i
ಒಂಬತ್ತು ಕೋಟಿ ವೆಚ್ಚದಲ್ಲಿ ಅಗಸನಕೆರೆಯ ಅಭಿವೃದ್ಧಿ–ಶಾಸಕ ತಿಪ್ಪಾರೆಡ್ಡಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಒಂಬತ್ತು ಕೋಟಿ ವೆಚ್ಚದಲ್ಲಿ ಜನರ ಆಕರ್ಷಿಸುವ ರೀತಿಯಲ್ಲಿ ಅಗಸನಕೆರೆಯ ಅಭಿವೃದ್ಧಿ ಮಾಡಲಾಗುತ್ತದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ನಗರದ ಮುರುಘಾ ಮಠದ ಮುಂಭಾದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ವತಿಯಿಂದ ಮಠದಕುರುಬರಹಟ್ಟಿಯ ಅರಸನಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಅಗಸನಕೆರೆ ಅಭಿವೃದ್ಧಿ ಬಹು ದಿನಗಳ ಬೇಡಿಕೆ ಆಗಿದೆ.ಮುರ್ನಾಲ್ಕು ವರ್ಷಗಳಿಂದ ಹಣವನ್ನು ಮೀಸಲಿಡಲಾಗಿತ್ತು. ಕೆರೆಯ ಅಭಿವೃದ್ಧಿಗೆ ಸರ್ಕಾರ ಹಂತದಲ್ಲಿ ಮಾನದಂಡ ಅನುಸರಿಸುವ ಮೂಲಕ ಈಗ ಒಪ್ಪಿಗೆ ಸಿಕ್ಕಿದ್ದು ಅದಷ್ಟು ತುರ್ತಾಗಿ ಕೆರೆಯ ಅಭಿವೃದ್ಧಿ ಮಾಡಲು ಕ್ರಮ ವಹಿಸಲು ಸೂಚಿಸಲಾಗಿದೆ. ಕೆರೆಯ ಸುತ್ತಲೂ ಕಲ್ಲಿನ ಪಿಚಿಂಗ್, ಅಲಂಕಾರಿಕ ದೀಪಗಳು , ವಾಕಿಂಗ್ ಪಾಥ್, ಶೌಚಾಲಯ, ಮಕ್ಕಳ ಆಟದ ಸಲಕರಣೆಗಳು, ಕೆರೆಗೆ ಸುತ್ತಲೂ ಮೇಷ್ ಸೇರಿ ಅಭಿವೃದ್ಧಿ ಮಾಡಲಾಗುತ್ತದೆ. ಕೆರೆಯ ಅಭಿವೃದ್ಧಿ ಕಾಮಗಾರಿ ಪ್ರಾರಂಭಿಸಿ ಕೆರೆಯ ನೀರನ್ನು ಹಿಂದಿನ ಕೆರೆಗೆ ಲಿಫ್ಟ್ ಮಾಡಿ ಅಭಿವೃದ್ಧಿ ಮಾಡಲಾಗುತ್ತದೆ. ಇದಕ್ಕೆ ಅಗತ್ಯ ಹಣವನ್ನು ಒದಗಿಲಾಗುವುದು ಎಂದರು.ಕಾಮಗಾರಿ ಪೂರ್ಣವಾಗಿ ಮುಗಿದ ನಂತರ ಮತ್ತೆ ಕೆರೆ ನೀರನ್ನು ಲಿಫ್ಟ್ ಮಾಡಲಾಗುತ್ತದೆ. ಇದರ ಜೊತಗೆ ಅಪ್ಪರ್ ಭದ್ರ ನೀರು ಸಹ ಈ ಕೆರೆಗೆ ಬರಲಿದೆ ಎಂದರು.
ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಕೆರೆ ಇರುವುದು ಜನರ ಆಕರ್ಷಣೆಗೆ ಕೇಂದ್ರ ಬಿಂದುವಾಗಲಿದೆ. ಕಾತ್ರಾಳ್ ಕೆರೆಯಿಂದ ಅಗಸನಕೆರೆಗೆ ನೀರನ್ನು ಲಿಫ್ಟ್ ಮಾಡಲಾಗುತ್ತದೆ. ನಮ್ಮ ಕ್ಷೇತ್ರದಲ್ಲಿ ಅಪ್ಪರ್ ಭದ್ರಾ ಯೋಜನೆಯಿಂದ ಬಿಟ್ಟು ಹೋಗಿದ್ದ 11 ಕೆರೆಗಳನ್ನು ಯಡಿಯೂರಪ್ಪ ಸಿಎಂ ಇದ್ದ ಸಂದರ್ಭದಲ್ಲಿ ಮತ್ತೆ ಅಪ್ಪರ್ ಭದ್ರಾ ಯೋಜನೆಗೆ ಸೇರಿಸುವ ಕೆಲಸ ಮಾಡಲಾಗಿದೆ. ನಮ್ಮ ಕ್ಷೇತ್ರದ ಎಲ್ಲಾ ಕೆರೆಗಳಿಗೆ ಮುಂದಿನ 2 ರಿಂದ 3 ವರ್ಷದಲ್ಲಿ ಕೆರೆಗಳಿಗೆ ನೀರು ಬರಲಿದೆ ಎಂದು ತಿಳಿಸಿದರು.
ಬರಗಾಲ ಪೀಡಿತ ಪ್ರದೇಶ ಎಂಬ ಹಣೆಕಟ್ಟಿ ಕಳಚಿ ಸುಂದರ ನಗರ ಎಂಬ ಖ್ಯಾತಿ ಪಡೆಯಲು ಎಲ್ಲಾರೂ ಶ್ರಮಿಸಬೇಕು. ಇದಕ್ಕೆ ಎಲ್ಲಾ ಜನಪ್ರತಿನಿಧಿಗಳು ಅಚ್ಚುಕಟ್ಟಾಗಿ ಕೆಲಸ ಆಗಲು ಶ್ರಮಿಸಬೇಕು. ಅಭಿವೃದ್ಧಿ ವಿಚಾರದಲ್ಲಿ ಎಲ್ಲಾರೂ ಪಕ್ಷಾತೀತವಾಗಿ ಶ್ರಮಿಸಿದರೆ ಅಭಿವೃದ್ಧಿ ಸುಗಮವಾಗಿ ಆಗುತ್ತದೆ ಎಂದು ಎಲ್ಲಾರಿಗೂ ಒಗ್ಗಟ್ಟಿನ ಸಂದೇಶ ರವಾನಿಸಿದರು.
ಕೆರೆಯಲ್ಲಿ ಮೀನು ಹಿಡಿಯಲು ಹರಾಜು ಮುಗಿದಿದ್ದರು ಸಹ ಮೀನು ಹಿಡಿಯತ್ತಿದ್ದು ನಿಲ್ಲಿಸದಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಜಿ.ಟಿ. ಸುರೇಶ್, ಸದಸ್ಯರಾದ ವಿ.ಆರ್.ನಾಗರಾಜ್, ರೇಖಾ, ಉಷಾಬಾಯಿ, ಎಂ.ಕೆ.ಹಟ್ಟಿ ಗ್ರಾ.ಪಂ.ಅಧ್ಯಕ್ಷೆ ಗೀತಾ, ನಗರಸಭೆ ಸದಸ್ಯರಾದ ಸುರೇಶ್, ಹರೀಶ್, ಗ್ರಾ.ಪಂ.ಸದಸ್ಯ ರತ್ನಮ್ಮ ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಸೋಮಶೇಖರ್ ಇದ್ದರು.