i
ಒಳ ಮೀಸಲಾತಿ ಶಿಫಾರಸು ಸಿಎಂ ಬೆನ್ನಿಗೆ ನಿಂತ ಮಾದಿಗ ಸಮುದಾಯ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಶಿವಶರಣ ಮಾದಾರ ಚನ್ನಯ್ಯ ಗುರುಪೀಠದಲ್ಲಿ ವಿವಿಧ ಮಠಾಧೀಶರು ಹಾಗೂ ಮಾದಿಗ ಸಮಾಜದ ಜಾಗೃತಿ ಸಭೆ ನಡೆಯಿತು.
ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂದಡಿ ಇಟ್ಟಿದ್ದು, ಸಮಾಜ ಅವರಿಗೆ ಬೆಂಬಲವಾಗಿರಬೇಕು ಎಂಬ ವಿಷಯಗಳು ಸಭೆಯಲ್ಲಿ ಚರ್ಚೆಗೆ ಬಂದಿವೆ.
ಸಭೆಯ ನಂತರ ಸುದ್ದಿಗಾರರ ಜೊತೆ ಬಸವಮೂರ್ತಿ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ರಾಜ್ಯ ಸರ್ಕಾರ ಜನವರಿ ಅಂತ್ಯದೊಳಗೆ ಒಳಮೀಸಲಾತಿ ವರ್ಗೀಕರಣದ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡುವ ಎಲ್ಲಾ ಭರವಸೆ ಇದೆ. ಆದರೆ, ಈ ಹಂತದಲ್ಲಿ ಕೆಲ ಸಮುದಾಯದವರು ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಮುಖ್ಯಮಂತ್ರಿಗಳಿಗೆ ಬೆಂಬಲ ಸೂಚಿಸಲು ಸಭೆ ನಡೆಸಿದ್ದೇವೆ. ಇಡೀ ಸಮಾಜ ಅವರ ಬೆನ್ನಿಗೆ ನಿಲ್ಲುತ್ತದೆ ಎನ್ನುವ ಸಂದೇಶವನ್ನು ಸಭೆ ನೀಡಿದೆ ಎಂದರು.
ಒಳ ಮೀಸಲಾತಿಯ ವರದಿಯನ್ನು ಆದಷ್ಟು ಬೇಗ ಕೇಂದ್ರಕ್ಕೆ ಕಳಿಸಿ ಸಾಮಾಜಿಕ ನ್ಯಾಯವನ್ನು ನೀಡುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆಲೋಚನೆ ಅನುಷ್ಠಾನಕ್ಕೆ ಬರಬೇಕು. ಅವರು ನೀಡಿರುವ ಭರವಸೆ ಈಡೇರಿಸಿ ನಮ್ಮ ಸಮುದಾಯಕ್ಕೆ ಸಾಮಾಜಿಕ ನ್ಯಾಯ ನೀಡಿ, ಮುಖ್ಯವಾಹಿನಿಗೆ ತರುವ ಪ್ರಯತ್ನವನ್ನು ಮಾಡಲಿದ್ದಾರೆ ಎಂಬ ನಂಬಿಕೆ ಇದೆ ಎಂದು ಹೇಳಿದರು. ಯಾವುದೇ ಒತ್ತಡಕ್ಕೆ ಮುಖ್ಯಮಂತ್ರಿಗಳು ಮಣಿಯುವುದಿಲ್ಲ ಎನ್ನುವುದನ್ನು ಬಸವರಾಜ ಬೊಮ್ಮಾಯಿ ಅನೇಕ ಸಂದರ್ಭಗಳಲ್ಲಿ ನಿರೂಪಿಸಿದ್ದಾರೆ. ಮೀಸಲಾತಿಗೆ ಸಂಬಂದಿಸಿದಂತೆ ಉಪ ಸಮಿತಿ ರಚನೆಯಾಗಿದೆ. ಒಂದೆರಡು ಸಭೆ ನಡೆಸಲಾಗಿದೆ. ಇನ್ನೂ ಮೂರ್ನಾಲ್ಕು ಸಭೆಗಳು ನಡೆಯಬೇಕಿದೆ. ಆನಂತರ ಕೇಂದ್ರಕ್ಕೆ ಆಯೋಗದ ವರದಿ ಶಿಫಾರಸ್ಸು ಮಾಡಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದರು.
ಸಭೆಯಲ್ಲಿ ಶ್ರೀ ಷಡಾಕ್ಷರಮುನಿ ಸ್ವಾಮೀಜಿ, ಶ್ರೀ ಹರಳಯ್ಯ ಸ್ವಾಮೀಜಿ, ಶ್ರೀ ಪೂರ್ಣಾನಂದ ಭಾರತಿ ಸ್ವಾಮೀಜಿ, ಬಿಎಸ್ಪಿ ರಾಜ್ಯ ಸಂಯೋಜಕ ಮಾರಸಂದ್ರ ಮುನಿಯಪ್ಪ, ಡಿಎಸ್ಎಸ್ ಮುಖಂಡ ಎನ್.ಮೂರ್ತಿ, ಮುಖಂಡರಾದ ಹಾಲೂರು ಲಿಂಗರಾಜ್, ಹಳಿಯಾಳ ದಾನಪ್ಪ, ಹೂಡಿ ಮಂಜುನಾಥ್, ಹನುಮಂತರಾಜು, ಹುಲ್ಲೂರು ಕುಮಾರಸ್ವಾಮಿ, ಬಳ್ಳಾರಿ ಹನುಮಂತಪ್ಪ, ರಾಜಪ್ಪ, ಮಹಾಲಿಂಗಪ್ಪ, ಧೃವಕುಮಾರ್ ಮತ್ತಿತರರಿದ್ದರು.