i
ಬಿಜೆಪಿ ಸರ್ಕಾರಗಳ ವಿರುದ್ಧ ಸಮಾಜ ಪರಿವರ್ತನಾ ಸತ್ಯಾಗ್ರಹ ಯಾತ್ರೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸಂವಿಧಾನದ ಮೌಲ್ಯ ಮತ್ತು ಆಶಯಗಳನ್ನು ರಕ್ಷಣೆ ಮಾಡಬೇಕಾಗಿರುವುದರಿಂದ ಸಮಾಜ ಪರಿವರ್ತನಾ ಸತ್ಯಾಗ್ರಹ ಯಾತ್ರೆ ಜ.2 ರಂದು ಕೂಡಲಸಂಗಮದಿಂದ ಹೊರಟು 11 ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್ ತಲುಪಲಿದೆ ಎಂದು ಸಮಾಜ ಪರಿವರ್ತನಾ ಸತ್ಯಾಗ್ರಹ ಯಾತ್ರೆಯ ಸಂಚಾಲಕ ಎಸ್.ಆರ್.ಹಿರೇಮಠ್ ತಿಳಿಸಿದರು.
ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಪ್ರಜಾಪ್ರಭುತ್ವದಲ್ಲಿ ಸಾರ್ವಜನಿಕರೆ ಮಾಲಿಕರು, ಒಡೆಯರು, ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಇವರುಗಳೆಲ್ಲಾ ಸೇವಕರು ಎನ್ನುವುದನ್ನು ಜನತೆಗೆ ತಿಳಿಸುವುದಕ್ಕಾಗಿ ಈ ಯಾತ್ರೆ ಹೊರಟಿದ್ದು, ಮಾರ್ಗದುದ್ದಕ್ಕೂ ಅಲ್ಲಲ್ಲಿ ಸಭೆ ವಿಚಾರ ಸಂಕಿರಣಗಳನ್ನು ನಡೆಸಲಾಗುವುದು. ಪ್ರಜಾಪ್ರಭುತ್ವ ಹದಗೆಟ್ಟು ದೇಶ ಗಂಡಾಂತರ ಎದುರಿಸುತ್ತಿರುವುದರಿಂದ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕೋಮುವಾದಿ, ಫ್ಯಾಸಿಸ್ಟ್ಗಳನ್ನು ಮುಂದಿನ ಚುನಾವಣೆಯಲ್ಲಿ ಕಿತ್ತೊಗೆಯಬೇಕೆಂದು ಮತದಾರರಲ್ಲಿ ಜಾಗೃತಿ ಮೂಡಿಸುವುದು ಯಾತ್ರೆಯ ಉದ್ದೇಶ ಎಂದು
ಹೇಳಿದರು.
ಕೇಂದ್ರ ಸರ್ಕಾರ ರೈತ ವಿರೋಧಿ ಕಾಯಿದೆಯನ್ನು ಜಾರಿಗೆ ತಂದಾಗ ದೆಹಲಿಯಲ್ಲಿ ಲಕ್ಷಾಂತರ ರೈತರು ತಿಂಗಳುಗಟ್ಟಲೆ ಚಳುವಳಿ ನಡೆಸಿದಾಗ ಅಧಿಕಾರದ ಮದದಿಂದ ರೈತರನ್ನು ಭಯೋತ್ಪಾದಕರು, ಉಗ್ರಗಾಮಿಗಳು ಹೀಗೆ ಏನೆಲ್ಲಾ ಅನ್ನಬಾರದಿತ್ತು ಅದನ್ನೆಲ್ಲಾ ಹೇಳಿತು. ಹಾಗಾಗಿ ಎರಡನೆ ಸ್ವಾತಂತ್ರ್ಯ ಸಂಗ್ರಾಮದ ರೀತಿಯಲ್ಲಿ ಸಮಾಜ ಪರಿವರ್ತನ ಸತ್ಯಾಗ್ರಹ ಯಾತ್ರೆಯನ್ನು ನಡೆಸಲಾಗುವುದು. ರೈತರು, ದಲಿತರು, ಕಾರ್ಮಿಕರು, ಮಹಿಳೆಯರು, ಸಾರ್ವಜನಿಕರು ಗೌರವದಿಂದ ಬದುಕಲು ಆಗುತ್ತಿಲ್ಲ. ಅದಕ್ಕಾಗಿ ಧಾರವಾಡದ ಸಮಾಜ ಪರಿವರ್ತನಾ ಸಮುದಾಯ ಕಚೇರಿಯಲ್ಲಿ ಇದೇ ತಿಂಗಳ 16, 17 ರಂದು ತರಬೇತಿ ನೀಡಲಾಗುವುದು. ದೇಶದಲ್ಲಿ ಈಗ ಅಘೋಷಿತ ತುರ್ತು ಪರಿಸ್ಥಿತಿಯಿದೆ. ದೆಹಲಿಯಲ್ಲಿ ರೈತರು ಕರಾಳ ಕಾಯಿದೆಯನ್ನು ಹಿಂದಕ್ಕೆ ಪಡೆಯುವಂತೆ ಹೇಗೆ ಸತ್ಯಾಗ್ರಹ ನಡೆಸಿದರೋ ಅದಕ್ಕೆ ಪೂರಕವಾಗಿ ನಾವುಗಳು ಸಮಾಜ ಪರಿವರ್ತನ ಸತ್ಯಾಗ್ರಹ ಯಾತ್ರೆಗೆ
ಹೊರಟಿದ್ದೇವೆ. ಇದು ಸೃಜನಶೀಲ ಸ್ವಾತಂತ್ರ್ಯ ಹೋರಾಟದ ಪ್ರತೀಕವಾಗಿದೆ ಎಂದರು.
ಯತಿರಾಜ್ ಮಾತನಾಡಿ ಕೃಷಿ ಕಾಯಿದೆಯನ್ನು ಹಿಂದಕ್ಕೆ ಪಡೆಯುವಂತೆ ಮಂಗಳೂರಿನಿಂದ ಕೋಮು ಸೌಹಾರ್ಧ ಜಾಥ, ಬಡವರಿಗೆ ಭೂಮಿ ನೀಡಲು ಆಗದ ಸರ್ಕಾರ ಈಗ ಉದ್ಯಮಿ, ಬಂಡವಾಳಶಾಹಿ, ಕಾರ್ಪೊರೇಟರ್ಗಳಿಗೆ ಭೂಮಿ ಕೊಡಲು ಹೊರಟಿರುವುದನ್ನು ವಿರೋಧಿಸಿ ಕುಸನೂರಿನಿಂದ ಒಂದು ತಂಡ, ದಲಿತರ ಮೇಲೆ ನಡೆಯುತ್ತಿರುವ ಹಲ್ಲೆ, ಅಸೃಶ್ಯತೆಯನ್ನು ಖಂಡಿಸಿ ಕೋಲಾರದಿಂದ ಕೂಡ ಯಾತ್ರೆ ಬರಲಿದೆ. ಜಾಗೃತ ಮತದಾರರನ್ನು ಸೃಷ್ಟಿ ಮಾಡುವುದು ನಮ್ಮ ಉದ್ದೇಶವಾಗಿದ್ದು, ಇದಕ್ಕಾಗಿ ಐದು ತಿಂಗಳಿನಿಂದ ತಯಾರಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಸಿ.ಪಿ.ಐ.ಜಿಲ್ಲಾ ಕಾರ್ಯದರ್ಶಿ ಕಾಂ.ಜಿ.ಸಿ.ಸುರೇಶ್ಬಾಬು, ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಶಂಕರಪ್ಪ, ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್ಬಾಬು, ಕಾಂ.ಈ.ಸತ್ಯಕೀರ್ತಿ, ಎಂ.ಆರ್.ದಾಸೇಗೌಡ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.