i
ಮಿತಿ ಮೀರಿದ ಲಂಚ ಉಪನೋಂದಣಾಧಿಕಾರಿಗಳ ಕಚೇರಿ ಮೇಲೆ ಲೋಕಾಯುಕ್ತ ದಾಳಿ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಮಧ್ಯವರ್ತಿಗಳ ಮೂಲಕ ನಡೆಯುತ್ತಿರುವ ಭಾರೀ ಲಂಚಾವತಾರಕ್ಕೆ ಕಡಿವಾಣ ಹಾಕಲು ಲೋಕಾಯುಕ್ತರು ದಿಢೀರ್ ದಾಳಿ ಮಾಡಿದ್ದಾರೆ.
ರಾಜಧಾನಿ ಸಹಿತ ರಾಜ್ಯದ ವಿವಿಧೆಡೆ ದಾಳಿ ಮಾಡಿರುವ ಲೋಕಾಯುಕ್ತರು ಕೆಲವು ಮಹತ್ವದ ದಾಖಲಾತಿಗಳನ್ನು ವಶ ಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಈಗಾಗಲೇ ಬೆಂಗಳೂರು, ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ಹಿರಿಯ ಉಪನೋಂದಣಾಧಿಕಾರಿಗಳು ಮತ್ತು ವಿವಾಹ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ನಡೆಯುತ್ತಿರುವ ಅಕ್ರಮಗಳು ಮತ್ತು ಭ್ರಷ್ಟಾಚಾರದ ಬಗ್ಗೆ ಬಂದಂತಹ ದೂರುಗಳನ್ನು ಆಧರಿಸಿ ಈ ದಾಳಿ ನಡೆಸಲಾಗಿದೆ. ಲೋಕಾಯುಕ್ತ ಕಚೇರಿಯ ಡಿವೈಎಸ್ಪಿ, ಇನ್ಸ್ಪೆಕ್ಟರ್, ನೇತೃತ್ವದಲ್ಲಿ ಈ ದಾಳಿ ನಡೆದಿದ್ದು ಲೋಕಾಯುಕ್ತರ ದಾಳಿ ವೇಳೆ ಕೆಲವು ಕಚೇರಿಗಳಲ್ಲಿ ಹಣ ಮತ್ತು ಕೆಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಭ್ರಷ್ಟಾಚಾರ ಪ್ರಕರಣಗಳಲ್ಲಿ ಭಾಗಿಯಾದ ಆರೋಪದ ಮೇಲೆ ಕೆಲವು ಸಬ್ ರಿಜಿಸ್ಟರ್ ಮತ್ತು ಮಧ್ಯವರ್ತಿಗಳ ಮೇಲೆ ಎಫ್ ಐ ಆರ್ ಸಹ ದಾಖಲಾಗಿದೆ ಎನ್ನಲಾಗಿದೆ.
ಅದೇ ರೀತಿ ಮಧ್ಯ ಕರ್ನಾಟಕದ ಚಿತ್ರದುರ್ಗ, ದಾವಣಗೆರೆ ಜಿಲ್ಲೆಯ ಬಹುತೇಕ ನೋಂದಣಾಧಿಕಾರಿಗಳ ಕಚೇರಿಗಳು ಪ್ರತಿ ನಿತ್ಯ ಚಿನ್ನದ ಮೊಟ್ಟೆ ಇಡುವ ಕೋಳಿಗಳಂತಾಗಿವೆ. ಬಹುತೇಕ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ವ್ಯಾಪಕ ಭ್ರಷ್ಚಾಚಾರ ನಡೆಯುತ್ತಿದ್ದು ಲೋಕಾಯುಕ್ತರು ಇಲ್ಲೂ ದಿಢೀರ್ ಅದರಲ್ಲೂ ಸಂಜೆ ವೇಳೆ ದಾಳಿ ಮಾಡಿದರೆ ಅಧಿಕಾರಿಗಳ ಕಳ್ಳಾಟ ಬಯಲಾಗಲಿದೆ. ಉಪನೋಂದಣಾಧಿಕಾರಿಗಳು ಪತ್ರ ಬರಹಗಾರರು ಮತ್ತು ಮಧ್ಯ ವರ್ತಿಗಳ ಮೂಲಕ ದೊಡ್ಡ ಮಟ್ಟದ ಭ್ರಷ್ಟಾಚಾರ ಎಸಗುತ್ತಿದ್ದಾರೆ. ನಿವೇಶನ ನೋಂದಣಿ, ಜಮೀನು, ಆಸ್ತಿ ಪಾಲು ವಿಭಾಗ, ಖರೀದಿ ಸೇರಿದಂತೆ ಎಲ್ಲ ಬಗೆಯ ನೋಂದಣಿಗೆ ಇಂತಿಷ್ಟು ಲಂಚ ನೀಡಬೇಕಾಗಿದೆ ಎನ್ನುವುದು ಸಾರ್ವಜನಿಕರ ವ್ಯಾಪಕ ದೂರಾಗಿದೆ.
ಚಿತ್ರದುರ್ಗ-ದಾವಣಗೆರೆ-ಶಿವಮೊಗ್ಗ ಜಿಲ್ಲೆಗಳ ಲೋಕಾಯುಕ್ತರು ಉಪ ನೋಂದಣಾಧಿಕಾರಿಗಳ ಕಚೇರಿ ಮೇಲೆ ದಿಢೀರ್ ದಾಳಿ ಮಾಡಬೇಕು. ಅಲ್ಲದೆ ಮಾರುವೇಶದಲ್ಲಿ ಬಂದು ಕೆಲ ಪತ್ರ ಬಹರಗಾರರನ್ನ ಆಸ್ತಿ ನೋಂದಣಿ ಮಾಡಿಕೊಡುವಂತೆ ಕೇಳಿದರೆ ಯಾವ ಯಾವ ಅಧಿಕಾರಿಗೆ ಎಷ್ಟು ನೀಡಬೇಕು, ಸ್ಕ್ಯಾನಿಂಗ್, ಟೈಪಿಂಗ್, ನೋಂದಣಿ ಶುಲ್ಕಗಳೆಷ್ಟು ಎನ್ನುವ ಮಾಹಿತಿಯುಳ್ಳ ಪಟ್ಟಿ ನೀಡುತ್ತಾರೆ. ಒಬ್ಬೊಬ್ಬ ಪತ್ರ ಬರಹಗಾರ ಒಂದೊಂದು ರೀತಿಯ ದರ ನಿಗದಿ ಮಾಡಿಕೊಂಡಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬಂದಿದೆ. ಹಣ ಇದ್ದವರು ಕೇಳಿದಷ್ಟು ಲಂಚ ನೀಡಿ ನೋಂದಣಿ ಮಾಡಿಸಿಕೊಳ್ಳುತ್ತಾರೆ. ಆದರೆ ಹಣ ಇಲ್ಲದವರು, ರೈತರು ಕೇಳಿದಷ್ಟು ಲಂಚ ನೀಡಲು ಆಗದೆ ಸಂಕಷ್ಟ ಎದುರಿಸುತ್ತಿದ್ದಾರೆ.