನ ಬೆಲೆಗೆ ಮದ್ಯ ಮಾರುವುದು ನಿರಂತರವಾಗಿ ಮುಂದುವರಿದಿದೆ. ಮದ್ಯದ ಅಂಗಡಿಗಳಲ್ಲಿ ಎಂಆರ್ಪಿ ಬೆಲೆಗಿಂತ ಹೆಚ್ಚಿನ ಬೆಲೆ ತಗೆದುಕೊಳ್ಳುತ್ತಾರೆ. ಪ್ರಶ್ನೆ ಮಾಡಿದರೆ ನಾವು ಕೋಡೋದೆ ಇಷ್ಟಕ್ಕೆ, ನಮ್ಮಲ್ಲಿ ನಿಮ್ಮ ಬ್ರ್ಯಾಂಡ್ ಇಲ್ಲ, ಯಾರಿಗಾದರೂ ದೂರು ಕೊಡಿ, ನಾವು ಇದೇ ಬೆಲೆಗೆ ಮಾರೋದು ಎಂದು ಗ್ರಾಹಕರೊಂದಿಗೆ ಸಂಘರ್ಷಕ್ಕೆ ಇಳಿಯುತ್ತಾರೆ. ಅಧಿಕಾರಿಗಳು ಸಂಬಂಧಪಟ್ಟವರು ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಜನಪ್ರತಿನಿಧಿಗಳು ಸೂಚಿಸಿದರು.