i
ಕಾಲೋನಿ ರಸ್ತೆ ಸರಿಪಡಿಸುವಂತೆ ಒತ್ತಾಯಿಸಿ ಅರಣ್ಯ ಇಲಾಖೆಗೆ ಮುತ್ತಿಗೆ, ಪ್ರತಿಭಟನೆ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕಿನ ನಜೀರ್ ಕಾಲೋನಿ ಗ್ರಾಮದಿಂದ ಗೌಡನಹಳ್ಳಿ ಗ್ರಾಮಕ್ಕೆ ಹೋಗುವ ಸಾರ್ವಜನಿಕರ ಬಂಡಿದಾರಿಗೆ ಅಡ್ಡಲಾಗಿ ಅರಣ್ಯ ಇಲಾಖೆಯವರು ಗುಂಡಿ ತೆಗೆದಿರುವುದರಿಂದ ಗ್ರಾಮದ ಜನರು ಆಸ್ಪತ್ರೆಗೆ ಹೋಗಲು, ರೇಷನ್ ತರಲು,ವಿದ್ಯಾರ್ಥಿಗಳು ಶಾಲೆಗೆ ಹೋಗಲು ತೀವ್ರ ತೊಂದರೆಯಾಗಿದ್ದು, ಈ ರಸ್ತೆಯನ್ನು ಕೂಡಲೇ ಸರಿಪಡಿಸಬೇಕು ಎಂಬುದಾಗಿ ರೈತಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಕೆ ಸಿ ಹೊರಕೇರಪ್ಪಒತ್ತಾಯಿಸಿದರು.
ಅರಣ್ಯ ಇಲಾಖೆಯ ಮುಂಭಾಗದಲ್ಲಿ ರೈತಸಂಘದನೇತೃತ್ವದಲ್ಲಿ ನಜೀರ್ ಕಾಲೋನಿ ಗ್ರಾಮದಿಂದ ಗೌಡನಹಳ್ಳಿ ಗ್ರಾಮಕ್ಕೆ ಹೋಗುವ ಸಾರ್ವಜನಿಕರ ಬಂಡಿದಾರಿ ಸರಿಪಡಿಸುವಂತೆ ಒತ್ತಾಯಿಸಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
ಈ ರಸ್ತೆಗೆ ಸಂಬಂಧಪಟ್ಟ ವಲಯ ಅರಣ್ಯ ಇಲಾಖೆ ಅಧಿಕಾರಿಗಳ ಕಚೇರಿಗೆ ಬಂದು ವಿಚಾರಿಸಿ ರೈತಸಂಘದ ಮುಖಂಡರು ಮೊಬೈಲ್ ಗೆ ಕರೆ ಮಾಡಿ ತಿಳಿಸಿದಾಗ ಬೆಳಿಗ್ಗೆಯೇ ಬಂದು ರಸ್ತೆ ಸರಿಪಡಿಸುವಂತೆ ತಿಳಿಸಿದ್ದರೂ ಇನ್ನು ಯಾವುದೇ ಕ್ರಮಕೈಗೊಂಡಿಲ್ಲ ಇದರಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಅವರು ದೂರಿದರು.
ಇದೀಗ ಪ್ರತಿದಿನವೂ ದೂರವಾಣಿ ಕರೆ ಮಾಡಿದರೂ, ಕರೆ ಸ್ವೀಕರಿಸದೆ ನಿರ್ಲಕ್ಷ್ಯ ವಹಿಸುಸುತ್ತಿದ್ದಾರೆ. ಪ್ರತಿದಿನ ಕಚೇರಿಗೆ ಬಂದು ಕಾದರೂ ಸಹ ಕಚೇರಿಯಲ್ಲಿ ಸಿಗದೇ ಜನರು ಸಂಕಷ್ಟ ಅನುಭವಿಸುವಂತೆ ಮಾಡಿದ್ದಾರೆ, ಕಾಡುದಾರಿಯ ರಸ್ತೆ ಜನರು ಸಂಚರಿಸುವಾಗ ಜೀವಹಾನಿಯಾದರೆ ಯಾರು ಹೊಣೆ ಎಂದರಲ್ಲದೆ, ಈ ಅರಣ್ಯ ಇಲಾಖೆಗೆ ಸಂಬಂಧಿಸಿದ ಪ್ರದೇಶದಿಂದ ಮಣ್ಣು ಮಾಫಿಯಾದವರು ಹಾಗೂ ಗುತ್ತಿಗೆದಾರರು ಅಕ್ರಮವಾಗಿ ಲಾರಿಗಳಲ್ಲಿ ಅರಣ್ಯ ಇಲಾಖೆಯೊಂದಿಗೆ ಶಾಮೀಲಾಗಿ ಫಲವತ್ತಾದ ಮಣ್ಣುಸಾಗಿಸುತ್ತಿದ್ದು, ಈ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ತಿಳಿಸಿದ್ದರೂ ಸಹ ಅವರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ, ದಿವ್ಯ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆಪಾದಿಸಿದರು.
ಈ ಎಲ್ಲಾ ಕಾರಣಗಳಿಂದ ಬೇಸತ್ತು ಹೋಗಿರುವ ರೈತಮುಖಂಡರು ಹಾಗೂ ನಜೀರ್ ಕಾಲೋನಿ ಗ್ರಾಮಸ್ಥರು ವಿರುದ್ಧ ಸೂಕ್ತಕ್ರಮ ಕೈಗೊಳ್ಳುವಂತೆ ತ್ತಾಯಿಸಿ ರಾಜ್ಯ ರೈತಸಂಘದ ನೇತೃತ್ವದಲ್ಲಿ ಅರಣ್ಯ ಇಲಾಖೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಎಸಿಎಫ್ ರಮೇಶ್ ತಕ್ಷಣ ರಸ್ತೆ ಸರಿಪಡಿಸುವುದಾಗಿ ರಸ್ತೆಗೆ ಅಡ್ಡಲಾಗಿ ಗುಂಡಿ ತೋಡಿರುವ ಅಧಿಕಾರಿ ವಿರುದ್ಧ ಸೂಕ್ತಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳಿಗೆ ವರದಿ ನೀಡುವುದಾಗಿ ಭರವಸೆ ನೀಡಿದರು, ಈ ಪ್ರಮಾದ ಬಗ್ಗೆ ವಲಯ ಅರಣ್ಯಾಧಿಕಾರಿ ರಾಜಶೇಖರ್ ರೈತರ ಕ್ಷಮೆ ಯಾಚಿಸಿದ್ದರಿಂದ ರೈತರು ಪ್ರತಿಭಟನೆ ಹಿಂಪಡೆಯಲಾಯಿತು.
ಈ ಪ್ರತಿಭಟನೆಯಲ್ಲಿ ಬ್ಯಾಡರಹಳ್ಳಿ ಶಿವಕುಮಾರ್, ಯಳನಾಡು ಚೇತನ್, ಲಕ್ಷ್ಮಿಕಾಂತ್, ಗೌಸ್ ಪೀರ್, ಬಿಡಿ ಶ್ರೀನಿವಾಸ್, ಕಲ್ಪನಾ, ಶಶಿಕಲಾ. ನಿತ್ಯಶ್ರೀ, ಮೇಟಿಕುರ್ಕೆ, ತಿಪ್ಪೇಸ್ವಾಮಿ, ದೇವರ ಕೊಟ್ಟ ರಂಗಸ್ವಾಮಿ, ಎಚ್ ಆರ್ ತಿಪ್ಪೇಸ್ವಾಮಿ ಓಬಣ್ಣ ಅನ್ಸರ್ ಅಲಿ ದಾದಾಪೀರ್ ಮೋಹದ್ದೀನ್, ಮಲ್ಲಿಕಾರ್ಜುನಪ್ಪ ಉಮಾಪತಿ ಲೋಕೇಶ್ ರವೀಶ್ ಈಶ್ವರಗೆರೆ ನಾಗರಾಜ್ ಸುಬ್ರಮಣಿ ರಾಘವೇಂದ್ರ ಇನ್ನೂ ಅನೇಕ ಮುಖಂಡರು ಹಾಗೂ ನಜೀರ್ ಕಾಲೋನಿಯ ಮಹಿಳೆಯರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.