i
ಮತದಾರರ ಪಟ್ಟಿ ಪರಿಷ್ಕರಣೆಗಾಗಿ ಅಧಿಕಾರಿಗಳ ಮನೆ ಮನೆ ಭೇಟಿ ಕಾರ್ಯ…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಚುನಾವಣಾ ಆಯೋಗದ ಸೂಚನೆಯಂತೆ ಮತದಾರರ ಪಟ್ಟಿ ಸಂಕ್ಷಿಪ್ತ ವಿಶೇಷ ಪರಿಷ್ಕರಣೆ ಕಾರ್ಯಕ್ರಮದ ಅಂಗವಾಗಿ ಅರ್ಹರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ಸಲುವಾಗಿ ಬಿಎಲ್ಒ ಗಳಿಂದ ಮನೆ ಮನೆ ಭೇಟಿ ಕಾರ್ಯಕ್ರಮ ಜರುಗುತ್ತಿದ್ದು, ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣ ಹಾಗೂ ಉಪವಿಭಾಗಾಧಿಕಾರಿ ಚಂದ್ರಯ್ಯ ಅವರು ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಮನೆ ಮನೆ ಸರ್ವೇ ಕಾರ್ಯದ ಪರಿಶೀಲನೆ ನಡೆಸಿದರು.
ಚಳ್ಳಕೆರೆ ತಾಲ್ಲೂಕಿನ ಕರೀಕೆರೆಯ ವಿವಿಧ ಮತಗಟ್ಟೆಗಳು ಹಾಗೂ ಹಾಲಗೊಂಡನಹಳ್ಳಿಯ ಮತಗಟ್ಟೆಗಳಿಗೆ ಭೇಟಿ ನೀಡಿದ ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣ ಹಾಗೂ ಉಪವಿಭಾಗಾಧಿಕಾರಿ ಚಂದ್ರಯ್ಯ ಅವರು, ಬಿಎಲ್ಒ ಗಳು ನಡೆಸುವ ಮನೆ ಮನೆ ಭೇಟಿ ಕಾರ್ಯದ ಕುರಿತು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಬೂತ್ ಮಟ್ಟದ ಅಧಿಕಾರಿಗಳೊಂದಿಗೆ ಮನೆ ಮನೆ ಭೇಟಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಧಿಕಾರಿಗಳು, ಕರಡು ಪಟ್ಟಿ ಜಿಲ್ಲೆಯ ಎಲ್ಲ ತಾಲ್ಲೂಕು ಕಚೇರಿಗಳಲ್ಲಿ, ಉಪವಿಭಾಗಾದಿಕಾರಿಗಳ ಕಚೇರಿ, ಆಯಾ ಮತಗಟ್ಟೆಗಳು, ಗ್ರಾ.ಪಂ., ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ನಲ್ಲಿಯೂ ಲಭ್ಯವಿದ್ದು, ಪರಿಶೀಲಿಸಬಹುದಾಗಿದೆ. 18 ವರ್ಷ ವಯಸ್ಸು ಪೂರ್ಣಗೊಂಡವರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಬಹುದಾಗಿದ್ದು, ಹೆಸರು ಸೇರ್ಪಡೆ, ತಿದ್ದುಪಡಿ, ಸ್ಥಳಾಂತರ, ಫೋಟೋ ಬದಲಾವಣೆ ಹೀಗೆ ವಿವಿಧ ಪರಿಷ್ಕರಣೆ ಕಾರ್ಯವನ್ನು ಕೈಗೊಳ್ಳಲು ಸಾರ್ವಜನಿಕರು ಹಾಗೂ ಮತದಾರರಿಗೆ ಡಿ. 08 ರವರೆಗೂ ಕಾಲಾವಕಾಶ ನೀಡಲಾಗಿದೆ. ಮತದಾರರ ಕರಡು ಪಟ್ಟಿ ಪ್ರಕಟಣೆಗೊಂಡಿರುವ ಬಗ್ಗೆ, ಹಾಗೂ ನಿಗದಿತ ದಿನಾಂಕಕ್ಕೆ 18 ವರ್ಷ ಪೂರ್ಣಗೊಂಡವರು, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ನಮೂನೆ–06, ಹೆಸರು ಕೈಬಿಡಲು ಅಥವಾ ಆಕ್ಷೇಪಣೆಗೆ ನಮೂನೆ–07, ತಿದ್ದುಪಡಿಗೆ ನಮೂನೆ–08, ಮತದಾರರ ಗುರುತಿನ ಚೀಟಿಗೆ ಆಧಾರ್ ಲಿಂಕ್ ಮಾಡಿಸಲು ನಮೂನೆ 6ಬಿ ಸಲ್ಲಿಸಬಹುದು. ಅನ್ನು ಭರ್ತಿ ಮಾಡಿ ಆಯಾ ಮತಗಟ್ಟೆ ಅಧಿಕಾರಿಗೆ ಸಲ್ಲಿಸಬಹುದು. ಅಥವಾ ಆನ್ಲೈನ್ ನಲ್ಲಿಯೂ ಭರ್ತಿ ಮಾಡಿ ಸಲ್ಲಿಸುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಮತದಾರರ ವಿಶೇಷ ಪರಿಷ್ಕರಣೆಯಲ್ಲಿ ಅರ್ಹ ಯುವ ಮತದಾರರನ್ನು ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು, ಹಾಗೂ ಅರ್ಹರು ಯಾರೂ ಕೂಡ ಮತದಾನದಿಂದ ಹೊರಗುಳಿಯಬಾರದು ಎಂಬ ಸದುದ್ದೇಶ ಹೊಂದಲಾಗಿದ್ದು, ಸಾರ್ವಜನಿಕರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡು, ಎಲ್ಲ ಅರ್ಹರೂ ತಪ್ಪದೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸುವಂತೆ ಮನವಿ ಮಾಡಿದರು.
ಚಳ್ಳಕೆರೆ ತಹಸಿಲ್ದಾರ್ ರಘುಮೂರ್ತಿ ಸೇರಿದಂತೆ ವಿವಿಧ ಬಿಎಲ್ಒ ಗಳು ಉಪಸ್ಥಿತರಿದ್ದರು.