i
ಗಾಯತ್ರಿ ಜಲಾಶಯ ಅಭಿವೃದ್ಧಿಗೆ ಚಾಲನೆ ನೀಡಿದ ಶಾಸಕಿ ಪೂರ್ಣಿಮಾ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಮೈಸೂರಿನ ಜಯಚಾಮರಾಜೇಂದ್ರ ಒಡೆಯರ್ 1958ರಲ್ಲಿ ಗಾಯತ್ರಿ ಜಲಾಶಯ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದರು. ಕೇವಲ 40 ಲಕ್ಷ ವೆಚ್ಚದಲ್ಲಿ ಐದೇ ವರ್ಷದಲ್ಲಿ 0.97 ಟಿಎಂಸಿ ಅಡಿ ನೀರಿನ ಸಂಗ್ರಹಣಾ ಸಾಮರ್ಥ್ಯವಿರುವ ಜಲಾಶಯ ನಿರ್ಮಿಸಿ, ಅದಕ್ಕೆ ಒಡೆಯರ್ ಕುಟುಂಬದ ಪುತ್ರಿ ಗಾಯತ್ರಿದೇವಿ ಯವರ ಹೆಸರಿಡಲಾಗಿತ್ತು ಎಂಬುದಾಗಿ ಕ್ಷೇತ್ರದ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಇತಿಹಾಸ ಮೆಲುಕು ಹಾಕಿದರು.
ತಾಲ್ಲೂಕಿನ ಕರಿಯಾಲ ಗ್ರಾಮದ ಸಮೀಪ ಇರುವ ಗಾಯತ್ರಿಜಲಾಶಯ ಆವರಣದಲ್ಲಿ ಮಂಳವಾರದಂದು ಸುಮಾರು 12 ಕೋಟಿ ರೂಗಳ ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಸುಮಾರು 12 ಕೋಟಿ ವೆಚ್ಚದಲ್ಲಿ ಅಣೆಕಟ್ಟೆ ಏರಿ ಸುರಕ್ಷತೆ ಸೇರಿದಂತೆ ಜವನಗೊಂಡನಹಳ್ಳಿ ಮುಖ್ಯರಸ್ತೆಯಿಂದ ಜಲಾಶಯದವರೆಗಿನ ರಸ್ತೆ ಅಭಿವೃದ್ಧಿ ಹಾಗೂ ಸ್ವಾಗತ ಕಮಾನು, ಕೋಡಿ ದುರಸ್ತಿ, ಕೋಡಿಯ ಇಕ್ಕೆಲಗಳಲ್ಲಿ, ಅಣೆಕಟ್ಟೆಯ ಕೆಳಗೆ ತಂತಿಬೇಲಿ ಅಳವಡಿಸುವುದು ಒಳಗೊಂಡಂತೆ ವಿವಿಧ ಅಭಿವೃದ್ಧಿ ಕಾಮಗಾರಿಗೆ ಟೆಂಡರ್ ಪೂರ್ಣಗೊಂಡಿದ್ದು, ಕೆರೆ ಕೋಡಿ ಎತ್ತರಿಸುವ ಬಗ್ಗೆ ತಜ್ಞರು ಸಲಹೆ ಪಡೆಯಲಾಗುವುದು ಎಂಬುದಾಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ರಾಜ್ಯ ಗೊಲ್ಲರ ಸಂಘದ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾರಪ್ಪ, ಮಹೇಶ್, ಪ್ರಸನ್ನಕುಮಾರ್, ಸದಸ್ಯರಾದ ಬಸವರಾಜು, ವೀರೇಶ್, ರಾಜಾನಾಯ್ಕ, ರಾಮಣ್ಣ, ನೀಲಕಂಠ, ಚಂದ್ರಪ್ಪ, ಕೇಶವ್, ಮುರಳಿ ಸೇರಿದಂತೆ ಗ್ರಾಮದ ಮುಖಂಡರು, ಇತರರು ಉಪಸ್ಥಿತರಿದ್ದರು.