i
ಸಮಾಜಕಲ್ಯಾಣ ಇಲಾಖೆಯಲ್ಲಿ ಮತ್ತೊಂದು ಹಾಸಿಗೆ ದಿಂಬು ಹಗರಣ?..
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗದ ಸಮಾಜಕಲ್ಯಾಣ ಇಲಾಖೆಯಲ್ಲಿ ಹಾಸ್ಟೆಲ್ ಗಳಿಗೆ ಹಾಸಿಗೆ ದಿಂಬು, ಕವರ್ ಪೂರೈಕೆ ಮಾಡಲು ಕರೆದಿದ್ದ ಟೆಂಡರ್ ಪ್ರಕ್ರಿಯೆಯಲ್ಲಿ ಹಗರಣ ನಡೆದಿದೆಯಾ ಎನ್ನುವ ಅನುಮಾನ ಕಾಡತೊಡಗಿದೆ?..
ಚಿತ್ರದುರ್ಗ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿನ ವಸತಿ ಶಾಲೆಗಳಿಗೆ, ಮಾದರಿ ಶಾಲೆಗಳಿಗೆ ಮೂಲಭೂತ ಸಾಮಗ್ರಿಗಳನ್ನು ಖರೀದಿಸಲು ದಿನಾಂಕ-22-07-2022 ರಂದು ಇ-ಪ್ರೋಕ್ಯೂರ್ ಮೆಂಟ್ ಮೂಲಕ ಟೆಂಡರ್ ಆಹ್ವಾನಿಸಿದ್ದು ಸರಿಯಷ್ಟೇ.
ತಿಪಟೂರು ಮೂಲದ ಆನಂದ್ ಕಂಪರ್ಟ್ ಕಂಪನಿಯವರು ಟೆಂಡರ್ ಹಾಕಿ ಸ್ಯಾಂಪಲ್ ಸಲ್ಲಿಸಿದ್ದರು. ಈ ಹಂತದ ಪ್ರಕ್ರಿಯೆಗೆ ಸಮಾಜ ಕಲ್ಯಾಣ ಇಲಾಖೆ ಸ್ಪೀಕೃತಿ ಪತ್ರವನ್ನು ನೀಡಿದೆ. ಆದರೆ ಸದರಿ ಕಂಪನಿ ಸಲ್ಲಿಕೆ ಮಾಡಿದ್ದ ಟೆಂಡರ್ ತಿರಸ್ಕರಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಕಂಪನಿಯ ವ್ಯವಸ್ಥಾಪಕ ಚಂದ್ರಶೇಖರ್ ಆರೋಪಿಸಿದ್ದಾರೆ.
ಅವರು ಚಿತ್ರದುರ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಟೆಂಡರ್ ಪ್ರಕ್ರಿಯೆಯಲ್ಲಿ ತಮ್ಮ ಕಂಪನಿ ಸಲ್ಲಿಸಿದ್ದ ಟೆಂಡರ್ ಏಕೆ ರದ್ದು ಮಾಡಲಾಯಿತು ಎನ್ನುವುದನ್ನು ಸೂಕ್ತ ಕಾರಣಗಳನ್ನು ನೀಡಬೇಕು. ನಮ್ಮ ಕಂಪನಿ ಒಡೆತನದಲ್ಲಿ ಬೃಹತ್ ಕಾರ್ಖಾನೆ ಇದೆ. ಗುಣಮಟ್ಟದ ವಸ್ತುಗಳನ್ನು ಉತ್ಪಾದಿಸಿ ಪೂರೈಕೆ ಮಾಡುತ್ತಿದ್ದೇವೆ. ಇಡೀ ನಮ್ಮ ಸಂಸ್ಥೆಯ ಇತಿಹಾಸದಲ್ಲೇ ಟೆಂಡರ್ ರದ್ದು ಮಾಡಿರುವುದು ಚಿತ್ರದುರ್ಗ ಸಮಾಜ ಕಲ್ಯಾಣ ಇಲಾಖೆ ಮಾತ್ರವಾಗಿ. ಸುಮಾರು 1.69 ಕೋಟಿ ರೂ.ವೆಚ್ಚದ ಟೆಂಡರ್ ಪ್ರಕ್ರಿಯೆಯಲ್ಲಿ ನಡೆದಿರುವ ಎಲ್ಲ ರೀತಿಯ ಗೋಲ್ ಮಾಲ್ ಗಳನ್ನು ತನಿಖೆಗೆ ಒಳಪಡಿಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡುವಂತೆ ಲೋಕಾಯುಕ್ತರಿಗೆ ದೂರು ನೀಡುವುದಾಗಿ ಅವರು ಎಚ್ಚರಿಸಿದರು.
“ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿಲ್ಲ, ಆರ್ಥಿಕ ಬಿಡ್ ಇನ್ನೂ ಒಪನ್ ಮಾಡಿಲ್ಲ, ನಿಯಮಾನುಸಾರ ಇರುವಂತ ಕಂಪನಿಗೆ ಟೆಂಡರ್ ನೀಡಲಾಗುತ್ತದೆ. ಇದರಲ್ಲಿ ಯಾವುದೇ ರೀತಿ ಹಗರಣವಾಗಲಿ, ಅವ್ಯವಹಾರವಾಗಲಿ ನಡೆಯುವುದಿಲ್ಲ, ಟೆಂಡರ್ ನಿಯಮಗಳ ಪ್ರಕಾರ ಕಾರ್ಯಾದೇಶ ನೀಡಲಾಗುತ್ತದೆ”. ಮಮತ, ಉಪ ನಿರ್ದೇಶಕಿ, ಸಮಾಜ ಕಲ್ಯಾಣ ಇಲಾಖೆ, ಚಿತ್ರದುರ್ಗ.