i
ಗ್ರಾಮ ಪಂಚಾಯಿತಿ ಪಿಡಿಒ ಅಧ್ಯಕ್ಷರ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರು ನೀಡಿದ ಸದಸ್ಯರು…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ತಾಲೂಕು, ತುರುವನೂರು ಹೋಬಳಿ, ಬೆಳಗಟ್ಟ ಗ್ರಾಮ ಪಂಚಾಯಿತಿಯಲ್ಲಿ 15ನೇ ಹಣಕಾಸು ಮತ್ತು ಇತರೆ ವಿವಿಧ ಯೋಜನೆಯ ಸರ್ಕಾರಿ ಹಣ ದುರುಪಯೋಗ ಪಡಿಸಿಕೊಂಡ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹಮ್ಮದ್ ಆಲಿ ಹಾಗೂ ಗ್ರಾ.ಪಂ.ಅಧ್ಯಕ್ಷ ಜಿ.ವಿ.ಹನುಮಂತರೆಡ್ಡಿ ವಿರುದ್ಧ ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಅವರಿಗೆ ದೂರು ನೀಡಿ ಒತ್ತಾಯಿಸಿದರು.
2010 ರಿಂದ 2022 ವರೆಗೆ ಬೆಳಗಟ್ಟ ಗ್ರಾಮ ಪಂಚಾಯಿತಿಯಲ್ಲಿ ವಿವಿಧ ಇಲಾಖೆಯ ಸರ್ಕಾರಿ ಯೋಜನೆಗಳನ್ನು ಅಧ್ಯಕ್ಷರು ಮತ್ತು ಪಿ.ಡಿ.ಓ.ಗಳು ಶಾಮೀಲಾಗಿ ಜನ ಸಾಮಾನ್ಯರ ಹಣವನ್ನು ನಾನಾ ರೀತಿಯಲ್ಲಿ ದುರುಪಯೋಗ ಪಡಿಸಿಕೊಂಡಿರುತ್ತಾರೆ. ಇತ್ತೀಚಿನ 15ನೇ ಹಣಕಾಸಿನ ಯೋಜನೆಗೆ ಸಂಬಂಧಿಸಿದಂತೆ ಪಿಡಿಒ ಮಹಮ್ಮದ್ ಆಲಿ, ಅಧ್ಯಕ್ಷ ಜಿ.ವಿ.ಹನುಮಂತರೆಡ್ಡಿ ಇಬ್ಬರು ಸೇರಿ ಬೆಳಗಟ್ಟ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕವಿತ ಮತ್ತು ಇವರ ಪತಿ ದುಷ್ಯಂತ್ ಹಾಗೂ ಅಜ್ಜಣ್ಣ, ಬೋರಯ್ಯ, ಗ್ರಾಮ ಪಂಚಾಯಿತಿ ಸಿಬ್ಬಂದಿ ವಿನಾಯಕ ಇನ್ನು ಇತರೆ ವ್ಯಕ್ತಿಗಳ ಹೆಸರಿನಲ್ಲಿ ಪಿಡಿಓ ಮತ್ತು ಅಧ್ಯಕ್ಷರು ಸೇರಿ ಗ್ರಾಮ ಪಂಚಾಯಿತಿಯ ಕರ್ತವ್ಯದಿಂದ ಬಿಡುಗಡೆಗೊಂಡಿದ್ದರು ಸಹ ದಿನಾಂಕ:08.04.2022 ರಿಂದ 25.04.2022 ರವರೆಗೆ ಒಟ್ಟು 23,91,838 ರೂ.ಗಳ ನೇರವಾಗಿ ಸರ್ಕಾರದ ಹಣವನ್ನು ಅವರುಗಳ ಖಾತೆಗಳಿಗೆ ಜಮಾ ಮಾಡಿಕೊಂಡು ಸಾರ್ವಜನಿಕರ ಹಣವನ್ನು ದುರುಪಯೋಗ ಪಡಿಸಿಕೊಂಡಿರುತ್ತಾರೆಂದು ಅವರು ಆರೋಪಿಸಿದ್ದಾರೆ.
ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 88 ಲಕ್ಷ ರೂ.ಗಳ ಸರ್ಕಾರದ ಹಣ ದುರುಪಯೋಗವಾಗಿರುತ್ತದೆ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿಗಳಿಗೆ, ಲೋಕಾಯುಕ್ತ ಕಛೇರಿಗೆ, ಜಿಲ್ಲಾಧಿಕಾರಿಗಳಿಗೆ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಿಗೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ದಾಖಲೆ ಸಹಿತ ಮನವಿಯನ್ನು ಕೊಟ್ಟರು ಇದುವರೆಗೂ ಯಾವುದೇ ರೀತಿಯ ಕ್ರಮ ಕೈಗೊಳ್ಳದೇ ಇರುವುದು ವಿಪರ್ಯಾಸವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಗಿರೀಶ್ರೆಡ್ಡಿ, ಅಶೋಕ್ ಬೆಳಗಟ್ಟ, ಹಂಸ, ಜಯಮ್ಮ, ಭಾರತಮ್ಮ, ತಿಪ್ಪಮ್ಮ, ಉಷಾ ಹಾಗೂ ಗ್ರಾಮದ ಮುಖಂಡರುಗಳಾದ ಬಿ.ಆರ್.ಮಂಜುನಾಥ್ರೆಡ್ಡಿ, ವೆಂಕಟೇಶ್ರೆಡ್ಡಿ, ದೊಡ್ಡಬೋರಯ್ಯ, ಕ್ಯಾಸಕ್ಕಿ ಪಾಪಯ್ಯ, ಕಲ್ಲಂ ಸೀತರಾಮರೆಡ್ಡಿ, ತಿಪ್ಪೇಸ್ವಾಮಿ ಕ್ಯಾಸಕ್ಕಿ, ಎ.ಆರ್.ಮಂಜುನಾಥರೆಡ್ಡಿ, ಕೃಷ್ಣರೆಡ್ಡಿ ಹಾಗೂ ಇತರರು ಉಪಸ್ಥಿತರಿದ್ದು ಜಿಲ್ಲಾ ಸಚಿವರನ್ನು ಒತ್ತಾಯಿಸಿದರು.