i
ಸರ್ಕಾರಿ ಸಾಲ ಸೌಲಭ್ಯಕ್ಕಾಗಿ ಲಾಟರಿ ಮೂಲಕ ಆಯ್ಕೆ-ಶಾಸಕ ತಿಪ್ಪಾರೆಡ್ಡಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಸರ್ಕಾರ ನೀಡಿರುವ ಸೌಲಭ್ಯಗಳನ್ನು ಪಡೆದು ಉತ್ತಮ ಜೀವನ ರೂಪಿಸಿಕೊಳ್ಳಿ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಡಿ. ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ, ಡಾ. ಬಿ.ಆರ್. ಅಬೇಡ್ಕರ್ ಅಭಿವೃದ್ದಿ ನಿಗಮ, ಆದಿಜಾಂಬವ ಅಭಿವೃದ್ದಿ ನಿಗಮ,ವಾಲ್ಮೀಕಿ ಅಭಿವೃದ್ಧಿ ನಿಗಮ, ಭೋವಿ ಅಭಿವೃದ್ಧಿ ನಿಗಮ, ತಾಂಡ ಅಭಿವೃದ್ಧಿ ನಿಗಮಗಳಲ್ಲಿ ವಿವಿಧ ಯೋಜನೆಗಳಡಿಯಲ್ಲಿ ಸಾಲ ಸೌಲಭ್ಯಗಳ ಅನುದಾನಕ್ಕೆ ಅರ್ಜಿ ಸಲ್ಲಿಸಿದ ಫಲಾನುಭವಿಗಳನ್ನು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಸಮ್ಮುಖದಲ್ಲಿ ಲಾಟರಿ ಮೂಲಕ ಆಯ್ಕೆ ಮಾಡಲಾಯಿತು.
ಸರ್ಕಾರ ದಲಿತರು, ಹಿಂದುಳಿದ ವರ್ಗಗಗಳ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ನಿಗಮಗಳನ್ನು ಸ್ಥಾಪಿಸಿ ಅವುಗಳ ಮೂಲಕ ಜನರಿಗೆ ನೇರವಾಗಿ ಸಾಲ ಸೌಲಭ್ಯಗಳನ್ನು ನೀಡುತ್ತಿದೆ. ಪಲಾನುಭವಿಗಳು ಇದರ ಸದುಪಯೋಗವನ್ನು ಪಡೆದು ಉತ್ತಮ ಜೀವನ ರೂಪಸಿಕೊಳ್ಳಬೇಕು ಎಂದು ತಿಳಿಸಿದರು.
ಡಿ. ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದಿಂದ ೨೦೨೨-೨೩ ನೇ ಸಾಲಿನಲ್ಲಿ ೭೨ ಜನ ಪಲಾನುಭವಿಗಳು, ಡಾ. ಬಿ.ಆರ್. ಅಬೇಡ್ಕರ್ ಅಭಿವೃದ್ದಿ ನಿಗಮದಿಂದ ೫೩ ಜನ ಪಲಾನುಭವಿಗಳು,ಆದಿಜಾಂಬವ ಅಭಿವೃದ್ದಿ ನಿಗಮದಿಂದ ೮೫ ಜನ ಪಲಾನುಭವಿಗಳು, ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ೧೨ ಜನ ಪಲಾನುಭವಿಗಳು, ಭೋವಿ ಅಭಿವೃದ್ಧಿ ನಿಗಮದಿಂದ ೪೦ ಜನ ಪಲಾನುಭವಿಗಳು, ತಾಂಡ ಅಭಿವೃದ್ಧಿ ನಿಗಮದಿಂದ ೧೩ ಪಲಾನಿಭವಿಗಳನ್ನು ಆಯ್ಕೆ ಮಾಡಿ ಅಂತಿಮ ಪಟ್ಟಿಯನ್ನು ಸಿದ್ದಪಡಿಸಲಾಯಿತು.
ಸರ್ಕಾರ ನಿಗದಿಪಡಿಸಿದ್ದ ಗುರಿಗಿಂತ ಹೆಚ್ಚಿನ ಅರ್ಜಿಗಳನ್ನು ಹಾಕಲಾಗಿದ್ದರಿಂದ ಮಕ್ಕಳ ಕೈಯಲ್ಲಿ ಚೀಟಿ ತೆಗೆಸುವ ಮೂಲಕ ಪಲಾನುಭವಿಗಳ ಹೆಸರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ನಿಗಮದ ಅಧಿಕಾರಿಗಳು ಮತ್ತು ಪಲಾನುಭವಿಗಳು ಉಪಸ್ಥಿತರಿದ್ದರು.