i
ಹಿರಿಯೂರು ಕೆಎಸ್ಆರ್ಟಿಸಿ ಬಸ್ ಡಿಪೋಕ್ಕೆ ಕೂಡಿ ಬಂದ ಕಾಲ…
ವರದಿ-ಎಚ್.ಸಿ.ಗಿರೀಶ್, ಹರಿಯಬ್ಬೆ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ನಗರದ ಹುಳಿಯಾರು ರಸ್ತೆಯಲ್ಲಿನ ಕೆಎಸ್ಆರ್ಟಿಸಿ ಬಸ್ ಡಿಪೋ ಕಾಮಗಾರಿ ಶಂಕುಸ್ಥಾಪನೆಗೆ ಅಂತೂ ಇಂತೂ ಕಾಲ ಕೂಡಿ ಬಂದಿದೆ.
2008ರಲ್ಲಿ ಬಿಜೆಪಿ ಸರ್ಕಾರವಿದ್ದಾಗ ಆರ್.ಅಶೋಕ್ ಸಾರಿಗೆ ಸಚಿವರಾಗಿದ್ದಂತಹ ಸಂದರ್ಭದಲ್ಲಿ ಹಿರಿಯೂರು ಡಿಪೋ ನಿರ್ಮಾಣ ಪ್ರಸ್ತಾವನೆಗೆ ಅನುಮೋದನೆ ದೊರೆತ ವೇಗದಲ್ಲೇ ನೆನೆಗುದಿಗೆ ಬಿದ್ದಿತ್ತು. ಈ ಕಾರ್ಯಕ್ಕಿಂತ ಮೊದಲು ಅಂದರೆ 20 ವರ್ಷಗಳಿಂದೆಯೇ ದಾವಣಗೆರೆ ವಿಭಾಗದ ವ್ಯಾಪ್ತಿಯೊಳಗೆ ಕೆಲಸ ನಿರ್ವಹಿಸುತ್ತಿದ್ದಂತಹ ಸಂದರ್ಭದಲ್ಲೇ ಹಿರಿಯೂರು ಬಸ್ ಡಿಪೋ ನಿರ್ಮಿಸಲು ಜಮೀನು ನೀಡಲಾಗಿತ್ತು. ಆದರೆ ಕ್ಷೇತ್ರದ ಜನಪ್ರತಿನಿಧಿಗಳ ಕಾರಣವೋ, ಸರ್ಕಾರದ ಉದಾಸೀನವೋ ಅಥವಾ ಇನ್ಯಾವುದೇ ಕಾರಣಾಂತರಗಳಿಂದ ಕಾಮಗಾರಿ ಆರಂಭವಾಗಿರಲಿಲ್ಲ. ಇದೀಗ ಕಾಮಗಾರಿ ಭಾಗ್ಯ ಕೂಡಿ ಬಂದಿದೆ.
ಹಿರಿಯೂರು ನಗರದ ಹುಳಿಯಾರ್ ರಸ್ತೆಯ ತಾಲೂಕು ಕ್ರೀಡಾಂಗಣ ಸಮೀಪದಲ್ಲಿನ ಹಿರಿಯೂರು ಬಸ್ ಘಟಕ ಕಾಮಗಾರಿಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಿತ್ರದುರ್ಗ ವಿಭಾಗದಿಂದ ಡಿಸೆಂಬರ್ 6 ರಂದು ಮಧ್ಯಾಹ್ನ 12.30ಕ್ಕೆ ಶಂಕುಸ್ಥಾಪನಾ ಕಾರ್ಯ ನೆರವೇರಲಿದೆ.
ತಾಲೂಕು ಕೇಂದ್ರದಲ್ಲಿ ಸಾರಿಗೆ ಸಂಸ್ಥೆಯ 3 ಎಕರೆ ಸ್ವಂತ ಜಾಗವಿದೆ. ಇದರಲ್ಲಿ 6 ಕೋಟಿ ರೂ.ಗಳ ವೆಚ್ಚದಲ್ಲಿ ಡಿಪೋ ಘಟಕ ಕಾಮಗಾರಿ ಆರಂಭವಾಗಲಿದೆ. ಮೂರು ಎಕರೆ ವಿಸ್ತೀರ್ಣದಲ್ಲಿ ಡಿಪೋದ ಆಡಳಿತ ಕಚೇರಿ, ಬಸ್ಸುಗಳ ನಿರ್ವಹಣ ಅಂಕಣ, ಬಸ್ಸುಗಳ ಪರಿವೀಕ್ಷಣ ಅಂಕಣ, ಭದ್ರತಾ ಮತ್ತು ಸಂಚಾರ ಶಾಖೆ, ಮಹಿಳಾ ಸಿಬ್ಬಂದಿ ವಿಶಾಂತಿ ಗೃಹ, ಪುರುಷ ಸಿಬ್ಬಂದಿ ವಿಶ್ರಾಂತಿ ಗೃಹ ಸೇರಿದಂತೆ ಮತ್ತಿತರ ಕೊಠಡಿಗಳು ಇರಲಿವೆ. ಸುಸಜ್ಜಿತ ಹಾಗೂ ಅತ್ಯಾಧುನಿಕ ನೂತನ ಡಿಪೋ ತಲೆ ಎತ್ತಲಿದೆ. ಡಿಪೋ ಕಾಮಗಾರಿ ಪೂರ್ಣಗೊಂಡ ನಂತರ ಆಡಳಿತ ಚಟುವಟಿಕೆಗಳು ಆರಂಭವಾಗಲಿವೆ.
ಅಗತ್ಯ ಮಾರ್ಗಗಳುಃ ಚಿತ್ರದುರ್ಗ ಕೇಂದ್ರ ಸ್ಥಾನದಿಂದ 126 ಮಾರ್ಗಗಳಲ್ಲಿ ಒಟ್ಟು 126 ಬಸ್ಗಳು ಜಿಲ್ಲೆ ಮತ್ತು ರಾಜ್ಯ ವ್ಯಾಪ್ತಿಯಲ್ಲಿ ನಿತ್ಯ ಸಂಚಾರ ನಡೆಸುತ್ತಿವೆ. ಅವುಗಳಲ್ಲಿ 40 ಸಾಮಾನ್ಯ, 71 ಎಕ್ಸ್ಪ್ರೆಸ್, 5 ರಾಜಹಂಸ, 10 ನಗರ ಸಾರಿಗೆ ಬಸ್ ಗಳು ಸೇವೆ ಒದಗಿಸುತ್ತಿವೆ.
ಆದರೆ ವಿಜಯವಾಡ, ಮಂತ್ರಾಲಯ, ತಿರುಪತಿ, ತಮಿಳುನಾಡು, ಮದ್ರಾಸ್, ಹೊಸೂರು, ಕೊಯಮತ್ತೂರು, ಧರ್ಮಸ್ಥಳ, ಮೈಸೂರು, ಮಣಿಪಾಲ, ಪೂನಾ, ಸೋಲ್ಲಾಪುರ, ಪಂಡರಾಪುರ, ದಾವಣಗೆರೆ ಹುಬ್ಬಳ್ಳಿ, ಧಾರವಾಡ, ಶಿರಸಿ, ಬೆಳಗಾವಿ, ಗುಲ್ಬರ್ಗ, ರಾಯಚೂರು, ಬಳ್ಳಾರಿ, ಆಂದ್ರಪ್ರದೇಶ ಹೀಗೆ ಹತ್ತು ಹಲವು ಮಾರ್ಗಗಳಲ್ಲಿ ಬಸ್ ಸಂಚಾರ ಆರಂಭಿಸುವ ಅವಕಾಶ ಇದ್ದರೂ ಚಿತ್ರದುರ್ಗ ವಿಭಾಗಾಧಿಕಾರಿಗಳು ಗಮನ ನೀಡುತ್ತಿಲ್ಲ, ಹಿರಿಯೂರು ಘಟಕ ಆರಂಭವಾದ ಮೇಲೆ ಈ ಎಲ್ಲ ಪ್ರಮುಖ ಕೇಂದ್ರಗಳಿಗೆ ಬಸ್ ಓಡಿಸುವ ಅವಕಾಶ ದೊರೆಯಲಿದೆ.
ಉದ್ಯೋಗ ಸೃಷ್ಠಿ-
ಹಿರಿಯೂರು ಬಸ್ ಘಟಕ ಆರಂಭವಾಗುತ್ತಿರುವುದರಿಂದ ಸುಮಾರು 300 ನೌಕರರಿಗೆ ಉದ್ಯೋಗ ದೊರೆಯಲಿದೆ. ಇದಲ್ಲದೆ ಈಗಾಗಲೇ ರಾಜ್ಯದ ವಿವಿಧ ಜಿಲ್ಲಾ ಘಟಕಗಳಲ್ಲಿ ಸ್ಥಳೀಯರು ಕರ್ತವ್ಯ ನಿರ್ವಹಿಸುತ್ತಿದ್ದು ಅಂತಹ ನೌಕರರಿಗೆ ಸ್ಥಳೀಯವಾಗಿ ಸೇವೆ ಮಾಡಲು ಅನುಕೂಲವಾಗಲಿದೆ.
ಹೈಟೆಕ್ ಬಸ್ ನಿಲ್ದಾಣಃ ಈಗಿರುವ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಹತ್ತಾರು ವರ್ಷಗಳಷ್ಟು ಹಳೆಯದಾಗಿದೆ. ಇನ್ನೂ ಸುಸಜ್ಜಿತವಾದ ಬಸ್ನಿಲ್ದಾಣ ಹೊಂದಿಲ್ಲ.
ಹಿರಿಯೂರು ಮಧ್ಯ ಕರ್ನಾಟಕದ ಹೆಬ್ಬಾಗಿಲಾಗಿದೆ. ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕಕ್ಕೆ ತೆರಳುವ ಬಸ್ ಗಳು ಹಿರಿಯೂರಿನಿಂದಲ ವಿಂಗಡಣೆಗೊಂಡು ಸಂಚರಿಸಬೇಕಾಗಿದೆ. ರಾಷ್ಟ್ರೀಯ ಹೆದ್ದಾರಿ-4, ಶ್ರೀರಂಗಪಟ್ಟಣ-ಬೀದರ್ ರಾಷ್ಟ್ರೀಯ ಹೆದ್ದಾರಿಗಳು ಹಿರಿಯೂರು ನಗರವನ್ನು ಸೀಳಿಕೊಂಡು ಹೋಗುತ್ತಿರುವುದರಿಂದಾಗಿ ಹಿರಿಯೂರು ನಗರಕ್ಕೆ ಒಂದು ಹೈಟೆಕ್ ಬಸ್ ನಿಲ್ದಾಣದ ಅಗತ್ಯ ಇದೆ. ಅತಿಮುಖ್ಯವಾಗಿ ಹಿರಿಯೂರು ನಗರ ಜೆಕ್ಷನ್ ಇದ್ದಂತೆ. ಯಾವುದೇ ಬಸ್ ಗಳು ಇಲ್ಲಿಗೆ ಬಂದು ಹೋಗಬೇಕಾಗಿದೆ. ಕೆಎಸ್ಆರ್ಟಿಸಿ ಹಾಗೂ ಅಂತಾರಾಜ್ಯ ಬಸ್ ನಿಲುಗಡೆಗಾಗಿ ಪ್ಲ್ಯಾಟ್ ಫಾರಂಗಳು, ಹೈಟೆಕ್ ಶೌಚಾಲಯಗಳು, ಆಸನಗಳ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ಘಟಕ, ಪಾಸ್ ಕೌಂಟರ್, ಸಾರ್ವಜನಿಕ ವಾಹನ ನಿಲುಗಡೆ, ಆಟೊ ನಿಲ್ದಾಣ, ಎಟಿಎಂ, ಪ್ರಯಾಣಿಕರಿಗಾಗಿ ಮೂಲಭೂತ ಸೌಕರ್ಯಗಳು, ಉಪಾಹಾರ ಗೃಹ, ಕಚೇರಿಗಳು, ಪ್ರಯಾಣಿಕರ ಅನುಕೂಲಕ್ಕಾಗಿ ಅಗತ್ಯ ಸೌಲಭ್ಯಗಳು ಸೇರಿದಂತೆ ಇತ್ಯಾದಿ ಸೌಲಭ್ಯಗಳುಳ್ಳ ಹೈಟೆಕ್ ಬಸ್ ನಿಲ್ದಾಣದವನ್ನು ನಿರ್ಮಿಸಲು ಜನಪ್ರತಿನಿಧಿಗಳು ಮುಂದಾಗಬೇಕಿದೆ.
ಸಾರಿಗೆ ಸೌಲಭ್ಯಃ
ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಉದ್ದೇಶಿತ ಹಿರಿಯೂರು ಸಾರಿಗೆ ಘಟಕದ ಕಾಮಗಾರಿಯನ್ನು 6 ತಿಂಗಳೊಳಗೆ ಪೂರ್ಣ ಮಾಡಬೇಕಿದೆ. ಈ ಭಾಗದ ಜನರ ಅನುಕೂಲಕ್ಕಾಗಿ ವಿವಿಧ ತಾಲೂಕು ಘಟಕ, ಹೋಬಳಿ ಮಟ್ಟದಲ್ಲಿ ಬಸ್ ಗಳ ಸಂಚಾರಕ್ಕೆ ಅನುಕೂಲ ಆಗಲಿದೆ. ಅತಿ ಮುಖ್ಯವಾಗಿ ತಾಲೂಕಿನಾದ್ಯಂತ 300 ಹಳ್ಳಿಗಳಿಗೂ ಹೆಚ್ಚಿನ ಸಂಖ್ಯೆಯಲ್ಲಿರುವ ಗ್ರಾಮಾಂತರ ಪ್ರದೇಶಗಳಿಗೆ ಸಾರಿಗೆ ಸೌಲಭ್ಯ ದೊರೆಯಲಿದೆ.
ಹತ್ತಾರು ವರ್ಷಗಳ ಕಾಲ ಬಸ್ ಸೌಕರ್ಯವಿಲ್ಲದೆ ಪರಿತಪಿಸುತ್ತಿದ್ದ ಪ್ರಯಾಣಿಕರು ನಿಟ್ಟೂಸಿರು ಬಿಡುವ ಕಾಲ ದೂರವಿಲ್ಲ. ಹಿರಿಯೂರು ತಾಲೂಕು ದಿನದಿಂದ ದಿನಕ್ಕೆ ವಿಶಾಲವಾಗಿ ಬೆಳೆಯುತ್ತಿದ್ದು, ಜನಸಂಖ್ಯೆ ಅನುಗುಣವಾಗಿ ಬಸ್ ಸೇವೆ ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯಗಳಲ್ಲೊಂದಾಗಿದೆ.
ಅಗತ್ಯ ಬಸ್ ನೀಡಿಕೆಃ ಚಿತ್ರದುರ್ಗ ವಿಭಾಗದಿಂದ ಒಂದೇ ಒಂದು ವೋಲ್ವೋ ಬಸ್ ಗಳ ಸೇವೆ ನೀಡಲಾಗುತ್ತಿಲ್ಲ. ವೈಭವ ಬಸ್ ಗಳು, ಸ್ಲೀಪರ್ ಕೋಚ್ ಗಳ ಸೇವೆಯೂ ದೊರೆಯುತ್ತಿಲ್ಲ. ದೂರದ ಊರುಗಳಿಗೆ, ವಿವಿಧ ಪ್ರವಾಸಿ ತಾಣಗಳಿಗೆ, ಧಾರ್ಮಿಕ ಕೇಂದ್ರಗಳಿಗೆ ಪ್ರಸಿದ್ಧ ದೇವಸ್ಥಾನಗಳ ಊರುಗಳಿಗೆ ಬಸ್ ಓಡಿಸಿ ಚಿತ್ರದುರ್ಗ ವಿಭಾಗವನ್ನು ಲಾಭದಾಯಕ ಸಂಸ್ಥೆಯನ್ನಾಗಿ ಮಾರ್ಪಡಿಸಬೇಕಾಗಿದೆ. ನಗರ ಬಸ್ ಓಡಲಿ-ಹಿರಿಯೂರು ನಗರ ಸೇರಿದಂತೆ 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ನಗರ ಸಾರಿಗೆ ಬಸ್ಗಳು ಓಡಬೇಕಾಗಿದೆ. ಶಾಲಾ ಕಾಲೇಜ್, ಡಿಪ್ಲೋಮಾ ಐಟಿಐ ಕಾಲೇಜ್ ಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ, ಕೂಲಿ ಕಾರ್ಮಿಕರಿಗೆ ಅನುಕೂಲವಾಗಲಿದೆ.
ನೂತನ ಕೆಎಸ್ಆರ್ಟಿಸಿ ಡಿಪೋ ನಿರ್ಮಾಣ ಆಗುತ್ತಿರುವುದು ಸ್ವಾಗತಾರ್ಹ. ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ಅಲ್ಲದೆ ಕಾಮಗಾರಿಯ ಗುಣಮಟ್ಟವನ್ನು ಕಾಯ್ದುಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳು ನಿಗಾ ವಹಿಸಬೇಕು. ಬಸ್ನಿಲ್ದಾಣ ಕಾಮಗಾರಿಯನ್ನೂ ಆದಷ್ಟು ಬೇಗ ಆರಂಭಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.