i
ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಮಕ್ಕಳಲ್ಲಿ ಮೌಲ್ಯಪ್ರಜ್ಞೆ ಬೆಳೆಸಿ-ಎಸ್.ಕೆ.ಬಿ.ಪ್ರಸಾದ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಮಕ್ಕಳಲ್ಲಿ ಮೌಲ್ಯಪ್ರಜ್ಞೆ ಬೆಳೆಸಬೇಕು ಎಂದು ಡಯಟ್ ಪ್ರಾಚಾರ್ಯ ಎಸ್.ಕೆ.ಬಿ.ಪ್ರಸಾದ್ ಹೇಳಿದರು. ನಗರದ ಡಯಟ್ನಲ್ಲಿ ಶುಕ್ರವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಡಿ.ಎಸ್.ಇ.ಆರ್.ಟಿ ಹಾಗೂ ಡಯಟ್ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಕಾರ್ಯಕ್ರಮದಡಿಯಲ್ಲಿ(ಎನ್.ಪಿ.ಇ.ಪಿ) ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪಾತ್ರಾಭಿನಯ ಮತ್ತು ಜಾನಪದ ನೃತ್ಯ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಹಪಠ್ಯ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಮೌಲ್ಯಪ್ರಜ್ಞೆ ಬೆಳೆಸಲು ಪೂರಕವಾಗಿವೆ, ನಾಟಕ ಜೀವಂತ ಕಲೆಯಾಗಿದ್ದು ಮಕ್ಕಳು ಇದರಲ್ಲಿ ಭಾಗವಹಿಸುವುದರಿಂದ ಅಭಿವ್ಯಕ್ತಿ ಸಾಮರ್ಥ್ಯ ಬೆಳೆಯುತ್ತದೆ. ಸಾಹಿತ್ಯ ಸಂಸ್ಕಾರದಿಂದ ವ್ಯಕ್ತಿತ್ವ ವಿಕಸನವಾಗುತ್ತದೆ. ಜನಪದ ಸಾಹಿತ್ಯ ಮತ್ತು ಕಲೆಗಳು ನಮ್ಮ ಬದುಕಿನಲ್ಲಿ ಜೀವನ ಮೌಲ್ಯಗಳನ್ನು ಬೆಳೆಸುತ್ತವೆ. ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯವಾಗಿದ್ದು ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಬೇಕು ಎಂದು ಸಲಹೆ ನೀಡಿದರು.
ನೋಡಲ್ ಅಧಿಕಾರಿ ಬಿ.ಎಸ್. ನಿತ್ಯಾನಂದ ಮಾತನಾಡಿ, ಆರೋಗ್ಯಪೂರ್ಣ ಸಮಾಜ ನಿರ್ಮಾಣ ಮಾಡುವ ಹಿನ್ನೆಲೆಯಲ್ಲಿ ಎನ್.ಸಿ.ಇ.ಆರ್.ಟಿ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಶಾಲಾ ಹಂತದಲ್ಲಿ ಮಕ್ಕಳಲ್ಲಿ ಜೀವನ ಕೌಶಲಗಳನ್ನು ಬೆಳೆಸಲು, ತಾರ್ಕಿಕ ಆಲೋಚನೆ, ಸಮಸ್ಯೆ ಪರಿಹಾರ ಗುಣಗಳನ್ನು ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ಪೂರಕವಾಗಿದೆ ಎಂದರು.
ಹಿರಿಯ ಉಪನ್ಯಾಸಕರಾದ ಈ.ಹಾಲಮೂರ್ತಿ, ಮಹಮದ್ ಅಯೂಬ್ ಸೊರಬ್, ಉಪನ್ಯಾಸಕರಾದ ಎಸ್. ಬಸವರಾಜು, ಕೆ.ಜಿ.ಪ್ರಶಾಂತ್, ಯು. ಸಿದ್ದೇಶಿ, ತಾಂತ್ರಿಕ ಸಹಾಯಕರಾದ ಕೆ.ಆರ್.ಲೋಕೇಶ್, ಆರ್.ಲಿಂಗರಾಜು ಮುಖ್ಯ ಶಿಕ್ಷಕ ಬಿ.ಸುರೇಂದ್ರನಾಯಕ್, ತೀರ್ಪುಗಾರರಾದ ಹಾಲೇಶಿ, ಬಿ.ಎಸ್. ಜ್ಯೋತಿ, ಭೀಮಾರೆಡ್ಡಿ, ಎಸ್. ಕೃಷ್ಣಾ ಪಿ.ಲೋಕೇಶ್, ಕೃಷ್ಣಮೂರ್ತಿ ಮತ್ತು ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಇದ್ದರು.