i
ರಾಜ್ಯಕ್ಕೆ ಮತ್ತೊಂದು ಆರು ಲೇನ್ಗಳ ಎಕ್ಸ್ ಪ್ರೆಸ್ ಹೈವೇ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ಮತ್ತು ಆಂಧ್ರಪ್ರದೇಶದ ವಿಜಯವಾಡ ನಡುವೆ ಶೀಘ್ರದಲ್ಲೇ ಮತ್ತೊಂದು ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಲಿದೆ. ಭಾರತಮಾಲಾ ಪರಿಯೋಜನಾ (BMP) ಹಂತ-2 ರ ಅಡಿಯಲ್ಲಿ ಈ ಯೋಜನೆ ನಿರ್ಮಿಸಲಾಗುತ್ತಿದೆ. ಈ ಹೆದ್ದಾರಿ ಬೆಂಗಳೂರು ಮತ್ತು ಆಂಧ್ರಪ್ರದೇಶದ ರಾಯಲಸೀಮಾ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುತ್ತದೆ. ಅತಿಶೀಘ್ರದಲ್ಲಿ ವಿಜಯವಾಡ – ಬೆಂಗಳೂರು ಎಕ್ಸ್ಪ್ರೆಸ್ ಹೈವೇ ಕಾಮಗಾರಿ ಪ್ರಾರಂಭವಾಗಲಿದ್ದು, ಇದಕ್ಕಾಗಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಬಿಡ್ಗಳನ್ನು ಆಹ್ವಾನಿಸಿದೆ.
ನೂತನವಾಗಿ ನಿರ್ಮಾಣವಾಗಲಿರುವ ಎಕ್ಸ್ಪ್ರೆಸ್ ಹೈವೇ ಬೆಂಗಳೂರು-ಕಡಪ-ವಿಜಯವಾಡ ಮಾರ್ಗವಾಗಿ ಸಾಗಲಿದೆ. ಇದಕ್ಕಾಗಿಯೇ ಬಿಕವಿ ಎಕ್ಸ್ಪ್ರೆಸ್ ಹೈವೇ ಎಂದೂ ಕರೆಯಲಾಗುತ್ತದೆ. ಎರಡು ನಗರಗಳ ನಡುವಿನ ಪ್ರಯಾಣದ ಸಮಯ ಈಗಿರುವ ಮಾರ್ಗದಲ್ಲಿ 12 ಗಂಟೆಯಾಗುತ್ತಿದ್ದು, ಈ ಹೆದ್ದಾರಿ ನಿರ್ಮಾಣದ ನಂತರ ಕೇವಲ 6 ಗಂಟೆಗೆ ಸಂಚಾರದ ಸಮಯ ತಗ್ಗಲಿದೆ.
ಬೆಂಗಳೂರು-ಕಡಪ-ವಿಜಯವಾಡ ಎಕ್ಸ್ ಪ್ರೆಸ್ ಹೈವೇ ಆರು ಲೇನ್ಗಳಲ್ಲಿ ನಿರ್ಮಾಣವಾಗಲಿದೆ. ಸುಮಾರು 342 ಕಿಲೋಮೀಟರ್ ಉದ್ದವಿದ್ದು, 19,200 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಯೋಜನೆಯ ಪ್ರಸ್ತಾವನೆಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ತಕ್ಷಣವೇ ಅನುಮೋದಿಸಿದ್ದಾರೆ. ಆಂಧ್ರ ಪ್ರದೇಶ ಸರ್ಕಾರವು ನಿರ್ಮಾಣವನ್ನು ಪ್ರಾರಂಭಿಸಲು ಭೂಮಿ ಸ್ವಾಧೀನಪಡಿಸಿಕೊಳ್ಳಲು ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗಿದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಯೋಜನೆಯನ್ನು 14 ಪ್ಯಾಕೇಜ್ಗಳಲ್ಲಿ ನಡೆಸುತ್ತಿದ್ದು, ಅದರಲ್ಲಿ ಹೈಬ್ರಿಡ್ ಆನ್ಯುಟಿ ಮಾಡೆಲ್ (ಎಚ್ಎಎಂ) ಅಡಿಯಲ್ಲಿ ನಾಲ್ಕಕ್ಕೆ ಬಿಡ್ಗಳನ್ನು ಆಹ್ವಾನಿಸಿದೆ. ಕಾಮಗಾರಿಗೆ ಪ್ರಾಧಿಕಾರವು ಒಟ್ಟು ವೆಚ್ಚದ 40 ಪ್ರತಿಶತವನ್ನು ಪಾವತಿಸುತ್ತದೆ. ಉಳಿದ 60 ಪ್ರತಿಶತವನ್ನು ಗುತ್ತಿಗೆದಾರರು ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಹೇಳಲಾಗುತ್ತಿದೆ.
ಬೆಂಗಳೂರು-ಕಡಪ-ವಿಜಯವಾಡ ಎಕ್ಸ್ ಪ್ರೆಸ್ ಹೈ ವೇ ಮಾರ್ಗವು ಕೋಡಿಕೊಂಡ, ಪುಲಿವೆಂದುಲ, ಮಲ್ಲೇಪಾಲಿ, ವಂಗಪಾಡು, ಅಡ್ಡಂಕಿ, ಚಿಲಕಲೂರಿಪೇಟೆ ಮತ್ತು ಗುಂಟೂರು ಮುಂತಾದ ಪಟ್ಟಣಗಳ ಮೂಲಕ ಹಾದು ಹೋಗಲಿದೆ.
ಎಕ್ಸ್ಪ್ರೆಸ್ವೇ 2025 – 2026 ರ ವೇಳೆಗೆ ಸಾರ್ವಜನಿಕ ಬಳಕೆಗೆ ಮುಕ್ತವಾಗುವ ಅವಕಾಶವಿದೆ ಎನ್ನಲಾಗುತ್ತಿದೆ. ಒಟ್ಟಾರೆ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಕಾರ್ಯಕ್ಕೆ ಕೇಂದ್ರ ಸರ್ಕಾರ ಒತ್ತು ನೀಡಿದೆ.