i
ಮನುಷ್ಯ ಕುಲವೆಲ್ಲ ಒಂದೇ ಎಂಬುದೇ ಭಾರತೀಯತೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
“ಒಂದು ದೇಶ ಎಂದರೆ ಭೂಪಟಕ್ಕಷ್ಟೇ ಸೀಮಿತವಲ್ಲ, ಅದು ಭೂಮಿಯ ಗಿರಿಶಿಖರಗಳು, ಮಣ್ಣು, ಗಾಳಿ ವಿವಿಧ ನದಿಗಳು, ವಿವಿಧ ಧರ್ಮಗಳು, ಭಾಷೆಗಳು, ಆಚಾರ,ವಿಚಾರಗಳು ವಿವಿಧ ಸಂಸ್ಕೃತಿ,ಸಮುದಾಯಗಳನ್ನು ಒಳಗೊಂಡಿದ್ದೇ ಭಾರತ ಈ ಎಲ್ಲವನ್ನೂ ಒಳಗೊಂಡವನೆ ಭಾರತೀಯ” ಎಂದು ಚಿತ್ರದುರ್ಗ ವಿಜ್ಞಾನ ಕೇಂದ್ರದ ಅಧ್ಯಕ್ಷ ಜೆ.ಯಾದವರೆಡ್ಡಿ ಅಭಿಪ್ರಾಯಪಟ್ಟರು. ಅವರು ಮಹಾಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ವಿಜ್ಞಾನ ಕೇಂದ್ರ, ಸ್ವಾಸ್ಥ್ಯ ಸರ್ಕಲ್ ಫೌಂಡೇಶನ್ ಮತ್ತು ಪಿ.ವಿ.ಎಸ್ ಶಿಕ್ಷಣ ಮಹಾ ವಿದ್ಯಾಲಯ ಏರ್ಪಡಿಸಿದ್ದ ವಿಶ್ವಮಾನವ ದಿನದ ಕಾರ್ಯಕ್ರಮ ಉದ್ಘಾಟಿಸಿ, ಪಿ.ವಿ.ಎಸ್.ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ಮತ್ತು ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು.
ಭಾರತೀಯತೆ ಎಂದರೆ ಮನುಷ್ಯತ್ವ ಮೀರಿ,ವಿಶ್ವಮಾನವರಾಗುವುದು,ಇಡೀ ಜಗತ್ತನ್ನು, ತಮ್ಮ ಕುತುಂಬ ಎಂದು ಭಾವಿಸಿ ನೆರೆಹೊರೆ,ತಂದೆ, ತಾಯಿ, ಸ್ನೇಹಿತರನ್ನು ಪ್ರೀತಿಸುವುದು ದೇಶ ಪ್ರೇಮ. ಇದನ್ನು ಎಲ್ಲಾ ಧರ್ಮಿಯರು ಅನುಸರಿಸಿದಾಗ ಮನುಷ್ಯ ಕುಲವೆಲ್ಲ ಒಂದೇ ಎಂದು ಭಾವಿಸಿದಾಗ ಮಾತ್ರ ಉತ್ತಮ ಭವಿಷ್ಯ. ವರ್ಣಭೇಧ,ಶ್ರೇಣೀಕೃತ ಜಾತಿಪದ್ಧತಿ, ಧರ್ಮಭೇಧ, ಅಸ್ಪೃಶ್ಯತೆಗಳ ಆಚರಣೆಯಿಂದ ಜಗತ್ತು ರಕ್ತದಿಂದ ತೊಯ್ದಿದೆ ಎಂದರು.
ಕುವೆಂಪು ಅವರ ವಿಶ್ವಮಾನವ ಪ್ರಜ್ಞೆಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕಿದೆ, ಮಗು ಹುಟ್ಟುವಾಗ ಜನಿವಾರ, ಉಡುದಾರ, ಲಿಂಗ,ಬುರ್ಖಾ ಇತ್ಯಾದಿ ಧರಿಸದೆ ವಿಶ್ವಮಾನವನಾಗಿ ಹುಟ್ಟುತ್ತದೆ ಅದು ಸಮಾಜದ ಸಂಪರ್ಕದಿಂದ ಜಾತಿ, ಧರ್ಮ, ಕಟ್ಟುಪಾಡುಗಳಿಗೆ ಒಳಪಟ್ಟು ಕನಿಷ್ಠ ಮಾನವನಾಗುತ್ತಾನೆ. ಅವನನ್ನು ಈ ಎಲ್ಲಾ ಬಂಧನಗಳಿಂದ ಬಿಡಿಸುವುದು ಶಿಕ್ಷಣದ ಜವಾಬ್ದಾರಿ ಎಂದು ಕುವೆಂಪ ಅವರ ವಿಚಾರವನ್ನು ವಿದ್ಯಾರ್ಥಿಗಳ ಮುಂದಿಟ್ಟರು.
ಪಂಚಮರ ಹುಡುಗನೊಬ್ಬ ನದಿಯಲ್ಲಿ ಮುಳುಗುತ್ತಿರುವಾಗ ಅಲ್ಲೇ ಸ್ನಾನ ಮಾಡುತ್ತಿದ್ದ ಪುರೋಹಿತನೊಬ್ಬನ ಮಾನವ ಸಹಜ ಮನಸ್ಸು ಅವನನ್ನು “ರಕ್ಷಿಸು” ಎಂದು ಹೇಳಿದರೆ, ಶಾಸ್ತ್ರವು “ಬೇಡ, ಬೇಡ ಪಂಚಮರನ್ನು ಮುಟ್ಟಿದರೆ ನಿನ್ನ ಮೈ ಮನಸ್ಸು ಮೈಲಿಗೆಯಾಗುತ್ತದೆ” ಎಂದು ಹೇಳುವ ಶಾಸ್ತ್ರ ನಮಗೆ ಬೇಕೇ ಎಂದು ಕುವೆಂಪು ಅವರ ಪದ್ಯವೊಂದರ ಮಹತ್ವವನ್ನು ಮಂಡಿಸಿದರು.
ಆದ್ದರಿಂದ ಕುವೆಂಪು ಅವರ ಎಲ್ಲಾ ಸಾಹಿತ್ಯವನ್ನು ಓದದಿದ್ದರೂ ಚಿಂತೆಯಿಲ್ಲ ಮನುಜಮತ,ಆತ್ಮ ಶ್ರೀಗಾಗಿ ನಿರಂಕುಷಮತಿಗಲಾಗಿ ಪುಸ್ತಕಗಳನ್ನು ಓದಿರಿ. ಕುವೆಂಪು ಅವರು ಹಿರಿಯ ಅಧಿಕಾರಿಗಳಿಗಾಗಲಿ,ರಾಜಕಾರಿಣಿಗಾಗಲಿ ಬಕೆಟ್ ಹಿಡಿದವರಲ್ಲ ಅವರ ಕ್ರಾಂತಿಕಾರಿ, ಸಾಮಾಜಿಕ ಪ್ರಜ್ಞೆ, ಸಾಮಾಜಿಕ ಕಳಕಳಿ ಅನುಕರಣೀಯ,ಕುವೆಂಪು ಅವರನ್ನು ಬಿಟ್ಟು ಕನ್ನಡ ಸಾಹಿತ್ಯವನ್ನು ಪ್ರವೇಶಿಸಲು ಸಾಧ್ಯವಿಲ್ಲ ಎಂದರು.
ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಎಂ.ಆರ್.ದಾಸೇಗೌಡ ಅವರು ಕುವೆಂಪು ಅವರ ಸಾಹಿತ್ಯದಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕತೆ ಕುರಿತ ತಮ್ಮ ಉಪನ್ಯಾಸದಲ್ಲಿ, ವಿದ್ಯಾರ್ಥಿಗಳುನ್ನು ಕುರಿತು, ಜನಗಳು ಉದ್ಯೋಗಕ್ಕಾಗಿ ಟೈಲರಿಂಗ್, ಮೆಖ್ಯಾನಿಕ್, ರೇಡಿಯೋ ರಿಪೇರಿ ತರಬೇತಿ ಪಡೆದ ನಂತರ ಉದ್ಯೋಗ ಆರಂಭಿಸಿ ಯಶಸ್ವಿಯಾಗಲು ಒಂದಷ್ಟು ಹಣವನ್ನು ತೊಡಗಿಸುತ್ತಾರೆ,ಅದರಂತೆ ಶಿಕ್ಷಕರೂ ಕೂಡ ತರಬೇತಿಯ ನಂತರ ವೈಚಾರಿಕ ಮತ್ತು ವೈಜ್ಞಾನಿಕ ಸಾಹಿತ್ಯ ಓದಲು ಎಷ್ಟು ಹಣವನ್ನು ತೊಡಗಿಸುತ್ತೀರಿ ಎಂದು ಪ್ರಶ್ನಿಸಿದ ಅವರು ಉತ್ತಮ ಸಾಹಿತ್ಯ ಓದಿದಾಗ ಮಾತ್ರ ಉತ್ತಮ ಗುರುಗಳಾಗಲು ಸಾಧ್ಯ ಎಂದರು.
ಶಾಲೆ ನಮಗೆ ಅಕ್ಷರ ಕಲಿಸಿದೆ,ಬುದ್ಧಿ ಕಲಿಸಿದೆ, ಜ್ಞಾನಕೊಟ್ಟಿದೆ ಉದ್ಯೋಗ ಪಡೆಯಲು ಅಂಕಪಟ್ಟಿ ಕೊಟ್ಟಿದೆ, ಅಂಕಪಟ್ಟಿ ನೀಡಿ ಉದ್ಯೋಗದ ಆದೇಶ ಪಡೆದ ತಕ್ಷಣ ನಾವು ಶಾಲೆಯನ್ನು ಮರೆತು ದೇವಸ್ಥಾನಗಳಿಗೆ ಭೇಟಿಕೊಟ್ಟು ವಿವಿಧ ಪೂಜೆ ಮಾಡಿಸಿ, ಕಾಣಿಕೆಗಳನ್ನು ಭಕ್ತಿಯಿಂದ ಸಮರ್ಪಿಸಿ ತನ್ನ ವೈಚಾರಿಕ ಬುದ್ಧಿಯನ್ನು ಮರೆಯುತ್ತೇವೆ. ಶಾಲೆಯನ್ನು ಕಡೆಗಣಿಸಿ ಅಂಕುಶಮತಿಗಳಾಗುವುದು ಸರಿಯೇ ಎಂದು ಪ್ರಶ್ನಿಸಿದರು.
ಇವತ್ತಿನ ಅದೆಷ್ಟೋ ಶಾಲೆಗಳ ಕಟ್ಟಡ ಜೀರ್ಣ ಸ್ಥಿತಿಯಲ್ಲಿವೆ. ಅಂತಹ ನೀವು ಓದಿದ ಶಾಲೆಗೆ ಆಗಿಂದಾಗ್ಗೆ ಭೇಟಿ ಕೊಡಿ, ಕಾಣಿಕೆ ನೀಡಿ ಎಂದು ಕರೆಕೊಟ್ಟರು.
ಮನ ಶಾಂತಿ ಪಡೆಯುವ ವಿಧಾನಗಳು ನಮ್ಮ ಶಿಕ್ಷಣದ ಪಠ್ಯದಲ್ಲಿ ಇಲ್ಲವೇ? ದೇವಸ್ಥಾನಗಳಿಗೆ ಹೋಗಬೇಕೆ? ನೀವು ನಿಮ್ಮ ನಿಮ್ಮ ವಿಷಯಗಳಲ್ಲಿ ತಲ್ಲೀನರಾಗಿ ಅದೇ ಧ್ಯಾನ,ಅದೇ ತಪಸ್ಸು. ಅದಕ್ಕಾಗೆ ಕುವೆಂಪು ಅವರು ಗುಡಿ ಚರ್ಚು ಮಸೀದಿಗಳ ಬಿಟ್ಟು ಹೊರ ಬನ್ನಿ,ಬಡತನವ ಬುದ ಮಟ್ಟ ಕೀಳ ಬನ್ನಿ, ಮೌಢ್ಯತೆಯ ಮಾರಿಯನು ಹೊರದೊಡಲೈ ತನ್ನಿ,ವಿಜ್ಞಾನ ದೀವಿಗೆಯ ಹಿಡಿದು ಬನ್ನಿ ಎಂದು ಕರೆಕೊಟ್ಟ ಕುವೆಂಪು ಅವರು ಮನ ಶಾಂತಿಯನ್ನು ಪಡೆಯಲಿಲ್ಲವೇ ಎಂದು ಪ್ರಶ್ನಿಸಿದರು.
12ನೇ ಶತಮಾನದಲ್ಲಿ ಶರಣರು ತೋರಿದ ವೈಜ್ಞಾನಿಕ ಮನೋಧರ್ಮ ವನ್ನು ಅವರ ಅನುಯಾಯಿಗಳು ಪಾಲಿಸಿದ್ದಾರೆ ಭಾರತವನ್ನು ಕಾಡುತ್ತಿರುವ ಅಸ್ಪೃಶ್ಯತೆ, ಜಾತೀಯತೆ ಇತ್ಯಾದಿ ಅನಿಷ್ಟ ಪದ್ಧತಿಗಳು ಇವತ್ತು ಇರುತ್ತಿರಲಿಲ್ಲ ಎಂದು ಕುವೆಂಪು ಅವರು ಮರುಗುತ್ತಿದ್ದರು ಎಂದರು.
ಕಾಲೇಜಿನ ಪ್ರಾಂಶುಪಾಲೆ ಉಷಾ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶ್ವಮಾನವ ಸಂದೇಶ ಪ್ರಪಂಚ ಇರುವವರೆಗೂ ಮರೆಯಲಾಗದು, ಪ್ರಶಸ್ತಿ ಸ್ವೀಕರಿಸಲು ಕರೆ ಬಂದಾಗ ತಿರಸ್ಕರಿಸಿದರು, ಸಮಾಜದಲ್ಲಿ ಬೇರೂರಿರುವ ವರ್ಣ ವ್ಯವಸ್ಥೆ,ಜಾತಿ ಪದ್ಧತಿಯ ಬಗ್ಗೆ ಅವರು ಮಾತನಾಡಿದಾಗ ಅವರು ಅನೇಕ ಠೀಕೆಗಳನ್ನು ಎದುರಿಸಬೇಕಾಯಿತು. ಅವರು ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದಾಗ ದೊಡ್ಡ ಗ್ರಂಥಾಲಯವನ್ನು ತೆರೆದು ವಿಚಾರ ಮತಿಗಳಾಗಳು ಕರೆಕೊಟ್ಟರು ಎಂದರು.
ಸ್ವಾಸ್ಥ್ಯ ಸರ್ಕಲ್ ಫೌಂಡೇಶನ್ ನ ಎಂ.ಟಿ.ಮೂರ್ತಪ್ಪ “ಕುವೆಂಪು ಅವರ ಸಾಹಿತ್ಯದಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕತೆ” ಕುರಿತ ಭಾಷಣ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ ವಿದ್ಯಾರ್ಥಿಗಳಿಗೆ ಪುಸ್ತಕ ಬಹುಮಾನ ವಿತರಿಸಿದರು.
ಕಾರ್ಯಕ್ರಮದಲ್ಲಿ ವಿಜ್ಞಾನ ಕೇಂದ್ರದ ಸದಸ್ಯರಾದ ಕೆ.ರಾಜ್ ಕುಮಾರ್,ದಾದಾ ಖಲಂದರ್, ಜಯದೇವಮುರ್ತಿ ಹಾಗೂ ಕಾಲೇಜಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಪ್ರಶಿಕ್ಷಣಾರ್ಥಿಗಳಾದ ಗಂಗಮ್ಮ ಮತ್ತು ಶಿವಮ್ಮ ಆರಂಭದಲ್ಲಿ ಪ್ರಾರ್ಥಿಸಿದರೆ, ತಿಪ್ಪೇಸ್ವಾಮಿ ಸ್ವಾಗತಿಸಿದರು. ರಮ್ಯಾ ವಂದಿಸಿದರು. ಕಾರ್ತಿಕ್ ನಿರೂಪಿಸಿದರು.