i
ಒಗ್ಗೂಡಿದ ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳು, ಬೆಚ್ಚಿಬಿದ್ದ ಷಡ್ಯಂತ್ರಗಾರರು…
ವರದಿ-ಎಚ್.ಸಿ.ಗಿರೀಶ್, ಹರಿಯಬ್ಬೆ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು ಒಗ್ಗೂಡುವ ಮೂಲಕ ಷಡ್ಯಂತ್ರ ಮಾಡಿ ಹೊರಗಿನವರನ್ನು ತರಲು ಪ್ರಯತ್ನ ಪಡುತ್ತಿದ್ದವರಿಗೆ ದೊಡ್ಡ ಮಟ್ಟದ ಶಾಕ್ ನೀಡಿದ್ದಾರೆ.
ಜಿಪಂ ಮಾಜಿ ಅಧ್ಯಕ್ಷ ಎಂ.ಜಯಣ್ಣ, ಶ್ರಾವಣಗೆರೆ ಶಿವಪ್ರಸಾದ್ ಗೌಡ, ಚಿತ್ರದುರ್ಗ ನಿರ್ಮಿತಿ ಕೇಂದ್ರದ ಜಿಲ್ಲಾ ಯೋಜನಾಧಿಕಾರಿ ಕೆ.ಜಿ.ಮೂಡಲಗಿರಿಯಪ್ಪ, ನಿವೃತ್ತ ಮುಖ್ಯ ಇಂಜಿನಿಯರ್ ಎಂ.ರವೀಂದ್ರಪ್ಪ ಇವರುಗಳು ಒಂದೆಡೆ ಕೂತು ಮಾತುಕತೆ ಮೂಲಕ ಮನಸ್ತಾಪಗಳನ್ನು ದೂರ ಮಾಡಿಕೊಂಡು ನಾಲ್ವರಲ್ಲಿ ಯಾರಿಗೇ ಟಿಕೆಟ್ ನೀಡಿದರೂ ಎಲ್ಲರೂ ಗೆಲುವಿಗೆ ಶ್ರಮಿಸಬೇಕು. ಯಾವುದೇ ಕಾರಣಕ್ಕೂ ಒಳ ಸಂಚುಗಳಿಗೆ ಅವಕಾಶ ನೀಡಬಾರದು, ನಾವು ನಾಲ್ಕು ಮಂದಿ ಟಿಕೆಟ್ ಆಕಾಂಕ್ಷಿಗಳು ಒಂದಾಗಿದ್ದರೆ ಟಿಕೆಟ್ ತಪ್ಪಿಸಲು ಷಡ್ಯಂತ್ರ ಮಾಡವವರ ಆಟ ಏನು ನಡೆಯುವುದಿಲ್ಲ ಎಂದು ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ನಾಲ್ಕು ಮಂದಿ ಟಿಕೆಟ್ ಆಕಾಂಕ್ಷಿಗಳಲ್ಲಿ ಪಿಲಾಜನಹಳ್ಳಿ ಎಂ.ಜಯಣ್ಣ ಅವರಿಗೆ ಮೊದಲ ಸಾಧ್ಯತೆ ನೀಡಬೇಕು. ಅವರು ಜನವರಿ 20ರೊಳಗೆ ತಮ್ಮ ಶಕ್ತಿ ಸಾಮರ್ಥ್ಯ ಸಾಬೀತು ಮಾಡದಿದ್ದರೆ 2ನೇ ಆದ್ಯತೆಯಾಗಿ ಶ್ರಾವಣಗೆರೆ ಶಿವಪ್ರಸಾದ್ ಗೌಡರಿಗೆ ನೀಡಬೇಕು. ಇವರು ತಮ್ಮ ಸಾಮರ್ಥ್ಯ ತೋರಿಸಲು ವಿಫಲರಾದರೆ 3ನೇಯವರಾಗಿ ಚಿತ್ರದುರ್ಗ ನಿರ್ಮಿತಿ ಕೇಂದ್ರದ ಜಿಲ್ಲಾ ಯೋಜನಾಧಿಕಾರಿ ಕೆ.ಜಿ.ಮೂಡಲಗಿರಿಯಪ್ಪ ಆದ್ಯತೆ ನೀಡಬೇಕು. ಒಂದು ವೇಳೆ ಇವರು ತಮ್ಮ ಸಾಮರ್ಥ್ಯ ತೋರಿಸಲು ಹಿಂದೆ ಬಿದ್ದರೆ ಕೊನೆಯದಾಗಿ ನಿವೃತ್ತ ಮುಖ್ಯ ಇಂಜಿನಿಯರ್ ಎಂ.ರವೀಂದ್ರಪ್ಪ ಅವರನ್ನು ನಾವೆಲ್ಲರೂ ಸೇರಿ ನಿಲ್ಲಿಸಿ ಗೆಲ್ಲಿಸಿಕೊಳ್ಳಬೇಕು, ಈ ತೀರ್ಮಾನಕ್ಕೆ ಎಲ್ಲರೂ ಬದ್ಧವಾಗಿರಬೇಕು ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಕೇವಲ ಈ ನಾಲ್ಕು ಮಂದಿ ಒಗ್ಗೂಡಿ ಮಾತುಕತೆ ಮಾಡಿ ಒಗ್ಗಟ್ಟು ಪ್ರದರ್ಶಿಸಿದ್ದಲ್ಲದೆ ಪಟ್ಟನಾಯಕನಹಳ್ಳಿಯ ನಂಜಾವಧೂತ ಸ್ವಾಮೀಜಿಗಳನ್ನು ಟಿಕೆಟ್ ಆಕಾಂಕ್ಷಿಗಳು ಭೇಟಿ ಮಾಡಿ ತಮ್ಮ ಒಗ್ಗಟ್ಟು ಪ್ರದರ್ಶನ ಮಾಡಿದ್ದು ಸ್ವಾಮೀಜಿಯವರು ಟಿಕೆಟ್ ಆಕಾಂಕ್ಷಿಗಳ ಒಡಂಬಡಿಕೆ, ಒಗ್ಗಟ್ಟು ಪ್ರದರ್ಶನಕ್ಕೆ ಅಸ್ತು ಎಂದಿದ್ದಾರೆ ಎನ್ನಲಾಗಿದೆ.
ಇದರ ಮಧ್ಯೆ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ಯಶೋಧರ ಅವರನ್ನು ದೂರ ಇಟ್ಟು ಒಗ್ಗಟ್ಟು ಪ್ರದರ್ಶನ ಮಾಡಿರುವುದರಿಂದ ಮತ್ತು ಸ್ವಾಮೀಜಿ ಬಳಿಗೆ ತೆಳಿಸಿ ತಮ್ಮ ತೀರ್ಮಾನ ತಿಳಿಸಿರುವುದು ಜೆಡಿಎಸ್ ಜಿಲ್ಲಾಧ್ಯಕ್ಷರಿಗೆ ಒಂದಿಷ್ಟು ಇರಿಸಿಮುರಿಸಿ ಆಗಿದೆ ಎನ್ನಲಾಗಿದೆ.
ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಹೊರಗಿನವರು ಸ್ಪರ್ಧಿಸಲು ಅವಕಾಶ ನೀಡಬಾರದು. ನಮ್ಮಲ್ಲೇ ಒಬ್ಬರಿಗೆ ಟಿಕೆಟ್ ಅಂತಿಮ ಮಾಡಬೇಕು. ಕಷ್ಟ ಸುಖಗಳಿಗೆ ಸ್ಥಳೀಯರೇ ಸದಾ ಲಭ್ಯವಾಗಲಿದ್ದಾರೆ. ದೂರದ ಬೆಟ್ಟ ನುಣ್ಣಗೆ ಕಾಣುವುದರಿಂದ ಸ್ಥಳೀಯ ಸಮಸ್ಯೆಗಳು ಹಾಗೇ ಜೀವಂತವಾಗಿವೆ. ಇದಕ್ಕೆ ಏನೇ ಆಗಲಿ ಸ್ಥಳೀಯ ವ್ಯಕ್ತಿಗಳಿಗೆ ಜೆಡಿಎಸ್ ಟಿಕೆಟ್ ನೀಡಬೇಕು. ಹಿರಿಯೂರು ಮತದಾರರು ಸ್ಥಳೀಯರನ್ನು ಗೆಲ್ಲಿಸುವ ಮೂಲಕ ಸ್ವಾಭಿಮಾನ ಮೆರೆಯಲಿದ್ದಾರೆ ಎನ್ನುವ ವಿಶ್ವಾಸವನ್ನು ಈ ನಾಲ್ಕು ಮಂದಿ ವ್ಯಕ್ತ ಪಡಿಸಿದ್ದಾರೆ ಎನ್ನಲಾಗುತ್ತಿದೆ.
ಸ್ಥಳೀಯ ನಾಲ್ಕು ಮಂದಿ ಟಿಕೆಟ್ ಆಕಾಂಕ್ಷಿಗಳು ಒಗ್ಗೂಡಿರುವುದರಿಂದ ವೀರೇಂದ್ರ ಪಪ್ಪಿಗೆ ಟಿಕೆಟ್ ಕೊಡಿಸಲು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದವರಿಗೆ ಸಾಕಷ್ಟು ಹಿನ್ನಡೆಯಾಗಿದೆ ಎನ್ನುವ ವಿಷಯ ಕ್ಷೇತ್ರದ ತುಂಬೆಲ್ಲಾ ಹರಿದಾಡುತ್ತಿದೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾನ ನೀಡಿದಂತೆ ಸ್ಥಳೀಯರಾದ ಒಕ್ಕಲಿಗ ಅಲಿಯಾಸ್ ಕುಂಚಿಟಿಗರಿಗೆ ಹಿರಿಯೂರು ಕ್ಷೇತ್ರದ ಜೆಡಿಎಸ್ ಟಿಕೆಟ್ ದೊರಕುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಇದರ ಮಧ್ಯೆ ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಅಥವಾ ಶಾಸಕ ತಿಪ್ಪಾರೆಡ್ಡಿ ಸೇರಿದಂತೆ ಮತ್ತಿತರ ಬಲಿಷ್ಠ ವ್ಯಕ್ತಿಗಳು ಜೆಡಿಎಸ್ ಪಕ್ಷದಿಂದ ಟಿಕೆಟ್ ಬಯಸಿದರೆ ಆಗ ಒಂದಿಷ್ಟು ಬದಲಾವಣೆ ಆಗುವ ಸಾಧ್ಯತೆಯೂ ತಳ್ಳಿ ಹಾಕುವಂತಿಲ್ಲ.
2ನೇ ಸಲ ವೀರೇಂದ್ರ ಪಪ್ಪಿಗೆ ಟಿಕೆಟ್ ಕೊಡಿಸಲು ನೇತೃತ್ವ ವಹಿಸಿದ ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಹಾಗೂ ಕೆಂಪೇಗೌಡ ದಂತ ಮಹಾವಿದ್ಯಾಲಯದ ಅಧ್ಯಕ್ಷ ಬೇತೂರು ಜೆ.ರಾಜು ಅವರ ಒಳ ಸಂಚು ಏನು ಎನ್ನುವುದನ್ನು ಮುಂದಿನ ಸಂಚಿಕೆಯಲ್ಲಿ ತಿಳಿಸಲಾಗುತ್ತದೆ.